ಪ್ರವೇಶ ಪರೀಕ್ಷೆ ರದ್ದತಿ ಇಂಗಿತ ಶಿಕ್ಷಣ ಕ್ಷೇತ್ರದಲ್ಲಿ ಶಂಕೆ
ಬೆಂಗಳೂರು, ಏ. 16– ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಶಿಕ್ಷಣ ಪ್ರವೇಶದಲ್ಲಿ ಕಳೆದ ವರ್ಷ ಉಂಟಾಗಿದ್ದ ಗೊಂದಲ ನಿವಾರಣೆಗಾಗಿ ‘ಸಮಗ್ರ ವೃತ್ತಿ ಶಿಕ್ಷಣ ಮಸೂದೆ’ಯನ್ನು ಇದೇ ಅಧಿವೇಶನದಲ್ಲಿ ತರುವ ಸರ್ಕಾರದ ಇಚ್ಛೆ ಸದುದ್ದೇಶದಿಂದ ಕೂಡಿದ್ದರೂ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ರದ್ದುಗೊಳಿಸಬೇಕೆಂಬ ಇಂಗಿತ ಶಿಕ್ಷಣ ಕ್ಷೇತ್ರದಲ್ಲಿ ಶಂಕೆ ಮೂಡಿಸಿದೆ.
ಸುಪ್ರೀಂ ಕೋರ್ಟ್ ತೀರ್ಪು ಹಾಗೂ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರದ ಪದೇ ಪದೇ ಬದಲಾದ ನಿಲುವಿನಿಂದಾಗಿ ಕಳೆದ ಬಾರಿ ವೈದ್ಯಕೀಯ, ಎಂಜಿನಿಯರಿಂಗ್ ಪ್ರವೇಶ, ಸಾರ್ವಜನಿಕರನ್ನು ಕಂಗೆಡಿಸಿತ್ತು. ಇದರಿಂದ ಹಿಂದಿನ ಸರ್ಕಾರಕ್ಕೂ ಅಪಕೀರ್ತಿ ಬಂದಿತ್ತು.
ಕಾಶ್ಮೀರದಲ್ಲಿ ಜುಲೈ 17ಕ್ಕೆ ಮುನ್ನ ಚುನಾವಣೆ ಸಂಭವ
ಜಮ್ಮು, ಏ. 16 (ಪಿಟಿಐ)– ಜಮ್ಮು– ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ ಅವಧಿ ಮುಂದಿನ ಜುಲೈ 17ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೂ ಮುನ್ನ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಸಲು ಅಧಿಕಾರಿಗಳು ಸಜ್ಜಾಗಿದ್ದಾರೆ.
ಏತನ್ಮಧ್ಯೆ ರಾಜ್ಯ ವಿಧಾನಸಭೆಗೆ ಶೀಘ್ರದಲ್ಲಿಯೇ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಅದಕ್ಕಾಗಿ ಸಿದ್ಧರಾಗಿರುವಂತೆ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.