ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಶೈಕ್ಷಣಿಕ ಬದುಕು ಮರುಕಟ್ಟೋಣ

ಶೈಕ್ಷಣಿಕ ಪುನಶ್ಚೇತನಕ್ಕಾಗಿ ದೊಡ್ಡ ಮಟ್ಟದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಅಗತ್ಯವಿದೆ
Last Updated 5 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಕೊರೊನಾ ಸಾಂಕ್ರಾಮಿಕದ ಕಾರಣದಿಂದಾಗಿ ನಮ್ಮ ಬಹುಪಾಲು ಮಕ್ಕಳು ಎರಡು ವರ್ಷಗಳ ಕಾಲ ಶಿಕ್ಷಣದಿಂದ ವಂಚಿತರಾದರು. ನಿಜ, ಶಿಕ್ಷಣ ಇಲಾಖೆಯು ಸಾಂಕ್ರಾಮಿಕದ ಕಾರಣದಿಂದ ವ್ಯತ್ಯಯವಾದ ಪಠ್ಯ ಬೋಧನೆಯನ್ನು ಸರಿದೂಗಿಸಲು ಆನ್‌ಲೈನ್ ತರಗತಿಗಳನ್ನು ಶ್ರಮವಹಿಸಿ ನಡೆಸಿತು. ಶಿಕ್ಷಕರು ಸಹ ಸೋಂಕಿಗೆ ಹೆದರದೆ ಮಕ್ಕಳಿಗೆ ಪಾಠ ಮಾಡಲು ಅನೇಕ ರೀತಿಯಲ್ಲಿ ಪ್ರಯತ್ನ ನಡೆಸಿದರು. ಆದರೆ ಸಾಂಕ್ರಾಮಿಕದ ತೀವ್ರತೆ ಎಷ್ಟಿತ್ತೆಂದರೆ, ಈ ಯಾವ ಪ್ರಯತ್ನಗಳಿಗೂ ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಡೆಯಲಾಗಲಿಲ್ಲ. ಏಕೆಂದರೆ ಆ ಮಕ್ಕಳ ಕುಟುಂಬಗಳ ಬದುಕೇ ಮೂರಾಬಟ್ಟೆಯಾಯಿತು. ಪಾಲಕರು ಉದ್ಯೋಗ ಕಳೆದುಕೊಂಡರು. ಕೂಡಿಟ್ಟಿದ್ದ ಹಣವೆಲ್ಲ ಖಾಲಿಯಾಯಿತು. ಬಡಕುಟುಂಬಗಳಲ್ಲಿ ಮಕ್ಕಳು ಕೂಲಿಗೆ ಹೋಗಬೇಕಾಯಿತು.

ರಾಜ್ಯದ ಗ್ರಾಮೀಣ ಪ್ರದೇಶದಲ್ಲಿನ, ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಮೇಲೆ ಇದು ಬೀರಿದ ಪರಿಣಾಮ ಅಪಾರ. ರಾಜ್ಯದಲ್ಲಿ 1 ಕೋಟಿಗೂ ಹೆಚ್ಚಿರುವ ಒಟ್ಟು ಶಾಲಾ ಮಕ್ಕಳಲ್ಲಿ ಶೇ 61.59ರಷ್ಟು ಹಿಂದುಳಿದ ವರ್ಗದ ಮಕ್ಕಳಿದ್ದರೆ, ಶೇ 19.03ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ 7.61ರಷ್ಟು ಪರಿಶಿಷ್ಟ ಪಂಗಡದ ಮಕ್ಕಳಿದ್ದಾರೆ. ಈ ಗುಂಪಿನ ಮಕ್ಕಳಲ್ಲಿ ಶೇ 41.5ರಷ್ಟು ಒಬಿಸಿ, 52.25ರಷ್ಟು ಪರಿಶಿಷ್ಟ ಜಾತಿ ಮತ್ತು ಶೇ 61.91ರಷ್ಟು ಪರಿಶಿಷ್ಟ ಪಂಗಡದ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ನಗರ ಪ್ರದೇಶದ ಸ್ಥಿತಿವಂತ ಕುಟುಂಬದವರ ಮಕ್ಕಳು ಎಲ್ಲ ಅಡೆತಡೆಗಳನ್ನೂ ನೀಗಿಕೊಂಡು ಶಿಕ್ಷಣವನ್ನು ಮುಂದುವರಿಸಿದರು. ಉಳಿದ ಮಕ್ಕಳಿಗೆ ಇಂಟರ್‌ನೆಟ್ ಸಂಪರ್ಕ ಸಾಧ್ಯವಾಗದೆ, ವಿದ್ಯುತ್ ಕೊರತೆಯಿಂದಾಗಿ ಮತ್ತು ದುಡಿಮೆಯ ಒತ್ತಡದಿಂದಾಗಿ ಡಿಜಿಟಲ್ ಮೂಲಕ ಸುಗಮ ಕಲಿಕೆ ಸಾಧ್ಯವಾಗಿಲ್ಲ.

