ಬೆಂಗಳೂರು, ಏ. 12– ದಕ್ಷಿಣ ಭಾರತದ ನಕ್ಸಲೀಯ ಹೋರಾಟದ ತ್ರಿವಿಕ್ರಮ ಕೊಂಡಪಲ್ಲಿ ಸೀತಾರಾಮಯ್ಯ ಸಶಸ್ತ್ರ– ಗೆರಿಲ್ಲಾ ಸಮರಕ್ಕೆ ಪುನಃ ಸಜ್ಜಾಗಿದ್ದಾರೆ. ಚದುರಿರುವ ‘ಕಾಮ್ರೇಡ್’ಗಳನ್ನು ಒಗ್ಗೂಡಿಸಿ, ದುರ್ಬಲಗೊಂಡಿರುವ ನಕ್ಸಲೀಯ ಚಳವಳಿಯನ್ನು 70ರ ದಶಕದ ‘ವೈಭವ’ಕ್ಕೆ ಮರಳಿಸಲು ನಡುಕಟ್ಟಿ ನಿಂತಿದ್ದಾರೆ.
‘ಶತ್ರು ಈಗ ಬಲಹೀನನಾಗಿದ್ದಾನೆ. ದಾಳಿಗೆ ಇದು ಪ್ರಶಸ್ತ ಸಮಯ. ವೈರಿಯನ್ನು ಮಣಿಸಲು ಸಶಸ್ತ್ರ ಸಮರದ ಜೊತೆಗೇ ಜನತಾಂತ್ರಿಕ ಹೋರಾಟವೂ ನಡೆಯಲಿ. ದೇಶದ ಎಲ್ಲ ಎಡಪಂಥೀಯ ಶಕ್ತಿಗಳು ಒಟ್ಟಾಗಿ ಎರಗಿದರೆ ಗೆಲುವು ಶತಃಸಿದ್ಧ’ ಎಂದು ಎಂಬತ್ತರ ಇಳಿವಯಸ್ಸಿನಲ್ಲೂ ಅವರ ವಿಪ್ಲವದ ಶಂಖ ಮೊಳಗುತ್ತದೆ.
ಆಂಧ್ರದ ಸಿರಿವಂತ ಜಮೀನ್ದಾರರು ಹಾಗೂ ಸರ್ಕಾರದ ಎದೆಯಲ್ಲಿ ಇಂದಿಗೂ ನಡುಕ ಹುಟ್ಟಿಸುವ ಸಿಪಿಐಎಂಎಲ್– ಪಿಡಬ್ಲ್ಯುಜಿ ಅನ್ನು ಕಟ್ಟಿ ಬೆಳೆಸಿದವರು ಸೀತಾರಾಮಯ್ಯ. ಸಂಘಟನೆಯ ಮುಖ್ಯ ಸಭೆಯೊಂದರಲ್ಲಿ ಪಾಲ್ಗೊಳ್ಳಲು ಈಚೆಗೆ ನಗರಕ್ಕೆ ಬಂದಿದ್ದ ಅವರು ತಮ್ಮ ಅಡಗುತಾಣದಲ್ಲಿ ‘ಪ್ರಜಾವಾಣಿ’ಗೆ ವಿಶೇಷ ಸಂದರ್ಶನ ನೀಡಿದರು.
ಕಾಶ್ಮೀರ: ಮಧ್ಯಸ್ಥಿಕೆಗೆ ಅಮೆರಿಕ ನಿರಾಸಕ್ತಿ
ವಾಷಿಂಗ್ಟನ್, ಏ. 12 (ಪಿಟಿಐ)– ಕಾಶ್ಮೀರ ಸಮಸ್ಯೆ ಪರಿಹಾರ ಹಾಗೂ ಪ್ರೆಸ್ಲರ್ ತಿದ್ದುಪಡಿ ಕಾಯ್ದೆ ರದ್ದುಗೊಳಿಸುವಂತೆ ಅಮೆರಿಕದಿಂದ ಖಚಿತ ಆಶ್ವಾಸನೆ ಪಡೆಯಲು ಪಾಕಿಸ್ತಾನದ ಪ್ರಧಾನಿ ಬೆನಜೀರ್ ಭುಟ್ಟೊ ಅವರು ನಡೆಸಿರುವ ಪ್ರಯತ್ನ ವಿಫಲವಾಗಿದೆ.
ಅಮೆರಿಕದ ಅಧ್ಯಕ್ಷರಿಂದ ನೈತಿಕ ಬೆಂಬಲ ಪಡೆಯುವಲ್ಲಿ ಬೆನಜೀರ್ ಅವರು ನಡೆಸಿರುವ ಮಾತುಕತೆಯು ಫಲಪ್ರದವಾಗಿದ್ದರೂ ಕಾಶ್ಮೀರದ ವಿಷಯದಲ್ಲಿ ಅಮೆರಿಕದ ಮಧ್ಯಸ್ಥಿಕೆಗೆ ಕ್ಲಿಂಟನ್ ಅವರು ನಿರಾಕರಿಸಿದ್ದಾರೆ.