ವಿಶ್ವಸಂಸ್ಥೆ/ವಾಷಿಂಗ್ಟನ್: ‘ಭಯೋತ್ಪಾದನೆ ನಿಗ್ರಹ, ಪ್ರಜಾಪ್ರಭುತ್ವ ಮೌಲ್ಯಗಳ ರಕ್ಷಣೆಗೆ ಭಾರತ ಬದ್ಧವಾಗಿದೆ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಟಿ.ಎಸ್.ತಿರುಮೂರ್ತಿ ಹೇಳಿದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 15 ರಾಯಭಾರಿಗಳೊಂದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಾರ್ಚ್ ತಿಂಗಳ ಅಧ್ಯಕ್ಷ ರಾಷ್ಟ್ರವಾಗಿ ಅಮೆರಿಕ ಕಾರ್ಯ ನಿರ್ವಹಿಸುತ್ತಿದೆ.
ಕೋವಿಡ್–19 ಪಿಡುಗಿನ ಸಮಯದಲ್ಲಿ ವಿವಿಧ ರಾಷ್ಟ್ರಗಳಿಗೆ ಲಸಿಕೆ ಪೂರೈಸಲು ನೆರವು ನೀಡಿದ ವಿಶ್ವಸಂಸ್ಥೆಯ ನಡೆ ಅನುಕರಣೀಯ ಎಂದೂ ಶ್ಲಾಘಿಸಿದರು.
‘ಪ್ರಜಾಪ್ರಭುತ್ವ, ಬಹುತ್ವ ಮೌಲ್ಯಗಳ ರಕ್ಷಣೆ, ಸಾಗರ ಗಡಿ ರಕ್ಷಣೆ, ಲಸಿಕೆ ಪೂರೈಕೆ ಮೂಲಕ ದೇಶಗಳೊಂದಿಗೆ ಸಂಬಂಧಗಳ ಸುಧಾರಣೆಗೂ ಭಾರತ ಬದ್ಧವಾಗಿದೆ’ ಎಂದು ತಿರುಮೂರ್ತಿ ಪುನರುಚ್ಚರಿಸಿದರು.
‘ಪ್ರಾದೇಶಿಕ ಮಟ್ಟದಲ್ಲಿ ಕಂಡು ಬಂದಿರುವ ಸಮಸ್ಯೆಗಳತ್ತ ಭದ್ರತಾ ಮಂಡಳಿ ಗಮನ ಹರಿಸಬೇಕಿದೆ. ಅದರಲ್ಲೂ, ಮ್ಯಾನ್ಮಾರ್, ಇಥಿಯೋಪಿಯಾ, ಲಿಬಿಯಾ, ಸಿರಿಯಾ ಹಾಗೂ ಯೆಮೆನ್ನಲ್ಲಿ ಉದ್ಭವಿಸಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವುದು ಈಗಿನ ತುರ್ತು’ ಎಂದು ಬೈಡನ್ ಹೇಳಿದರು.