ಕಠ್ಮಂಡು: ಲಲಿತಾ ನಿವಾಸ್ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳದ ಮಾಜಿ ಪ್ರಧಾನಿಗಳಾದ ಮಾಧವ್ ಕುಮಾರ್ ನೇಪಾಳ್ ಮತ್ತು ಬಾಬುರಾಮ್ ಭಟ್ಟರೈ ಅವರನ್ನು ಇದೇ ಮೊದಲ ಬಾರಿಗೆ ಕೇಂದ್ರೀಯ ತನಿಖಾ ದಳ (ಸಿಐಬಿ) ವಿಚಾರಣೆಗೆ ಒಳಪಡಿಸಿದೆ.
ಕಠ್ಮಂಡುವಿನ ಬಲುವತಾರ್ನಲ್ಲಿರುವ ಪ್ರಧಾನಿ ಅಧಿಕೃತ ನಿವಾಸದ ಪಕ್ಕದ ಅಂದಾಜು 37 ಎಕರೆ ಜಮೀನನ್ನು ಕಬಳಿಸಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಮಾಧವ್ ಕುಮಾರ್ ಮತ್ತು ಬಾಬುರಾಮ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಸಿಐಬಿ ವಕ್ತಾರ ನವರಾಜ್ ಅಧಿಕಾರಿ ಸೋಮವಾರ ತಿಳಿಸಿದ್ದಾರೆ.
ಮಾಧವ್ ಕುಮಾರ್ ಅವರು ಪ್ರಧಾನಿಯಾಗಿದ್ದಾಗ ಈ ಹಗರಣ ನಡೆದಿತ್ತು. ಆಗ ಬಾಬುರಾಮ್ ಅವರು ಸಚಿವರಾಗಿದ್ದರು.
ಮಾಧವ ಕುಮಾರ್ ಅವರು ಸದ್ಯ ಸಿಪಿಎನ್ (ಯೂನಿಫೈಡ್ ಸೋಷಿಯಲಿಸ್ಟ್) ಪಕ್ಷದ ಅಧ್ಯಕ್ಷರಾಗಿದ್ದಾರೆ. ಬಾಬುರಾಮ್ ಅವರು ನೇಪಾಳ ಸಮಾಜವಾದಿ ಪಕ್ಷದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.