ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಆತ್ಮಹತ್ಯೆ ತಡೆಗೆ ಇದೆ ಪರಿಹಾರ

Last Updated 1 ಆಗಸ್ಟ್ 2018, 9:23 IST
ಅಕ್ಷರ ಗಾತ್ರ

ಕೆಲ ದಿನಗಳ ಹಿಂದೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ಜೋಗ ಜಲಪಾತದ ಚಿತ್ರದಲ್ಲಿ ಜಲಪಾತವು ತನ್ನೆಲ್ಲ ರುದ್ರ ರಮಣೀಯತೆ, ಭವ್ಯತೆ, ಲಾವಣ್ಯ ಮತ್ತು ಭೋರ್ಗರೆತ ದಿಂದ ನೋಡುಗರನ್ನು ಚುಂಬಕದಂತೆ ಮನ ಸೆಳೆಯುತ್ತಿರುವಂತೆ ಕಾಣುತ್ತಿತ್ತು. ಮಂಜಿನಿಂದ ಆವೃತ್ತವಾಗಿದ್ದ ಸುತ್ತಲಿನ ಹಸಿರು ಪರಿಸರವು ಜಲಪಾತಕ್ಕೆ ವಿಶೇಷ ಮೆರುಗು ನೀಡಿತ್ತು.

ಪಶ್ಚಿಮ ಘಟ್ಟದಲ್ಲಿ ಮುಂಗಾರು ಮಳೆ ಸೃಷ್ಟಿಸುವ ಮಾಂತ್ರಿಕತೆ ಮತ್ತು ಅವರ್ಣನೀಯ ಆನಂದ, ಹಚ್ಚ ಹಸಿರಿನ ಕಾಡು, ಮೋಡಗಳಿಂದ ಆವೃತ್ತವಾಗಿರುವ ಬೆಟ್ಟಗಳು ನನ್ನನ್ನು ಕೈಬೀಸಿ ಕರೆದವು. ವಾರಾಂತ್ಯದಲ್ಲಿ ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಜತೆ ಸೇರಿ ಜೋಗದ ಸಿರಿಯನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಅಲ್ಲಿಗೆ ಹೋಗಲು ಆ ಕ್ಷಣವೇ ನಿರ್ಧರಿಸಿದೆ. ಈ ಸಂದರ್ಭದಲ್ಲಿ ನನಗೆ ನನ್ನ ಬಾಲ್ಯದ ಶಾಲಾ ದಿನಗಳೂ ನೆನಪಾದವು.

ಗೊರೂರಿನಲ್ಲಿನ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ನಾನು ಓದುವಾಗ, ನಮ್ಮ ತರಗತಿಗಳು ಮತ್ತು ಶಿಕ್ಷಕರ ಕೊಠಡಿಯಲ್ಲಿ ಗೋಡೆ ಅಲಂಕರಿಸಿದ್ದ ಎರಡು ಬಗೆಯ ಚಿತ್ರಪಟಗಳಲ್ಲಿ ರಾಷ್ಟ್ರ ನಾಯಕರ ಮತ್ತು ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳು, ಸ್ಮಾರಕಗಳ ಚಿತ್ರಗಳು ನಮ್ಮ ಗಮನ ಸೆಳೆಯುತ್ತಿದ್ದವು. ಅವುಗಳ ಪೈಕಿ ಜೋಗ ಜಲಪಾತದ ಚಿತ್ರ ಅತ್ಯಾಕರ್ಷಕವಾಗಿ ನಮ್ಮೆಲ್ಲರ ಗಮನ ಸೆಳೆಯುತ್ತಿತ್ತು.