ಈ ಸಮಸ್ಯೆಯನ್ನು ಒಕ್ಕೂಟ ಸರ್ಕಾರವು 2022-23ನೇ ಸಾಲಿನ ಬಜೆಟ್‌ ಭಾಷಣದಲ್ಲಿ ಹೀಗೆ ಗುರುತಿಸಿದೆ: ‘ಸಾಂಕ್ರಾಮಿಕದಿಂದ ಶಾಲೆಗಳು ಮುಚ್ಚಿಹೋದ ಕಾರಣ, ನಮ್ಮ ಮಕ್ಕಳು, ವಿಶೇಷವಾಗಿ ಗ್ರಾಮೀಣ ಪ್ರದೇಶದ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ದುರ್ಬಲ ವರ್ಗದ ಮಕ್ಕಳು ಎರಡು ವರ್ಷಗಳ ಶಾಲಾ ಶಿಕ್ಷಣವನ್ನು ಕಳೆದುಕೊಂಡಿದ್ದಾರೆ. ಇವರಲ್ಲಿ ಅತಿ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಲಿಯುವವರಾಗಿದ್ದಾರೆ. ಈ ಸಮಸ್ಯೆಯನ್ನು ಎದುರಿಸುವ ಸಲುವಾಗಿ ಪರಿಹಾರಾತ್ಮಕ ಕಲಿಕೆಯ ಅಗತ್ಯವನ್ನು ನಾವು ಮನಗಂಡಿದ್ದೇವೆ. ಈ ಸಮಸ್ಯೆಯ ಹಿನ್ನೆಲೆಯಲ್ಲಿ ಪರಿಹಾರಾತ್ಮಕ ಶಿಕ್ಷಣವನ್ನು ಹೇಗೆ ಕಟ್ಟಬೇಕು ಎಂಬುದನ್ನು ಗುರುತಿಸಲಾಗಿದೆ. ಈ ಉದ್ದೇಶಕ್ಕಾಗಿ ‘ಒಂದು ತರಗತಿ- ಒಂದು ಟಿ.ವಿ. ವಾಹಿನಿ’ ಎಂಬ ‘ಪಿಎಮ್-ವಿದ್ಯಾ’ ಕಾರ್ಯಕ್ರಮದಲ್ಲಿನ 12 ವಾಹಿನಿಗಳ ಸಂಖ್ಯೆಯನ್ನು 200ಕ್ಕೆ ಏರಿಸಲಾಗುವುದು. ಈ ಕಾರ್ಯಕ್ರಮದಿಂದ ರಾಜ್ಯ ಸರ್ಕಾರಗಳು 1ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ಪರಿಹಾರಾತ್ಮಕ ಶಿಕ್ಷಣ ಕೊಡುವುದು ಸಾಧ್ಯವಾಗುತ್ತದೆ’.

