ನವದೆಹಲಿ: ರಷ್ಯಾ ಸೇನೆಯಲ್ಲಿ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಹಲವು ಮಂದಿ ಭಾರತೀಯರನ್ನು ಬಿಡುಗಡೆಗೊಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ) ತಿಳಿಸಿದೆ.
ರಷ್ಯಾ ಸೇನೆಯಿಂದ ಭಾರತೀಯ ಪ್ರಜೆಗಳ ಬಿಡುಗಡೆ ಕುರಿತಂತೆ ರಷ್ಯಾದ ಅಧಿಕಾರಿಗಳೊಂದಿಗೆ ಸಕ್ರಿಯವಾಗಿ ಮಾತುಕತೆ ನಡೆಸುವುದು ಭಾರತದ ಪ್ರಮುಖ ಆದ್ಯತೆಯ ವಿಷಯವಾಗಿದೆ ಎಂದು ಅದು ಹೇಳಿದೆ.
ಮಾಧ್ಯಮ ವರದಿಗಳ ಪ್ರಕಾರ, ಹಲವಾರು ಭಾರತೀಯರು ರಷ್ಯಾದ ಮಿಲಿಟರಿಯಲ್ಲಿ ಭದ್ರತಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ರಷ್ಯಾದ ಗಡಿಯುದ್ದಕ್ಕೂ ಕೆಲವು ಪ್ರದೇಶಗಳಲ್ಲಿ ರಷ್ಯಾದ ಸೈನಿಕರೊಂದಿಗೆ ಉಕ್ರೇನ್ ವಿರುದ್ಧ ಯುದ್ಧ ಮಾಡಲು ಅವರನ್ನು ಒತ್ತಾಯಿಸಲಾಗಿದೆ ಎಂದೂ ವರದಿಯಾಗಿತ್ತು.
ರಷ್ಯಾದ ಸೇನೆಯಲ್ಲಿರುವ ಭಾರತೀಯರು ಬಿಡುಗಡೆಯ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ಕೆಲವು ತಪ್ಪಾದ ವರದಿಗಳನ್ನು ನಾವು ನೋಡಿದ್ದೇವೆ ಎಂದು ಎಂಇಎ ಹೇಳಿಕೆಯಲ್ಲಿ ತಿಳಿಸಿದೆ.
ಮಾಸ್ಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಗಮನಕ್ಕೆ ತರಲಾದ ಅಂತಹ ಪ್ರತಿಯೊಂದು ಪ್ರಕರಣವನ್ನು ರಷ್ಯಾದ ಅಧಿಕಾರಿಗಳೊಂದಿಗೆ ಬಲವಾಗಿ ಚರ್ಚಿಸಿ, ಬಿಡುಗಡೆಗೆ ಒತ್ತಾಯಿಸಲಾಗಿದೆ. ಸಚಿವಾಲಯದ ಗಮನಕ್ಕೆ ತಂದವುಗಳನ್ನು ನವದೆಹಲಿಯಲ್ಲಿರುವ ರಷ್ಯಾದ ರಾಯಭಾರಿ ಕಚೇರಿ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಇದರ ಪರಿಣಾಮ ಹಲವು ಭಾರತೀಯರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದೂ ಅದು ತಿಳಿಸಿದೆ.
ರಷ್ಯಾ ಸೇನೆಯಲ್ಲಿ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಭಾರತೀಯರನ್ನು ಶೀಘ್ರವಾಗಿ ಬಿಡುಗಡೆಗೆ ಕೋರಿ ರಷ್ಯಾ ಅಧಿಕಾರಿಗಳ ಜೊತೆ ಸತತ ಸಂಪರ್ಕದಲ್ಲಿದ್ದೇವೆ. ಉಕ್ರೇನ್ನಲ್ಲಿನ ಸಂಘರ್ಷ ವಲಯದಿಂದ ದೂರವಿರಲು ಭಾರತೀಯರಿಗೆ ಸೂಚಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಕಳೆದ ವಾರ ತಿಳಿಸಿದ್ದರು.