ಒಂದು ಬೆಳಗಿನ ಜಾವದಲ್ಲಿ ನಾವು ಬೆಂಗಳೂರು ಬಿಟ್ಟು ಜೋಗದತ್ತ ಪ್ರಯಾಣ ಬೆಳೆಸಿದೆವು. ದಾರಿ ಮಧ್ಯೆ ಮುಂಗಾರು ಮಳೆ ಅಲ್ಲಲ್ಲಿ ತನ್ನ ಪ್ರಭಾವ ತೋರಿಸುತ್ತಿತ್ತು. ಹೊಲಗದ್ದೆಗಳಲ್ಲಿ ರೈತರು ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಮುಂಗಾರುಪೂರ್ವ ಮಳೆ ಬಿದ್ದ ಪ್ರದೇಶಗಳಲ್ಲಿ ಬಿತ್ತನೆ ಪೂರ್ಣಗೊಂಡಿದ್ದರಿಂದ ಅನೇಕ ಕಡೆಗಳಲ್ಲಿನ ಹಸಿರು ಕಣ್ಣಿಗೆ ತಂಪೆರೆಯುತ್ತಿತ್ತು. ರೈತಾಪಿ ವರ್ಗವು ಸಡಗರ, ಉತ್ಸಾಹದಿಂದ ಹೊಲದಲ್ಲಿ ಮಗ್ನವಾಗಿದ್ದುದನ್ನು ಕಂಡಾಗ ಮನದಾಳದಲ್ಲಿ ವರ್ಣಿಸಲಾಗದ ಹರ್ಷದ ಭಾವನೆ ಮೂಡುತ್ತಿತ್ತು.

ಹೊಲಗದ್ದೆಗಳಲ್ಲಿನ ರೈತರ ಸಂಭ್ರಮದ ಓಡಾಟ ಕಂಡಾಗ ಕೃಷಿಯೇ ಮಾನವನ ಜೀವಾಳ ಎನ್ನುವ ಭಾವನೆ ಮನಸ್ಸಿನಲ್ಲಿ ಮೂಡಿ ಮರೆಯಾಗುತ್ತಿತ್ತು. ‘ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು’ ಎಂದು ಹೇಳಿದ ಸರ್ವಜ್ಞನ ಮಾತೂ ನೆನಪಾಯಿತು. ಕೃಷಿಕರ ಸಂಭ್ರಮವನ್ನು ಕಣ್ತುಂಬಿಕೊಳ್ಳುವಾಗಲೇ ನನಗೆ ದಿಢೀರನೆ ರೈತರ ಆತ್ಮಹತ್ಯೆ ಪ್ರಕರಣಗಳು ನೆನಪಾ ದವು. ಬೆಳಗಿನ ದಿನಪತ್ರಿಕೆಯಲ್ಲಿ ಓದಿದ ರೈತರ ಆತ್ಮಹತ್ಯೆ ಪ್ರಕರಣಗಳ ವಿವರಗಳು, ಕೆಲ ದಿನಗಳಿಂದೀಚೆಗೆ ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿ ಮಾಡುತ್ತಿರುವ ಮನ ಕಲಕುವ ರೈತರ ಸಾವಿನ ಘಟನೆಗಳು ನೆನಪಾಗಿ ಹೃದಯ ಭಾರವಾಯಿತು.

ನನ್ನೆಲ್ಲ ಉತ್ಸಾಹ ಜರ್ರನೆ ಇಳಿದು ವಿಷಣ್ಣ ಭಾವ ಮೂಡಿತು. ಕಬ್ಬು ಬೆಳೆಗಾರರ ಬವಣೆ, ಸಾಲಬಾಧೆಗೆ ಹೆದರಿ ಸಾವಿಗೆ ಶರಣಾಗುತ್ತಿರುವ ರೈತರಿಂದಾಗಿ ಕರ್ನಾಟಕವು ದೇಶದಾದ್ಯಂತ ಸುದ್ದಿ ಮಾಡುತ್ತಿರುವುದು ಕಂಡು ವ್ಯಥೆಯಾಯಿತು. ಮಹಾರಾಷ್ಟ್ರದ ವಿದರ್ಭ ಪ್ರದೇಶದಲ್ಲಿ ಬರಗಾಲದ ಕಾರಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳಿಗೂ ರಾಜ್ಯದ ರೈತರು ಸಾವಿಗೆ ಶರಣಾಗುತ್ತಿರುವುದಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ರಾಜ್ಯದ ರೈತರ ಸಾವುಗಳಿಗೆ ಬರಗಾಲ ಕಾರಣವಾಗಿಲ್ಲ ಎನ್ನುವುದನ್ನು ನಾವಿಲ್ಲಿ ಮುಖ್ಯವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕು.

ರಾಜ್ಯದ ಬಹುತೇಕ ಬೆಳೆಗಾರರು ನೀರಾವರಿ ಅಥವಾ ಕೊಳವೆಬಾವಿ ಆಧರಿಸಿ ಕಬ್ಬು ಬೆಳೆಯುತ್ತಾರೆ. ರೈತ ಮತ್ತು ಆತನ ಕುಟುಂಬದ ಸದಸ್ಯರೆಲ್ಲ ಅದರಲ್ಲೂ ವಿಶೇಷವಾಗಿ ದೇಶದಲ್ಲಿ ಗರಿಷ್ಠ ಪ್ರಮಾಣದಲ್ಲಿ ಇರುವ ಸಣ್ಣ ರೈತರು ವರ್ಷಪೂರ್ತಿ ಹೊಲದಲ್ಲಿ ತಮ್ಮೆಲ್ಲ ಸಮಯ, ಹಣ ಖರ್ಚು ಮಾಡುವುದರ ಜತೆಗೆ ಬೆವರನ್ನೂ ಸುರಿಸುತ್ತಾರೆ. ಫಸಲು ಕೈಗೆ ಬಂದಾಗ ಬೆಲೆ ಕುಸಿಯುತ್ತದೆ. ಕಬ್ಬು ಕಟಾವು ಮಾಡಲು ಸಾಧ್ಯವಾಗುವುದಿಲ್ಲ. ಸಕ್ಕರೆ ಕಾರ್ಖಾನೆಗಳು ಸಕಾಲಕ್ಕೆ ಹಣ ಪಾವತಿಸುವುದಿಲ್ಲ. ಕಬ್ಬು ಕಡಿದರೆ ಕೂಲಿಯೂ ಗಿಟ್ಟದಂತಹ ಸ್ಥಿತಿ ಎದುರಾದಾಗ ಹತಾಶನಾದ ರೈತ ಬೆಳೆಗೆ ಬೆಂಕಿ ಹಚ್ಚುವ ಅನಿವಾರ್ಯಕ್ಕೆ ಇಳಿಯುತ್ತಾನೆ.

ಬಹುತೇಕ ರೈತರ ಪರಿಸ್ಥಿತಿ ಇದೇ ಬಗೆಯ ಹತಾಶೆ ಯಿಂದ ಕೂಡಿರುತ್ತದೆ. ಬೀಜ, ರಾಸಾಯನಿಕ ಗೊಬ್ಬರ, ಕೀಟನಾಶಕ ಮತ್ತು ಕಾರ್ಮಿಕರ ಕೂಲಿಗಾಗಿ ರೈತರು ಲೇವಾ ದೇವಿಗಾರರಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆದಿರುತ್ತಾರೆ. ಮಕ್ಕಳ ಶಾಲಾ ಶುಲ್ಕ, ಆಸ್ಪತ್ರೆ ವೆಚ್ಚ, ಕೌಟುಂಬಿಕ ಧಾರ್ಮಿಕ ಕಾರ್ಯಕ್ರಮಗಳು, ಹಬ್ಬ ಹರಿದಿನಗಳು, ಮದುವೆ, ಮಕ್ಕಳ ಜನನ- ಹಿರಿಯರ ಸಾವು ಮತ್ತಿತರ ಉದ್ದೇಶಗಳಿಗೆ ಅವರಿಗೂ ಹಣದ ಅಗತ್ಯ ಇದ್ದೇ ಇರುತ್ತದೆ.

ಇಂದು ಅತ್ಯಂತ ಬಡ ರೈತರ ಆಸೆ ಆಕಾಂಕ್ಷೆಗಳೂ ಹೆಚ್ಚಿವೆ. ತನ್ನ ಮಕ್ಕಳು ಸರ್ಕಾರಿ ಶಾಲೆ ಬದಲಿಗೆ ಸಾಲ ಸೋಲ ಮಾಡಿಯಾದರೂ ಖಾಸಗಿ ಕಾನ್ವೆಂಟ್‌ಗಳಲ್ಲಿ ಕಲಿಯಲಿ ಎಂದು ಆತ ಬಯಸುತ್ತಿದ್ದಾನೆ. ಸರ್ಕಾರಿ ಶಾಲೆ ಗಳಿಗೆ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ ಎಂಬಂಥ ಅಧಿಕೃತ ಅಂಕಿ ಅಂಶಗಳೇ ವಾಸ್ತವಕ್ಕೆ ಕನ್ನಡಿ ಹಿಡಿಯುತ್ತವೆ. ಸರ್ಕಾರಿ ಆಸ್ಪತ್ರೆಗಳದ್ದೂ ಇದೇ ಕಥೆ - ವ್ಯಥೆ. ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ದೊರೆಯುವಂತೆ ಇಲ್ಲಿಯೂ ಉಚಿತ ಸೇವೆ ದೊರೆಯುತ್ತಿದ್ದರೂ ಬಹುತೇಕರು ಅಲ್ಲಿಗೆ ಹೋಗಲು ಬಯಸುವುದಿಲ್ಲ. ಸಾಲ ಮಾಡಿಯಾದರೂ ಉತ್ತಮ ಆರೋಗ್ಯ ಸೇವೆ ಪಡೆಯಲು ಮುಂದಾಗಿ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ.

ಸೈನ್ಯದಿಂದ ನಿವೃತ್ತನಾದ ನಂತರ ನಾನು ಕೂಡ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದೆ. ಬಂಜರು ಭೂಮಿ ಖರೀದಿಸಿ ಗುಡಿಸಲು ಹಾಕಿಕೊಂಡು ಕೆಲ ವರ್ಷಗಳ ಕಾಲ ಅಲ್ಲಿಯೇ ನೆಲೆಸಿದ್ದೆ. ಕಳಪೆ ಬೀಜ, ಅತಿವೃಷ್ಟಿ, ಬರ, ದುಬಾರಿ ರಸ ಗೊಬ್ಬರ– ಕೂಲಿ, ಸಾಲಕ್ಕೆ ಗರಿಷ್ಠ ಬಡ್ಡಿ, ವಿದ್ಯುತ್ ಕೊರತೆ, ಫಸಲು ಕೈಗೆ ಬಂದಾಗ ಕುಸಿಯುವ ಬೆಲೆಗಳಿಂದ ತತ್ತರಿಸಿ ಹೋಗಿ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದೆ. ರೈತರ ಬದುಕೇ ಒಂದು ದೊಡ್ಡ ಜೂಜಾಟ ಇದ್ದಂತೆ. ಎಲ್ಲವೂ ತನಗೆ ಪ್ರತಿಕೂಲವಾದಾಗ, ಸಾಲ ಮರುಪಾವತಿಸಲಿಕ್ಕಾಗದೇ, ಅವಮಾನ ಸಹಿಸದೇ ರೈತರು ಅಸಹಾಯಕತೆ ಯಿಂದ ಸಾವಿನ ಪ್ರಪಾತಕ್ಕೆ ಬೀಳುತ್ತಾರೆ.

ದೇಶದ ಒಟ್ಟು ಜನಸಂಖ್ಯೆಯ ಶೇ 60ರಷ್ಟು ಜನರು ಕೃಷಿಕರಾಗಿದ್ದಾರೆ. ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಕೃಷಿ ವಲಯದ ಕೊಡುಗೆ ಕಡಿಮೆಯಾಗುತ್ತಿ ದ್ದರೂ, ಕೃಷಿಯಲ್ಲಿ ತೊಡಗಿಕೊಂಡಿರುವವರ ಸಂಖ್ಯೆ ಕಡಿಮೆಯಾಗಿಲ್ಲ. ಇದು ಕೂಡ ರೈತರು ಬಡವರಾಗಿಯೇ ಇರಲು ಕಾರಣ. ರೈತರು ಕೃಷಿ ಬದಲಿಗೆ ಇತರ ವೃತ್ತಿ ಮತ್ತು ವ್ಯಾಪಾರದಲ್ಲಿ ತೊಡಗುವಂತಾದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅದರಿಂದ ಗ್ರಾಮೀಣ ಪ್ರದೇಶದಲ್ಲಿನ ಬದುಕು ಸುಸ್ಥಿರಗೊಳ್ಳಬಹುದು. ಈ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಪಾತ್ರ ನಿರ್ವಹಿಸಬೇಕಾಗಿದೆ.

ಈ ಮಧ್ಯೆ, ಕರ್ನಾಟಕ ಸರ್ಕಾರವು ತ್ವರಿತವಾಗಿ ಎಚ್ಚೆತ್ತು ಕೊಂಡು ಎರಡು ಕೆಲಸಗಳನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕಾಗಿದೆ. ಮೊದಲನೆಯದಾಗಿ ರೈತರಿಗೆ ಅಗ್ಗದ ಮತ್ತು ಗುಣಮಟ್ಟದ ವಿದ್ಯುತ್ ಪೂರೈಸಬೇಕು. ಗ್ರಾಮೀಣ ರಸ್ತೆ ಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಇದರಿಂದ ತ್ವರಿತವಾಗಿ ಕೊಳೆಯುವ ಕೃಷಿ ಉತ್ಪನ್ನಗಳನ್ನು ತ್ವರಿತವಾಗಿ ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗಲಿದೆ. ಇದರಿಂದ ರೈತರ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆಯೂ ದೊರೆಯಲಿದೆ. ಸದ್ಯಕ್ಕೆ ಜಾರಿ ಯಲ್ಲಿ ಇರುವ ಎಪಿಎಂಸಿ ಕಾಯ್ದೆಯನ್ನೂ ರದ್ದುಗೊಳಿಸಬೇಕಾಗಿದೆ. ಈ ಕಾಯ್ದೆಯು ಕೇವಲ ವರ್ತಕರು ಮತ್ತು ಮಧ್ಯವರ್ತಿಗಳ ಕಿಸೆ ಭರ್ತಿ ಮಾಡುತ್ತಿದೆ. ಅದರಿಂದ ಬೆಳೆಗಾರರಿಗೆ ಯಾವುದೇ ಪ್ರಯೋಜನ ದೊರೆಯುತ್ತಿಲ್ಲ.

ಎರಡನೆಯದಾಗಿ ಸರ್ಕಾರ ಮಾಡಬಹುದಾದ ಕೆಲಸ ಗಳಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಉತ್ತೇಜನ ನೀಡು ವುದು ಸೇರಿದೆ. ಪ್ರವಾಸೋದ್ಯಮವು ವಿಶ್ವದಲ್ಲಿಯೇ ಗರಿಷ್ಠ ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳನ್ನು ಒದಗಿಸುತ್ತಿ ರುವ ಉದ್ಯಮವಾಗಿ ಬೆಳೆಯುತ್ತಿದ್ದು, ಅದರ ಪ್ರಯೋಜನ ಪಡೆದು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಅವಕಾಶಗ ಳನ್ನು ಸೃಷ್ಟಿಸಬಹುದಾಗಿದೆ. ಹಂಪಿ, ಬಾದಾಮಿ, ಬೇಲೂರು- ಹಳೇಬೀಡು, ಪಟ್ಟದಕಲ್ಲು ಮುಂತಾದ ಐತಿಹಾಸಿಕ ಪ್ರವಾಸಿ ತಾಣಗಳು ವಿಶ್ವದಾದ್ಯಂತ ಪ್ರವಾಸಿಗ ರನ್ನು ಸೆಳೆಯುತ್ತಿವೆ. ಗಿರಿ ಕಂದರಗಳು, ಕಾಸರಗೋಡಿ ನಿಂದ ಗೋವಾವರೆಗಿನ 500 ಕಿ.ಮೀ. ಉದ್ದದ ಸುಂದರ ಕಡಲ ತೀರ, ಅರಮನೆಗಳು, ಕೋಟೆ ಕೊತ್ತಲಗಳು, ಬಂಡೀಪುರ ಮತ್ತು ನಾಗರಹೊಳೆಯಲ್ಲಿನ ಸಫಾರಿ ಉದ್ಯಾನಗಳು- ಇವೆಲ್ಲ ರಾಜ್ಯದ ಹಿಂದುಳಿದ ಪ್ರದೇಶಗ ಳಲ್ಲಿಯೇ ಇವೆ.

ತಿಂಡಿ ತಿನಿಸುಗಳ ಮಳಿಗೆ, ಹೋಟೆಲ್, ಟ್ಯಾಕ್ಸಿ, ಪ್ರವಾಸಿ ಬಸ್, ಪ್ರವಾಸಿ ಮಾರ್ಗದರ್ಶಿ, ಕರಕುಶಲ ವಸ್ತುಗಳ ಮಾರಾಟ ಮುಂತಾದವು ಕೈತುಂಬ ಕೆಲಸಗಳನ್ನು ಒದಗಿಸಬಲ್ಲವು. ಕೇರಳವೂ ಸೇರಿದಂತೆ ವಿಶ್ವದ ಇತರ ಭಾಗಗಳಲ್ಲಿನ ರೈತರು ಕೃಷಿಗೆ ಬದಲಿಗೆ ಪ್ರವಾಸೋದ್ಯಮದ ಪೂರಕ ವೃತ್ತಿಗಳಲ್ಲಿ ತೊಡಗಿಕೊಂಡಿದ್ದಾರೆ. ಇದು ರಾಜ್ಯ ಸರ್ಕಾರಕ್ಕೂ ಮತ್ತು ರೈತರಿಗೆ ಸ್ಫೂರ್ತಿಯಾಗಬೇಕಾಗಿದೆ.

ಜೋಗ ತಲುಪುವವರೆಗೆ ರೈತರು ಎದುರಿಸುತ್ತಿರುವ ಸಂಕಷ್ಟಗಳು ನನ್ನ ಮನಃಪಟಲದಲ್ಲಿ ಮೂಡಿ ಮರೆಯಾದವು. ಜೋಗ ತಲುಪಿದಾಗ ಅಲ್ಲಿ ನಮಗೆ ಸ್ವಚ್ಛತೆಯಿಂದ ಕೂಡಿದ ಒಂದೇ ಒಂದು ಹೋಟೆಲ್ ಕಾಣಲು ಸಿಗಲಿಲ್ಲ. ಇಂಟರ್‌ನೆಟ್ ಮೂಲಕವೇ ನಾವು ‘ಹೋಮ್ ಸ್ಟೇ’ನಲ್ಲಿ ಊಟ– ವಸತಿ ವ್ಯವಸ್ಥೆ ಮಾಡಿಕೊಂಡಿದ್ದೆವು.

ಮಳೆ ಬಿಡುವು ಕೊಟ್ಟ ನಂತರ ಜಲಪಾತದ ಬಳಿ ತೆರಳಿದಾಗ ಅದರ ರುದ್ರರಮಣೀಯ ಸೌಂದರ್ಯ ಕಂಡು ಮತ್ತೊಮ್ಮೆ ಬೆರಗಾದೆ. ಜಲಪಾತ ವೀಕ್ಷಿಸುವ ಸ್ಥಳದ ಸುತ್ತಲಿನ ಕಸ, ಹೊಲಸು ಕಂಡು ಆಘಾತವೂ ಆಯಿತು. ಕಿತ್ತು ಹೋದ ಸಿಮೆಂಟ್ ಅಡ್ಡಗಟ್ಟೆ ಮತ್ತು ತುಕ್ಕು ಹಿಡಿದ ಕಬ್ಬಿಣದ ತಡೆಗೋಡೆ ನೋಡಿದಾಗ, ಪ್ರವಾಸಿಗರಿಗೆ ಯಾವುದೇ ಬಗೆಯ ಸುರಕ್ಷತೆಯ ಭರವಸೆ ಅಲ್ಲಿ ಕಂಡು ಬರಲಿಲ್ಲ. ಮಾರ್ಗದರ್ಶಿಯು ಜಲಪಾತದ ಎದುರಿನ ಬ್ರಿಟಿಷ್ ಬಂಗ್ಲೆಯ ಬಳಿ ಕರೆದುಕೊಂಡು ಹೋದಾಗ ಬ್ರಿಟಿಷರು ಕಟ್ಟಿದ್ದ ಮಂಗಳೂರು ಹೆಂಚಿನ ಸುಂದರ ಕಟ್ಟಡ ಗಮನ ಸೆಳೆಯಿತು. ಅಲ್ಲೇ ಸಮೀಪದಲ್ಲಿ ಸರ್ಕಾರ ಕಟ್ಟಿಸಿ ರುವ, ಮೂರು ವರ್ಷದ ಹಿಂದೆಯಷ್ಟೇ ಉದ್ಘಾಟನೆ ಗೊಂಡಿರುವ ಆಧುನಿಕ ಅತಿಥಿ ಗೃಹಕ್ಕೆ ಒದಗಿದ ದುಃಸ್ಥಿತಿ ಕಂಡು ಮನಸ್ಸು ಗಾಸಿಗೊಂಡಿತು. ಒಡೆದು ಹೋದ ಕಿಟಕಿ ಗಾಜು, ಬಾವಲಿಗಳ ಹಾರಾಟದ ತಾಣವಾಗಿರುವ ಈ ಸರ್ಕಾರಿ ಗೆಸ್ಟ್ ಹೌಸ್ ಖಾಲಿ ಬಿದ್ದು ಭೂತ ಬಂಗ್ಲೆಯಂತಾಗಿ ರುವುದು ಸರ್ಕಾರಿ ಆಡಳಿತ ಯಂತ್ರವು ಪ್ರವಾಸೋದ್ಯಮಕ್ಕೆ ನೀಡುತ್ತಿರುವ ಉತ್ತೇಜನಕ್ಕೆ ಕೈಗನ್ನಡಿ ಹಿಡಿದಿತ್ತು.

ಮಂತ್ರಮುಗ್ಧಗೊಳಿಸುವ ಜಲಪಾತ ವೀಕ್ಷಿಸುವ ತಾಣ ಮತ್ತು ಅಲ್ಲಿಗೆ ಸಾಗುವ ಮಾರ್ಗದ ಉದ್ದಕ್ಕೂ ತುಂಬಿರುವ ಕಸದ ರಾಶಿ, ಗಿಡದ ಮರೆಯಲ್ಲಿ ನಿಸರ್ಗದ ಕರೆಗೆ ಓಗೊಡುವ ಪ್ರವಾಸಿಗ - ಇವೆಲ್ಲವನ್ನು ಕಂಡಾಗ ನನಗಂತೂ ಅದೊಂದು ನಾಚಿಕೆಗೇಡಿನ ಮತ್ತು ಭಯಾನಕ ಅನುಭವ ವಾಗಿ ಕಾಡಿತು. ಇವೆಲ್ಲವೂ ಸರ್ಕಾರದ ಉದಾಸೀನ ಧೋರಣೆಗೆ ಸಾಕ್ಷಿಯಾಗಿವೆ.

ಪ್ರತಿಭೆ ಅಥವಾ ಸಂಪನ್ಮೂಲ ಕೊರತೆಯಿಂದ ನಾವು ಬಡವರಲ್ಲ. ಅದಕ್ಷ ಆಡಳಿತ ಮತ್ತು ದೋಷಪೂರಿತ ನೀತಿ ಗಳಿಂದ ಸೂಕ್ತ ಮೂಲಸೌಕರ್ಯಗಳು ಮತ್ತು ಉತ್ತೇಜಕರ ಪರಿಸರ ಇಲ್ಲದ ಕಾರಣಕ್ಕೆ ನಾವು ಬಡವರಾಗಿದ್ದೇವಷ್ಟೆ. ಪ್ರವಾಸಿ ತಾಣಗಳು ಸ್ವಚ್ಛವಾಗಿಟ್ಟುಕೊಳ್ಳಲು ಹೆಚ್ಚುವರಿ ಹಣವನ್ನೇನೂ ಖರ್ಚು ಮಾಡಬೇಕಾಗಿಲ್ಲ. ರಾಜಕೀಯ ಮತ್ತು ಅಧಿಕಾರಶಾಹಿ ಇಚ್ಛಾಶಕ್ತಿ ತೋರಿಸಬೇಕಷ್ಟೆ.

ಕೊಡಗಿನಲ್ಲಿ ಸಾವಿರಾರು ‘ಹೋಮ್‌ ಸ್ಟೇ’ಗಳು ಕಾರ್ಯಾರಂಭ ಮಾಡಿದ್ದು, ಬೆಂಗಳೂರಿನ ಸಾಫ್ಟ್‌ವೇರ್‌ ಸಂಸ್ಥೆಗಳಲ್ಲಿ ದುಡಿಯುತ್ತಿರುವವರು ವಾರಾಂತ್ಯಕ್ಕೆ ಇಲ್ಲಿಗೆ ಲಗ್ಗೆ ಇಡುತ್ತಿದ್ದಾರೆ. ಚಿಕ್ಕಮಗಳೂರು, ಸಕಲೇಶಪುರ ಮತ್ತು ಉತ್ತರ ಕರ್ನಾಟಕದ ಅನೇಕ ಕಡೆಗಳಲ್ಲಿ ಇದೇ ಬಗೆಯ ಪ್ರವಾಸೋದ್ಯಮ ಬೆಳೆದರೆ ಸ್ಥಳೀಯರಿಗೆ ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗಿ ಅವರ ವರಮಾನವೂ ಹೆಚ್ಚಲಿದೆ.

ಗ್ರಾಮೀಣ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಮೂಲಕ ಕರ್ನಾಟಕ ರಾಜ್ಯ ಸರ್ಕಾರವು ರೈತರ ಸಂಕಷ್ಟವನ್ನು ನಿವಾರಣೆ ಮಾಡಬಹುದಾಗಿದೆ. ಇದಕ್ಕೆ ಭಾರಿ ಪ್ರಮಾಣದ ಬಂಡವಾಳವೇನೂ ಬೇಕಾಗಿಲ್ಲ. ದೂರದೃಷ್ಟಿ, ಹೊಸ ವಿಚಾರಧಾರೆ, ಬದ್ಧತೆ ಮತ್ತು ದಕ್ಷ ಆಡಳಿತ ಇರಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT