ವಾಷಿಂಗ್ಟನ್: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ತಮ್ಮ ಸಂಸತ್ತಿನಲ್ಲಿ ಭಾರತದ ವಿರುದ್ಧ ಯಾವುದೇ ನಿರ್ದಿಷ್ಟ ಸಾಕ್ಷ್ಯಗಳಿಲ್ಲದೆ ಆರೋಪ ಮಾಡಿರುವುದು ದುರದೃಷ್ಟಕರ ಎಂದು ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಮ್ (ಯುಎಸ್ಐಎಸ್ಪಿಎಫ್) ಅಧ್ಯಕ್ಷ ಮತ್ತು ಸಿಇಒ ಮುಖೇಶ್ ಅಘಿ ಶುಕ್ರವಾರ ಹೇಳಿದ್ದಾರೆ.
ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಟ್ರುಡೊ ಆರೋಪಿಸಿದ್ದರು. ಬಳಿಕ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಉಂಟಾಗಿತ್ತು. ಈ ಆರೋಪಕ್ಕೆ ವಿಶ್ವದಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿವೆ. ಇದೀಗ ಯುಎಸ್ಐಎಸ್ಪಿಎಫ್ ಕೂಡ ಟ್ರುಡೊ ಹೇಳಿಕೆಯನ್ನು ಟೀಕಿಸಿದೆ.
" ಸೂಕ್ತ ಪುರಾವೆಗಳಿಲ್ಲದೆ ಒಂದು ಪ್ರಮುಖ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿರುವುದು ದುರದೃಷ್ಟಕರ. ಆ ಬಳಿಕ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿದೆ" ಎಂದು ಅಘಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಉಭಯ ದೇಶಗಳ ನಡುವೆ ಸಂಬಂಧ ಹಿಂದಿನಿಂದಲೂ ಇದೆ. 2.3 ಲಕ್ಷ ಭಾರತೀಯ ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ಮಾಡುತ್ತಿದ್ಧಾರೆ. ಕೆನಡಾ ಭಾರತದಲ್ಲಿ ಸುಮಾರು 55 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದೆ. ಒಂದು ದೇಶದ ಪ್ರಧಾನಿ ಸಂಸತ್ತಿಗೆ ಹೋಗಿ 'ವಿಶ್ವಾಸಾರ್ಹ ಆರೋಪಗಳಿವೆ' ಎಂದು ಹೇಳಿದರೂ ಅದನ್ನು ಸಾಬೀತುಪಡಿಸಲು ಸಾಕ್ಷ್ಯಗಳನ್ನು ನೀಡಲು ಸಾಧ್ಯವಾಗದಿರುವುದು ಖೇದಕರ ಎಂದಿದ್ಧಾರೆ.
ಕೆನಡಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ವಿವಾದ ಭಾರತ ಮತ್ತು ಅಮೆರಿಕ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅಘಿ, 'ರಾಜತಾಂತ್ರಿಕ ವಿವಾದ ಭಾರತ ಮತ್ತು ಅಮೆರಿಕ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ದೀರ್ಘಾವಧಿಯಲ್ಲಿ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಅಂತರ ಹೆಚ್ಚುತ್ತದೆ. ಪ್ರಬುದ್ಧ ಮನಸ್ಸುಗಳು ಪರಿಸ್ಥಿತಿಯನ್ನು ಶಾಂತಗೊಳಿಸಬೇಕು' ಎಂದು ಪ್ರತಿಕ್ರಿಯಿಸಿದರು.
ಅಘಿ ಅವರ ಪ್ರಕಾರ, ಟ್ರುಡೊ ಆರೋಪ ದೇಶೀಯ ರಾಜಕೀಯ ಮತ್ತು ಅವರ ಸ್ವಂತ ರಾಜಕೀಯ ಉಳಿವಿಗಾಗಿ ಸಿಖ್ ಪ್ರಾಬಲ್ಯದ ಪಕ್ಷದ ಮೇಲೆ ಅವಲಂಬಿತವಾಗಿದೆ. ಇಲ್ಲಿ ಎರಡು ಅಂಶಗಳಿವೆ. ಒಂದು ದೇಶೀಯ ರಾಜಕಾರಣ. ಪ್ರಧಾನ ಮಂತ್ರಿ ಟ್ರುಡೊ ಅವರನ್ನು ಬೆಂಬಲಿಸುವ ಎನ್ಡಿಪಿ ಸಿಖ್ ಪ್ರಾಬಲ್ಯದ ಪಕ್ಷ. ಆದ್ದರಿಂದ ದೇಶೀಯ ರಾಜಕೀಯ ರಾಷ್ಟ್ರೀಯ ಹಿತಾಸಕ್ತಿಯ ಲಾಭ ಪಡೆದುಕೊಂಡಿತು.
ಎರಡನೆಯ ಅಂಶವೆಂದರೆ ಟ್ರುಡೊ ಮತ್ತು ಪಿಎಂ ನರೇಂದ್ರ ಮೋದಿ ನಡುವಿನ ಮಾತುಕತೆ 2ನೇ ಬಾರಿ ಹೆಚ್ಚು ಆರೋಗ್ಯಕರವಾಗಿಲ್ಲ. ಟ್ರುಡೊ ಅದರ ಬಗ್ಗೆ ಅಸಮಾಧಾನ ಹೊಂದಿದ್ದರು. ಅದು ಸಂಸತ್ತಿನಲ್ಲಿ ಅವರ ಹೇಳಿಕೆಗೆ ಪೂರಕವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.