ನವದೆಹಲಿ, ಅ. 13– ಲಂಡನ್ನಲ್ಲಿ ಹೃದಯದ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ನಿನ್ನೆ ತಾನೆ ಬೆಂಗಳೂರಿನಿಂದ ಇಲ್ಲಿಗೆ ಆಗಮಿಸಿದ್ದ ಸಿ.ಕೆ. ಜಾಫರ್ ಷರೀಫ್ ಅವರಿಂದ ಇಂದು ರೈಲ್ವೆ ಖಾತೆಯನ್ನು ವಾಪಸ್ ಪಡೆಯಲಾಗಿದೆ. ಆದರೆ, ಖಾತೆರಹಿತ ಸಚಿವರಾಗಿ ಷರೀಫ್ ಮುಂದುವರಿಯುವರು.
ಇದರಿಂದಾಗಿ ಕೇಂದ್ರ ಸಚಿವ ಸಂಪುಟದಲ್ಲಿನ ಖಾತೆರಹಿತ ಸಚಿವರ ಸಂಖ್ಯೆ ಎರಡಕ್ಕೆ ಏರಿದೆ. ವಿದೇಶಾಂಗ ಸಚಿವರಾಗಿದ್ದ ದಿನೇಶ್ ಸಿಂಗ್ ಪಾರ್ಶ್ವವಾಯು ಪೀಡಿತರಾದ ಬಳಿಕ ಖಾತಾರಹಿತ ಸಚಿವರಾಗಿ ಮುಂದುವರಿದಿದ್ದಾರೆ.
ಚಿತ್ರರಂಗಕ್ಕೆ ಕೈಗಾರಿಕೆಯ ಸ್ಥಾನಮಾನ: ಶೀಘ್ರ ಆದೇಶ
ಬೆಂಗಳೂರು, ಅ. 13– ಕರ್ನಾಟಕ ಚಿತ್ರೋದ್ಯಮವನ್ನು ಕೈಗಾರಿಕೆ ಎಂದು ಘೋಷಿಸುವ ಆಜ್ಞೆಯನ್ನು ಸರ್ಕಾರ ಇನ್ನು ಒಂದೆರಡು ದಿನಗಳಲ್ಲಿಯೇ ಹೊರಡಿಸಲಿದೆ ಎಂದು ವಾರ್ತಾಮತ್ತು ಪ್ರಸಾರ ಖಾತೆ ಸಚಿವ ಎಂ.ಸಿ. ನಾಣಯ್ಯ ಇಂದು ಇಲ್ಲಿ ಭರವಸೆ ನೀಡಿದರು.
ಈ ಉದ್ಯಮವನ್ನು ಕೈಗಾರಿಕೆ ಎಂದು ಈ ಹಿಂದೆ ಸರ್ಕಾರವೇ ಘೋಷಿಸಿದೆ. ಆದರೆ ಅದಕ್ಕೆ ಅಗತ್ಯವಾಗಿರುವ ಸರ್ಕಾರಿ ಆಜ್ಞೆ ಮಾತ್ರ ಇನ್ನೂ ಜಾರಿಗೆ ಬಾರದೇ ಇರುವುದರಿಂದಾಗಿ ಉದ್ಯಮಿಗಳಿಗೆ ದೊರೆಯಬೇಕಾದ ಸೌಲಭ್ಯ ಸಿಗದಂತಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.