ನವದೆಹಲಿ, ಜುಲೈ 8 (ಯುಎನ್ಐ)– ಕೇಂದ್ರದಲ್ಲಿ ಪಿ.ವಿ.ನರಸಿಂಹರಾವ್ ನೇತೃತ್ವದಲ್ಲಿ ಬಿಜೆಪಿಯೇತರ ಸಮ್ಮಿಶ್ರ ಸರ್ಕಾರ ರಚನೆಗೆ ಬೆಂಬಲ ನೀಡುವ ಕುರಿತ ತಮ್ಮ ಒಂದು ವರ್ಷ ಅವಧಿಯ ಉದ್ದೇಶಿತ ಪ್ರಚಾರವನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಕೈಬಿಟ್ಟಿದ್ದಾರೆ.
ಹೆಗಡೆ ಅವರ ಜೊತೆ ಇಂದು ಮುಂಜಾನೆ ಒಂದು ಗಂಟೆ ಕಾಲ ಸಭೆ ನಡೆಸಿದ ಜನತಾದಳದ ಹಿರಿಯ ನಾಯಕ ಬಿಜು ಪಟ್ನಾಯಕ್, ಈ ಉದ್ದೇಶವನ್ನು ಒತ್ತಾಯಿಸುವುದು ಅನವಶ್ಯಕ ಎಂಬುದನ್ನು ಹೆಗಡೆ ಅವರು ಮನಗಂಡಿದ್ದಾರೆ ಎಂದರು.
ಗ್ರಾಮೀಣರಿಂದ ಪಶ್ಚಿಮಘಟ್ಟ ಅರಣ್ಯ ಸಂರಕ್ಷಣೆ
ಧಾರವಾಡ, ಜುಲೈ 8– ಬ್ರಿಟನ್ನಿನ ಸಾಗರೋತ್ತರ ಅಭಿವೃದ್ಧಿ ಸಂಸ್ಥೆಯ ನೆರವಿನಿಂದ ಪಶ್ಚಿಮ ಘಟ್ಟಗಳ ಅರಣ್ಯ ಅಭಿವೃದ್ಧಿ ಮತ್ತು ಸಂರಕ್ಷಣೆಯಲ್ಲಿ ಗ್ರಾಮೀಣ ಜನರನ್ನು ತೊಡಗಿಸುವ ಯೋಜನೆಯನ್ನು ಪ್ರಸ್ತುತ ವರ್ಷದಿಂದ ಶಿವಮೊಗ್ಗ ಅರಣ್ಯ ವೃತ್ತದಲ್ಲಿ ಜಾರಿಗೆ ತರುವುದಾಗಿ ಅರಣ್ಯ ಸಚಿವ ಎಸ್.ವೈ.ಮೇಟಿ ಹೇಳಿದ್ದಾರೆ.
ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಈ ಯೋಜನೆ ಅನುಷ್ಠಾನದಲ್ಲಿರುವ ಪ್ರದೇಶದಲ್ಲಿ ಗ್ರಾಮ ಮಟ್ಟದ 52 ಅರಣ್ಯ ಸಂರಕ್ಷಣಾ ಸಮಿತಿಗಳನ್ನು ರಚಿಸಲಾಗಿದೆ ಎಂದು ಹೇಳಿದರು.