ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಫಲವತ್ತಾಗಿದೆ ಕನ್ನಡ ಭಾಷಾ ಭೂಮಿ

ಮಕ್ಕಳಿಗೆ ಭಾಷೆ ಕಲಿಸುವ ಹೊಣೆ ತಮ್ಮದು ಎನ್ನುವುದಕ್ಕಿಂತ, ಪಾಠಗಳಲ್ಲಿನ ಅರ್ಥ ತಿಳಿಸಿದರೆ ಸಾಕು ಎಂಬುದೇ ಬಹುಪಾಲು ಭಾಷಾ ಬೋಧಕರ ಗ್ರಹಿಕೆಯಾಗಿರುವುದು ದುಃಖದ ಸಂಗತಿ
Published 10 ಅಕ್ಟೋಬರ್ 2023, 22:25 IST
Last Updated 10 ಅಕ್ಟೋಬರ್ 2023, 22:25 IST
ಅಕ್ಷರ ಗಾತ್ರ

‘ಕನ್ನಡ ಪಠ್ಯಪುಸ್ತಕದ ಮೂಲಕ ಕನ್ನಡ ಭಾಷೆ ಬಿಟ್ಟು ಬೇರೆಲ್ಲವನ್ನೂ ಕಲಿಸಲಾಗುತ್ತಿದೆ!’ ಎಂಬ
ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ ಅವರ ಲೇಖನ (ಸಂಗತ, ಅ. 6) ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದ ಕನ್ನಡ ಭಾಷಾ ಬೋಧನೆಗೆ ಸಂಬಂಧಿಸಿದಂತೆ ನೂರಕ್ಕೆ ನೂರರಷ್ಟು ಸತ್ಯ ಮತ್ತು ವಿಷಾದಕರವಾದ ಸಂಗತಿಯಾಗಿದೆ.

ನಾನು ವೃತ್ತಿನಿರತನಾಗಿದ್ದ ಪ್ರೌಢಶಾಲೆಯಲ್ಲಿ ನಾಲ್ಕು ಮಂದಿ ಕನ್ನಡ ಮೇಷ್ಟ್ರುಗಳಿದ್ದೆವು. ಪ್ರತಿವರ್ಷವೂ ಎಸ್ಎಸ್ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಶೇ 95ಕ್ಕಿಂತ ಹೆಚ್ಚಿನ ಫಲಿತಾಂಶವೇ ಬರುತ್ತಿತ್ತು. ನಮ್ಮಲ್ಲಿ ಕಾಲೇಜುಗಳಲ್ಲಿ ಇದ್ದ ಹಾಗೆ ಒಂದೊಂದು ವಿಷಯಕ್ಕೆ ಪ್ರತ್ಯೇಕವಾದ ಸಿಬ್ಬಂದಿ ಕೊಠಡಿ ಇರುತ್ತಿತ್ತು. ಒಂದು ದಿನ ನಾಲ್ಕೂ ಮಂದಿ ಡಬ್ಬಿ ತೆಗೆದು ಊಟ ಮಾಡುತ್ತಿದ್ದಾಗ ನಾನು, ‘ನಾವು ಪುಸ್ತಕ
ದಲ್ಲಿನ ಗದ್ಯ, ಪದ್ಯಗಳ ಅರ್ಥವನ್ನು ಬಿಡಿಸಿ ಹೇಳುತ್ತಿದ್ದೇವೆಯೇ ವಿನಾ ಭಾಷಾ ಬೋಧನೆ ಮಾಡುತ್ತಿಲ್ಲ’ ಅಂದೆ. ಆಗ ಉಳಿದವರೂ ಬೇಸರದಿಂದಲೇ ನನ್ನ ಮಾತನ್ನು ಸಮ್ಮತಿಸಿದರು.

ಮಕ್ಕಳಿಗೆ ಭಾಷೆಯನ್ನು ಕಲಿಸುವ ಹೊಣೆ ತಮ್ಮ ಮೇಲಿದೆ ಎನ್ನುವುದಕ್ಕಿಂತ ಪಾಠಗಳಲ್ಲಿರುವ ಅರ್ಥವನ್ನು ತಿಳಿಸಿದರೆ ಸಾಕು ಎಂಬುದೇ ಬಹುಪಾಲು ಭಾಷಾ ಬೋಧಕರ ಗ್ರಹಿಕೆಯಾಗಿರುವುದು ದುಃಖದ ಸಂಗತಿಯಾಗಿದೆ. ಇಲ್ಲಿ ಶಿಕ್ಷಕರನ್ನೇ ನಾವು ಪೂರ್ಣವಾಗಿ ದೂಷಿಸಲಾಗದು. ಅವರು ನಿಗದಿತ ಸಮಯದಲ್ಲಿ ಪಾಠಗಳನ್ನು ಮುಗಿಸಿ, ಪರೀಕ್ಷೆ - ಮೌಲ್ಯಮಾಪನ ಹಾಗೂ ವಿದ್ಯಾರ್ಥಿಗಳು ಮಾಡಿರುವ ಮನೆಗೆಲಸದ ಪರಿಶೀಲನೆ ಮಾಡಬೇಕಾಗಿರುತ್ತದೆ. ಹಾಜರಾತಿ, ಅಂಕಿಅಂಶ ದಾಖಲಾತಿಯಂತಹ ಕೆಲಸಗಳು, ಪೋಷಕರ ಸಂದರ್ಶನದಂತಹ ಬೋಧಕೇತರವಾದ ಕೆಲಸಗಳೂ ಬಹಳಷ್ಟಿರುತ್ತವೆ. ಮಕ್ಕಳ ಗಣತಿ, ಚುನಾವಣೆ ಕಾರ್ಯ, ಶಾಲೆಯನ್ನು ಬಿಡುವ ಮಕ್ಕಳ ಮಾಹಿತಿ ಸಂಗ್ರಹ, ಬಿಸಿಯೂಟ ನಿರ್ವಹಣೆಯ ಕಾರ್ಯಗಳೂ ಇರುತ್ತವೆ. ಹೀಗಾಗಿ, ಬೋಧನೆಯಷ್ಟೇ ಗುಮಾಸ್ತರ ಕೆಲಸವನ್ನೂ ನಿಭಾಯಿಸಬೇಕಾಗುತ್ತದೆ.

ಈ ನಡುವೆ ‘ಪೋರ್ಷನ್‌ ಕವರ್’ ಮಾಡುವುದೇ ಕಷ್ಟವಾಗಿಬಿಡುತ್ತದೆ. ಆದ್ದರಿಂದ ಯಾರೂ ಕೇಳದ ಭಾಷಾ ಕೌಶಲವನ್ನು ಕಲಿಸುವ ಯೋಚನೆಯನ್ನು ಶಿಕ್ಷಕರು ಸಹ ಮಾಡುವುದಿಲ್ಲ. ಒಟ್ಟಿನಲ್ಲಿ ಭಾಷಾ ಕಲಿಕೆಯ ವಿಷಯದಲ್ಲಿ ‘ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?’ ಎಂಬಂತಾಗಿದೆ ಪ್ರಸ್ತುತ ಪರಿಸ್ಥಿತಿ. ನಾವಿಂದು ಕನ್ನಡ ಪಾಠ ಮಾಡುತ್ತಿರುವುದಕ್ಕೂ ಕನ್ನಡ ಭಾಷೆಯನ್ನು ಕಲಿಸುವುದಕ್ಕೂ ತುಂಬಾ ವ್ಯತ್ಯಾಸವಿದೆ. ಓದುವ ಮತ್ತು ಬರೆಯುವ ಕಲೆಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯಿಂದಲೂ ಪದೇಪದೇ ಗದ್ಯ, ಪದ್ಯಗಳ ವಾಚನ ಮಾಡಿಸಬೇಕಾಗುತ್ತದೆ. ಬರವಣಿಗೆಗೆ ಸಂಬಂಧಿಸಿದ ಹಾಗೆ ಉಕ್ತಲೇಖನದ ಪದ್ಧತಿ ಬಹಳ ಪರಿಣಾಮಕಾರಿ. ಇಂತಹ ಸಂದರ್ಭದಲ್ಲಿ ಶಿಕ್ಷಕರು ಒಬ್ಬೊಬ್ಬ ವಿದ್ಯಾರ್ಥಿಯ ಪಕ್ಕದಲ್ಲಿ ಕುಳಿತು ಕಾಗುಣಿತ ದೋಷವನ್ನು ತಿಳಿಯಪಡಿಸಿ ಸರಿಯಾದ ರೂಪವನ್ನು ಬರೆದು ತೋರಿಸಬೇಕಾಗುತ್ತದೆ. ಉದಾಹರಣೆಗೆ: ವಿದ್ಯಾರ್ಥಿಗಳು ಸಾಮಾನ್ಯವಾಗಿ ‘ನಾನು’ ಎಂಬುದಕ್ಕೆ ‘ನನು’ ಎಂದು ಬರೆದಿರುತ್ತಾರೆ. ಅದಕ್ಕೆ ಕಾರಣ, ಮಕ್ಕಳು
ಇಡೀ ಪದವನ್ನು ಗ್ರಹಿಸದೆ ಒಂದೊಂದೇ ಅಕ್ಷರವನ್ನು ಬಾಯಲ್ಲಿ ಹೇಳಿಕೊಂಡು ಬರೆಯುತ್ತಾ ಹೋಗುತ್ತಾರೆ. ಮಕ್ಕಳಿಗೆ ಹ್ರಸ್ವ ಮತ್ತು ದೀರ್ಘ ಸ್ವರಗಳು, ಒತ್ತಕ್ಷರ, ಅಲ್ಪಪ್ರಾಣ, ಮಹಾಪ್ರಾಣಗಳ ಬಳಕೆಯನ್ನು ಶಿಕ್ಷಕರು ಉಚ್ಚರಿಸಿ ಮನದಟ್ಟು ಮಾಡಿಸಬೇಕಾಗುತ್ತದೆ.

ಕನ್ನಡ ಶಿಕ್ಷಕರಿಗೆ ಮಕ್ಕಳನ್ನು ಮುದಗೊಳಿಸಲು ಮತ್ತು ಆಕರ್ಷಿಸಲು ಆಕರವಾಗಿ ಅವರ ಮುಂದೆ ಅಪಾರವಾದ ಸಾಹಿತ್ಯ ರಾಶಿಯೇ ಇದೆ. ಕನ್ನಡ ಕಾವ್ಯ ಒಂದು ಅಕ್ಷಯ ಪಾತ್ರೆ, ತವನಿಧಿ. ಶಿಕ್ಷಕ ತನ್ನ ಸಾಮರ್ಥ್ಯ
ಇದ್ದಷ್ಟೂ ಕೃಷಿ ಮಾಡಲು ಕನ್ನಡ ಭಾಷಾ ಭೂಮಿ ಫಲವತ್ತಾಗಿದೆ. ಭಾಷಾ ಶಿಕ್ಷಕ ರಜೆಯ ಸಂದರ್ಭದಲ್ಲಿ ತನಗಾದ ಅನುಭವಗಳೆಲ್ಲವನ್ನೂ ತರಗತಿಯಲ್ಲಿ ಭಾಷಾ ಕಲಿಕೆಯ ಸಲುವಾಗಿ ಮಕ್ಕಳೊಂದಿಗೆ ಸಂಭಾಷಿಸುತ್ತ ಅವರಿಗೆ ಅರಿವಿಲ್ಲದಂತೆಯೇ ಅವರಲ್ಲಿ ಭಾಷಾ ಜ್ಞಾನವನ್ನು ಅರಳಿಸಬಹುದಾಗಿದೆ. ಆಗ ಅವರಲ್ಲಿ ಪುಸ್ತಕಗಳನ್ನು ಕೊಂಡು ಓದುವ ಸ್ವಭಾವ ರೂಢಿಯಾಗುತ್ತದೆ. ಈ ಕಾರಣದಿಂದ, ಭಾಷಾ ಚಟುವಟಿಕೆಗಳಿಗೆ ಪ್ರಾಧಾನ್ಯ ಕೊಡುವ ಪಠ್ಯಪುಸ್ತಕಗಳು ರಚನೆಯಾಗಬೇಕಾಗಿದೆ.

ವ್ಯಾಕರಣ, ಛಂದಸ್ಸು, ಅಲಂಕಾರಗಳನ್ನು ಯಥೋಚಿತವಾಗಿ ಭಾಷಾ ವೈಶಿಷ್ಟ್ಯಗಳನ್ನು ಅರಿಯಲು ಮಾತ್ರ ಪಠ್ಯಪುಸ್ತಕಗಳಲ್ಲಿ ನಿಗದಿಗೊಳಿಸಬೇಕಾಗುತ್ತದೆ. ಆಗ ಭಾಷಾ ಕಲಿಕೆ ಆನಂದದಾಯಕವಾದ ಯಾನವಾಗುತ್ತದೆ. ಹಾಗೆ ಆಗದೆ ಇರುವುದರಿಂದಲೇ ಇಂದು ಅನೇಕ ಪದವೀಧರರು ಕೂಡ ಕನ್ನಡದಲ್ಲಿ ಒಂದು ಸಣ್ಣ ಅರ್ಜಿಯನ್ನು ಸಹ ಬರೆದುಕೊಡಲು ಹಿಂಜರಿಯುತ್ತಾರೆ. ತಪ್ಪಾದರೂ ಸರಿಯೆ ಇಂಗ್ಲಿಷ್‌ನಲ್ಲಿ ಬರೆಯುತ್ತಾರೆ. ‘ನನಗೆ ಕನ್ನಡ ಅಷ್ಟು ಅಭ್ಯಾಸ ಇಲ್ಲ’ ಎಂದು ಒಂದು ರೀತಿಯ ಹೆಮ್ಮೆಯಿಂದ ಹೇಳುತ್ತಾ ತಮ್ಮ ದೌರ್ಬಲ್ಯವನ್ನು ಮುಚ್ಚಿಕೊಳ್ಳಲು
ಪ್ರಯತ್ನಿಸುತ್ತಾರೆ. ವಾಸ್ತವದಲ್ಲಿ, ಯಾವ ಭಾಷೆಯೂ ಚೆನ್ನಾಗಿ ಮೈಗೂಡಿಕೊಳ್ಳದೆ, ತಮಗೆ ಇಷ್ಟವಾದ ವಿಷಯ
ಗಳ ಬಗೆಗಿನ ಉತ್ತಮ ಪುಸ್ತಕಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಲಾಗದೆ, ಯಾರದೋ ಮಾತುಗಳನ್ನು, ವಿಡಿಯೊಗಳನ್ನು ಫಾರ್ವರ್ಡ್ ಮಾಡಿ
ಕೊಂಡು ಸ್ವಂತಿಕೆಯನ್ನು ರೂಪಿಸಿಕೊಳ್ಳಲಾಗದೆ
ನಷ್ಟಚೇತನರಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT