ಬಳ್ಳಾರಿ ಜಿಲ್ಲೆ ಕ್ರಾಂತಿಗೆ ‘ನಾಂದಿ’:ಸೊಂಡೂರಿನಲ್ಲಿ ಲೋಹ, ಮಿಶ್ರಲೋಹದ ಕಾರ್ಖಾನೆಯ ಉದ್ಘಾಟನೆ
ಹೊಸಪೇಟೆ, ಫೆ. 20:ಸುತ್ತ ಕೆಂಬಣ್ಣದ ಅದುರುಗುಡ್ಡ. ಒಂದೆಡೆ ವಿಶಾಲವಾದ ಜಲರಾಶಿ. ತುಂಗಭದ್ರೆಯ ಪಂಪಾ ಸರೋವರದ ತಡಿಯಲ್ಲಿ ಬಳ್ಳಾರಿ ಜಿಲ್ಲೆಯ ಕ್ರಾಂತಿಗೆ ಮೊದಲ ಹೆಜ್ಜೆ. ಲೋಹ ಮತ್ತು ಕಬ್ಬಿಣ ಮಿಶ್ರಲೋಹ ಕಾರ್ಖಾನೆ ಉದ್ಘಾಟನೆ.
ಮೂರು ಕೋಟಿ ರೂಪಾಯಿಗಳ ಈ ಯೋಜನೆಯನ್ನು ಭಾರತ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಪ್ರಾರಂಭಿಸಿದರು.
ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರ ಅಧ್ಯಕ್ಷತೆಯಲ್ಲಿ ಸೊಂಡೂರು ಮ್ಯಾಂಗನೀಸ್– ಕಬ್ಬಿಣ ಅದುರುಗಳ ಸಂಸ್ಥೆಯ ಕಾರ್ಖಾನೆಯನ್ನು ಸಿದ್ದವ್ವನಹಳ್ಳಿಯವರು ಉದ್ಘಾಟಿಸಿದಾಗ ದೀಪಸ್ತಂಭ ಜ್ಯೋತಿಯಿಂದ ಬೆಳಗಿತು. ಮೇಲಿನಿಂದ ವಿಮಾನ ಪುಷ್ಪವೃಷ್ಟಿ ಮಾಡಿತು.
ಮಹಾರಾಷ್ಟ್ರೀಯರ ಬೆದರಿಕೆಗೆ ಸೊಪ್ಪು ಹಾಕದೆ ಮಹಾಜನ್ ವರದಿ ಜಾರಿಗೆ ಒತ್ತಾಯ
ನವದೆಹಲಿ, ಫೆ. 20:ಮಹಾರಾಷ್ಟ್ರದ ಕೆಲವು ನಾಯಕರ ಬೆದರಿಕೆಯಿದ್ದರೂ ಅದನ್ನು ಪರಿಗಣಿಸದೆ ಮಹಾಜನ್ ವರದಿಯನ್ನು ಕೂಡಲೇ ಜಾರಿಗೆ ತರಬೇಕೆಂದು ಮೈಸೂರಿನ ಪಾರ್ಲಿಮೆಂಟ್ ಸದಸ್ಯರು ಇಂದು ಪ್ರಧಾನಿಯನ್ನು ಆಗ್ರಹಪಡಿಸಿದರು.