ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಏರ್ ಇಂಡಿಯಾ: ಎಚ್ಚರಿಕೆಯ ಕರೆಗಂಟೆ

ಸಮಸ್ಯೆಗಳನ್ನು ಸರಿಪಡಿಸಲು ಟಾಟಾ ಸಮೂಹವು ಬೇರೆಡೆ ನೋಡಬೇಕಾದ ಅಗತ್ಯವಿಲ್ಲ
Last Updated 8 ಜನವರಿ 2023, 19:31 IST
ಅಕ್ಷರ ಗಾತ್ರ

ಏರ್ ಇಂಡಿಯಾ ಕಂಪನಿಯು ಸರಿಸುಮಾರು ಏಳು ದಶಕಗಳ ನಂತರ ಕಳೆದ ವರ್ಷ ಟಾಟಾ ಸಮೂಹಕ್ಕೆ ಮರಳಿತು. ಏರ್‌ ಇಂಡಿಯಾ ಕಂಪನಿಯು ರಾಜಕುಮಾರಿ ಇದ್ದಂತಿತ್ತು. ಆಕೆಯನ್ನು ಕೇಂದ್ರ ಸರ್ಕಾರವು 1953ರಲ್ಲಿ ರಾಷ್ಟ್ರೀಕರಣದ ಮೂಲಕ ಕಿತ್ತುಕೊಂಡಿತ್ತು. ಏರ್ ಇಂಡಿಯಾ ಎಂಬ ಹೆಸರು ವಿದೇಶಿ ನೆಲ, ದೂರದ ರಂಗುರಂಗಿನ ನಗರಗಳ ಚಿತ್ರಣವನ್ನು ಕಣ್ಣ ಮುಂದೆ ತರುತ್ತಿತ್ತು. ಏರ್‌ ಇಂಡಿಯಾದಲ್ಲಿ ಗಗನಸಖಿಯಾಗಿ ಕೆಲಸ ಮಾಡುವವಳು ದೇವಲೋಕದ ಊರ್ವಶಿಯಂತೆ ಕಾಣುತ್ತಿದ್ದಳು! ಏರ್‌ ಇಂಡಿಯಾ ಪೈಲಟ್‌ಗಳಿಗೆ ಹೆಣ್ಣು ಕೊಡಲು ಯಾರೂ ಇಲ್ಲವೆನ್ನುತ್ತಿರಲಿಲ್ಲ!

ಪರಿಸ್ಥಿತಿ ಹೀಗಿದ್ದಿದ್ದು ಜೆಆರ್‌ಡಿ ಟಾಟಾ ಅವರು ಅದರ ಮಾಲೀಕತ್ವ ಹೊಂದಿದ್ದಾಗ. ಗ್ರಾಹಕ ಸೇವೆಯ ವಿಚಾರದಲ್ಲಿ ಕೆಟ್ಟ ಹೆಸರು ಸಂಪಾದಿಸಿಕೊಂಡು, ವಿಮಾನಗಳು ಕೊಳಕಾಗಿ, ವಿಮಾನ ವಿಳಂಬವಾಗುವುದು ಹಾಗೂ ರದ್ದಾಗುವುದು ಮತ್ತೆ ಮತ್ತೆ ವರದಿಯಾಗಿ, ನಿಲ್ದಾಣದಲ್ಲೇ ಉಳಿದ ಪ್ರಯಾಣಿಕರಿಗೆ ದುಃಸ್ವ‍ಪ್ನದಂತಹ ಅನುಭವ ಆದ ನಂತರದಲ್ಲಿ ಏರ್ ಇಂಡಿಯಾ ಮತ್ತೆ ಟಾಟಾ ಸಮೂಹಕ್ಕೆ ಮರಳಿತು. ಟಾಟಾ ಸಮೂಹವು ಏರ್ ಇಂಡಿಯಾ ಸ್ವಾಧೀನಪಡಿಸಿಕೊಂಡಾಗ ದೇಶದಲ್ಲಿ ಬಹಳ ಸಂಭ್ರಮ ವ್ಯಕ್ತವಾಗಿತ್ತು. ‘ರಾಷ್ಟ್ರೀಯ ವಿಮಾನಯಾನ ಕಂಪನಿ’ ಮತ್ತೆ ಆಗಸವನ್ನು ಆಳಲಿದೆ, ಎಲ್ಲದರಲ್ಲಿಯೂ ಮುಂಚೂಣಿಯಲ್ಲಿ ನಿಲ್ಲಲಿದೆ ಎಂಬ ನಿರೀಕ್ಷೆ ಇತ್ತು.

ಆದರೆ, ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕನೊಬ್ಬ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ ಈಚಿನ ಪ್ರಸಂಗವು ಜಾಗತಿಕ ಮಟ್ಟದಲ್ಲಿ ಆಘಾತ ಮೂಡಿಸಿದೆ. ಏರ್‌ ಇಂಡಿಯಾದ ಪ್ರತಿಷ್ಠೆಯನ್ನು ಮತ್ತೆ ಹಿಡಿದೆತ್ತಲು ಟಾಟಾ ಯತ್ನಿಸುತ್ತಿತ್ತು. ಆದರೆ ಈ ಪ್ರಸಂಗವು ಪ್ರತಿಷ್ಠೆಗೆ ದೊಡ್ಡ ಪೆಟ್ಟುಕೊಟ್ಟಿದೆ. ಈ ಘಟನೆ ನಡೆದ ಕೆಲವೇ ಸಮಯದ ನಂತರದಲ್ಲಿ, ಪ್ಯಾರಿಸ್–ಮುಂಬೈ ವಿಮಾನದಲ್ಲಿ ಪುರುಷನೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ಮಾಡಿದ ಮತ್ತೊಂದು ಪ್ರಸಂಗ ವರದಿಯಾಗಿದೆ.

ಭೂಮಿಯ ಮೇಲ್ಮೈನಿಂದ 40 ಸಾವಿರ ಅಡಿ ಎತ್ತರದಲ್ಲಿ ಪ್ರಯಾಣಿಕರು ಸಹಪ್ರಯಾಣಿಕರ ಜೊತೆ ಹಾಗೂ ವಿಮಾನ ಸಿಬ್ಬಂದಿಯ ಜೊತೆ ಅನುಚಿತವಾಗಿ ವರ್ತಿಸುವುದು ಇದ್ದೇ ಇದೆ. ಒಂದು ಕಡೆ ದೀರ್ಘ ಅವಧಿಗೆ ಕೂಡಿಹಾಕಿದಂತಹ ಅನುಭವ, ಮದ್ಯವನ್ನು ಅತಿಯಾಗಿ ಕುಡಿಯುವುದು ಹಿಂಸಾತ್ಮಕ ವರ್ತನೆಗಳಿಗೆ ಕಾರಣವಾಗುತ್ತವೆ. ಮಹಿಳಾ ಪ್ರಯಾಣಿಕರಿಗೆ ಲೈಂಗಿಕವಾಗಿ ಕಿರುಕುಳ ಕೊಡುವುದು, ಗಗನಸಖಿಯರ ಜೊತೆ ಅನುಚಿತವಾಗಿ ವರ್ತಿಸುವುದು ವಿಮಾನದಲ್ಲಿ ಆಗಾಗ ನಡೆಯುವುದಿದೆ. ಇಂತಹ ಘಟನೆಗಳಿಗೆ ಸಂಬಂಧಿಸಿದ ವರದಿಗಳನ್ನು ನಾವು ಮಾಧ್ಯಮಗಳಲ್ಲಿ
ಆಗಾಗ ಓದುತ್ತೇವೆ. ‘... ನಂತರ ಪ್ರಯಾಣಿಕನನ್ನು ಸಮಾಧಾನಪಡಿಸಲಾಯಿತು, ಆತನನ್ನು ವಿಮಾನ ನಿಲ್ದಾಣ ಪೊಲೀಸರಿಗೆ ಒಪ್ಪಿಸಲಾಯಿತು’ ಎಂಬ ಅಂಶ ವರದಿಗಳಲ್ಲಿ ಇರುತ್ತದೆ.

ಆದರೆ, ಇಲ್ಲಿ ಪ್ರಯಾಣಿಕನೊಬ್ಬ ಮಹಿಳೆಯ ಮೇಲೆ ಮೂತ್ರ ಮಾಡಿದ್ದು ಎಷ್ಟು ವಿಕೃತವೋ, ಅಷ್ಟೇ ಕಳವಳ ಕಾರಿಯಾಗಿದ್ದು ಟಾಟಾ ಆಡಳಿತ ಮಂಡಳಿಯು ಪ್ರಕರಣವನ್ನು ನಿಭಾಯಿಸಿದ ಹಾಗೂ ನಿಭಾಯಿಸುತ್ತಿರುವ ರೀತಿ. ಜನ ಹೇಗೆ ವರ್ತಿಸುತ್ತಾರೆ ಅಥವಾ ದುರ್ವರ್ತನೆ ತೋರುತ್ತಾರೆ, ಅದರಲ್ಲೂ ಮತ್ತು ಬರಿಸುವ ಪದಾರ್ಥ ಸೇವಿಸಿದ ನಂತರ ಅವರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಸ್ವೀಕಾರಾರ್ಹವಲ್ಲದ, ಅಸಭ್ಯ ನಡವಳಿಕೆ ಗಮನಕ್ಕೆ ಬಂದಾಗ ಅದಕ್ಕೆ ತಕ್ಷಣದಲ್ಲಿ ಹಾಗೂ ವಿವೇಕದಿಂದ ಪ್ರತಿಕ್ರಿಯಿಸುವುದು ಬಹಳ ಮುಖ್ಯ.

ದುರ್ವರ್ತನೆ ತೋರುವ ಪ್ರಯಾಣಿಕರನ್ನು ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಶಿಷ್ಟ ಪ್ರಕ್ರಿಯೆಗಳನ್ನು (ಎಸ್‌ಒಪಿ) ರೂಪಿಸಲಾಗಿದೆ. ಮೂತ್ರ ಮಾಡಿದ ಪ್ರಕರಣದಲ್ಲಿ ವಿಮಾನದ ಸಿಬ್ಬಂದಿ ಮತ್ತು ಕ್ಯಾಪ್ಟನ್‌, ಆ ಪುರುಷನನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ.

ಇಂತಹ ಸಂದರ್ಭಗಳಲ್ಲಿ ಕ್ಯಾಪ್ಟನ್‌ಗೆ ಅಗತ್ಯ ಕಾನೂನು ಅಧಿಕಾರವೂ ಇದೆ. ಆದರೆ ಈ ಪ್ರಕರಣದಲ್ಲಿ, ಸಿಬ್ಬಂದಿಯು ಪ್ರಕರಣದ ಮೇಲೆ ತಿಪ್ಪೆ ಸಾರಿಸುವ ಕೆಲಸ ಮಾಡಿದರು, ಇಡೀ ಪ್ರಕರಣವನ್ನು ಅವರು ಲಘುವಾಗಿ ತೆಗೆದುಕೊಂಡರು ಎಂದು ವರದಿಗಳನ್ನು ಗಮನಿಸಿದಾಗ ಅನಿಸುತ್ತದೆ. ಇಲ್ಲಿ ಸಿಬ್ಬಂದಿಯು ಕಿರುಕುಳಕ್ಕೆ ಒಳಗಾದವ ರನ್ನೇ ಶಿಕ್ಷಿಸಿದರು, ಆಕೆಯನ್ನು ಬೇರೆ ಆಸನಗಳಿಗೆ ಸ್ಥಳಾಂತರಿಸಿದರು, ಆಕೆಗೆ ಹೊಸ ಬಟ್ಟೆ ಕೊಟ್ಟು ಆಕೆಯನ್ನು ಸಮಾಧಾನಪಡಿಸಲು ಯತ್ನಿಸಿದರು. ಆಕೆಗೆ ಪ್ರಥಮ ದರ್ಜೆಯ ಬೇರೊಂದು ಆಸನವನ್ನು ಕ್ಯಾಪ್ಟನ್ ನೀಡಲಿಲ್ಲ ಅನಿಸುತ್ತದೆ. ತಪ್ಪು ಮಾಡಿದವ ಕ್ಷಮೆ ಯಾಚಿಸಿದ ಹಾಗೂ ಮಹಿಳೆಯು ಆತನ ವಿರುದ್ಧ ದೂರು ನೀಡಲಿಲ್ಲ ಎಂಬ ಕಾರಣಕ್ಕೆ, ಸಿಬ್ಬಂದಿಯು ವಿಮಾನವು ನಿಲ್ದಾಣ ತಲುಪಿದ ನಂತರದಲ್ಲಿ ಆತನನ್ನು ಪೊಲೀಸರಿಗೆ ಒಪ್ಪಿಸುವ ಕೆಲಸ ಮಾಡಲಿಲ್ಲ, ಘಟನೆಯ ಬಗ್ಗೆ ದೂರು ನೀಡಬೇಕು ಎಂದೂ ಅವರಿಗೆ ಅನಿಸಲಿಲ್ಲ. ಈ ಪ್ರಕರಣದಲ್ಲಿ ಆ ಪುರುಷನು ಸಭ್ಯತೆಯ ಗಡಿಗಳನ್ನೆಲ್ಲ ಮೀರಿದ್ದ. ಆದರೂ, ಕ್ಯಾಪ್ಟನ್ ಮತ್ತು ವಿಮಾನದ ಮಹಿಳಾ ಸಿಬ್ಬಂದಿ ತಮ್ಮ ವಿವೇಚನೆ ಬಳಸಬೇಕಿತ್ತು, ಈ ಸಂಜ್ಞೇಯ ಅಪರಾಧವು ಕ್ಷಮೆಗೆ ಅರ್ಹವಾದುದಲ್ಲ ಎಂಬುದನ್ನು ಅರಿಯಬೇಕಿತ್ತು. ಟಾಟಾ ಸಮೂಹದ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರಿಗೆ ಮಹಿಳೆ ಬರೆದ ಪತ್ರವನ್ನು ಗಮನಿಸಿದರೆ, ಏರ್ ಇಂಡಿಯಾ ಸಿಬ್ಬಂದಿಯು ಆ ಪುರುಷನನ್ನು ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಆಕೆಯ ಎದುರು ತಂದು ನಿಲ್ಲಿಸಿದರು, ಆತನನ್ನು ಕ್ಷಮಿಸುವಂತೆ ಆಕೆಯ ಮೇಲೆ ಭಾವನಾತ್ಮಕವಾಗಿ ಒತ್ತಾಯ ಹೇರಿದರು ಎಂಬುದು ಗೊತ್ತಾಗುತ್ತದೆ.

ಏರ್‌ ಇಂಡಿಯಾದಲ್ಲಿ ಹೊಸತನ ತರುವುದು ಭಗೀರಥ ಕೆಲಸವೇ ಹೌದು. ಏರ್‌ ಇಂಡಿಯಾದಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಾಗಿದೆ, ಕೆಲಸ ಮಾಡದವರು ಅಲ್ಲಿ ಹಲವರಿದ್ದಾರೆ. ಕಂಪನಿಯಲ್ಲಿ ಹೊಸ ರಕ್ತ ಹರಿಯುವಂತೆ ಮಾಡಬೇಕಿದೆ. ವಿಮಾನಗಳನ್ನು ಸರಿಪಡಿಸುವ ಕೆಲಸಗಳನ್ನು ಮಾಡಬಹುದು. ಅದಕ್ಕೆ ಬೇಕಿರುವ ಆಡಳಿತ ನಿರ್ವಹಣಾ ಅನುಭವ ಟಾಟಾ ಸಮೂಹಕ್ಕಿದೆ. ಆದರೆ ಪ್ರಯಾಣಿಕರ ಬಗ್ಗೆ ಕಾಳಜಿ ತೋರುವುದು ಹಾಗೂ ಸೇವೆಯಲ್ಲಿ ಅತ್ಯುತ್ತಮ ಮಟ್ಟ ತಲುಪುವುದು ಹೆಚ್ಚು ಕಷ್ಟದ ಕೆಲಸ. ಸರ್ಕಾರದ ಸ್ವಾಮ್ಯದಲ್ಲಿದ್ದಾಗ ಏರ್‌ ಇಂಡಿಯಾ ತನ್ನ ಗ್ರಾಹಕರ ವಿಚಾರದಲ್ಲಿ ಸಂವೇದನೆಯನ್ನೇ ಕಳೆದುಕೊಂಡಿತ್ತು.

ಏರ್ ಇಂಡಿಯಾ ತನ್ನ ಪ್ರತಿಷ್ಠೆಗೆ ಆಗಿರುವ ಧಕ್ಕೆಯನ್ನು ಸರಿಪಡಿಸಿಕೊಳ್ಳಬಲ್ಲದೇ? ವಿಳಂಬ ಮಾಡದೆ, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ತಮ್ಮನ್ನು ಸಮರ್ಪಿಸಿಕೊಂಡರೆ ಆ ಕೆಲಸ ಆಗಬಹುದು. ಏರ್‌ ಇಂಡಿಯಾ ಅಧ್ಯಕ್ಷ ಹಾಗೂ ಸಿಇಒ ತಕ್ಷಣವೇ ಒಂದು ಪತ್ರಿಕಾಗೋಷ್ಠಿ ಕರೆದು, ಆ ಮಹಿಳೆಯ ಹಾಗೂ ಸಾರ್ವಜನಿಕರ ಕ್ಷಮೆ ಯಾಚಿಸಬೇಕು. ಏರ್ ಇಂಡಿಯಾದ ವೈಭವವನ್ನು ಮರುಸ್ಥಾಪಿಸುವ ಪಣ ತೊಡಬೇಕು. ಸಮಸ್ಯೆಗಳನ್ನು ಸರಿಪಡಿಸಲು ಟಾಟಾ ಸಮೂಹ ಬೇರೆಡೆ ನೋಡಬೇಕಿಲ್ಲ. ಜೆಆರ್‌ಡಿ ಟಾಟಾ ಅವರು ಏರ್‌ ಇಂಡಿಯಾವನ್ನು ಹೇಗೆ ಮುನ್ನಡೆಸುತ್ತಿದ್ದರು ಎಂಬುದನ್ನು ಪರಿಶೀಲಿಸಬೇಕು. ಸಿಂಗಪುರ ಏರ್‌ಲೈನ್ಸ್‌ ಕಂಪನಿಯು ತಮ್ಮ ಗಗನಸಖಿಯರನ್ನು ‘ಐಕಾನ್‌’ಗಳಂತೆ ಪ್ರಸಿದ್ಧಿಗೆ ತರುವ ಮೊದಲೇ, ಏರ್‌ ಇಂಡಿಯಾ ಕಂಪನಿಯ ಗಗನಸಖಿಯರು ರೇಷ್ಮೆ ಸೀರೆ ಉಟ್ಟುಕೊಂಡು ದೇಶದ ಬಹುಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದರು.

ಜೆಆರ್‌ಡಿ ಅವರು ಸಣ್ಣ ವಿಚಾರಗಳನ್ನು ಅಲಕ್ಷಿಸು ತ್ತಿರಲಿಲ್ಲ. ಅವರು ವಿಮಾನದಲ್ಲಿ ಪ್ರಯಾಣಿಕರ ಜೊತೆ ಮಾತನಾಡುತ್ತಿದ್ದರು, ಅದಕ್ಕೆ ಸಂಬಂಧಿಸಿದಂತೆ ವಿಭಾಗಗಳ ಮುಖ್ಯಸ್ಥರಿಗೆ ಪತ್ರ ಬರೆಯುತ್ತಿದ್ದರು. ವಿಮಾನದಲ್ಲಿನ ಕಾಫಿ ಕಪ್‌, ಮಗ್‌ಗಳ ಮೇಲಿನ ಚಿಕ್ಕ ಕಲೆಯನ್ನೂ ಒರೆಸುತ್ತಿದ್ದರು. ಅಡುಗೆಯ ಬಗ್ಗೆ, ವಿಮಾನ ಪ್ರವೇಶಿಸಿದ ತಕ್ಷಣ ಕಿವಿಗೆ ಬಿಳುವ ಸಂಗೀತದ ಬಗ್ಗೆ, ಗಗನಸಖಿಯರ ಉಡುಗೆ–ತೊಡುಗೆ ಹಾಗೂ ಅವರ ಕೇಶವಿನ್ಯಾಸದ ಬಗ್ಗೆ ಅವರು ಗಮನ ನೀಡುತ್ತಿದ್ದರು. ವಿಮಾನಗಳು ಸಮಯಕ್ಕೆ ಸರಿಯಾಗಿ ಪ್ರಯಾಣ ಆರಂಭಿ ಸುತ್ತಿದ್ದವು. ಕಾರ್ಯಾಚರಣೆಯಲ್ಲಿ ಲೋಪ ಇರುತ್ತಿರಲಿಲ್ಲ.
ಏರ್‌ ಇಂಡಿಯಾ ಕಂಪನಿಯು ಆಗತಾನೇ ಸ್ವಾತಂತ್ರ್ಯ ಪಡೆದು, ಕರಾಳ ಇತಿಹಾಸದಿಂದ ಬಿಡುಗಡೆ ಹೊಂದಿದ್ದ ದೇಶದ ನಿಜವಾದ ಹೆಮ್ಮೆ, ನಿಜವಾದ ರಾಯಭಾರಿ ಆಗಿ ಬೆಳೆದಿತ್ತು.

ಈಗ ನಡೆದಿರುವ ಕೊಳಕು ಪ್ರಸಂಗವು ಟಾಟಾ ಸಮೂಹಕ್ಕೆ ಒಂದು ಎಚ್ಚರಿಕೆಯ ಕರೆಗಂಟೆ. ಏರ್ ಇಂಡಿಯಾ ಕಂಪನಿಯು ಸುಧಾರಣೆ ಕಾಣದೆ ಮತ್ತೆ ಮೊದಲಿನಂತಾಗಿಬಿಟ್ಟರೆ ಪ್ರಯಾಣಿಕರ ಪಾಲಿಗೆ ಒಂದು ದುರಂತ ಸಂಭವಿಸಿದಂತೆಯೇ ಸರಿ.

-ಲೇಖಕ: ಏರ್‌ ಡೆಕ್ಕನ್ ಕಂಪನಿಯ ಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT