ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಸಾರ್ವಜನಿಕ ನೈತಿಕತೆ: ಕಳೆದುಹೋಗುತ್ತಿರುವ ಪ್ರಜ್ಞೆ

ವಿನಯವಂತಿಕೆಯ ಕೊರತೆಯು ಸಮಾಜವನ್ನು ಪಾಳೆಗಾರಿಕೆಯ ಕಡೆಗೆ ಒಯ್ಯುತ್ತದೆ
Last Updated 25 ಆಗಸ್ಟ್ 2022, 22:36 IST
ಅಕ್ಷರ ಗಾತ್ರ

ಯಾರಿಗಾದರೂ ಹಣ ಕೊಡಲು ಬಾಕಿ ಇದ್ದರೆ ತಲೆ ತಪ್ಪಿಸಿಕೊಂಡು ತಿರುಗಾಡಬೇಕಾಗುತ್ತದೆ ಎಂದು ಭಾವಿಸುವ ಕಾಲವೊಂದಿತ್ತು. ಆದರೆ, ಈಗಿನ ಜೀವನ ಸನ್ನಿವೇಶ ಬಹಳ ಬದಲಾಗಿದೆ. ತನಗೆ ಸಾಲ ಕೊಟ್ಟವನ ವ್ಯಕ್ತಿತ್ವದ ಬಗ್ಗೆ ಕೆಟ್ಟದ್ದನ್ನು ಹೇಳುತ್ತಾ, ಬಾಕಿಯನ್ನು ತಾನು ಕೊಡದೇ ಇರುವುದಕ್ಕೆ ತನ್ನನ್ನು ತಾನು ಸಮರ್ಥಿಸಿ
ಕೊಳ್ಳುವ ಪರಿಪಾಟ ಬೆಳೆದಿದೆ. ಬರಬೇಕಾದ ಹಣವನ್ನು ಪಡೆಯುವ ಬದಲು ಕೊಟ್ಟ ಹಣ ಬಾರದಿದ್ದರೂ ಪರವಾಗಿಲ್ಲ, ಇವನು ತನ್ನ ಬಗ್ಗೆ ಏನೂ ಹೇಳದಿದ್ದರೆ ಸಾಕು ಎಂದು ಸಾಲ ಕೊಟ್ಟವನು ಯೋಚಿಸಬೇಕಾದ ಪರಿಸ್ಥಿತಿ ಬಂದಿದೆ. ಇದು ಸಮಾಜದ ಒಳರಚನೆಯಲ್ಲಿ ನಡೆಯುತ್ತಿರುವಂತಹುದು.

ಸಾರ್ವಜನಿಕ ಜೀವನದ ಮೇಲುಸ್ತರದಲ್ಲಿ ಇಂತಹ ಸಂಗತಿಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ಸಾರ್ವಜನಿಕ ಜೀವನದ ಮೇಲುಸ್ತರದಲ್ಲೇ ಕಾಣಿಸಿಕೊಳ್ಳುತ್ತಿರುವ ಹಲವು ಸಂಗತಿಗಳಿವೆ. ತನ್ನವನು ಎನ್ನುವ ಕಾರಣಕ್ಕೆ ಅವನ ಪರವಾಗಿ ವರ್ತಿಸಿದಾಗಲೂ ಮೇಲ್ನೋಟ
ಕ್ಕಾದರೂ ಎಲ್ಲರ ದೃಷ್ಟಿಯಲ್ಲಿ ನಿಷ್ಪಕ್ಷಪಾತಿಯಂತೆ ಕಾಣಿಸಿ
ಕೊಳ್ಳಬೇಕೆಂಬ ಪ್ರಜ್ಞೆ ತೀರಾ ಇತ್ತೀಚಿನವರೆಗೂ ಇತ್ತು. ಇದೇ ಜೀನ್ ಜಾಕ್ ರೂಸೋ ಕರೆಯುವ ‘ಜನರಲ್ ವಿಲ್’ ಅಥವಾ ಯಾಜ್ಞವಲ್ಕ್ಯ ಗುರುತಿಸುವ ‘ಸಾರ್ವತ್ರಿಕ ಧೋರಣೆ’.

ಸಾರ್ವತ್ರಿಕ ಧೋರಣೆಯು ಎಷ್ಟು ಪ್ರಭಾವಿ ಎಂದರೆ, ಎಂತಹ ಭ್ರಷ್ಟನೇ ಇರಬಹುದು, ಆತ ಸಾರ್ವಜನಿಕ ವೇದಿಕೆಯಲ್ಲಿ ಭ್ರಷ್ಟಾಚಾರವನ್ನು ಸಮರ್ಥಿಸುವುದಿಲ್ಲ‌.
ಭ್ರಷ್ಟಾಚಾರ ಕೆಟ್ಟದ್ದು ಎಂದೇ ಹೇಳುತ್ತಾನೆ. ‘ನಾನು ಭ್ರಷ್ಟಾಚಾರ ಮಾಡುತ್ತೇನೆ, ನನ್ನಿಷ್ಟ, ನನ್ನ ಸಾಮರ್ಥ್ಯ’ ಎಂದು ಸಾರ್ವಜನಿಕ ವೇದಿಕೆಯಲ್ಲೇ ಹೇಳುವ ಪರಿಸ್ಥಿತಿ ಬಂತೆಂದರೆ ಅದು ಸಮಾಜದ ಸಾರ್ವತ್ರಿಕ ಧೋರಣೆಯನ್ನೇ ಧಿಕ್ಕರಿಸಬಲ್ಲ, ಧಿಕ್ಕರಿಸಿಯೂ ದಕ್ಕಿಸಿ
ಕೊಳ್ಳಬಲ್ಲ ಒಂದು ಪ್ರತಿಗಾಮಿ ಸಮಾಜದ ಕಡೆಗೆ ಸಾಗುವುದರ ಸ್ಪಷ್ಟ ಸೂಚನೆ. ಅಂತಹ ಸಮಾಜದಲ್ಲಿ ಕಾನೂನಿಗೆ ತೋರಿಕೆಯ ಮೌಲ್ಯವೂ ಇರುವುದಿಲ್ಲ. ಹಣ, ಅಧಿಕಾರ, ತೋಳ್ಬಲದಲ್ಲಿ ಸಮರ್ಥನಾದವನ ಆ ಕ್ಷಣದ ಬಯಕೆಯೇ ಶಾಸನದ ಕಿಮ್ಮತ್ತನ್ನು ಪಡೆಯುತ್ತದೆ. ಇದು ಮಧ್ಯಯುಗೀನ ಕಾಲದ ಪಾಳೆಗಾರಿಕೆಯ ಸಮಾಜಕ್ಕೆ ಒಯ್ಯುತ್ತದೆ. ಸಾರ್ವತ್ರಿಕ ನೈತಿಕತೆಯ ಪ್ರಜ್ಞೆಯನ್ನು ಧಿಕ್ಕರಿಸು
ವುದನ್ನು ಸಮಾಜ ಯಾವುದೇ ಕಾರಣಕ್ಕೆ ಮೌನವಾಗಿ ಸಹಿಸಿಕೊಂಡರೂ ಮಧ್ಯಯುಗೀನ ಅನಾಗರಿಕತೆಯ ಕಡೆಗೇ ಅದು ಸಾಗುತ್ತದೆ.

ಪ್ರಸ್ತುತ ಸಮಾಜದಲ್ಲಿ ಸಾರ್ವತ್ರಿಕ ಧೋರಣೆಯನ್ನು ಸಾರ್ವಜನಿಕವಾಗಿ ಧಿಕ್ಕರಿಸುವ ಪ್ರವೃತ್ತಿ ಒಂದೆಡೆ ಕಾಣಿಸುತ್ತಿದ್ದರೆ, ಇನ್ನೊಂದೆಡೆ, ಕನಿಷ್ಠ ಕಾಳಜಿ ಇಲ್ಲದೆ ಮೌಲ್ಯಗಳನ್ನೇ ಒಂದು ದುರಾಗ್ರಹದ ತಂತ್ರವಾಗಿ ಬಳಸುವುದು ಜಾರಿಗೆ ಬಂದಿದೆ. ಉದಾಹರಣೆಗೆ, ಭಾರತದ ಸ್ವಾತಂತ್ರ್ಯ ಹೋರಾಟ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಮುಂತಾದ ಎಲ್ಲರಿಗೂ ಅನ್ವಯಿಸುವ ಸಂಗತಿಗಳು ವ್ಯಾಪಕವಾಗಿ ಚರ್ಚೆಗೆ ಒಳಗಾಗಿವೆ. ಆದರೆ ಈ ಎಲ್ಲವೂ ಪ್ರತಿಪಾದಿಸುವ ಆಶಯಗಳ ಕಡೆಗೆ ಯಾರದೂ ಗಮನವಿಲ್ಲ. ಉದಾಹರಣೆಗೆ, ಭಾರತದ ರಾಷ್ಟ್ರಪಕ್ಷಿ ನವಿಲು. ಆದರೆ ನವಿಲುಧಾಮವನ್ನು ಮಾಡುವ, ಅದರ ಬಗ್ಗೆ ಚರ್ಚಿಸುವ ಚಿಂತನೆ ಉಳಿದಿಲ್ಲ.‌ ವನ್ಯ ಸಂಪತ್ತು ರಾಷ್ಟ್ರೀಯ ಸಂಪತ್ತು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆಪದಲ್ಲಾದರೂ ಅರಣ್ಯ ಸಂರಕ್ಷಣೆ, ಖನಿಜಗಳ ಸಂರಕ್ಷಣೆಯಂತಹ ಆಲೋಚನೆಗಳೂ ಇಲ್ಲ. ಅವುಗಳ ಬಗ್ಗೆ ಚರ್ಚೆಯೂ ಇಲ್ಲ. ಅಂತಹ ಸಂಪತ್ತಿನ ಲೂಟಿ ಎಗ್ಗಿಲ್ಲದೆ ನಡೆಯುತ್ತಿರುವುದರ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ನಮ್ಮ ಸಂಪತ್ತನ್ನು ನಾವು ರಕ್ಷಿಸಿಕೊಳ್ಳಬೇಕು ಎಂಬ ಜವಾಬ್ದಾರಿಯ ಅರಿವನ್ನು ತರಲಾರದ ಸ್ವಾತಂತ್ರ್ಯದ ಸಂಭ್ರಮಕ್ಕೆ ಯಾವ ಸಾರ್ವಜನಿಕ ಮಹತ್ವ ಉಳಿಯುತ್ತದೆ?

ಐದು ನಿಮಿಷ ಸಾರ್ವಜನಿಕವಾಗಿ ಮಾತನಾಡಿದರೂ ಸಾಕು ಕನಿಷ್ಠ ಹತ್ತು ಬಾರಿಯಾದರೂ ಎಲ್ಲರ ಕಲ್ಯಾಣವನ್ನು ಪ್ರಸ್ತಾಪಿಸುವವನು ಎಗ್ಗಿಲ್ಲದ ಖಾಸಗೀಕರಣಕ್ಕೆ ತುಂಬು ಬೆಂಬಲ ನೀಡುತ್ತಿರುತ್ತಾನೆ. ಖಾಸಗೀಕರಣ ಮತ್ತು ಬಂಡವಾಳವಾದವೂ ಅಭಿವೃದ್ಧಿಯ ಒಂದು ವಿಧಾನವೇ ಆಗಿದೆ. ಆದರೆ ಮನುಷ್ಯ ಒಳ್ಳೆಯವನಾಗಿದ್ದಾಗ ಬಂಡವಾಳವಾದದಲ್ಲೂ ಅದು ಅಭಿವೃದ್ಧಿಯ ಸಾಧನವಾಗುವುದು.‌ ಒಳ್ಳೆಯವನಾಗಿಲ್ಲದೇ ಇದ್ದರೆ ಬಂಡವಾಳವಾದವು ಊಳಿಗಮಾನ್ಯ ವ್ಯವಸ್ಥೆಗೆ ದಾರಿ ಮಾಡಿಕೊಡುತ್ತದೆ. ಅದೇ ಆಗುತ್ತಲೂ ಇದೆ. ಆದರೆ ಮನುಷ್ಯನ ಅರ್ಥಾತ್ ಬಂಡವಾಳಿಗರ ಒಳ್ಳೆಯತನ, ನೈತಿಕತೆ, ಸಾರ್ವಜನಿಕ ಜವಾಬ್ದಾರಿಗಳ ಚರ್ಚೆಯನ್ನೇ ಮಾಡದವನೂ ಎಲ್ಲರ ಕಲ್ಯಾಣದ ಬಗ್ಗೆ ಮಾತನಾಡಬಲ್ಲ!

ಈ ರೀತಿಯ ಸನ್ನಿವೇಶದ ನಿರ್ಮಾಣಕ್ಕೆ ಹಲವು ಹಿನ್ನೆಲೆಗಳಿವೆ. ಮೊದಲನೆಯದಾಗಿ, ಯಾವುದೇ ವಿಷಯವನ್ನು ರಾಜಕೀಯ ದೃಷ್ಟಿಕೋನದಿಂದಲೇ ವ್ಯಾಖ್ಯಾನಿಸುವುದು. ಪ್ರಜಾಪ್ರಭುತ್ವ ದೇಶದಲ್ಲಿ ರಾಜಕೀಯದ ಅರಿವು ಪೌರರಿಗೆ ಮೂಲಭೂತ ಅವಶ್ಯಕತೆ
ಯಾಗಿದೆ. ಆದರೆ ಅದು ಎಂದಿಗೂ ಪಕ್ಷಬದ್ಧ ರಾಜಕೀಯ ಧೋರಣೆಯಾಗಬಾರದು. ಈ ವಿಚಾರದಲ್ಲಿ ಮಹಾತ್ಮ ಗಾಂಧಿ ‘ಸ್ವಾತಂತ್ರ್ಯ ಬಂದದ್ದು ದೇಶಕ್ಕೆ; ಕಾಂಗ್ರೆಸ್ಸಿಗಲ್ಲ; ಸಚಿವ ಸಂಪುಟಕ್ಕೆ ಕಾಂಗ್ರೆಸ್ಸೇತರರನ್ನೂ ತೆಗೆದುಕೊಳ್ಳಿ’ ಎಂಬ ನಿಷ್ಠುರ ನಿಲುವನ್ನು ಪ್ರಕಟಿಸಿದ್ದರು. ಆದರೆ ಪಕ್ಷಬದ್ಧ ರಾಜಕೀಯವು ಕೇರಳದಲ್ಲಿ ಎಡಪಕ್ಷಗಳಿಂದ ಮೊದಲು ಪ್ರಾರಂಭವಾಯಿತು. ಈಗ ಇಡೀ ದೇಶದಲ್ಲಿ ಇಂಥ ದೃಷ್ಟಿಕೋನವು ಬೆಳೆದಿದೆ. ಪಕ್ಷಬದ್ಧತೆಯ ಆಧಾರದಲ್ಲಿ ದೇಶದ ಸಮಸ್ತ ಪೌರರನ್ನೂ ರಾಜಕೀಯ ಧೋರಣೆಯಲ್ಲಿ ಎರಡಾಗಿ ವಿಭಜಿಸಿ ನೋಡಲಾಗುತ್ತಿದೆ.

ರಾಜಕೀಯವು ಜನರಿಗಾಗಿ ಇಲ್ಲ, ಜನರು ರಾಜಕೀಯಕ್ಕಾಗಿ ಇದ್ದಾರೆ ಎಂಬ ದೃಷ್ಟಿಕೋನವು
ವರ್ತಮಾನದಲ್ಲಿ ವಿಚಾರವಂತ ವರ್ಗದಲ್ಲಿಯೂ ಬಂದಿದೆ. ಆದ್ದರಿಂದ ಭ್ರಷ್ಟಾಚಾರವನ್ನು ಸಮರ್ಥಿಸ ಕೂಡದು, ಬೆಲೆ ಏರಿಕೆಯಿಂದ ಜನರಿಗೆ ಕಷ್ಟವಾಗುತ್ತದೆ, ಜಾತಿ ದ್ವೇಷದ ಪ್ರತಿಪಾದನೆ ಸರಿಯಲ್ಲ ಎಂದು ಹೇಳಿದ ಕೂಡಲೇ, ಹೇಳಿದವನು ರಾಜಕೀಯವಾಗಿ ಯಾವ ಕಡೆ ಇದ್ದಾನೆ ಎಂಬ ಅರ್ಥದಲ್ಲಿ ಆತನನ್ನು ಪರಿಗಣಿಸಿ ನಾನಾ ರೀತಿಯ ವೈಚಾರಿಕ ಕಿರುಕುಳವನ್ನು ಕೊಡಲಾಗುತ್ತದೆ. ಹೇಳಿದ ವಿಚಾರದ ಆಶಯವನ್ನು ಗ್ರಹಿಸುವ ನಡೆಯು ಸಾರ್ವಜನಿಕ ಪ್ರಜ್ಞೆಯ ಮುಖ್ಯವಾಹಿನಿಯಿಂದ ಹೊರಟು ಹೋಗಿದೆ. ಸಾರ್ವತ್ರಿಕ ಧೋರಣೆ, ಸಾರ್ವಜನಿಕ ನೈತಿಕತೆ ಏನು ಎಂಬುದನ್ನು ಹೇಳುವುದಕ್ಕೇ ಬಿಡದಿದ್ದರೆ ಅದರ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಯುವುದಿಲ್ಲ. ಆಗ ಸಾರ್ವತ್ರಿಕ ಧೋರಣೆಯನ್ನು ಸಂರಕ್ಷಿಸಿಕೊಳ್ಳಲಾಗದು.

ಎರಡನೆಯದಾಗಿ, ಮಾರುಕಟ್ಟೆ ಆರ್ಥಿಕತೆಯು ಎಲ್ಲ ಕಡೆಯೂ ವ್ಯಾಪಿಸಿಕೊಂಡಿದ್ದು ಧರ್ಮ, ಮೌಲ್ಯ, ದೇಶಭಕ್ತಿ, ನಾಡ ಪ್ರೀತಿ, ಸಾಮಾಜಿಕ ಚಳವಳಿ, ಸಾಹಿತ್ಯ, ಕಲೆ, ಇತಿಹಾಸ- ಏನನ್ನು ಮಾತನಾಡಿದರೂ; ಮಾತು ಕೂಡ ಮಾರುಕಟ್ಟೆಯ ಸರಕಾಗಿ ಬದಲಾಗುತ್ತದೆ.‌ ಈ ರೀತಿಯ ಸಮಾಜದಲ್ಲಿ ವಿಚಾರಗಳು ಅಗೋಚರ ಸರಕಾಗಿ ಮಾರಾಟವಾಗುತ್ತವೆ ಅಥವಾ ಜಾಹೀರಾತಾಗಿ ಬಳಕೆಯಾಗುತ್ತವೆ. ಆದ್ದರಿಂದ ಅವು ವೈಚಾರಿಕ ಪರಿಣಾಮವನ್ನು ಬೀರದೆ ಸಾರ್ವತ್ರಿಕ ಧೋರಣೆಯು ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ.

ಮೂರನೆಯದಾಗಿ, ಪ್ರಸ್ತುತ ಆರ್ಥಿಕ ಹಿನ್ನಡೆ ಆಗಿದ್ದರೂ ಜನರ ವೈಚಾರಿಕತೆಯನ್ನೇ ಪರಿವರ್ತಿಸು
ವಷ್ಟು ಬಲಿಷ್ಠವಾದ ಹಿನ್ನಡೆ ಆಗಿಲ್ಲ. ಹಣಕಾಸಿನ ಹೊಂದಾಣಿಕೆಗಳು ನಡೆಯುತ್ತವೆ. ಧನಬಲ, ಜನಬಲ, ಅಧಿಕಾರಬಲ ಇರುವ ತನಕ ವೈಚಾರಿಕ ಪಕ್ವತೆ ಇಲ್ಲದ ಜನರಲ್ಲಿ ವಿನಯ ಇರುವುದಿಲ್ಲ. ತನ್ನಲ್ಲಿರುವ ಶಕ್ತಿಯನ್ನು ಅರಗಿಸಿಕೊಳ್ಳುವಷ್ಟು ಜ್ಞಾನದ ಶಕ್ತಿ ಇಲ್ಲದ ಜನರಲ್ಲಿ ‘ಶಕ್ತಿ’ಯು ದುರಹಂಕಾರ ಮತ್ತು ದಾರ್ಷ್ಟ್ಯವನ್ನು ಬೆಳೆಸುತ್ತದೆ. ಜೊತೆಗೆ ಶಿಕ್ಷಣವೂ ಜ್ಞಾನವನ್ನು ಸೃಷ್ಟಿಸಲು ಗಮನವನ್ನು ಕೊಡದೆ, ಹೆಚ್ಚಿನ ಅಂಕಗಳ ಮೂಲಕ ವಿದ್ಯಾರ್ಥಿಗಳನ್ನು ಮಾರುಕಟ್ಟೆ ಆರ್ಥಿಕತೆಯಲ್ಲಿ ಅಧಿಕ ಬೆಲೆಯ ಸರಕಾಗಿ ಚಲಾವಣೆಯಲ್ಲಿ ಇರುವಂತೆ ಮಾಡುವ ರೂಪವನ್ನು ಹೊಂದಿದೆ. ಇದರಿಂದಾಗಿ ಸಮಾಜದಲ್ಲಿ ವಿನಯವನ್ನು ಬೆಳೆಸುವ ಕೆಲಸವು ಕುಟುಂಬಗಳ ಗುಣ
ಲಕ್ಷಣಗಳ ಮಟ್ಟದಲ್ಲಷ್ಟೇ ಉಳಿದಿದೆ.

ಜ್ಞಾನದ ಕೊರತೆ ಇದ್ದಾಗ ಜನರು ದುರಹಂಕಾರ
ವನ್ನು ನಿಷ್ಠುರವಾದ ಎಂದು ತಪ್ಪಾಗಿ ಭಾವಿಸುತ್ತಾರೆ. ನಿಜವಾದ ನಿಷ್ಠುರವಾದಿ ಅತ್ಯಂತ ವಿನಯವಂತನಾಗಿರು
ತ್ತಾನೆ. ದುರಹಂಕಾರಿ ಎಂದೂ ವಿನಯವಂತನಾಗಿ ಇರುವುದಿಲ್ಲ. ಸಮಾಜದಲ್ಲಿ ಉಂಟಾಗಿರುವ ವಿನಯ ವಂತಿಕೆಯ ಕೊರತೆಯು ತಾನು ಮತ್ತು ತನ್ನವನು ಏನನ್ನು ಮಾಡಿದರೂ ಸರಿಯೇ ಎಂದು ಸಮರ್ಥಿಸಿಕೊಳ್ಳುವ ಅನಾರೋಗ್ಯಕರ ಸಮಾಜವನ್ನು ನಿರ್ಮಿಸುತ್ತದೆ. ಇದು ಸಮಾಜವನ್ನು ಪಾಳೆಗಾರಿಕೆಯ ಕಡೆಗೆ ಒಯ್ಯುತ್ತದೆ.

ಈ ಸವಾಲನ್ನು ಎದುರಿಸಬೇಕಾದರೆ, ಸಮಸ್ಯೆಯ ಅರಿವು ಉಳ್ಳವರು ಸಂಘಟಿತರಾಗಿ, ಒಂದು ಸಾಮಾಜಿಕ‌ ಶಕ್ತಿಯಾಗಿ ವೈಚಾರಿಕ ಕಾರ್ಯಗಳನ್ನು ಮಾಡಬೇಕು. ಅದರ ಪರಿಣಾಮ ಸಮಾಜದ ಮೇಲೆ ಉಂಟಾಗುವಂತೆ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT