ಮನೆಗೆ ಹೋದ ಮೇಲೆ ಮಗು ತಾಯಿಯನ್ನು ಕೇಳಿತು, `ಅಮ್ಮೋ, ನೀನು ನನಗೆ ನಿತ್ಯ ಕೊಡುತ್ತಿದ್ದುದು ನಿಜವಾಗಿಯೂ ಹಾಲೇ. ಯಾಕೆಂದರೆ ನಾನಿಂದು ಗೆಳೆಯನ ಮನೆಯಲ್ಲಿ ಹಾಲು ಕುಡಿದೆ. ಅದರ ರುಚಿಯೇ ಬೇರೆಯಾಗಿತ್ತು'. ತಾಯಿಯ ಕಣ್ಣಿನಲ್ಲಿ ನೀರು ಉಕ್ಕಿದವು. ಆಕೆಗೆ ಅರಿವಾಯಿತು, ಮಗು ನಿಜವಾದ ಹಾಲನ್ನು ಕುಡಿದಿದೆ. ಇನ್ನು ಸುಳ್ಳು ಹೇಳಿ ಪ್ರಯೋಜನವಿಲ್ಲ. ಆಕೆ ದುಃಖದಿಂದ ಸತ್ಯ ಸಂಗತಿ ವಿವರಿಸಿದಳು. ಮನೆಯಲ್ಲಿಯ ಬವಣೆ, ಹಾಲಿಗೆ ಹಣ ಹೊಂದಿಸಲಾಗದ ಅನಿವಾರ್ಯತೆ. ಇವೆಲ್ಲವನ್ನೂ ಅಳುತ್ತಲೇ ಮಗುವನ್ನು ತಬ್ಬಿಕೊಂಡು ತಿಳಿಸಿದಳು. `ಮಗೂ ನಿನಗೆ ಹಾಲಿಲ್ಲ ಎಂದು ಹೇಳಲು ಮನಸ್ಸಾಗದ್ದರಿಂದ ಅಕ್ಕಿ ತೊಳೆದ ನೀರನ್ನೇ ಹಾಲೆಂದು ಕೊಟ್ಟೆ' ಎಂದು ಹೇಳಿ ಗದ್ಗದಳಾದಳು. ಮಗು ತಾಯಿಯ ತೊಡೆಯಿಂದ ಮೇಲಕ್ಕೆದ್ದು ಆಕೆಯ ಕಣ್ಣೀರು ಒರೆಸಿತು.
`ಅಮ್ಮೋ, ನಾನು ಇನ್ನು ಎಂದಿಗೂ ನಿನ್ನನ್ನು ಹಾಲು ಕೊಡು ಎಂದು ಪೀಡಿಸುವುದಿಲ್ಲ. ಆದರೆ, ನನಗೆ ಅಕ್ಕಿ ತೊಳೆದ ನೀರನ್ನು ಮಾತ್ರ ಹಾಲೆಂದು ಕೊಡಬೇಡ, ನಾನು ಕುಡಿಯಲಾರೆ' ಎಂದಿತು. ಇದೊಂದು ಪುಟ್ಟ ಘಟನೆಯಾದರೂ ಅಸಾಮಾನ್ಯ ದರ್ಶನ ನೀಡುವಂತಹದು. ನಮ್ಮ ಬಹಳಷ್ಟು ಬದುಕು ಹೀಗೇ ಹೋಗುತ್ತದೆ. ಆದರೆ ಒಂದು ಬಾರಿ ಸತ್ಯದ ದರ್ಶನವಾದರೆ ಅಸತ್ಯದ ತಾತ್ಕಾಲಿಕ ಮೆರುಗು ಕರಗಿಹೋಗುತ್ತದೆ, ನಮಗರಿವಿಲ್ಲದಂತೆ ನಮ್ಮ ಜೀವನದಲ್ಲಿ ಶಾಂತಿ ನೆಲೆಮಾಡುತ್ತದೆ, ತಳಮಳ ನಿಂತು ಹೋಗುತ್ತದೆ. ನಿಜವಾದ ಹಾಲಿನ ರುಚಿ ಕಂಡ ಮೇಲೆ ಅಕ್ಕಿ ತೊಳೆದ ನೀರಿಗೆ ಮನ ತುಡಿಯುವುದಿಲ್ಲ.