ಕೊಲಂಬೊ: ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಶುಕ್ರವಾರ ಪದಚ್ಯುತಗೊಳಿಸಿದ ನಂತರ ಬಿಕ್ಕಟ್ಟು ಉಲ್ಬಣಗೊಂಡಿದ್ದು ಭಾನುವಾರ ಹಿಂಸಾಚಾರ ಭುಗಿಲೆದ್ದಿದೆ. ಗುಂಡಿನ ದಾಳಿಗೆ ವ್ಯಕ್ತಿಯೊಬ್ಬ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ.
ರನಿಲ್ ನಿಷ್ಠ, ಪೆಟ್ರೋಲಿಯಂ ಸಚಿವ ಅರ್ಜುನ ರಣತುಂಗ ಅವರನ್ನು ಅಪಹರಿಸಲು ಸಿರಿಸೇನ ಬೆಂಬಲಿಗರ ಗುಂಪು ಯತ್ನಿಸಿದೆ. ಗುಂಪನ್ನು ಚದುರಿಸಲು ರಣತುಂಗ ಅಂಗರಕ್ಷಕರು ಐದು ಸುತ್ತು ಗುಂಡು ಹಾರಿಸಿದ್ದಾರೆ.
‘ಗಾಯಗೊಂಡವರ ಪೈಕಿ 34 ವರ್ಷದ ವ್ಯಕ್ತಿ ಆಸ್ಪತ್ರೆಗೆ ದಾಖಲಿಸಿದ ಕೆಲ ಸಮಯದಲ್ಲಿಯೇ ಮೃತಪಟ್ಟಿದ್ದಾರೆ’ ಎಂದು ಕೊಲಂಬೊ ನ್ಯಾಷನಲ್ ಆಸ್ಪತ್ರೆಯ ವಕ್ತಾರರಾದ ಪುಷ್ಪಾ ಸೊಯ್ಸಾ ತಿಳಿಸಿದ್ದಾರೆ.
ಅಧ್ಯಕ್ಷ ಮೈತ್ರಿಸೇನ ಅವರು ರನಿಲ್ ವಿಕ್ರಮಸಿಂಘೆ ಅವರನ್ನು ಪದಚ್ಯುತಗೊಳಿಸಿ, ಮಹಿಂದ ರಾಜಪಕ್ಸೆ ಅವರನ್ನು ನೂತನ ಪ್ರಧಾನಿಯಾಗಿ ನೇಮಕ ಮಾಡಿದ್ದರಿಂದ ಉದ್ಭವಿಸಿದ ರಾಜಕೀಯ ಬಿಕ್ಕಟ್ಟಿನ ನಂತರ ವರದಿಯಾದ ಮೊದಲ ಹಿಂಸಾಚಾರ ಪ್ರಕರಣ ಇದಾಗಿದೆ.