ಕೊಲಂಬೊ: ಭಾರತ ಘೋಷಿಸಿದ ಸಾಲ ಯೋಜನೆಯಲ್ಲಿ ₹141 ಕೋಟಿಯನ್ನು ಶ್ರದ್ಧಾಕೇಂದ್ರಗಳ ಮೇಲ್ಛಾವಣಿಗೆ ಸೌರ ಫಲಕ ಅಳವಡಿಸಲು ಬಳಸುವ ಕುರಿತು ಶ್ರೀಲಂಕಾ ಸರ್ಕಾರ ಮಂಗಳವಾರ ನಿರ್ಧಾರ ತೆಗೆದುಕೊಂಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡಿದ ₹830 ಕೋಟಿ ಸಾಲದಿಂದ ಈ ಮೊತ್ತವನ್ನು ವಿನಿಯೋಗಿಸಲಾಗುವುದು. ಶ್ರದ್ಧಾಕೇಂದ್ರಗಳ ಮೇಲ್ಛಾವಣಿಗೆ ಅಳವಡಿಸಲು ಕಂಪನಿಗೆ ಗುತ್ತಿಗೆ ನೀಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಯೋಜನೆ ಅನುಷ್ಠಾನಕ್ಕಾಗಿ ಕರೆಯಲಾಗಿದ್ದ ಟೆಂಡರ್ನಲ್ಲಿ ಆರು ಕಂಪನಿಗಳು ಭಾಗವಹಿಸಿದ್ದವು. ಇದರಲ್ಲಿ ನಿರ್ದಿಷ್ಟ ಕಂಪನಿಯನ್ನು ಆಯ್ಕೆ ಮಾಡಲಾಗಿದೆ.
ಅಧಿಕ ವಿದ್ಯುತ್ ಶುಲ್ಕ ಕುರಿತು ಧಾರ್ಮಿಕ ಕೇಂದ್ರಗಳೂ ದೂರುಗಳನ್ನು ಸಲ್ಲಿಸಿದ್ದವು. ದೇಶದಲ್ಲಿದ್ದ ಕಠಿಣ ಆರ್ಥಿಕ ಪರಿಸ್ಥಿತಿ ಸಂದರ್ಭದಲ್ಲಿ ಜಾರಿಗೆ ತರಲಾದ ವೆಚ್ಚ ಚೇತರಿಕೆ ಸುಂಕ ವ್ಯವಸ್ಥೆಯನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿ, ಬಿಡ್ ಅನ್ನು ಸರ್ಕಾರ ಅಂತಿಮಗೊಳಿಸಿದೆ.
ಶ್ರೀಲಂಕಾದಲ್ಲಿ ಸೌರಯೋಜನೆ ಅನುಷ್ಠಾನಕ್ಕಾಗಿ 2021ರಲ್ಲಿ ಭಾರತ ಸರ್ಕಾರವು ₹830 ಕೋಟಿಯಷ್ಟು ಸಾಲವನ್ನು ಘೋಷಿಸಿತ್ತು.