ಅರ್ಜುನ್ ಅಮಾನತಿಗೆ ಕಾಂಗೈ ಕಾರ್ಯಕಾರಿ ಒಪ್ಪಿಗೆ, ಮುಲಾಯಂಗೆ ಬೆಂಬಲ ವಾಪಸ್
ನವದೆಹಲಿ, ಜ. 29 (ಪಿಟಿಐ, ಯುಎನ್ಐ)– ಮುಲಾಯಂ ಸಿಂಗ್ ಯಾದವ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕಾಂಗೈ ತಕ್ಷಣದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಂಡಿದೆ. ಇಂದು ರಾತ್ರಿ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅಲ್ಲದೆ, ಕೇಂದ್ರದ ಮಾಜಿ ಸಚಿವ ಅರ್ಜುನ್ ಸಿಂಗ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿರುವುದಕ್ಕೂ ಸಭೆ ಸಮ್ಮತಿ ನೀಡಿದೆ. ‘ನನಗೆ ನೀಡಿರುವ ಷೋಕಾಸ್ ನೋಟಿಸ್ಗೆ ಉತ್ತರಿಸಲು ಫೆಬ್ರುವರಿ 6ರವರೆಗೆ ಕಾಲಾವಕಾಶ ಬೇಕು’ ಎಂದು ಕೋರಿ ಅರ್ಜುನ್ ಸಿಂಗ್ ಅವರು ನರಸಿಂಹರಾವ್ ಅವರಿಗೆ ಬರೆದಿರುವ ಪತ್ರದ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಪಕ್ಷದ ಶಿಸ್ತು ಸಮಿತಿಗೆ ಸಭೆ ಸೂಚಿಸಿದೆ.
ಬೆಂಗಳೂರಿನಲ್ಲಿ ಮೂತ್ರಪಿಂಡಕಳವು ಜಾಲ
ಬೆಂಗಳೂರು, ಜ. 29– ಕಳೆದ ಎರಡು ವರ್ಷಗಳಿಂದ ಸುಮಾರು ಒಂದು ಸಾವಿರ ಮಂದಿ ಅಮಾಯಕರ ಮೂತ್ರಪಿಂಡಗಳನ್ನು ಕದ್ದು ಸೌದಿ ಅರೇಬಿಯಾದ ರೋಗಿಗಳಿಗೆ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದ ಜಾಲವೊಂದನ್ನು ನಗರದ ಕಮರ್ಷಿಯಲ್ ಠಾಣೆ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಸರ್ಕಾರಿ ವೈದ್ಯರೊಬ್ಬರೂ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.