ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಜೀತ: ಆಧುನಿಕ ಕಾಲದಲ್ಲೂ ಸಾಮಾಜಿಕ ಅನಿಷ್ಟ ಜೀವಂತ

ಡಿಸೆಂಬರ್‌ 2: ಅಂತರರಾಷ್ಟ್ರೀಯ ಜೀತಪದ್ಧತಿ ನಿರ್ಮೂಲನಾ ದಿನ
Last Updated 2 ಡಿಸೆಂಬರ್ 2020, 6:34 IST
ಅಕ್ಷರ ಗಾತ್ರ

ಸೆಪ್ಟೆಂಬರ್‌ 27, 2019. ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ಉತ್ತರ ಪ್ರದೇಶದ ಎಂಟು ಮಕ್ಕಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಮುಕ್ತಿ ಎಂಬ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು ರಕ್ಷಿಸಿದ್ದರು. ಇವರೆಲ್ಲರೂ ಉತ್ತರ ಪ್ರದೇಶವರಾಗಿದ್ದರು. ಅದೇ ರಾಜ್ಯದ ಮೂವರು, ಮಕ್ಕಳಿಗೆ ಕೈ ತುಂಬಾ ಕೊಡಿಸುವುದಾಗಿ ಅವರ ಪೋಷಕರಿಗೆ ನಂಬಿಸಿ ಇಲ್ಲಿಗೆ ಕರೆತಂದಿದ್ದರು. ಇಲ್ಲಿ ಮಕ್ಕಳಿಗೆ ಸರಿಯಾದ ಸೌಲಭ್ಯ ಕೊಡದೆ, ಸಂಬಳವನ್ನೂ ನೀಡದೆ ಕ್ರೌರ್ಯ ಮೆರೆದಿದ್ದರು. ಹಣವೂ ಇಲ್ಲದೇ, ಆಹಾರವೂ ಸಿಗದೆ ಮೂರು ಮಕ್ಕಳು ಅಲ್ಲಿಂದ ತಪ್ಪಿಸಿ ರಸ್ತೆಯಲ್ಲಿ ಭಿಕ್ಷಾಟನೆ ಮಾಡುತ್ತಿದ್ದಾಗ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಯ ಕಣ್ಣಿಗೆ ಬಿದ್ದಿದ್ದರಿಂದ ಅವರು ಜೀತಕ್ಕಿದ್ದ ವಿಷಯ ಬಹಿರಂಗವಾಯಿತು.

ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲೆಯಲ್ಲಿರುವ ವಲಸಿಗರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿದ್ದಾಗ, ಯಳಂದೂರಿನ ತಾಲ್ಲೂಕಿನ ಗೌಡಹಳ್ಳಿಯಲ್ಲಿ ಜಾಲಿಮರಗಳಿಂದ ಇದ್ದಿಲು ಮಾಡುವ ಕೆಲಸದಲ್ಲಿ ನಿರತವಾಗಿದ್ದಮಹಾರಾಷ್ಟ್ರದ ಅಹಮದ್‍ನಗರ ಜಿಲ್ಲೆಯ ರಾಯಗಡ ತಾಲ್ಲೂಕಿನ ಆದಿವಾಸಿ ಕುಟುಂಬಗಳು ಪತ್ತೆಯಾಗಿದ್ದವು. ಏಪ್ರಿಲ್‌ 1ರಂದು ‌ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ ಕುಮಾರ್‌ ಅವರು ಖುದ್ದಾಗಿ ಆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ‘ಅವರು ಕೆಲಸ ಮಾಡುತ್ತಿದ್ದ ವಾತಾವರಣ ಕಂಡು, ಗುತ್ತಿಗೆದಾರನೊಬ್ಬ ಈ ಕುಟುಂಬಗಳನ್ನು ಕರೆ ತಂದಿದ್ದು, ಅವರೆಲ್ಲ ಜೀತದ ಕೆಲಸಕ್ಕೆ ಇದ್ದಾರೆ ಎಂಬ ಅನುಮಾನ ಬರುತ್ತದೆ. ಇದನ್ನು ಮಹಾರಾಷ್ಟ್ರ ಸರ್ಕಾರದ ಗಮನಕ್ಕೆ ತರುತ್ತೇನೆ’ ಎಂದು ಮಾಧ್ಯಮಗಳ ಮುಂದೆ ಸಚಿವರು ಹೇಳಿದ್ದರು.

