`ನಮಸ್ಕಾರ, ಮುಖ್ಯ ಕಾರ್ಯದರ್ಶಿಯವರಿಗೆ. ಹೌದು, ಹೌದು ನಾನು ಇಂದೇ ಡೆಪ್ಯೂಟಿ ಸೆಕ್ರೆಟರಿಯಾಗಿ ಅಧಿಕಾರ ತೆಗೆದುಕೊಂಡಿದ್ದೇನೆ. ಹ್ಞಾ, ಹ್ಞಾ ನಿಮ್ಮ ಶುಭಾಶಯಗಳಿಗೆ ಕೃತಜ್ಞತೆಗಳು. ಹೌದಲ್ವೇ. ಅಧಿಕಾರದಲ್ಲಿ ನಾವು ಮೇಲೆ ಕೆಳಗೆ ಇದ್ದರೂ ಇಬ್ಬರೂ ಹಳೆಯ ಸ್ನೇಹಿತರಲ್ವೇ. ನೀವು ಯಾವ ಚಿಂತೆಯನ್ನೂ ಮಾಡಬೇಡಿ. ಎಂಥ ಸಮಸ್ಯೆಯನ್ನು ನಾನು ಕ್ಷಣ ಮಾತ್ರದಲ್ಲಿ ಪರಿಹರಿಸಿಬಿಡುತ್ತೇನೆ. ನಿಮಗೆ ಗೊತ್ತಲ್ಲ. ನಮ್ಮ ಇಲಾಖೆಯ ಮಂತ್ರಿ ಕೂಡ ನನ್ನ ಸ್ನೇಹಿತ.
ಶಾಲೆಯಲ್ಲಿದ್ದಾಗ ಮಹಾಮೂರ್ಖನಾಗಿದ್ದ. ಈಗ ಮಂತ್ರಿಯಾಗಿದ್ದಾನೆ. ಆದರೆ ನಾನು ಹೇಳಿದ ಒಂದು ಮಾತನ್ನೂ ತೆಗೆದು ಹಾಕುವುದ್ಲ್ಲಿಲ. ಅವನಿಗೂ, ಮುಖ್ಯಮಂತ್ರಿಗಳಿಗೂ ಚೆನ್ನಾಗಿದೆ. ನಿಮಗೆ ಏನಾದರೂ ಸಹಾಯಬೇಕಾದರೆ ನನಗೆ ಹೇಳಿ, ಸಂಕೋಚ ಬೇಡ. ನನಗೆ ಇಷ್ಟೊಂದು ಜನರ ಬೆಂಬಲವಿರುವಾಗ ಯಾರ ಭಯ. ಆಯ್ತು, ನೀವು ನಮ್ಮ ಮನೆಗೆ ಬನ್ನಿ ವಿರಾಮವಾಗಿ ಮಾತನಾಡೋಣ. ಫೋನ್ ಇಡಲಾ. ಸರಿ' ಎಂದು ಅತ್ಯಂತ ಸಂಭ್ರಮದಿಂದ, ತೃಪ್ತಿಯಿಂದ ಫೋನನ್ನು ಕೆಳಗಿಟ್ಟು ಈ ಮಾತುಗಳನ್ನೇ ಕೇಳುತ್ತ ಬೆರಗಾಗಿ ನಿಂತಿದ್ದ ಅಧಿಕಾರಿಯನ್ನು ಕಂಡು ಗತ್ತಿನಿಂದ, `ನಿಮಗೆ ಏನಾಗಬೇಕಿತ್ತು' ಎಂದು ಕೇಳಿದರು.
ಆತ ಇವರ ಮುಖವನ್ನೇ ನೋಡುತ್ತ ಹೇಳಿದ, `ಸರ್, ನಾನು ಟೆಲಿಫೋನ್ ಇಲಾಖೆಯವನು. ನಿಮ್ಮ ಟೆಲಿಫೋನಿಗೆ ಸಂಪರ್ಕ ಕಲ್ಪಿಸಬೇಕಿತ್ತು. ಇದುವರೆಗೂ ಅದಕ್ಕೆ ಯಾವ ಸಂಪರ್ಕವೂ ಇಲ್ಲ'. ಸಾಹೇಬರ ಮುಖ ಬಿಳಿಚಿಕೊಂಡಿತು. ನಮಗೆ ಸಣ್ಣ ಸಣ್ಣ ಬೆಳವಣಿಗೆಯಾದರೆ, ಪುಟ್ಟ ಸಾಧನೆಯಾದರೆ ಅದೆಷ್ಟು ಹೇಳಿಕೊಳ್ಳುವ, ತೋರಿಸಿಕೊಳ್ಳುವ ಕಾತುರ. ಜನ ನನ್ನನ್ನು ಮೆಚ್ಚಬೇಕೆಂಬ, ಗೌರವಿಸಬೇಕೆಂಬ ಹುಚ್ಚು ದಾರಿ ತಪ್ಪಿಸುತ್ತದೆ, ಸರಿಯಾದ ಸಮಯದಲ್ಲಿ ಮರ್ಯಾದೆ ತೆಗೆಯುತ್ತದೆ.