ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಕೃಷಿ ಅಭಿವೃದ್ಧಿ ಮತ್ತು ಆಧುನಿಕ ವಿಜ್ಞಾನ

ಹಸಿವುಮುಕ್ತ ದೇಶಕ್ಕಾಗಿ ಸುಸ್ಥಿರ ಕೃಷಿಯನ್ನು ವೈಜ್ಞಾನಿಕವಾಗಿ ಬಲಪಡಿಸಬೇಕಾಗಿದೆ
Last Updated 8 ನವೆಂಬರ್ 2021, 19:31 IST
ಅಕ್ಷರ ಗಾತ್ರ

ಭಾರತದ ಪ್ರಜೆಗಳಲ್ಲಿ ಹತ್ತರಲ್ಲಿ ಒಬ್ಬ ಹಸಿವಿನಿಂದ ಬಳಲುತ್ತಿದ್ದಾನೆ. ಯಾರು ಏನೇ ಹೇಳಲಿ ಪ್ರಪಂಚದ ಎಲ್ಲ ದೇಶಗಳಲ್ಲೂ ಹಸಿವಿನಿಂದ ಬಳಲುವ ಪ್ರಜೆಗಳು ಇದ್ದಾರೆ. ತಮ್ಮ ದೇಶದಲ್ಲಿ ಹಸಿವಿನಿಂದ ಪ್ರಜೆಗಳು ಸಾಯುತ್ತಿದ್ದಾರೆ ಎಂಬುದನ್ನು ಯಾವುದೇ ದೇಶದ ರಾಜಕಾರಣಿ
ಒಪ್ಪಿಕೊಳ್ಳುವುದಿಲ್ಲ. ಆದರೂ ಶೂನ್ಯ ಹಸಿವಿನ ಜಗತ್ತು ಸ್ಥಾಪಿಸಬೇಕೆಂದು ಎಲ್ಲಾ ದೇಶಗಳ ನಾಯಕರು ವಿಶ್ವಸಂಸ್ಥೆಯಲ್ಲಿ ಒಕ್ಕೊರಲಿನಿಂದ ಪ್ರಮಾಣ ಮಾಡುತ್ತಾರೆ. ಹಾಗಾದರೆ ಶೂನ್ಯ ಹಸಿವಿನ ಸ್ಥಿತಿಗೆ ಬರಬೇಕಾದರೆ ಏನು ಮಾಡಬೇಕು?

ಮೊದಲನೆಯದಾಗಿ, ಕೃಷಿ ಚಟುವಟಿಕೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಆಧುನಿಕಗೊಳಿಸಬೇಕು. ಎರಡನೆಯದು, ಆಹಾರ ಸರಬರಾಜು ವ್ಯವಸ್ಥೆಯಲ್ಲಿ ಇರುವ ಅಡ್ಡಿ-ಅಡಚಣೆಗಳನ್ನು ನಿವಾರಿಸಬೇಕು. ಭಾರತದಲ್ಲಿ ಭಾರತೀಯ ಆಹಾರ ನಿಗಮ (ಎಫ್‌ಸಿಐ) ಎಂಬ ಸಂಸ್ಥೆಯನ್ನು ಸ್ಥಾಪಿಸಿ ದಶಕಗಳೇ ಕಳೆದಿವೆ. ಆದರೂ ಆ ಸಂಸ್ಥೆಯ ಕಾರ್ಯನಿರ್ವಹಣೆಯನ್ನು ಮೆಚ್ಚುಗೆಗೆ ಅರ್ಹವಾಗುವ ಮಟ್ಟಕ್ಕೆ ತರಲು ಇನ್ನೂ ಸಾಧ್ಯವಾಗಿಲ್ಲ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಎಷ್ಟೇ ಮಹತ್ತರ ಉದ್ದೇಶಗಳನ್ನು ಇಟ್ಟುಕೊಂಡು ಸ್ಥಾಪಿಸಿದರೂ ಅವುಗಳ ಕಾರ್ಯನಿರ್ವಹಣೆ ಜನೋಪಕಾರಿಯಾಗಿ ಸಾಧುವಾಗುವುದೇ ಇಲ್ಲ. ಅನ್ನಭಾಗ್ಯ ಮತ್ತು ಇಂದಿರಾ ಕ್ಯಾಂಟೀನ್‌ಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಅವುಗಳ ಪ್ರಯೋಜನ ಮತ್ತು ಪರಿಣಾಮಗಳ ಕುರಿತು ವಸ್ತುನಿಷ್ಠವಾಗಿ ತಿಳಿದು
ಕೊಳ್ಳುವುದಕ್ಕೆ ನಮಗೆ ಇನ್ನೂ ಸಾಧ್ಯವಾಗುತ್ತಿಲ್ಲ. ಕಾರಣ ಅವುಗಳ ಸುತ್ತಲೂ ಸುತ್ತುತ್ತಿರುವ ರಾಜಕಾರಣ.

ಇಲ್ಲಿ ಆಧುನೀಕರಣಗೊಳಿಸುವುದು ಎಂದರೇನು ಎಂಬ ಪ್ರಶ್ನೆ ಮಹತ್ವ ಪಡೆದುಕೊಳ್ಳುತ್ತದೆ. ಈ ಪ್ರಶ್ನೆಗೆ ಗೋಚರವಾಗುವ ಒಂದೇ ಒಂದು ಉತ್ತರವೆಂದರೆ, ಆಧುನಿಕ ಜೈವಿಕ ವಿಜ್ಞಾನದ ಆವಿಷ್ಕಾರಗಳು. ಭಾರತದ ಹಸಿರುಕ್ರಾಂತಿಯ ಹರಿಕಾರ ಡಾ. ಎಂ.ಎಸ್.ಸ್ವಾಮಿನಾಥನ್ ಇಪ್ಪತ್ತು ವರ್ಷಗಳ ಹಿಂದೆಯೇ ಹೇಳಿದಂತೆ, ಹಸಿರುಕ್ರಾಂತಿ ಬಳಲಿ ದಶಕಗಳೇ ಕಳೆದಿವೆ. ಹೊಸ ವಿಜ್ಞಾನದ ಅವಶ್ಯಕತೆ ಬಂದಿದೆ.ಭಾರತದ 21ನೇ ಶತಮಾನದ ಪ್ರಗತಿಯು ಆಧುನಿಕ ತಂತ್ರಜ್ಞಾನದಿಂದಲೇ ಸಾಧ್ಯ ಎಂದು ಎ.ಪಿ.ಜೆ. ಅಬ್ದುಲ್ ಕಲಾಂ ಅವರೂ ಹೇಳಿದ್ದರು. ದೇಶದ ಜನಸಂಖ್ಯೆ ಅಧಿಕವಾಗುತ್ತಲೇ ಇದೆ. ವಿಶ್ವ ಆಹಾರ ಸಂಸ್ಥೆಯ ಪ್ರಕಾರ, 2050ನೇ ಇಸವಿಯ ಹೊತ್ತಿಗೆ ಪ್ರಪಂಚದ ಜನಸಂಖ್ಯೆ 1,000 ಕೋಟಿ ತಲುಪಲಿದೆ. ಅದೇ ಸಮಯದಲ್ಲಿ ಭಾರತದ ಜನಸಂಖ್ಯೆ 150 ಕೋಟಿ ಆಗಲಿದೆ.

ಮತ್ತೊಂದು ಗಹನವಾದ ಸಂಗತಿಯೆಂದರೆ, ಅಧಿಕ ವಾಗಿರುವ ಜಗತ್ತಿನ ತಾಪಮಾನ ಈಗಾಗಲೇ ಕೃಷಿಯ ಮೇಲೆ ಬಹಳಷ್ಟು ಪ್ರಭಾವ ಬೀರಿ, ಇಳುವರಿಯನ್ನು ಕಡಿಮೆ ಮಾಡುತ್ತಿದೆ. ಜೊತೆಗೆ ಆಹಾರ ಸರಬರಾಜು ವ್ಯವಸ್ಥೆಯನ್ನು ಸಹ ಅಸ್ತವ್ಯಸ್ತಗೊಳಿಸುತ್ತಿದೆ. ಈ ಎರಡೂ ಕಂಟಕಗಳನ್ನು ಎದುರಿಸಬೇಕಾದರೆ ವಿಜ್ಞಾನ ಆಧಾರಿತ ಉಪಾಯಗಳನ್ನು ಅಳವಡಿಸಿಕೊಳ್ಳದೆ, ಅತ್ಯಾಧುನಿಕ ಸಲಕರಣೆಗಳನ್ನು ಬಳಸಿಕೊಳ್ಳದೆ ಬೇರೆ ಮಾರ್ಗವೇ ಇಲ್ಲ.

ಹಸಿವು ನಿವಾರಣೆ ಹಾಗೂ ಪರಿಸರ ರಕ್ಷಣೆಗೆ ವಿಶ್ವಸಂಸ್ಥೆಯ 2021ನೇ ಸಾಲಿನ ವೈಜ್ಞಾನಿಕ ಸಲಹಾ ಸಮಿತಿಯು ಏಳು ಉಪಯುಕ್ತ ಸಲಹೆಗಳನ್ನು ನೀಡಿದೆ. ಅವುಗಳೆಂದರೆ:

1. ಹಸಿವನ್ನು ನಿವಾರಿಸಲು ಬಹುರೂಪಿ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಸುಸ್ಥಿರ ಕೃಷಿ ಪದ್ಧತಿಗೆ ಅತ್ಯಾಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಸಮಾಜದ ಸುಸ್ಥಿರತೆಗೆ ಸಮರ್ಪಕ ರೀತಿಯಲ್ಲಿ ಆಹಾರ ವಿತರಣೆಯಾಗಬೇಕು. ಜೊತೆಗೆಪುಷ್ಟಿದಾಯಕವಾದ ಆಹಾರ ಪೂರೈಸಬೇಕು. ಈ ಕೆಲಸಗಳಿಗೆ ಸೂಕ್ತ ಅನುದಾನ ಒದಗಿಸಬೇಕು. ಈ ದಿಸೆಯಲ್ಲಿ ಭಾರತ ಸರ್ಕಾರ ಮೊದಲ ಹೆಜ್ಜೆಗಳನ್ನು ಇಡತೊಡಗಿದೆ. ಸಾಧಿಸುವುದು ಇನ್ನೂ ಬೆಟ್ಟದಷ್ಟಿದೆ.

2. ಆಹಾರ ಕ್ಷೇತ್ರ ಎದುರಿಸುವ ಆಪತ್ತುಗಳನ್ನು ನಿವಾರಿಸ ಬೇಕು. ನೀತಿ, ನಿಯಮಗಳಡಿ ಕೃಷಿಗೆ ವಿಮಾ ಸೌಲಭ್ಯ ಕಲ್ಪಿಸಿ ಸಣ್ಣ ರೈತರನ್ನು ಕಾಪಾಡಬೇಕು.

3. ಸಮಾನತೆ ಮತ್ತು ಆಹಾರ ಹಕ್ಕುಗಳು ಸಕಲ ಮನುಷ್ಯರಿಗೂ ಸಿಕ್ಕುವಂತೆ ನೋಡಿಕೊಳ್ಳಬೇಕು. ಸ್ಥಳೀಯವಾಗಿ ಹೊಂದಿಕೊಳ್ಳುವ ಸಂಶೋಧನೆ, ಪ್ರೌಢಶಾಲೆಯಿಂದಲೇ ಕೃಷಿ ವಿದ್ಯೆ ಮತ್ತು ಕೈಗೆಟಕುವ ಹಣಕಾಸಿನ ವ್ಯವಸ್ಥೆಗಳನ್ನು ಅಳವಡಿಸಬೇಕು.

4. ಜೀವಶಾಸ್ತ್ರದ ಸಂಶೋಧನೆಗೆ ಹೆಚ್ಚುವರಿ ಪ್ರೋತ್ಸಾಹ ನೀಡಬೇಕು. ಜೈವಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅಧಿಕ ಇಳುವರಿ ಹಾಗೂ ರೋಗನಿವಾರಕ ಶಕ್ತಿಯನ್ನು ಬೆಳೆಗಳಲ್ಲೇ ಅಳವಡಿಸಬೇಕು. ಜೈವಿಕ ತಂತ್ರಜ್ಞಾನದ ಆವಿಷ್ಕಾರಗಳನ್ನು ತರಬೇಕಾದರೆ ಉಪಯುಕ್ತವಾದ ನೀತಿ, ನಿಯಮವನ್ನು ಕಾರ್ಯಗತ ಮಾಡಬೇಕು. ಈ ವಿಷಯದಲ್ಲಿ ಭಾರತ ಯಾವುದೇ ರೀತಿಯ ಹೆಜ್ಜೆಗಳನ್ನೂ ಇಟ್ಟಿಲ್ಲ. ವಿನಾಕಾರಣ ದೇಶದ ರೈತರಿಗೆ ಬಹಳವಾಗಿ ತಂತ್ರಜ್ಞಾನದ ಮೋಸವಾಗಿದೆ.

5. ವೈಜ್ಞಾನಿಕವಾಗಿ ಮಣ್ಣು ಮತ್ತು ನೀರಿನಿಂದ ಮಾಡಬಹುದಾದ ಕೃಷಿಗೆ ಒತ್ತು ನೀಡಿ ಪ್ರೋತ್ಸಾಹಿಸಬೇಕು. ಅದಲ್ಲದೆ ನೀರಿನ ಮೂಲಸಂಪತ್ತು ರಕ್ಷಿಸಲು ನೀತಿ, ನಿಯಮಗಳನ್ನು ಜಾರಿಗೆ ತಂದು, ಅವುಗಳಿಂದ ಮಾಡಬಹುದಾದ ಕೃಷಿಯನ್ನು ಅಳವಡಿಸಿಕೊಳ್ಳಬೇಕು. ಇದುವರೆವಿಗೂ ಮಣ್ಣಿನ ಆಧಾರದ ಕೃಷಿಗೆ ಒತ್ತು ನೀಡಿದ್ದು, ಇನ್ನು ಮೇಲೆ ನೀರಿನ ಆಧಾರದಿಂದ ಬೆಳೆಯುವ ಮೀನು ಮತ್ತು ಬೆಳೆಗಳಿಗೆ ಒತ್ತು ನೀಡಬೇಕು.

6. ರೊಬಾಟ್ಸ್, ಕಂಪ್ಯೂಟರ್ ಸಹಾಯದಿಂದ ಬೆಲೆ ಮತ್ತು ಹೈನುಗಾರಿಕೆಯನ್ನು ಅಭಿವೃದ್ಧಿಪಡಿಸಬೇಕಿದೆ.

7. ಕೃತಕ ಬುದ್ಧಿಮತ್ತೆಯ (ಎಐ) ಸಹಾಯದಿಂದ ಕೃಷಿಯ ಎಲ್ಲಾ ಕ್ಷೇತ್ರಗಳಲ್ಲಿನ ಇಳುವರಿಯನ್ನು ಅಧಿಕಗೊಳಿಸಬೇಕು.

ಆದರೆ ಕಳೆದ ಐದಾರು ವರ್ಷಗಳಿಂದ ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸರ್ಕಾರದಿಂದ ಅಷ್ಟೇನೂ ಪ್ರೋತ್ಸಾಹ ಸಿಗುತ್ತಿಲ್ಲ. ಕೃಷಿ ಕ್ಷೇತ್ರವಂತೂ ಆಧುನಿಕ ವಿಜ್ಞಾನವಿಲ್ಲದೆ ಬಳಲಿ ಹೋಗುತ್ತಿದೆ. ಅದಲ್ಲದೆ, ಈಗಿರುವ ಸರ್ಕಾರ ದೇಶದಲ್ಲಿ ಸಾವಯವ ಕೃಷಿಗೆ ಅಧಿಕವಾಗಿ ಪ್ರೋತ್ಸಾಹ ನೀಡುತ್ತಿದೆ. ದೇಶದ ಕೃಷಿ ವಿಜ್ಞಾನಿಗಳ ಸಂಘವಾದ ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್‌ ಸಾವಯವ ಕೃಷಿಯ ಬಗ್ಗೆ ಸ್ಪಷ್ಟ ವರದಿ ಮುಖೇನ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ದೇಶವನ್ನು ಸಂಪೂರ್ಣವಾಗಿ ಸಾವಯವ ಕೃಷಿಗೆ ಒಡ್ಡಿದರೆ, ಕೃಷಿ ಇಳುವರಿ ಕಡಿಮೆಯಾಗಿ, ಆಹಾರ ಧಾನ್ಯಗಳ ಬೆಲೆ ಅಧಿಕವಾಗಿ ಬಡಜನರ ಜೀವನ ಮತ್ತಷ್ಟು ಬಿಗಡಾಯಿಸಿ ಹಸಿವಿನಿಂದ ಸಾವುಗಳು ಹೆಚ್ಚುತ್ತವೆ ಎಂದು ಹೇಳಿದೆ. ಸಾವಯವ ಕೃಷಿಯಿಂದ ಪಕ್ಕದ ಶ್ರೀಲಂಕಾದಲ್ಲಿ ಬಂದೊದಗಿರುವ ಸ್ಥಿತಿ ಭಾರತಕ್ಕೂ ಬಂದೊದಗುವ ಸಂಭವ ಹೆಚ್ಚಾಗಲಿದೆ.

ದೇಶದಲ್ಲಿನ ದೊಡ್ಡ ಸಮಸ್ಯೆಯೆಂದರೆ, ಆಧುನಿಕ ವೈಜ್ಞಾನಿಕ ಮತ್ತು ತಂತ್ರಜ್ಞಾನಕ್ಕೆ ಒಡ್ಡುವ ಪ್ರತಿರೋಧಗಳು. ಆಧುನಿಕ ವಿಜ್ಞಾನದ ಯಾವುದೇ ಆವಿಷ್ಕಾರವಾಗಲಿ, ಅದರ ಬಗ್ಗೆ ಸರಿಯಾದ ತಿಳಿವಳಿಕೆ ಅಥವಾ ಜ್ಞಾನ ಇರಲಿ, ಇಲ್ಲದೆ ಹೋಗಲಿ, ಕೆಲ ಗುಂಪುಗಳುತಕ್ಷಣ ಪ್ರತಿರೋಧವೆತ್ತಿ ಗಲಭೆ ಮಾಡಿ ಅದನ್ನು ತಡೆದುಬಿಡುತ್ತವೆ. ಆಹಾರ ಮತ್ತು ಕೃಷಿ ಕ್ಷೇತ್ರದಲ್ಲಿ ಇರುವಷ್ಟು ಪ್ರತಿರೋಧ ಬೇರೆ ಯಾವ ಕ್ಷೇತ್ರದಲ್ಲೂ ಇರಲು ಸಾಧ್ಯವಿಲ್ಲವೇನೊ? ಪ್ರಾಯಶಃ ಪರಿಸರ ಸಂರಕ್ಷಣೆಯ ವಿಚಾರ ದಲ್ಲಿ ಇನ್ನೂ ಅಧಿಕ ಪ್ರತಿರೋಧ ವ್ಯಕ್ತವಾಗುತ್ತದೇನೊ?

ಇದರಿಂದಾಗಿ, ಕೃಷಿ ಕ್ಷೇತ್ರದಲ್ಲಿ 2012ರಲ್ಲಿ ಜೈವಿಕ ವಿಜ್ಞಾನದ ತಳಿಗಳ ಮೇಲೆ ತಂದ ನಿರ್ಬಂಧ ಇನ್ನೂ ತೆರವಾಗಿಲ್ಲ. ಅಷ್ಟರೊಳಗೆ, ಮತ್ತೊಂದು ನವೀನವಾದ ಜೈವಿಕ ತಂತ್ರಜ್ಞಾನದ ಉಗಮವಾಗಿದೆ. ಅದೇ genome editing ಎಂಬ ಆವಿಷ್ಕಾರವು ಜಗತ್ತಿನಾದ್ಯಂತ ಮೊಳಗಿ ಕೃಷಿ ಕ್ಷೇತ್ರವನ್ನು ಮತ್ತೆಲ್ಲೋ ಕೊಂಡೊಯ್ದಿದೆ. ಅದಕ್ಕೆ ಬೇಕಾದ ನೀತಿ ಮತ್ತು ನಿಯಂತ್ರಣ ಕಾಯ್ದೆಯನ್ನು ಭಾರತ ಇನ್ನೂ ರೂಪಿಸಿಯೇ ಇಲ್ಲ.

ಭಾರತದ ಬಡ ರೈತ ಅತ್ಯಂತ ಉಪಯುಕ್ತವಾದ ತಂತ್ರಜ್ಞಾನದಿಂದ ಮತ್ತೊಮ್ಮೆ ವಂಚಿತನಾಗುತ್ತಿದ್ದಾನೆ. ಅಲ್ಲದೆ ಕೃಷಿಯಲ್ಲಿ ಹಿಂದುಳಿದ ರಾಷ್ಟ್ರವಾಗಿ ಭಾರತ ಉಳಿದುಬಿಡುತ್ತದೆ. ಪರಿಸರ ಸಂರಕ್ಷಣೆ ಎಲ್ಲರ ಹೊಣೆ. ಅದಕ್ಕಾಗಿಯೇ ನಿಯಂತ್ರಣಾ ಕಾಯ್ದೆಗಳು ಅನಿವಾರ್ಯ. ಆದರೆ ಅದೇ ಕಾಯ್ದೆಗಳು ಅಭಿವೃದ್ಧಿಗೆ ಮಾರಕವಾಗದಂತೆ ನೋಡಿಕೊಳ್ಳುವುದೂ ನಮ್ಮೆಲರ ಹೊಣೆಯಾಗಿರಬೇಕು. ದೇಶದ ಕೃಷಿ ಅಭಿವೃದ್ಧಿಗೆ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವಿಲ್ಲದೆ ಅನ್ಯ ಮಾರ್ಗವೇ ಇಲ್ಲ.

ಲೇಖಕ: ಕೃಷಿ ತಜ್ಞ, ಪ್ರಾಧ್ಯಾಪಕ, ಪೂರ್ವ ಮೇರಿಲ್ಯಾಂಡ್ ವಿಶ್ವವಿದ್ಯಾಲಯ, ಅಮೆರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT