ಕಾಬೂಲ್ (ಪಿಟಿಐ): ಭಾರತೀಯ ಮೂಲದ ಲೇಖಕಿ ಸುಷ್ಮಿತಾ ಬ್ಯಾನರ್ಜಿ (49) ಅವರನ್ನು ಅವರ ಮನೆಯ ಹೊರ ಭಾಗದಲ್ಲೇ ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಆಘ್ಘಾನಿಸ್ತಾನದ ಪೊಲೀಸರು ತಿಳಿಸಿದ್ದಾರೆ.
`ಪಕ್ತಿಕಾ ಪ್ರಾಂತ್ಯದ ರಾಜಧಾನಿ ಖರನಾದಲ್ಲಿರುವ ಸುಷ್ಮಿತಾ ಅವರ ಮನೆಗೆ ನುಗ್ಗಿದ ಉಗ್ರರು, ಸುಷ್ಮಿತಾ ಅವರ ಪತಿ ಮತ್ತು ಕುಟುಂಬದ ಇನ್ನಿತರ ಸದಸ್ಯರನ್ನು ಕಟ್ಟಿಹಾಕಿದರು. ಸುಷ್ಮಿತಾ ಅವರನ್ನು ಮನೆಯಿಂದ ಹೊರಕ್ಕೆ ಎಳೆದು ತಂದು ಗುಂಡು ಹಾರಿಸಿದರು. ನಂತರ ಅವರ ದೇಹವನ್ನು ಸಮೀಪದಲ್ಲೇ ಇದ್ದ ಧಾರ್ಮಿಕ ಶಾಲೆಯೊಂದರ ಬಳಿ ಎಸೆದು ಹೋದರು' ಎಂಬ ಪೊಲೀಸರ ಹೇಳಿಕೆಯನ್ನು ಆಧರಿಸಿ ಬಿಬಿಸಿ ವರದಿ ಮಾಡಿದೆ.
ಸುಷ್ಮಿತಾ ಅವರ ಹತ್ಯೆಯ ಹೊಣೆಯನ್ನು ಈವರೆಗೂ ಯಾವುದೇ ಉಗ್ರರ ಗುಂಪು ಹೊತ್ತಿಲ್ಲ. ಆಫ್ಘನ್ ಉದ್ಯಮಿ ಜಾನ್ಬಾಜ್ ಖಾನ್ ಅವರನ್ನು ಕೋಲ್ಕತದಲ್ಲಿ ಭೇಟಿಯಾಗಿದ್ದ ಸುಷ್ಮಿತಾ, 1989ರಲ್ಲಿ ಅವರನ್ನು ವಿವಾಹವಾಗಿದ್ದರು. ಪಕ್ತಿಕಾದಲ್ಲಿ ಸೈಯದ್ ಕಮಲಾ ಎಂಬ ಹೆಸರಿನಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿದ್ದ ಸುಷ್ಮಿತಾ, ತಮ್ಮ ಉದ್ಯೋಗದ ಭಾಗವಾಗಿ ಸ್ಥಳೀಯ ಮಹಿಳೆಯರ ಬದುಕನ್ನು ಚಿತ್ರೀಕರಿಸುತ್ತಿದ್ದರು.
ಈ ಹಿಂದೆ ತಾಲಿಬಾನ್ ಉಗ್ರರ ಹಿಡಿತದಿಂದ ಸುಷ್ಮಿತಾ ತಪ್ಪಿಸಿಕೊಂಡು ಬಂದಿದ್ದರು. ಈ ಕುರಿತು ಅವರು `ಸಮ್ ಟೈಮ್ ಇನ್ ಅರ್ಲಿ 1994' ಮತ್ತು `ಕಾಬೂಲಿವಾಲರ್ ಬೆಂಗಾಳಿ ಪತ್ನಿ' ಎಂಬ ಕೃತಿಯನ್ನು 1995ರಲ್ಲಿ ರಚಿಸಿದ್ದರು. `ಕಾಬೂಲಿವಾಲರ್ ಬೆಂಗಾಲಿ ಪತ್ನಿ' ಕೃತಿಯು ಭಾರತದಲ್ಲಿ ಅತ್ಯಧಿಕವಾಗಿ ಮಾರಾಟವಾಗಿತ್ತು.