ಇವು ಜಿಲ್ಲೆಯಲ್ಲಿ ಇತ್ತೀಚೆಗೆ ವರದಿಯಾದ ಎರಡು ಪ್ರಕರಣಗಳಷ್ಟೇ. ಇಂತಹ ಪ್ರಕರಣಗಳು ರಾಜ್ಯದ ವಿವಿಧ ಕಡೆಗಳಲ್ಲಿ, ದೇಶದ ವಿವಿಧ ಭಾಗಗಳಲ್ಲಿ ಆಗಾಗ ನಡೆಯುತ್ತಲೇ ಇರುತ್ತದೆ.

ವಸಾಹತುಶಾಹಿ, ಪಾಳೆಗಾರಿಕೆಯ ಪಳೆಯುಳಿಕೆಯಾಗಿರುವ ‘ಜೀತ ಪದ್ಧತಿ’ ಅಥವಾ ‘ಗುಲಾಮಗಿರಿ’ ಭಾರತ ಸೇರಿದಂತೆ ಜಗತ್ತಿನಾದ್ಯಂತ‌ ಈಗಲೂ ಇದೆ. ವಿವಿಧ ರಾಷ್ಟ್ರಗಳು ಜೀತವನ್ನು ನಿಷೇಧಿಸಿ, ಅದರ ವಿರುದ್ಧ ಪ್ರಬಲ ಕಾನೂನುಗಳನ್ನು ಜಾರಿಗೆ ತಂದಿದ್ದರೂ, ಸಾಮಾಜಿಕ ಪಿಡುಗು ಬೇರೆ ಬೇರೆ ವೇಷದಲ್ಲಿ ಸಕ್ರಿಯವಾಗಿದೆ.

ವಿಶ್ವ ಸಂಸ್ಥೆಯ ಪ್ರಕಾರ, ಜಗತ್ತಿನಲ್ಲಿ ಈಗಲೂ ನಾಲ್ಕು ಕೋಟಿಯಷ್ಟು ಮಂದಿ ಜೀತಗಾರರು ಇದ್ದಾರೆ. ಮಾನವ ಕಳ್ಳಸಾಗಣೆ, ಬಲವಂತವಾಗಿ ಕೆಲಸಕ್ಕೆ ಹಚ್ಚುವುದು, ಬಲವಂತದ ವೇಶ್ಯಾವಾಟಿಕೆ, ಕಾರ್ಮಿಕರಿಗೆ ಮೊದಲು ಸಾಲ ನೀಡಿ, ನಂತರ ನಿಗದಿತ ಸಮಯದವರೆಗೆ ಅವರನ್ನು ದುಡಿಸಿಕೊಳ್ಳುವುದು, ಬಲವಂತದ ಮದುವೆ, ಮಹಿಳೆಯ ಶೋಷಣೆ ಹೀಗೆ ವಿವಿಧ ರೂಪಗಳಲ್ಲಿ ಗುಲಾಮಗಿರಿ ನಡೆಯುತ್ತಿದೆ. ಹೆಚ್ಚು ಮಾನವ ಶ್ರಮ ಬೇಡುವ ಗಣಿಗಾರಿಕೆ, ಇಟ್ಟಿಗೆ ಉದ್ದಿಮೆಗಳಲ್ಲಿ ಈಗಲೂ ಜೀತಕ್ಕೆ ದುಡಿಯುವವರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಬಾಲ ಕಾರ್ಮಿಕ ಪದ್ಧತಿಯೂ ಗುಲಾಮಗಿರಿಯ ಇನ್ನೊಂದು ರೂಪ ಎಂದು ವಿಶ್ವಸಂಸ್ಥೆ ವ್ಯಾಖ್ಯಾನಿಸುತ್ತದೆ.

ಆಧುನಿಕ ಜೀತ ಪದ್ಧತಿಯು ಬಡದೇಶ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಾತ್ರ ಅಲ್ಲ; ಅಭಿವೃದ್ಧಿ ಹೊಂದಿದಂತಹ ಅಮೆರಿಕ ಹಾಗೂ ಇನ್ನಿತರ ರಾಷ್ಟ್ರಗಳಲ್ಲೂ ಇದೆ. ಹಾಗಾಗಿ, ಇದು ಸರ್ವವ್ಯಾಪಿ.ವಾಕ್ ಫ್ರೀ ಫೌಂಡೇಷನ್‌, 2018ರಲ್ಲಿ ಜಾಗತಿಕ ಜೀತ ಸೂಚಿಯನ್ನು (https://www.globalslaveryindex.org) ಪ್ರಕಟಿಸಿದ್ದು, ಅದರಲ್ಲಿ ಜಗತ್ತಿನ ರಾಷ್ಟ್ರಗಳಲ್ಲಿ ಜೀವಂತವಾಗಿರುವ ಆಧುನಿಕ ಗುಲಾಮಗಿರಿಯ ಬಗ್ಗೆ ಬೆಳಕು ಚೆಲ್ಲಿದೆ. 2016ರಲ್ಲಿ ಕಲೆ ಹಾಕಿರುವ ಮಾಹಿತಿಗಳ ಆಧಾರದಲ್ಲಿ, ಆಧುನಿಕ ಜೀತ‍ಪದ್ಧತಿಯ ಬಗ್ಗೆ ವರದಿ ಸಿದ್ಧಪಡಿಸಿದೆ.

ಈ ವರದಿಯ ಪ್ರಕಾರ, ಜಗತ್ತಿನಲ್ಲಿ 4.03 ಕೋಟಿ ಮಂದಿ ಜೀತದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಪೈಕಿ, 2.49 ಕೋಟಿ ಜನ ಬಲವಂತವಾಗಿ ಕೆಲಸಕ್ಕೆ ದೂಡಲ್ಪಟ್ಟವರು. 1.54 ಕೋಟಿಯಷ್ಟು ಮಂದಿ ಬಲವಂತವಾಗಿ ಮದುವೆಗೆ ಒಳಗಾದವರು. ಜಗತ್ತಿನ ಪ್ರತಿ 1,000 ಜನಸಂಖ್ಯೆಯಲ್ಲಿ 5.4 ಮಂದಿ ಆಧುನಿಕ ಗುಲಾಮಗಿರಿಯ ಸಂತ್ರಸ್ತರು ಎಂದು ಹೇಳುತ್ತದೆ ವರದಿ. ಈ ಸೂಚಿ ಪ್ರಕಾರ, ಆಧುನಿಕ ಜೀತ ಪದ್ಧತಿಯಲ್ಲಿ ಉತ್ತರ ಕೊರಿಯ ಮೊದಲ ಸ್ಥಾನದಲ್ಲಿದೆ. ಪ್ರತಿ ದಿನ ಅಲ್ಲಿ 26.40 ಲಕ್ಷ ಮಂದಿ ಜೀತ ಕೆಲಸ ಮಾಡುತ್ತಾರೆ.

ಭಾರತದಲ್ಲಿ...

ಭಾರತದಲ್ಲಿ ಜೀತಪದ್ಧತಿಗೆ ಪೈಶಾಚಿಕ ಚರಿತ್ರೆಯೇ ಇದೆ. ಹಿಂದಿನ ರಾಜರ, ಪಾಳೆಗಾರರ ಆಡಳಿತದಲ್ಲಿ ಸಕ್ರಿಯವಾಗಿದ್ದ ಈ ಅನಿಷ್ಟ ಪಿಡುಗು, ಬ್ರಿಟಿಷರ ಕಾಲದಲ್ಲೂ ಮುಂದುವರಿದಿತ್ತು. ಕೆಲವು ದಶಕಗಳ ಹಿಂದಿನವರೆಗೂ ನಮ್ಮ ನಡುವೆಯೇ ಊಳಿಗಮಾನ್ಯ ಪದ್ಧತಿ ರೂಪದಲ್ಲಿ ಜಾರಿಯಲ್ಲಿತ್ತು.

ದೇಶದಲ್ಲಿ ಜೀತ ಪದ್ಧತಿಯನ್ನು ನಿಷೇಧಿಸಲಾಗಿದೆ ಎಂದು ಸರ್ಕಾರಿ ದಾಖಲೆಗಳು ಹೇಳಿದರೂ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಇದು ಜೀವಂತವಾಗಿದೆ. ಬಹುತೇಕ ಸಂದರ್ಭಗಳಲ್ಲಿ ಇದು ಬೆಳೆಕಿಗೆ ಬರುವುದಿಲ್ಲ.

ಅಂದಾಜಿನ ಪ್ರಕಾರ, ದೇಶದಲ್ಲಿ ಈಗಲೂ 1.5 ಕೋಟಿಯಿಂದ 1.8 ಕೋಟಿ ಮಂದಿ ಆಧುನಿಕ ಜೀತದಲ್ಲಿ ತೊಡಗಿದ್ದಾರೆ. ಗಣಿಗಾರಿಕೆ, ಇಟ್ಟಿಗೆ ತಯಾರಿಕೆ ಉದ್ದಿಮೆಗಳಲ್ಲಿ ಜೀತಗಾರರು ಇದ್ದಾರೆ ಎಂದು ಹೇಳುತ್ತವೆ ಅಧ್ಯಯನಗಳು.2018ರ ಜಾಗತಿಕ ಜೀತ ಸೂಚಿಯ ಪ್ರಕಾರ, ಜಗತ್ತಿನಲ್ಲಿ ಅತಿ ಹೆಚ್ಚು ಜೀತದಾರರು ಇರುವುದು ಭಾರತದಲ್ಲಿ. 167 ರಾಷ್ಟ್ರಗಳ ಪೈಕಿ 53ನೇ ಸ್ಥಾನದಲ್ಲಿದೆ. ಸೂಚಿಯ ಪ್ರಕಾರ, ಭಾರತದಲ್ಲಿ ದಿನವೊಂದಕ್ಕೆ ಏನಿಲ್ಲವೆಂದರೂ 80 ಲಕ್ಷ ಮಂದಿ ಜೀತ ಕೆಲಸದಲ್ಲಿ ತೊಡಗುತ್ತಾರೆ.

ಜೀತದ ವಿರುದ್ಧವಾಗಿ ಹಲವು ಸಂಘ ಸಂಸ್ಥೆಗಳು, ಸಾಮಾಜಿಕ ಹೋರಾಟಗಾರರು ದೇಶದಲ್ಲಿ ಕೆಲಸದ ಮಾಡುತ್ತಿದ್ದಾರೆ. ಇತ್ತೀಚಿಗಿನ ದಶಕಗಳಲ್ಲಿ ಸ್ವಾಮಿ ಅಗ್ನಿವೇಶ್‌ ಅವರು ಅತ್ಯುತ್ತಮ ಕೆಲಸ ಮಾಡಿದ್ದರು. ಸಾವಿರಾರು ಜೀತದಾಳುಗಳನ್ನು ವಿಮೋಚನೆ ಮಾಡಿದ್ದರು. ಹಲವು ಚಳವಳಿಗಳೂ ಅವರು ಪ್ರೇರಣೆಯಾಗಿದ್ದರು.

ಅಂದ ಹಾಗೆ, ಇಂದು ಡಿಸೆಂಬರ್‌ 2. ಅಂತರರಾಷ್ಟ್ರೀಯ ಜೀತಪದ್ಧತಿ ನಿರ್ಮೂಲನಾ ದಿನ. 1949ರ ಡಿಸೆಂಬರ್‌ 2ರಂದು ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾನವ ಕಳ್ಳಸಾಗಣೆ ಹಾಗೂ ವೇಶ್ಯವಾಟಿಕೆ ಹಾಗೂ ಇತರ ಕೃತ್ಯಗಳಲ್ಲಿ ಜನರನ್ನು ಶೋಷಣೆ ಮಾಡುವುದರ ವಿರುದ್ಧ ನಿರ್ಣಯ ಕೈಗೊಳ್ಳಲಾಗಿತ್ತು. ಆ ದಿನದ ಅಂಗವಾಗಿ ಜೀತಪದ್ಧತಿ ನಿರ್ಮೂಲನಾ ದಿನವನ್ನು ಆಚರಿಸಲಾಗುತ್ತಿದೆ.

ಈ ಅನಿಷ್ಟವನ್ನು ಯಾವ ರಾಷ್ಟ್ರಕ್ಕೂ ಪೂರ್ಣವಾಗಿ ಹತ್ತಿಕ್ಕಲು ಆಗಿಲ್ಲ. ‘ಶಿಕ್ಷಣ, ಸಮುದಾಯಗಳ ಅಭಿವೃದ್ಧಿ, ಜಾಗೃತಿ, ಪರಿಣಾಮಕಾರಿ ಮೇಲ್ವಿಚಾರಣೆಗಳಿಂದ ಈ ಪಿಡುಗಿಗೆ ಕಡಿವಾಣ ಹಾಕಬಹುದು. ಇದಕ್ಕಾಗಿ ಜಾಗತಿಕ ಮಟ್ಟದಲ್ಲಿ ದೊಡ್ಡ ಮಟ್ಟದ ಚಳವಳಿಯ ಅಗತ್ಯವಿದೆ’ ಎಂದು ಪ್ರತಿಪಾದಿಸುತ್ತಾರೆ ಸಾಮಾಜಿಕ ಕಾರ್ಯಕರ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT