ಚಂಡೀಗಡ, ಡಿ. 25 (ಪಿಟಿಐ)– ಮಾಜಿ ರಾಷ್ಟ್ರಪತಿ ಗ್ಯಾನಿ ಜೇಲ್ಸಿಂಗ್ ಅವರು ಇಂದು ಬೆಳಿಗ್ಗೆ ಏಳು ಗಂಟೆಗೆ ಇಲ್ಲಿ ನಿಧನ ರಾದರು. ಕಳೆದ ಇಪ್ಪತ್ತೇಳು ದಿನಗಳಿಂದ ಅವರು ಇಲ್ಲಿನ ನೆಹರೂ ಆಸ್ಪತ್ರೆಯಲ್ಲಿ ಮೃತ್ಯುವಿನೊಂದಿಗೆ ಹೋರಾಡುತ್ತಿದ್ದರು.
ಮಂಗಳವಾರ ಸಕಲ ರಾಷ್ಟ್ರಗೌರವದೊಂದಿಗೆ ಅಂತಿಮ ಸಂಸ್ಕಾರ ನಡೆಯಲಿದ್ದು, ಕೇಂದ್ರ ಸರ್ಕಾರ ಏಳು ದಿನಗಳ ಶೋಕಾಚರಣೆ ಘೋಷಿಸಿದೆ.
78 ವರ್ಷದ ಜೇಲ್ ಸಿಂಗ್ ಅವರು ನ.29ರಂದು ಪಂಜಾಬ್ನ ರೋಪುರ ಜಿಲ್ಲೆ ಯಲ್ಲಿ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಇಲ್ಲಿನ ಸ್ನಾತಕೋತ್ತರ ಕೇಂದ್ರ ನೆಹರೂ ಆಸ್ಪತ್ರೆ ಸೇರಿದ್ದರು. ತೋಳು ಮತ್ತು ಪಕ್ಕೆಲುಬುಗಳ ಮೂಳೆ ಮುರಿತದಿಂದ ನರಳುತ್ತಿದ್ದ ಅವರ ಆರೋಗ್ಯ ಹದಗೆಡುತ್ತಾ ಹೋಯಿತು.
ಕಾಂಗೈ ಶಾಸಕ ಪಕ್ಷಗಳ ನಾಯಕರಾಗಿ ಖರ್ಗೆ, ಎಚ್.ಕೆ. ಪಾಟೀಲ್ ಆಯ್ಕೆ
ಬೆಂಗಳೂರು, ಡಿ. 25– ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮಾಜಿ ಸಚಿವರುಗಳಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಎಚ್.ಕೆ. ಪಾಟೀಲ್ ಅವರು ಇಂದು ಇಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಪಕ್ಷದ ಕಚೇರಿಯಲ್ಲಿ ಸಂಜೆ ಸೇರಿದ್ದ ಎರಡೂ ಸದನಗಳ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಬಸ್ ಹಳ್ಳಕ್ಕೆ ಉರುಳಿ ಏಳು ಸಾವು
ರಾಯಚೂರು, ಡಿ. 25– ಇಲ್ಲಿಂದ 50 ಕಿ.ಮೀ. ದೂರದ ನಸಲಾಪುರ ಹಳ್ಳದ ಸೇತುವೆ ಮೇಲಿಂದ ಸಾರಿಗೆ ಸಂಸ್ಥೆಯ ರಾಯಚೂರು– ಚಿತ್ರದುರ್ಗ ಎಕ್ಸ್ಪ್ರೆಸ್ ಬಸ್ ಕೆಳಕ್ಕೆ ಉರುಳಿದಾಗ ಅದರಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಏಳು ಮಂದಿ ಅಸು ನೀಗಿದ ಘಟನೆ ಇಂದು ಬೆಳಿಗ್ಗೆಸಂಭವಿಸಿದೆ.
ಎರಡು ತಿಂಗಳ ಹಿಂದೆ ಕುಷ್ಟಗಿ ತಾಲ್ಲೂಕಿನ ಹಳ್ಳಿಯೊಂದರ ಬಳಿ ಲಾರಿಯೊಂದು ಹಳ್ಳಕ್ಕೆ ಮಗುಚಿ ಬಿದ್ದು ಅದರಲ್ಲಿ ಪ್ರಯಾಣ ಮಾಡುತ್ತಿದ್ದವರಲ್ಲಿ22 ಜನ ಸಾವನ್ನಪ್ಪಿದ್ದರು.