ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಪಾಲಕರ ದಿನ: ಭಾರತ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ.ಎಸ್.ಆರ್. ರಂಗನಾಥನ್

Published 11 ಆಗಸ್ಟ್ 2023, 13:19 IST
Last Updated 11 ಆಗಸ್ಟ್ 2023, 13:19 IST
ಅಕ್ಷರ ಗಾತ್ರ

ಪ್ರತಿವರ್ಷ ಆಗಸ್ಟ್ 12ರಂದು ಗ್ರಂಥಪಾಲಕರ ದಿನಾಚರಣೆ ಮಾಡುತ್ತಾ ಬಂದಿದ್ದೇವೆ. ಇಂದಿನ ಡಿಜಿಟಲ್ ಯುಗದಲ್ಲಿಯೂ ಗ್ರಂಥಾಲಯ ವಿಜ್ಞಾನದ ಪಿತಾಮಹರಾದ ಡಾ. ಎಸ್ಆರ್. ರಂಗನಾಥನ್ ಅವರನ್ನು ನಾವು ಸ್ಮರಿಸಲೇಬೇಕು. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಗ್ರಂಥಾಲಯ ಮತ್ತು ಅಂತರ್ಜಾಲದ ಮೂಲಕ ಜ್ಞಾನವನ್ನು ಗಳಿಸಿಕೊಳ್ಳುತ್ತಿದ್ಧೇವೆ ಎಂದರೆ ಅದು ಗ್ರಂಥಾಲಯದ ಸೇವೆಯಿಂದ. ಪ್ರತಿಯೊಂದು ಜೀವಿಗೂ ಬದುಕಲು ನೀರು, ಗಾಳಿ ಬೆಳಕು ಮತ್ತು ಆಹಾರ ಹೇಗೆ ಮುಖ್ಯವೊ ಹಾಗೆಯೇ ಮನುಷ್ಯ ಮನುಷತ್ವದಿಂದ ನಡೆದುಕೊಳ್ಳಲು, ಮಾನವೀಯ ಮೌಲ್ಯಗಳನ್ನು ಬೆಳೆಸಬೇಕೆಂದರೆ, ಮನುಷ್ಯನ ವ್ಯಕ್ತಿತ್ವವನ್ನೇ ಬದಲಿಸಬೇಕೆಂದರೆ, ಮನುಷ್ಯನ ಸರ್ವತೋಮುಖ ಬೆಳವಣಿಗೆ ಆಗಬೇಕು ಎಂದರೆ ಪುಸ್ತಕಗಳಿಂದ ಮಾತ್ರ ಸಾಧ್ಯ. ಪುಸ್ತಕದ ಮೌಲ್ಯ ಮತ್ತು ಸಾರ್ಥಕ್ಯ ಪಡೆಯಬೇಕಾದರೆ ಗ್ರಂಥಾಲಯಗಳು ಅವಶ್ಯ ಹಾಗೂ ಗ್ರಂಥಪಾಲಕನ ಪಾತ್ರ ಅತೀ ಮಹತ್ವದ್ದಾಗಿದೆ.

ಗ್ರಂಥಾಲಯಗಳು ಎಂದರೆ ಜ್ಞಾನದ ಸಾಗರ, ಪುರಾಣ, ಇತಿಹಾಸ ಕಾಲದಿಂದಲೂ ಇಂದಿನ ಡಿಜಿಟಲ್ ಯುಗದವರೆಗೂ ಅನೇಕ ಪಂಡಿತರು, ಸಂಶೋಧಕರು, ಅನುಭಾವಿಗಳು ತಮ್ಮ ಶ್ರಮ, ಸಮಯ, ಜ್ಞಾನ ಉಪಯೋಗಿಸಿ ಮುಂದಿನ ಪೀಳಿಗೆಗೆ ಗ್ರಂಥಸ್ಥವಾಗಿ ಬರೆದಿಟ್ಟಿದ್ದಾರೆ. ಇಂತಹ ಜ್ಞಾನದೇಗುಲವೇ ಗ್ರಂಥಾಲಯ. ಗ್ರಂಥಾಲಯಕ್ಕೆ ಜ್ಞಾನದ ಕಣಜ ಎಂದು ಕರೆಯಲಾಗುತ್ತದೆ. ಇದರಲ್ಲಿ ಗ್ರಂಥಪಾಲಕರ ಶ್ರಮ ಬಹಳವಿದೆ. ಓದುಗನಿಗೆ ಜ್ಞಾನದ ಊಟವನ್ನು ಉಣಬಡಿಸಲು ಸದಾ ಸಿದ್ದನಾಗಿರುತ್ತಾನೆ. ಇಂತಹ ಮಹತ್ವದ ಕಾರ್ಯಕ್ರಮವನ್ನು ಪ್ರತಿಯೊಬ್ಬ ಗ್ರಂಥಪಾಲಕರು ಮಾಡುತ್ತಾರೆ. ಹಾಗಾದರೆ ಇದನ್ನು ಪ್ರಾರಂಭಿಸಿದ ಜ್ಞಾನಿ ವಿಜ್ಞಾನಿ ಯಾರು. ಅವರನ್ನು ಇಂದು ಏಕೆ ನೆನಪಿಸಿಕೊಳ್ಳಬೇಕು ಎಂಬುದನ್ನು ನಾನು ನಿಮಗೆ ಹೇಳಲೇಬೇಕು.

ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹರಾದ ಡಾ. ಎಸ್ ಆರ್.ರಂಗನಾಥನ್‌ರವರು ಮದ್ರಾಸ್ ಪ್ರಾಂತ್ಯದ ಒಂದು ಪುಟ್ಟ ಹಳ್ಳಿ ಶಿಯಾಳಿ ಎಂಬಲ್ಲಿ ಆಗಸ್ಟ್ 12, 1892ರಲ್ಲಿ ಜನಿಸಿದರು. ಬಾಲ್ಯದಿಂದಲೂ ಶಿಸ್ತಿನ ಸಿಪಾಯಿಯಂತೆ ಬೆಳೆದವರಾಗಿದ್ಧರಿಂದ ಚುರುಕು ಬುದ್ಧಿಯವರಾಗಿದ್ಧರು. 1909ರಲ್ಲಿ ಮದ್ರಾಸ್‌ನ ಕ್ರಿಶ್ಚಿಯನ್ ಕಾಲೇಜಿಗೆ ಸೇರಿ ಇಂಗ್ಲಿಷ್ ವಿಷಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಸ್ನಾತಕೋತ್ತರ ಪದವಿ ಮುಗಿಸಿದ್ದು. ನಂತರ ಅಧ್ಯಾಪನ ಶಾಸ್ತ್ರದಲ್ಲಿ ಎಲ್.ಟಿ.ಪರೀಕ್ಷೆಯಲ್ಲಿ ಸಹ ಪ್ರಥಮ ದರ್ಜೆಯಲ್ಲಿ ಪಾಸಾದರು. ತದನಂತರ ಮದ್ರಾಸ್‌ನ ಸರ್ಕಾರಿ ಕಾಲೇಜಿನಲ್ಲಿ ಹಾಗೂ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಗಣಿತದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ ಮಂಗಳೂರು ಸರಕಾರಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕ ವೃತ್ತಿಯನ್ನು ಮುಂದುವರೆಸಿದ್ದರು.

ಮದ್ರಾಸ್ ವಿಶ್ವವಿದ್ಯಾನಿಲಯದ ಗ್ರಂಥಾಲಯಕ್ಕೆ ಪ್ರಥಮ ಗ್ರಂಥಪಾಲಕ ಆಗಿ ನೇಮಕವಾದರು. 1924ರಲ್ಲಿ ಇವರ ಅನುಭವ ಶಿಸ್ತು, ಕ್ರಿಯಾಶೀಲ ವ್ಯಕ್ತಿತ್ವದಿಂದಾಗಿ ಲಂಡನ್ನಿನ ಬ್ರಿಟಿಷ್ ವಸ್ತು ಸಂಗ್ರಹಾಲಯದ ಗ್ರಂಥ ಭಂಡಾರದಲ್ಲಿ ನಡೆಯುವ ಗ್ರಂಥ ಪರಿಚಲನೆ, ಆಡಳಿತ ಪರಿಶೀಲನೆಗಾಗಿ ಅವರನ್ನು ಇಂಗ್ಲೆಂಡ್‌ಗೆ ಕಳಿಸಲಾಗಿತ್ತು. ಆಸಕ್ತಿ ಇರುವುದರಿಂದ ಅಲ್ಲಯೇ ಮುಂದಿನ ಉನ್ನತ ಶಿಕ್ಷಣ ಪಡೆಯಲು ಉಳಿದುಕೊಂಡರು. ಅಲ್ಲಿ ಗ್ರಂಥಾಲಯ ಮಹತ್ವದ ಬಗ್ಗೆ ಮಾಹಿತಿ ಕಲೆಹಾಕಿ ತಮ್ಮ ಗುರುಗಳಾದ ಬರ್ವಿಕ್ ಸೇಯರ್ಸ್ ಅವರ ಮಾರ್ಗದರ್ಶನದಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ಪರಿಣತಿ ಹೊಂದಿದರು. ಆ ದೇಶದಲ್ಲಿರುವ ಶಾಲೆ, ಕಾಲೇಜುಗಳಲ್ಲಿ ಗ್ರಂಥಾಲಯದ ಕಾರ್ಯನಿರ್ವಹಣೆ ಪದ್ಧತಿಯನ್ನು ಗಮನಿಸುತ್ತಾ ಎಲ್ಲರ ಪ್ರೀತಿಗೆ ಪಾತ್ರರಾಗುತ್ತಾರೆ. ಗುರುಗಳಾದ ಸೇಯರ್ಸ್ ಅವರ ಮಾರ್ಗದರ್ಶನದಿಂದಾಗಿ ಕ್ರೋಮಿಡನ್ ಸಾರ್ವಜನಿಕ ಗ್ರಂಥಾಲಯ ಮಂಡಲದಲ್ಲಿ ಸೇವೆ ಪ್ರಾರಂಭ ಮಾಡುತ್ತಾರೆ.

ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬೆಳೆಯುವುದಕ್ಕೆ ಡಾ. ಎಸ್‌. ಆರ್‌. ರಂಗನಾಥನ್‌ ಪ್ರಮುಖ ಕಾರಣ. ಗ್ರಂಥಾಲಯ ಸೇವೆಯಲ್ಲಿರುವವರಿಗೆ ರಂಗನಾಥನ್‌ ಅವರ ಸಂದೇಶಗಳು ಮಾರ್ಗದರ್ಶಕವಾಗಿ ನೆಲೆ ನಿಂತಿವೆ. ಅವರು ನೀಡಿದ ಗ್ರಂಥಾಲಯ ಪಂಚ ಸೂತ್ರಗಳು ಜಗನ್ಮಾನ್ಯತೆ ಗಳಿಸಿವೆ. ಒಂದು ಮಾತಂತೂ ಸತ್ಯ. ದೇಶದಲ್ಲಿ ಡಾ.ಎಸ್‌.ಆರ್‌.ರಂಗನಾಥನ್‌ ಅವರಷ್ಟು ಗ್ರಂಥಾಲಯದಲ್ಲಿ ಕೃಷಿ ಮಾಡಿದವರು ಮತ್ತೊಬ್ಬರಿಲ್ಲ.

ಅಂದಿನ ಬರಹಗಾರರು ಕಲ್ಲು, ಗಿಡದ ತೊಗಟೆ ತಾಡವೋಲೆ ಮುಂತಾದ ಮಾಧ್ಯಮಗಳನ್ನು ಉಪಯೋಗಿಸುತ್ತಿದ್ದರು. ಹೀಗೆ ಕಾಲಾನುಕ್ರಮದಲ್ಲಿ ಗ್ರಂಥಗಳನ್ನು ಸಂಗ್ರಹಿಸುವ, ಕೂಡಿಸುವ, ಪ್ರತಿ ಮಾಡುವ ಕಾರ್ಯಗಳು ಅನೂಚಾನವಾಗಿ ಹಾಗೂ ಅವ್ಯಾಹತವಾಗಿ ನಡೆದು ಬಂದಿವೆ. ಆದರೆ ಗ್ರಂಥಾಲಯ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಓರಣಗೊಳಿಸಿದ ಕೀರ್ತಿ ಸಲ್ಲಬೇಕಾದದ್ದು ಅಗ್ರಗಣ್ಯರಾದ ಡಾ. ಎಸ್‌. ಆರ್‌. ರಂಗನಾಥನ್‌ ಅವರಿಗೆ. ಇವರ ಪೂರ್ಣ ಹೆಸರು ಶಿಯಾಳಿ ರಾಮಾಮೃತ ರಂಗನಾಥನ್‌. ಡಾ. ಎಸ್‌. ಆರ್‌. ರಂಗನಾಥನ್‌ ಒಂದು ಸಾಮಾನ್ಯ ಬಡ ಕುಟುಂಬಕ್ಕೆ ಸೇರಿದವರಾಗಿದ್ದರು. ಎನ್‌ ರಾಮಾಮೃತ ರಂಗನಾಥನ್‌, ಸೀತಾಲಕ್ಷ್ಮೀ ದಂಪತಿಗಳ ಪುತ್ರನಾಗಿ ಜನಿಸಿದ ಶ್ರೀಯುತರು ಅತಿ ಬಡತನದಲ್ಲೇ ಬೆಳೆದು ಉನ್ನತ ಸ್ಥಾನಕ್ಕೆ ಬಂದವರು. ಇವರು ಗಣಿತ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಗ್ರಂಥಪಾಲಕ ಹುದ್ದೆಗೆ ಕರೆ ಬಂದಾಗ ಪ್ರಾಧ್ಯಾಪಕ ಹುದ್ದೆಯನ್ನು ತೊರೆದು ಹೊಸ ಕೆಲಸವನ್ನು ಬಹಳ ಶ್ರದ್ಧೆಯಿಂದ ವಹಿಸಿಕೊಂಡರು.

ಗ್ರಂಥಾಲಯ ವಿಜ್ಞಾನವನ್ನು ಭಾರತದಾದ್ಯಂತ ಬೆಳೆಸುವಲ್ಲಿ, ಪ್ರಚಾರ ಮಾಡುವಲ್ಲಿ ಅವರೇ ಮೊದಲಿಗರು. ದೇಶದಲ್ಲಿ ಡಾ. ಎಸ್‌.ಆರ್‌.ರಂಗನಾಥನ್‌ರಷ್ಟು ಗ್ರಂಥಾಲಯದಲ್ಲಿ ಕೃಷಿ ಮಾಡಿದವರು ಮತ್ತೊಬ್ಬರಿಲ್ಲ. ಆದುದರಿಂದ ಅವರನ್ನು ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಕರೆಯಲಾಗಿದೆ. ಹಳ್ಳಿಯಿಂದ ಹಿಡಿದು ದೆಹಲಿಯವರೆಗೆ ಗ್ರಂಥಾಲಯದ ಮೂಲ ತತ್ವಗಳ ತೋರಣವನ್ನು ತೂಗಿಬಿಡುವಲ್ಲಿ ಅವರ ನಿಷ್ಠೆ ಮತ್ತು ಶ್ರಮ ಅಪಾರವಾದದು. ಸ್ನಾತಕೋತ್ತರ ಮಟ್ಟದ ಗ್ರಂಥಾಲಯ ವಿಜ್ಞಾನವನ್ನು ಕಲಿಸುವ ವ್ಯವಸ್ಥೆ ಮಾಡುವಲ್ಲಿ ಅವರ ಪಾತ್ರ ಬಹಳಷ್ಟಿದೆ. ಭಾರತದ ಗ್ರಂಥಪಾಲಕರ ಮತ್ತು ಗ್ರಂಥಾಲಯ ವಿಜ್ಞಾನದ ಪ್ರಾಧ್ಯಾಪಕರ ವೇತನ ಶ್ರೇಣಿಯನ್ನು ಎತ್ತರಿಸುವಲ್ಲಿ ಮತ್ತು ಇತರರಿಗೆ‌ ಸಿಗುವ ಸೌಲಭ್ಯಗಳನ್ನು ಈ ವೃತ್ತಿಗೂ ದೊರಕಿಸಿಕೊಡುವಲ್ಲಿ ಅವರದು ಪ್ರಮುಖ ಪಾತ್ರವಾಗಿದೆ. ಅವರ ಅವಿರತ ಸೇವೆಯಿಂದಾಗಿ ಕೇವಲ ಭಾರತದಲ್ಲಿ ಅಷ್ಟೇ ಅಲ್ಲ, ಪ್ರಪಂಚದಲ್ಲಿಯೇ ಅವರ ಹೆಸರು ಚಿರಸ್ಥಾಯಿಯಾಗಿದೆ.

ಡಾ. ಎಸ್‌. ಆರ್‌. ರಂಗನಾಥನ್‌ ಗ್ರಂಥಾಲಯ, ಗ್ರಂಥಾಲಯ ವಿಜ್ಞಾನವನ್ನು ಕುರಿತು 60ಕ್ಕೂಹೆಚ್ಚು ಮಹತ್ವದ ಗ್ರಂಥಗಳನ್ನು ಹಾಗೂ ಸುಮಾರು 2500 ಲೇಖನಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಗ್ರಂಥಾಲಯದ ಪಂಚ ಸೂತ್ರಗಳು, ರಾಮಾನುಜನ್‌-ದ ಮ್ಯಾನ್‌ ಆ್ಯಂಡ್‌ ಮೆತಮಟೀಷಿಯನ್‌, ಕ್ಲಾಸಿಫೈಡ್‌ ಕೆಟ್ಲಾಗ್‌,ಡಿಕ್ಷನರಿ ಕೆಟ್ಲಾಗ್‌, ಲೈಬ್ರರಿ ಅಡ್ಮಿನಿಸ್ಟ್ರೇಷನ್‌, ಇಂಡಿಯನ್‌ ಲೈಬ್ರರಿ ಮ್ಯಾನಿಫೆಸ್ಟೋ, ಲೈಬ್ರರಿ ಮ್ಯಾನುವಲ್‌ ಫಾರ್‌ ಲೈಬ್ರರಿ ಅಥಾರಿಟೀಸ್‌, ಲೈಬ್ರರಿ ಯನ್ಸ್‌ ಆ್ಯಂಡ್‌ ಲೈಬ್ರರಿ ವರ್ಕರ್ಸ್‌, ಕ್ಲಾಸಿಫಿಕೇಷನ್‌-ಕಮ್ಯುನಿಕೇಶನ್‌, ಕಂಪ್ಯಾರಿಟಿವ್‌ ಸ್ಟಡಿ ಆಫ್ ಫೈವ್‌ ಕ್ಯಾಟಲಾಗ್ಸ್‌ ಹೀಗೆ ಹತ್ತು ಹಲವಾರು ಗ್ರಂಥಗಳು ಅವರಿಗಿದ್ದ ಆಳವಾದ ವಿದ್ವತ್ ಮತ್ತು ಅನುಭವವನ್ನು ಎತ್ತಿ ತೋರಿಸುತ್ತವೆ.

ದೆಹಲಿ ವಿಶ್ವವಿದ್ಯಾಲಯ 1948ರಲ್ಲಿ ಪಿ.ಹೆಚ್.ಡಿ ಮತ್ತು ಪಿಟ್ಸ್‌ ಬರ್ಗ್‌ ವಿಶ್ವವಿದ್ಯಾಲಯದಲ್ಲಿ 1964ರಲ್ಲಿ ಡಿ.ಲಿಟ್‌ ಪದವಿಯನ್ನು ಹಾಗೂ 1935ರಲ್ಲಿ ಬ್ರಿಟಿಷ್‌ ಸರಕಾರ ರಾವ್‌ ಸಾಹೇಬ್‌ ಬಿರುದು, ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದೆ. 1970ರಲ್ಲಿ ಅಮೆರಿಕದ ಮಾರ್ಗರೇಟ್‌ ಮಾನ್ ‌ಪಾರಿತೋಷಕವನ್ನು ಪಡೆದ ಪ್ರಥಮ ಭಾರತೀಯರಿವರು. ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬೆಳೆಯುವುದಕ್ಕೆ ಡಾ. ಎಸ್‌. ಆರ್‌. ರಂಗನಾಥನ್‌ ಅವರೇ ಪ್ರಮುಖ ಕಾರಣ. ಕರ್ನಾಟಕದಲ್ಲಿ ಸಾರ್ವಜನಿಕ ಗ್ರಂಥಾಲಯ ಕಾನೂನು 1965ರಲ್ಲಿ ಸರಕಾರದಿಂದ ಸ್ವೀಕೃತವಾಗಿ 1966ರಲ್ಲಿ ಕಾರ್ಯ ರೂಪಕ್ಕೆ ತರುವಲ್ಲಿ ಅವರೇ ಮೂಲ ಪುರುಷರು. ಅವರ ಅದ್ವಿತೀಯ ಸೇವೆಯನ್ನು ಪರಿಗಣಿಸಿ ಸರ್ಕಾರವು 2007ರಿಂದ ಅವರ ಹುಟ್ಟು ಹಬ್ಬದ ದಿನವಾದ ಆಗಸ್ಟ್ 12ರಂದು ಗ್ರಂಥಪಾಲಕರ ದಿನಾಚರಣೆಯಾಗಿ ಆಚರಿಸಬೇಕೆಂದು ಆದೇಶ ಹೊರಡಿಸಿದೆ.

ಗ್ರಂಥಾಲಯ ಸೇವೆಯಲ್ಲಿರುವವರಿಗೆ ಡಾ. ಎಸ್‌. ಆರ್‌. ರಂಗನಾಥನ್‌ ಅವರ ಸಂದೇಶಗಳು ಮಾರ್ಗದರ್ಶಕವಾಗಿ ನೆಲೆನಿಂತಿವೆ. ಡಾ. ಎಸ್‌. ಆರ್‌. ರಂಗನಾಥ್‌ ಹಾಕಿಕೊಟ್ಟ ಹಾದಿಯಲ್ಲಿ ಪ್ರತಿಯೊಬ್ಬ ಗ್ರಂಥಪಾಲಕರೂ ನಡೆಯುತ್ತಾ ಬರುತ್ತಿರುವುದು ಶ್ಲಾಘನೀಯ.

ಲಂಡನ್‌ನಲ್ಲಿ ಇದ್ಧಾಗ ಸೇಯರ್ಸ್ ಸಹಾಯದಿಂದ ಶಿಷ್ಯತ್ವ ವಹಿಸಿ ವರ್ಗೀಕರಣ ಪದ್ದತಿಗಳನ್ನು ವಿಮರ್ಶಾತ್ಮಕ ದೃಷ್ಟಿಯಿಂದ ಆಳವಾಗಿ ಅಭ್ಯಾಸ ಮಾಡಿದರು. ಅಲ್ಲಿಯ ಹಲವಾರು ಪದ್ಧತಿಗಳು ನಮ್ಮ ದೇಶದಲ್ಲಿ ಅನ್ವಯವಾಗುವುದಿಲ್ಲ ಎಂದು ಅರಿತ ಮೇಲೆ ತಾವೇ ಯೋಚನೆ ಮಾಡುತ್ತಾ ಹಡಗಿನಲ್ಲಿ ಭಾರತಕ್ಕೆ ಬರುವಾಗಲೇ ದ್ವಿಬಿಂದು ವರ್ಗೀಕರಣ ಪದ್ದತಿಯ ರೂಪುರೇಷೆ ಹಾಕಿದರು. ನಂತರ ಮದ್ರಾಸ್ ವಿಶ್ವವಿದ್ಯಾನಿಲಯದ ಗ್ರಂಥಾಲಯದ ಗ್ರಂಥಗಳನ್ನು ವರ್ಗಿಕರಿಸಲಾರಂಭಿಸಿದರು. ಮದ್ರಾಸ ಗ್ರಂಥಾಲಯ ಸಂಘದಿಂದ ದ್ವಿಬಿಂದು ಪ್ರಥಮ ಮುದ್ರಣ ಕಂಡಿತು. ಮುಂದೆ ಅದು ಜಗದ್ವಿಖ್ಯಾತ ಪ್ರಸಿದ್ಧಿ ಪಡೆಯಿತು. ಈಗ ಏಳನೇ ಆವೃತ್ತಿ ಪರಿಷ್ಕೃತಗೊಂಡು ಡಾ.ಎಂ.ಎ.ಗೋಪಿನಾಥರವರು 1987ರಲ್ಲಿ ಸಂಪಾದಿಸಿಕೊಟ್ಟಿದ್ದಾರೆ.

ಇದರ ಕನ್ನಡ ಅನುವಾದವನ್ನು ಮೈಸೂರಿನ ಭಾರತೀಯ ಭಾಷಾ ಸಂಸ್ಥೆ ಯಿಂದ ಡಾ.ಬಿ.ಎ.ಶಾರದಾ ಅವರು 2010ರಲ್ಲಿ ಅನುವಾದ ಮಾಡಿದ್ದಾರೆ. ದ್ವಿಬಿಂದು ಪದ್ದತಿ ಪ್ರಕಟವಾದಾಗ ಜಗತ್ತಿನ ಅನೇಕ ಕಡೆಯಿಂದ ಬೇಡಿಕೆ ಬಂತು. ಕೆಲವೇ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಬೆಳೆದಿರುವುದು ನಮ್ಮ ದೇಶದ ಗ್ರಂಥಾಲಯ ವಿಜ್ಞಾನಿ ಅಂತ ಆಗ ನಮ್ಮವರಿಗೆಲ್ಲ ಗೊತ್ತಾಗುತ್ತದೆ. ಈ ಗ್ರಂಥ ಜಗತ್ತಿನ ಅನೇಕ ವಿಶ್ವವಿದ್ಯಾಲಯಗಳಲ್ಲಿ ಗ್ರಂಥಾಲಯ ವಿಜ್ಞಾನ ವಿಭಾಗದಲ್ಲಿ ಪಠ್ಯಪುಸ್ತಕವೆಂದು ಅಂಗೀಕರಿಸಲ್ಪಟ್ಟಿದೆ. ಆಗ ಭಾರತೀಯ ಗ್ರಂಥಾಲಯ ಸಂಘ 1933ರಲ್ಲಿ ಪ್ರಾರಂಭವಾಯಿತು. ಈ ಸಂಘವು ರಂಗನಾಥನ್ ಅವರ ನೇತೃತ್ವದಲ್ಲಿ ಸ್ಥಾಪನೆಯಾಯಿತು. ಈ ಸಂಘದಿಂದ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸ್ವತಂತ್ರ ಗ್ರಂಥಗಳನ್ನು ಪ್ರಕಟಿಸಿದರು. ಅಬ್ಗಿಲಾ ಎಂಬ ಪತ್ರಿಕೆ ನಡೆಸಿದರು. ಈ ಪತ್ರಿಕೆಯಲ್ಲಿ ಗ್ರಂಥಾಲಯ ವಿಜ್ಞಾನದ ಮೇಲೆ ಬರೆಯಲಾದ ಸಂಶೋಧನಾ ಲೇಖನಗಳು ಪ್ರಕಟವಾಗಿವೆ. ವಿಶೇಷವಾಗಿ ಈ ಪತ್ರಿಕೆಯಲ್ಲಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಲೇಖನಗಳು ಪ್ರಕಟವಾಗಿವೆ. ಈ ಪತ್ರಿಕೆ ನಿಂತರೂ ಛಲದಿಂದ ಮತ್ತೆ Annals of Library Science ಎಂಬ ಮತ್ತೊಂದು ಪತ್ರಿಕೆ ತೆಗೆದರು. ಇಂದಿಗೂ ದಿಲ್ಲಿಯಿಂದ ಪ್ರಕಟವಾಗುತ್ತಿದೆ.

ಗ್ರಂಥಾಲಯದ ಮಹತ್ವ, ಉಪಯೋಗ ತಿಳಿಸಬೇಕೆಂದರೆ ಗ್ರಂಥಪಾಲಕರಿಗೆ ತರಬೇತಿ ಮುಖ್ಯ ಎಂದು ತರಬೇತಿ ಕೇಂದ್ರ ಪ್ರಾರಂಭಿಸಿದರು. ಭಾರತದಲ್ಲಿ ಇಬ್ಬರು ವಿದೇಶಿ ಗ್ರಂಥಪಾಲಕರು ಬಂದರೂ ಸಹ ಕೆಲವೇ ತಿಂಗಳುಗಳಲ್ಲಿ ಪುನಃ ತಮ್ಮ ದೇಶಕ್ಕೆ ಮರಳುತ್ತಿದ್ದರು. ಆದರೆ ನಮ್ಮ ದೇಶದ ಪ್ರತಿಭೆ ಎಸ್.ಆರ್.ರಂಗನಾಥನ್ ಅವರು ಭಾರತಕ್ಕೆ ಮೂರನೇ ಗ್ರಂಥಪಾಲಕ ಆಗಿ ನೇಮಕವಾದರು. ದಕ್ಷಿಣ ಭಾರತದ ಶಿಕ್ಷಕರ ಸಂಘದ ವಾರ್ಷಿಕ ಸಮ್ಮೇಳನ ದಲ್ಲಿ ಗ್ರಂಥಾಲಯ ವಿಜ್ಞಾನದ ಬಗ್ಗೆ ಭಾಷಣ ಮಾಡಿದರು. ಸಾವಿರಕ್ಕೂ ಹೆಚ್ಚು ಶಿಕ್ಷಕರು ಹಾಜರಿದ್ದರು. ಮುಂದೆ ಇವರು ಶ್ರಮದ ಫಲವಾಗಿ ಡಿಪ್ಲೊಮಾ ಕೋರ್ಸ್ ಆರಂಭ ಆಯಿತು. 1945ರಲ್ಲಿ ನಿವೃತ್ತಿ ಆದರೂ ಅವರ ಕ್ರಿಯಾಶೀಲತೆ ಮೆಚ್ಚಿ ಬನಾರಸ್ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾದ ಡಾ ರಾಧಾಕೃಷ್ಣನ್ ಅವರು ತಮ್ಮ ವಿಶ್ವವಿದ್ಯಾಲಯದ ಗ್ರಂಥಾಲಯವನ್ನು ನವೀಕರಿಸಬೇಕು ಎಂದು ವಿನಂತಿಸಿಕೊಂಡರು. ಆಧುನಿಕ ಪದ್ದತಿ ಅಳವಡಿಸಿದ್ಧಕ್ಕೆ ಇಂದಿಗೂ ಅವರು ಹಾಕಿದ ಸಸಿಗಳೇ ಮರಗಳಾಗಿ ಬೆಳೆದಿವೆ ಎಂದರೆ ತಪ್ಪಾಗಲಾರದು. ಮುಂದೆ ಕಾಶಿಯಲ್ಲಿ ಒಂದು ಲಕ್ಷ ಗ್ರಂಥಗಳನ್ನು ವರ್ಗೀಕರಿಸಿದ್ದು ಮಹತ್ವದ ಸಾಧನೆ. ದೆಹಲಿಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ ಮಾರಿಸ್ ಗ್ವಾಯರ್ ರಿಂದ ತಮ್ಮ ವಿದ್ಯಾಪೀಠದ ಗ್ರಂಥಾಲಯವನ್ನು ನವೀಕರಿಸಬೇಕು ಎಂದು ಕೇಳಿಕೊಂಡರು. ಅಲ್ಲಿಯೂ ಸಹ ಗ್ರಂಥಾಲಯ ಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ ಎರಡು ವರ್ಷದ ಲೈಬ್ರರಿ ಸೈನ್ಸ್ ಪ್ರಾರಂಭ ಮಾಡಿದರು.

1961ರಿಂದ ಬೆಂಗಳೂರಿನ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಪ್ರಲೇಖನ ಸಂಶೋಧನ ಮತ್ತು ತರಬೇತಿ ಕೇಂದ್ರದಲ್ಲಿ ಗೌರವ ಪ್ರಾಧ್ಯಾಪಕರಾಗಿ ಕೆಲಸ ಮಾಡಹತ್ತಿದರು. ಅಲ್ಲದೇ ಇಂಗ್ಲೆಂಡ್, ಫ್ರಾನ್ಸ್, ಅಮೆರಿಕ, ಜಪಾನ್ ಇತ್ಯಾದಿ ದೇಶಗಳಲ್ಲಿ ಎಸ್.ಆರ್.ರಂಗನಾಥನ್ ಅವರು ಅತಿಥಿ ಗೌರವ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಇಡೀ ಜಗತ್ತಿಗೆ ಮಾದರಿ ಹಿರಿಯ ಮುತ್ಸದ್ದಿ ಭಾರತದ ಗ್ರಂಥಾಲಯ ಪಿತಾಮಹ ಎಂದು ಅನಿಸಿಕೊಂಡರು. ನಂತರ ಸಾರ್ವಜನಿಕ ಗ್ರಂಥಾಲಯಗಳು, ಮಕ್ಕಳ ಗ್ರಂಥಾಲಯ, ಸಂಚಾರಿ ಗ್ರಂಥಾಲಯ, ಪಂಚಾಯಿತಿ ಗ್ರಂಥಾಲಯಗಳು ಹೀಗೆ ಹಲವಾರು ಕ್ಷೇತ್ರಗಳಲ್ಲಿ ಗ್ರಂಥಾಲಯ ದ ಕೊಡುಗೆ ಅಪಾರವಾಗಿದೆ. ಅವರು ಮಾಡಿದ ಸಾಧನೆಯನ್ನು ಗುರುತಿಸಿ ಅವರಿಗೆ ಗೌರವ ಸಮರ್ಪಣೆ ಮಾಡೋಣ. ಅಂದರೆ ಈ ದಿನ ಸಾರ್ಥಕ್ಯ ಪಡೆಯಬೇಕಾದರೆ ಗ್ರಂಥಾಲಯ ಪ್ರೀತಿಸೋಣ, ಬೆಳೆಸೋಣ, ಜ್ಞಾನ ದೀವಿಗೆ ಹಚ್ಚೋಣ.

– ಡಾ.ಸತೀಶಕುಮಾರ ಎಸ್. ಹೊಸಮನಿ, ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT