ನೂರಕ್ಕೆ ಪದಾರ್ಪಣ ಮಾಡಿದ ಮೊರಾರ್ಜಿ ಇನ್ನಿಲ್ಲ– ಕಳಚಿದ ಗಾಂಧಿಯುಗದ ಕೊನೆಯ ಕೊಂಡಿ
ಮುಂಬೈ, ಏ. 10 (ಯುಎನ್ಐ)– ಅಪ್ಪಟ ಗಾಂಧಿವಾದಿ ಮತ್ತು ಮಾಜಿ ಪ್ರಧಾನ ಮಂತ್ರಿ ಮೊರಾರ್ಜಿ ದೇಸಾಯಿ ಅವರು ಇಂದು ಮಧ್ಯಾಹ್ನ ತಮ್ಮ ನೂರನೇ ವರ್ಷದಲ್ಲಿ ನಿಧನರಾದರು. ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿ ಅದರಅಭಿವೃದ್ಧಿಗೆ ಶ್ರಮಿಸಿದ್ದ ಮಹಾನ್ ರಾಜಕಾರಣಿಗಳ ಪರಂಪರೆಯ ಮತ್ತೊಂದು ಕೊಂಡಿ ಕಳಚಿಕೊಂಡಿತು.
ಅಸ್ವಸ್ಥ ಮೊರಾರ್ಜಿಯವರನ್ನು ಮಾರ್ಚಿ 20ರಂದು ಜಸ್ಲೋಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೊರಾರ್ಜಿ ಅವರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆಗಾಗಿ ಅಹಮದಾಬಾದ್ಗೆ ಕೊಂಡೊಯ್ಯಲಾಗುವುದು. ಸಾಬರಮತಿನದೀದಂಡೆಯ ಮೇಲೆ, ಗುಜರಾತ್ ವಿದ್ಯಾಪೀಠದ ಆವರಣದಲ್ಲಿ ಬುಧವಾರ ಮೊರಾರ್ಜಿ ಅವರ ಅಂತ್ಯಕ್ರಿಯೆ ನಡೆಯುವುದು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸಮಾಧಿಯ ಬಳಿಒಂದು ಸ್ಥಳ ಮೊರಾರ್ಜಿ ಅವರ ಅಂತ್ಯಕ್ರಿಯೆಗೆ ಮೀಸಲಾಗಿದೆ ಎಂದುಕಾಂತಿ ದೇಸಾಯಿ ಹೇಳಿದ್ದಾರೆ. ಗಣ್ಯರು ಮತ್ತು ಸಾರ್ವಜನಿಕರು ದರ್ಶನ ಮಾಡಲೆಂದು ಮುಂಬೈನ ವಿಧಾನಭವನದಲ್ಲಿ ಪಾರ್ಥಿವ ಶರೀರವನ್ನು ಇರಿಸಲಾಗುವುದು.
ಪಂಚಾಯಿತಿ ಸ್ಥಾನ ಮೀಸಲು ಮಸೂದೆಗೆ ಪರಿಷತ್ ಅಂಗೀಕಾರ
ಬೆಂಗಳೂರು, ಏ. 10– ವಿಧಾನಸಭೆಯಲ್ಲಿ ಪುನಃ ಅಂಗೀಕಾರ ಪಡೆದು ಬಂದ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸ್ಥಾನಗಳ ಮೀಸಲಾತಿಗೆ ಸಂಬಂಧಿಸಿದ ವಿಧೇಯಕವನ್ನು ವಿಧಾನಪರಿಷತ್ ಇಂದು ಸರ್ವಾನುಮತದಿಂದ ಅಂಗೀಕರಿಸಿತು.
ವಿರೋಧ ಪಕ್ಷಗಳ ಬಹುಮತವಿರುವ ಮೇಲ್ಮನೆಯಲ್ಲಿ ಕಳೆದ ವಾರ ಈ ವಿಧೇಯಕ ಸೋಲನುಭವಿಸಿದ್ದರಿಂದ ಸರ್ಕಾರಕ್ಕೆ ಕೊಂಚ ಹಿನ್ನಡೆ ಉಂಟಾಗಿತ್ತು.
ಆರ್ಥಿಕ ನೀತಿ ಪರಿಣಾಮ:ಮುಖ್ಯಮಂತ್ರಿಗಳ ಸಭೆಗೆ ಆಗ್ರಹ
ಬೆಂಗಳೂರು, ಏ. 10– ಕೇಂದ್ರದ ನೂತನ ಆರ್ಥಿಕ ನೀತಿಯಿಂದ ಕೃಷಿ ಮತ್ತು ಬಡತನ ನಿರ್ಮೂಲನಾ ಯೋಜನೆಗಳ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂಬುದನ್ನು ವಿಮರ್ಶಿಸಲುಮುಖ್ಯಮಂತ್ರಿಗಳ ಸಭೆಯನ್ನು ಆದಷ್ಟು ಶೀಘ್ರ ಕರೆಯುವಂತೆ ಪ್ರಧಾನಿಯವರನ್ನು ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಅವರು ಇಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.