ಒಕ್ಕೂಟ ಸರ್ಕಾರವು ಸಮಸ್ಯೆಯನ್ನೇನೋ ಗುರುತಿಸಿದೆ. ಆದರೆ ಅದು ರೂಪಿಸುತ್ತಿರುವ ಡಿಜಿಟಲ್ ಪರಿಹಾರದಿಂದ ಸಮಸ್ಯೆಯ ನಿವಾರಣೆ ಸಾಧ್ಯವಿಲ್ಲ. ‘ಒಂದು ದೇಶ- ಒಂದು ತರಗತಿ’ ಎನ್ನುವ ಚೌಕಟ್ಟಿನಲ್ಲಿ ಸರ್ಕಾರವು ಪರಿಹಾರವನ್ನು ಯೋಚಿಸುತ್ತಿದೆ. ಈ ಪರಿಹಾರಾತ್ಮಕ ಪುನಶ್ಚೇತನ ಕಾರ್ಯಕ್ರಮಕ್ಕೆ ಒಕ್ಕೂಟ ಸರ್ಕಾರವು ಅನುದಾನವನ್ನು ನೀಡಿಲ್ಲ. ನಮ್ಮ ಕರ್ನಾಟಕ ಸರ್ಕಾರ ಇಂತಹ ಒಂದು ಬೃಹತ್ ಸಮಸ್ಯೆಯನ್ನು ಗುರುತಿಸಲೂ ಹೋಗಿಲ್ಲ. ಪರಿಹಾರದ ಬಗ್ಗೆ ಯಾವ ಸೂಚನೆಯೂ ರಾಜ್ಯದ 2022-23ನೇ ಸಾಲಿನ ಬಜೆಟ್ಟಿನಲ್ಲಿ ಇಲ್ಲ. ಕರ್ನಾಟಕ ಆರ್ಥಿಕ ಸಮೀಕ್ಷೆ 2021- 22ರಲ್ಲಿಯೂ ಇದರ ವಿಶ್ಲೇಷಣೆಯಿಲ್ಲ. ಬರೀ ಪರೀಕ್ಷೆ, ಪರೀಕ್ಷೆ ಎಂದು ನಮ್ಮ ಶಿಕ್ಷಣ ಸಚಿವರು ಚಡಪಡಿಸಿದರೇ ವಿನಾ ಸಾಂಕ್ರಾಮಿಕದಿಂದ ಜರ್ಜರಿತರಾದ ಗ್ರಾಮೀಣ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿ ಮಕ್ಕಳ ಶೈಕ್ಷಣಿಕ ಬದುಕನ್ನು ಮರುಕಟ್ಟುವ ಬಗ್ಗೆ ಯೋಚಿಸಿದಂತೆ ಕಾಣಲಿಲ್ಲ. ಈ ಮಕ್ಕಳ ಸಂಖ್ಯೆ 90 ಲಕ್ಷ ಮೀರುತ್ತದೆ. ಶೈಕ್ಷಣಿಕ ಪುನಶ್ಚೇತನಕ್ಕಾಗಿ ಕಾರ್ಯಕ್ರಮ ರೂಪಿಸದಿದ್ದರೆ ಅವರ ಭವಿಷ್ಯ ಅಂಧಕಾರಮಯವಾಗುತ್ತದೆ. ಅದರಲ್ಲೂ ಹಿಂದುಳಿದ ಜಿಲ್ಲೆಗಳಲ್ಲಿ ಅನೀಮಿಯ ಎದುರಿಸುತ್ತಿರುವವರು ಮತ್ತು ಬಹುಮುಖಿ ಬಡತನವನ್ನು ಅನುಭವಿಸುತ್ತಿರುವವರ ಹಿನ್ನೆಲೆಯಲ್ಲಿ ಈ ವಿಷಯದ ಬಗ್ಗೆ ಯೋಚಿಸಬೇಕಾಗಿದೆ.

ಈಗಲೂ ಕಾಲ ಮಿಂಚಿಲ್ಲ. ಹಿಜಾಬ್, ಸಮವಸ್ತ್ರ, ಟಿಪ್ಪು ಪಾಠ ಬಿಡಬೇಕೋ- ಭಗವದ್ಗೀತೆ ಪಾಠ ಸೇರಿಸಬೇಕೋ, ಹಲಾಲ್, ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ, ದೇವಸ್ಥಾನಗಳನ್ನು ಸರ್ಕಾರಿ ಹಿಡಿತದಿಂದ ಮುಕ್ತಗೊಳಿಸುವಂತಹ ಭಾವನಾತ್ಮಕ- ವಿಭಜನಾತ್ಮಕ ಸಂಗತಿಗಳತ್ತ ಗಮನ ಕೇಂದ್ರೀಕರಿಸುವುದನ್ನು ಬಿಟ್ಟು,ಸರ್ಕಾರವು ಜನರ ಬದುಕನ್ನು, ಅವರ ಜೀವನೋಪಾಯವನ್ನು ಕಟ್ಟುವುದರ ಬಗ್ಗೆ ಮತ್ತು ಸರಿಸುಮಾರು 90 ಲಕ್ಷ ಮಕ್ಕಳ ಶೈಕ್ಷಣಿಕ ಪುನಶ್ಚೇತನದ ಬಗ್ಗೆ ಗಮನ ನೀಡಬೇಕು.

ಕೊರೊನಾ ಸಾಂಕ್ರಾಮಿಕದ ಸಮಸ್ಯೆಯಿಂದಾಗಿನಮ್ಮ ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳಿಗೆ ಏನೆಲ್ಲ ಸಮಸ್ಯೆಗಳು ಉಂಟಾಗಿವೆ ಎಂಬುದನ್ನು ತಳಸ್ಪರ್ಶಿಯಾಗಿ ಮತ್ತು ಪ್ರಾದೇಶಿಕವಾಗಿ ಮೊದಲು ಗುರುತಿಸಬೇಕಾದ ಅಗತ್ಯವಿದೆ. ಇದಕ್ಕಾಗಿ ತಜ್ಞರ ಸಮಿತಿಯೊಂದನ್ನು ರಚಿಸಬೇಕು. ಎರಡನೆಯದಾಗಿ, ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲೀಕರಣಕ್ಕೆ ಸ್ವಲ್ಪ ಬಿಡುವು ಕೊಟ್ಟು ನೇರ ಪಾಠ ಹೇಳುವ ವಿಧಾನ, ಪರಿಣಾಮಕಾರಿ ಕಲಿಕೆ ಹಾಗೂ ಉಪಯುಕ್ತ ವರ್ಕ್‌ಬುಕ್ಕುಗಳನ್ನು ಸಿದ್ಧಪಡಿಸುವ ಬಗ್ಗೆ ನಾವು ಯೋಚಿಸಬೇಕು. ಬೆಂಗಳೂರೇ ಕರ್ನಾಟಕವಲ್ಲ
ಎಂಬುದನ್ನು ನಾವು ಮೊದಲು ಗಮನಿಸಬೇಕು. ಜಿಲ್ಲಾ ಮಟ್ಟದಲ್ಲಿ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ವಿಶೇಷವಾಗಿ ಪರಿಹಾರಾತ್ಮಕ ಶಿಕ್ಷಣ ನೀಡುವುದಕ್ಕೆ ನಿವೃತ್ತರಾದವರು ಮತ್ತು ಕಾಲೇಜುಗಳಲ್ಲಿ ಕಲಿಯುತ್ತಿರುವ ಆಸಕ್ತ ಯುವಜನರನ್ನು ಒಳಗೊಂಡ ಪಡೆಯೊಂದನ್ನು ರಚಿಸುವ ಅಗತ್ಯವಿದೆ.

ಶಿಕ್ಷಕರ ವರ್ಗಾವಣೆ, ಬಡ್ತಿ, ಎಸ್‍ಡಿಎಂಸಿಯಂತಹ ಸಂಗತಿಗಳನ್ನು ಸದ್ಯಕ್ಕೆ ಪಕ್ಕಕ್ಕಿಟ್ಟು, ಶಿಕ್ಷಣ ವಂಚಿತ ಮಕ್ಕಳ ಶೈಕ್ಷಣಿಕ ಪುನಶ್ಚೇತನದ ಬಗ್ಗೆ ಶಿಕ್ಷಣ ಅಧಿಕಾರಿಗಳು ಗಮನ ನೀಡಬೇಕು. ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಒಕ್ಕೂಟ ಸರ್ಕಾರ ಬಜೆಟ್ಟಿನಲ್ಲಿ ಪ್ರಕಟಿಸಿರುವ ಕಾರ್ಯಯೋಜನೆಗೆ ಅನುದಾನ ನೀಡುವಂತೆ ಒತ್ತಾಯಿಸಬೇಕು. ರಾಜ್ಯದಲ್ಲಿ 2022- 23ನೇ ಸಾಲಿನ ರೂಢಿಗತ ಶೈಕ್ಷಣಿಕ ಕಾರ್ಯಕ್ರಮದ ಜೊತೆಯಲ್ಲಿ ವಿಶೇಷ ಶೈಕ್ಷಣಿಕ ಪುನಶ್ಚೇತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಎರಡೂ ಜೊತೆ ಜೊತೆಯಲ್ಲಿ ನಡೆಯಬೇಕು.

ಈಗಾಗಲೇ ನ್ಯಾಯಾಲಯಗಳ ಕೆಲವು ಆದೇಶಗಳಿಂದಾಗಿ ಮತ್ತು ಸರ್ಕಾರಗಳ ಅಖಂಡ ವಿಧಾನದ ಅಭಿವೃದ್ಧಿ ನೀತಿಗಳಿಂದಾಗಿ ರಾಜ್ಯದ ಹಿಂದುಳಿದ ವರ್ಗ ಹೈರಾಣಾಗಿದೆ. ಇಂದು ಆಳುವ ವರ್ಗವು ಪ್ರತಿಪಾದಿಸುತ್ತಿರುವ ‘ಎಲ್ಲ ಜಾತಿಗಳಲ್ಲಿಯೂ ಬಡವರಿದ್ದಾರೆ’ ಎಂಬ ಪ್ರಣಾಳಿಕೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿಗಳಿಗೆ ನ್ಯಾಯ ದೊರೆಯುವುದಿಲ್ಲ. ಈ ಪ್ರಣಾಳಿಕೆಯ ಹುಸಿತನವನ್ನು ಗಮನಿಸಬೇಕು. ಏಕೆಂದರೆ ಪರಿಶಿಷ್ಟ ಜಾತಿಯ ಅನಕ್ಷರಸ್ಥ ದಿನಗೂಲಿ ಮಹಿಳೆಯರ ಬಡತನ ಮತ್ತು ಪ್ರಭಾವಿ ಜಾತಿಯ ಅಕ್ಷರಸ್ಥ ಮಹಿಳೆಯರ ಬಡತನವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಸರಿಯಲ್ಲ. ಯಾವುದನ್ನು ಜಾನ್ ರಾಲ್ಸ್ ‘ಭಿನ್ನತೆಯ ನಿಯಮ’ ಎನ್ನುತ್ತಾನೋ ಅದನ್ನು ನಾವು ಶ್ರದ್ಧೆಯಿಂದ ಪಾಲಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರವು ಮಕ್ಕಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಒಂದು ಬೃಹತ್ ಶೈಕ್ಷಣಿಕಪುನಶ್ಚೇತನ ಕಾರ್ಯಕ್ರಮವನ್ನು ತುರ್ತಾಗಿ ಹಮ್ಮಿಕೊಳ್ಳಬೇಕು.

ಟಿ.ಆರ್.ಚಂದ್ರಶೇಖರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT