ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ನೀರಿಗೆ ಬಡಿದಿರುವ ಸಿರಿಯ ಗರ!

ಜಲಮೂಲಗಳ ನಾಶ, ನೀರಿನ ಅವೈಜ್ಞಾನಿಕ ಬಳಕೆ ನಗರಗಳಲ್ಲಿ ನೀರಿನ ಕೊರತೆಗೆ ಕಾರಣ
Published 15 ಮಾರ್ಚ್ 2024, 0:10 IST
Last Updated 15 ಮಾರ್ಚ್ 2024, 0:10 IST
ಅಕ್ಷರ ಗಾತ್ರ

ಬೇಸಿಗೆಯ ಧಗೆಗೆ ಬರದ ಕಾವೂ ಜೊತೆಯಾಗಿ ಬೆಂಗಳೂರು ಈಗ ಬೇಯುತ್ತಿದೆ. ಜೀವಜಲದ ಕೊರತೆ ನಿಭಾಯಿಸಲು ಜಲಮಂಡಳಿ ಸೆಣಸಾಡುತ್ತಿದೆ. ನೀರಿನ ವಿತರಣೆಯಲ್ಲಿ ಕ್ಷಮತೆ, ಟ್ಯಾಂಕರ್ ಉದ್ಯಮದ ನಿಯಂತ್ರಣ, ಮಿತಬಳಕೆಯಂತಹ ಕ್ರಮಗಳಿಗೆ ಅದು ಮುಂದಾಗಿದೆ. ಖಾಲಿ ಕೆರೆಯಂಗಳದಲ್ಲಿ ಕೊಳವೆಬಾವಿ ತೋಡಿ ನೀರನ್ನು ಮೇಲೆತ್ತಿ ಫಿಲ್ಟರ್ ಮಾಡುವುದು, ಕೊಳಚೆ ನೀರಿನ ಸಂಸ್ಕರಣೆ, ವಾತಾವರಣದ ತೇವಾಂಶವನ್ನು ಬಾಷ್ಪೀಕರಿಸಿ ನೀರು ಸಂಗ್ರಹಿಸುವಂತಹ ಹೊಸ ಪ್ರಯೋಗಗಳ ಬಗೆಗೂ ಸರ್ಕಾರ ಈಗ ಚಿಂತಿಸುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಹನಿ ನೀರಿಗಾಗಿ ಹಾಹಾಕಾರ ಎದ್ದಿರುವಾಗ, ಸಾಧ್ಯವಿರುವ ಜಲಮೂಲಗಳನ್ನೆಲ್ಲ ಹುಡುಕ
ಹೊರಟಿರುವ ಸರ್ಕಾರದ ಪರಿಶ್ರಮವನ್ನು ಗೌರವಿಸೋಣ. ಅಂತಿಮಕ್ಷಣದ ಈ ಶಸ್ತ್ರಾಭ್ಯಾಸದಿಂದಾದರೂ ನೀರಿನ ಅಭಾವದ ಈ ಯುದ್ಧವನ್ನು ಎದುರಿಸಲು ಜನ ಶಕ್ತರಾದರೆ ಸಾಕು! ಆದರೆ, ಈ ತಾತ್ಕಾಲಿಕ ಸಮಾಧಾನಕ್ಕೂ ಮೀರಿದ ದೀರ್ಘಕಾಲೀನ ಪರಿಹಾರಗಳತ್ತಲೂ ಚಿಂತಿಸಬೇಕಲ್ಲವೇ?

ಕೆರೆಗಳಿಂದ ಆವೃತವಾಗಿದ್ದ ಸಮೃದ್ಧ ಬೆಂಗಳೂರು ಇಂಥ ದಯನೀಯ ಸ್ಥಿತಿಗೆ ತಲುಪಿದ ಬಗೆಯನ್ನು ಅವಲೋಕಿಸಬೇಕಿದೆ. ಹಿಂದಿನ ನಾಲ್ಕು ದಶಕಗಳಲ್ಲಿ ಈ ನಗರವು ಸುಮಾರು ಹತ್ತು ಪಟ್ಟು ವಿಸ್ತಾರವಾಗಿ ಇದೀಗ ಎಂಟುನೂರು ಚದರ ಕಿ.ಮೀಗೂ ಮಿಕ್ಕಿ ಬೆಳೆಯುತ್ತಿದೆ. ಈ ಕಿರು ಅವಧಿಯಲ್ಲಿ ಜನಸಂಖ್ಯೆಯು ಸುಮಾರು ಆರು ಪಟ್ಟು ಹೆಚ್ಚಾಗಿ ಒಂದೂವರೆ ಕೋಟಿಗೆ ತಲುಪುತ್ತಿದೆ. ಆರ್ಥಿಕ ಉದಾರೀಕರಣದ ನಂತರವಂತೂ ಶಿಕ್ಷಣ, ಉದ್ಯಮ, ಮಾಹಿತಿ ತಂತ್ರಜ್ಞಾನದಲ್ಲಾದ ಕ್ರಾಂತಿಯಿಂದಾಗಿ ಆರ್ಥಿಕತೆ ತೀವ್ರವಾಗಿ ಹಿಗ್ಗಿ, ಜನರ ತಲಾದಾಯ ಆರೆಂಟು ಪಟ್ಟು ಹೆಚ್ಚಾಗಿ, ಅತಿವೇಗವಾಗಿ ಬೆಳೆಯುತ್ತಿರುವ ಒಂದು ಜಾಗತಿಕ ನಗರವಾಗಿ ರೂಪಾಂತರವಾಗಿದೆ. ನವ ಆರ್ಥಿಕತೆಯು ತಂದಿರುವ ಶ್ರೀಮಂತಿಕೆಯ ಮೆಗಾ ರೂಪಕವೆಂಬಂತೆ ಬೆಂಗಳೂರನ್ನು ಈಗ ವರ್ಣಿಸಲಾಗುತ್ತಿದೆಯಲ್ಲವೇ? 

ಸರಿ, ಹಿಂದಿನ ನಾಲ್ಕು ದಶಕಗಳಲ್ಲಿ ಬೆಂಗಳೂರಿನ ಅಂಗಳದಲ್ಲಾದ ಈ ಆರ್ಥಿಕ ಅಭಿವೃದ್ಧಿ ಸ್ಫೋಟದಲ್ಲಿ, ಈವರೆಗೂ ನಗರವನ್ನು ಪೊರೆಯುತ್ತಿದ್ದ ಹಿತ್ತಲಿನ ನಿಸರ್ಗವೇನಾಯಿತು? ಜಲಮೂಲವಾಗಿದ್ದ ಬಹುತೇಕ ಕೆರೆ, ತೊರೆಗಳು ಕಣ್ಮರೆಯಾದವು. ಅರ್ಕಾವತಿ, ವೃಷಭಾವತಿ, ಕುಮುದ್ವತಿ ನದಿಪಾತ್ರಗಳು ಒಣಗಿ ಕೊಳಚೆ ಮೋರಿಗಳಾದವು. ಆರೆಂಟು ದಶಕಗಳಿಂದ ನೀರು ನೀಡಿ ಸಲಹಿದ್ದ ತಿಪ್ಪಗೊಂಡನಹಳ್ಳಿ ಜಲಾಶಯವಂತೂ ಹೂಳು ತುಂಬಿ, ಜಲಾನಯನ ಪ್ರದೇಶ ಮಾಯವಾಗಿ ಅವಸಾನದಂಚಿಗೆ ತಲುಪಿದೆ. ಮುಕ್ಕಾಲುಭಾಗ ಹಸಿರು ಕವಚದಿಂದ ಕೂಡಿ ತಂಪಾಗಿದ್ದ ನಗರದಲ್ಲಿ ಈಗ ಶೇ 15ರಷ್ಟು ಪ್ರದೇಶದಲ್ಲೂ ಹಸಿರು ಉಳಿದಿಲ್ಲ. ಬೇಸಿಗೆಯಲ್ಲಿ ಅಬ್ಬಬ್ಬಾ ಎಂದರೆ 33-34 ಡಿಗ್ರಿ ಸೆಲ್ಸಿಯಸ್ ಇರುತ್ತಿದ್ದ ತಾಪಮಾನ, ನಲವತ್ತು ಡಿಗ್ರಿ ದಾಟುವುದು ಈಗ ಸಾಮಾನ್ಯವಾಗುತ್ತಿದೆ! ಏಕಮುಖ ಆರ್ಥಿಕ ಅಭಿವೃದ್ಧಿಯ ಗರಬಡಿದು ನಿಸರ್ಗದ ಹಸಿರು ರಕ್ಷಾಕವಚ ಕರಗಿ, ಕುಡಿಯುವ ನೀರಿಗೂ ಬರ ಬಂದ ಬೆಂದಕಾಳೂರಿನ ಕಥೆಯಿದು.

ನಾಡಿನ ಬಹುತೇಕ ನಗರ, ಪಟ್ಟಣಗಳ ಕಥೆಯೂ ಇದೇ! ಅವುಗಳ ಸವಾಲುಗಳ ತೀವ್ರತೆಯಲ್ಲಿ ವ್ಯತ್ಯಾಸ
ಇದ್ದರೂ, ಸಮಸ್ಯೆಗಳು ಬೆಳೆಯುತ್ತಿರುವ ಪರಿ ಮಾತ್ರ ಒಂದೇ. ನಗರಗಳು ಬೆಳೆದಂತೆಲ್ಲ ಸುತ್ತಲಿನ ಊರು-ಕೇರಿ, ಕೆರೆ-ಹೊಳೆ, ಗದ್ದೆ-ತೋಟಗಳನ್ನು ಕಬಳಿಸುತ್ತಿವೆ. ಕೆರೆ, ಹಳ್ಳ, ಗೋಮಾಳಗಳನ್ನು ಸಾಮೂಹಿಕವಾಗಿ ನಿರ್ವಹಿಸುತ್ತಿದ್ದ ಹಳ್ಳಿಗರು ಪಟ್ಟಣಿಗರಾಗುತ್ತಿದ್ದಂತೆ, ನೆಲ, ಜಲ ರಕ್ಷಣೆಯಲ್ಲಿ ತಮ್ಮ ಜವಾಬ್ದಾರಿ ಮರೆಯುತ್ತಿದ್ದಾರೆ. ಹೀಗಾಗಿ, ಕರಾವಳಿ, ಮಲೆನಾಡು, ಒಳನಾಡು ಎಲ್ಲೆಡೆಯೂ, ಪುಟ್ಟ ಪಟ್ಟಣ
ಗಳಲ್ಲೂ ಜಲಮೂಲಗಳೆಲ್ಲ ಕೊಳಚೆಯಾಗುತ್ತಿವೆ. ಕುಡಿಯುವ ನೀರಿನ ಬರ ಕಾಡುತ್ತಿದೆ. ಅಂತರ್ಜಲ ಮರುಪೂರಣ, ಹೊಳೆ, ಕೆರೆ, ಬಾವಿಗಳಲ್ಲಿ ಶುದ್ಧ ನೀರಿನ ಲಭ್ಯತೆ, ಕಲುಷಿತ ನೀರಿನ ಶುದ್ಧೀಕರಣದಂತಹವೆಲ್ಲವನ್ನೂ ನಿರಂತರವಾಗಿ ಉಚಿತವಾಗಿ ನಿರ್ವಹಿಸಿ ಜನಜೀವನವನ್ನು ಪೊರೆಯುತ್ತಿದ್ದ ನಿಸರ್ಗದತ್ತ ವ್ಯವಸ್ಥೆಯೇ ಧ್ವಂಸವಾಗುತ್ತಿದೆ. ಆ ಒಂದೊಂದು ಅಗತ್ಯವನ್ನೂ ಕೃತಕವಾಗಿ ಕೈಗೊಳ್ಳಲು ನೂರಾರು ಕೋಟಿ ಹಣ ವ್ಯಯಿಸಬೇಕಾದ ದೈನೇಸಿ ಹಂತಕ್ಕೆ ಈಗ ತಲುಪಿದ್ದೇವೆ. ಜನರ ಕೊಳ್ಳುವ ಶಕ್ತಿ ಹೆಚ್ಚಾಗುವುದಕ್ಕೂ ನೀರನ್ನು ಬಳಸಿ ತ್ಯಾಜ್ಯ ಹೊರಚೆಲ್ಲುವ ಪ್ರಮಾಣದ ಹೆಚ್ಚಳಕ್ಕೂ ನೇರ ಸಂಬಂಧವಿದೆ!

ಈ ವಿಷಮ ಪರಿಸ್ಥಿತಿಯಿಂದ ಪಾರಾಗಬೇಕೆಂದರೆ, ತೋರಿಕೆಯ ಸ್ಲೋಗನ್ ಹಾಗೂ ಹಣ ಹೂಡುವುದೇ ಮಾನದಂಡವಾಗಿರುವ ದಿಕ್ಕುದೆಸೆಯಿಲ್ಲದ ಈಗಿನ ಯೋಜನೆಗಳು ನಿಲ್ಲಬೇಕು. ನೆಲ, ಜಲ ರಕ್ಷಣೆಯ ಕಾನೂನುಗಳ ಕಟ್ಟುನಿಟ್ಟಿನ ಪಾಲನೆ, ಸೂಕ್ತ ತಂತ್ರಜ್ಞಾನ ಹಾಗೂ ಯಶೋಗಾಥೆಗಳ ಅಳವಡಿಕೆ, ಜನ
ಸಹಭಾಗಿತ್ವವಿರುವ ಕಾಲಬದ್ಧ ಯೋಜನೆಗಳು- ಇವು ಮೂರನ್ನೂ ಒಟ್ಟಾಗಿ ಸಾಧಿಸಲೇಬೇಕು. ನಗರ, ಪಟ್ಟಣಗಳ ನೀರು ಹಾಗೂ ತ್ಯಾಜ್ಯ ನಿರ್ವಹಣೆಯನ್ನು ಪಾರದರ್ಶಕತೆ ಮತ್ತು ಕ್ಷಮತೆಯಿಂದ ನಿರ್ವಹಿಸಬಲ್ಲ ಒಂದು ಸ್ವಾಯತ್ತ ವ್ಯವಸ್ಥೆ ರೂಪುಗೊಂಡರೆ ಮಾತ್ರ ಇದು ಸಾಧ್ಯ. ಈ ದಿಸೆಯಲ್ಲಿ ಈಗಾಗಲೇ ತಕ್ಕಮಟ್ಟಿಗೆ ಯಶಸ್ಸು ಸಾಧಿಸಿರುವ ಮಧ್ಯಪ್ರದೇಶದ ಇಂದೋರ್ ನಗರವು ನಮ್ಮ ನಗರ, ಪಟ್ಟಣಗಳಿಗೆ ಪ್ರೇರಣೆಯಾಗುವಂತಿದೆ.

ಈ ದಿಸೆಯ ಸವಾಲುಗಳಲ್ಲಿ, ಸ್ಥೂಲವಾಗಿ ಮೂರು ಆಯಾಮಗಳನ್ನು ಗುರುತಿಸಬಹುದು. ಮೊದಲಿನದು, ಜಲಮೂಲಗಳ ರಕ್ಷಣೆ. ನಗರಗಳಿಗೆ ನೀರು ಪೂರೈಸುವ ನದಿ, ಕೆರೆಗಳು ಹಾಗೂ ಮಳೆನೀರನ್ನು ಸಾಗಿಸುವ ರಾಜಕಾಲುವೆಗಳ ಜಲಾನಯನ ಪ್ರದೇಶದ ಗಡಿ ಗುರುತಿಸಿ, ಅವುಗಳ ಅಂಚಿನಲ್ಲಿ ಇರಬೇಕಾದ ಕನಿಷ್ಠ ‘ಬಫರ್ ವಲಯ’ವನ್ನು ಕಾದುಕೊಳ್ಳಬೇಕು. ಅಲ್ಲಿ ಸೂಕ್ತ ಗಿಡಮರಗಳ ಹಸಿರುಕವಚ ಬೆಳೆಸಿದರೆ ನೆರೆ ನಿಯಂತ್ರಣ, ಮಳೆನೀರು ಸಂಗ್ರಹ, ಸಿಹಿನೀರಿನ ಸಂಗ್ರಹ ಎಲ್ಲವೂ ಸಾಧ್ಯವಾಗಬಲ್ಲದು. ರಿಯಲ್ ಎಸ್ಟೇಟ್ ಉದ್ಯಮ, ಭೂ ಒತ್ತುವರಿ, ಸೂಕ್ತ ನೆಲಬಳಕೆ ನೀತಿಯೇ ಇರದೆ ಸಾಗಿರುವ ನಗರೀಕರಣದಂತಹವನ್ನೆಲ್ಲ ನಿಯಂತ್ರಿಸಿದರೆ ಮಾತ್ರ ಈ ಜಲಪಾತ್ರಗಳು ಉಳಿದಾವು. ಕೊಳವೆಬಾವಿ ಬಳಕೆಗಂತೂ ನಿಯಂತ್ರಣ ಬೇಕೇಬೇಕು. ನೆರೆ, ಬರ ಎಲ್ಲಕ್ಕೂ ‘ಹವಾಮಾನ ಬದಲಾವಣೆ’ಯತ್ತ ಬೊಟ್ಟು ಮಾಡುವ ಉಡಾಫೆ ಕೈಬಿಟ್ಟು, ಈ ಬಗೆಯ ಶಿಸ್ತುಬದ್ಧ ಜಲನಿರ್ವಹಣೆಗೆ ಮುಂದಾಗಬೇಕಿದೆ.

ಎರಡನೆಯದು, ಬಳಕೆದಾರರ ಹೊಣೆಗಾರಿಕೆ. ಮನೆ, ಉದ್ಯಮ, ವಸತಿ ಸಮುಚ್ಚಯ, ಸಾರ್ವಜನಿಕ ಹಾಗೂ ಕೈಗಾರಿಕಾ ಪ್ರದೇಶದಂತಹ ಎಲ್ಲೆಡೆ ಮಳೆನೀರು ಸಂಗ್ರಹ ಯೋಜನೆಯ ಅನುಷ್ಠಾನವಾಗಬೇಕು. ಇದಕ್ಕೆ ಬೇಕಾದ ಸೂಕ್ತ ತಂತ್ರಜ್ಞಾನ ಹಾಗೂ ಯಶೋಗಾಥೆಗಳು ನಮ್ಮ ನಾಡಿನಲ್ಲೇ ಲಭ್ಯವಿವೆ. ಈಗ ಬೇಕಾದದ್ದು ಅಳವಡಿಕೆಯ ಬದ್ಧತೆ ಮಾತ್ರ. ನಗರಾಡಳಿತಗಳು ಒದಗಿಸುವ ಕುಡಿಯುವ ನೀರನ್ನು ಮನೆ ಹಾಗೂ ಉದ್ಯಮಗಳಲ್ಲಿ ಮಿತವಾಗಿ ಬಳಸಬೇಕು. ಉಳಿದಂತೆ ಗೃಹಬಳಕೆ, ತೋಟಗಾರಿಕೆ, ಉದ್ಯಮ, ಕೈಗಾರಿಕೆ ತೆರನ ವಾಣಿಜ್ಯ ಬಳಕೆಗೆ ಸಂಸ್ಕರಿಸಿದ ನೀರನ್ನು ಮರುಬಳಸುವ ನೀತಿ ಜಾರಿಯಾಗಬೇಕಿದೆ. ಸಮಾಜವು ನೀರಿನ ಬಳಕೆಯ ತನ್ನ ನಡವಳಿಕೆಯಲ್ಲಿ ಈ ಬದಲಾವಣೆ ಮಾಡಿಕೊಳ್ಳಬೇಕಾದದ್ದು ಅತ್ಯಗತ್ಯ.

ಅಂತಿಮವಾಗಿ, ಕೊಳಚೆನೀರಿನ ಸಂಸ್ಕರಣೆ ಕುರಿತು ಹೇಳುವುದಾದರೆ, ಮನೆ ಹಾಗೂ ಕೈಗಾರಿಕೆಗಳ ತ್ಯಾಜ್ಯ ನೀರನ್ನು ಪ್ರತ್ಯೇಕವಾಗಿ ಸಾಗಿಸಿ ಸಂಸ್ಕರಿಸಬೇಕು. ಕೊಳಚೆಯ ಸ್ವರೂಪವನ್ನು ಆಧರಿಸಿ, ವಿವಿಧ ಬಗೆಯ ಸುಲಭ ಶುದ್ಧೀಕರಣ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಿದೆ. ಸರ್ಕಾರ ಹಾಗೂ ಖಾಸಗಿ ಕ್ಷೇತ್ರಗಳು ಜವಾಬ್ದಾರಿಯುತವಾಗಿ ವರ್ತಿಸಿದರೆ ಇದು ಸಾಧ್ಯ. ಸಂಸ್ಕರಿಸಿದ ನೀರಿನ ಸುರಕ್ಷತೆಯನ್ನು ಜನರು ತಕ್ಷಣ ಒಪ್ಪಲಿಕ್ಕಿಲ್ಲ. ನದಿ, ಕೆರೆಗಳ ಮೂಲದ ಸ್ವಚ್ಛ ನೀರನ್ನು ಗ್ರಾಹಕರಿಗೆ ಒದಗಿಸುವಾಗಲೂ ಈಗಿನ ನಗರಾಡಳಿತಗಳು ಹಲವೊಮ್ಮೆ ಸೋಲುತ್ತಿರುವಾಗ, ನಾಗರಿಕರು ತೋರಬಹುದಾದ ಅಂಥ ಸಂಶಯ ಸಹಜವೇ. ನ್ಯೂನತೆಗಳನ್ನೆಲ್ಲ ಮೀರಿದ ಕಾರ್ಯಕ್ಷಮತೆ ಹಾಗೂ ಪಾರದರ್ಶಕತೆಯಿರುವ ವಿಶ್ವಾಸಾರ್ಹ ‘ಜಲಮೂಲ ರಕ್ಷಣೆ ಹಾಗೂ ವಿತರಣೆ ವ್ಯವಸ್ಥೆ’ಯೊಂದಕ್ಕಾಗಿ ನಗರ ಪ್ರದೇಶಗಳೀಗ ಕಾಯುತ್ತಿವೆ.

ನೈಸರ್ಗಿಕ ಜಲಚಕ್ರದ ಪುನರುತ್ಥಾನವು ಆರ್ಥಿಕ ಅಭಿವೃದ್ಧಿಯ ಭಾಗವಾಗಲಿ, ಮಳೆ ಬಂದು ಕೆರೆ ತುಂಬಿದಾಗಲೂ ಈ ವಿವೇಕವಿರಲಿ. ಬೆಂಗಳೂರು ಸೇರಿದಂತೆ ನಾಡಿನ ನಗರಗಳ ಭವಿಷ್ಯಕ್ಕೆ ಸಿರಿಯ ಗರ ಬಡಿಯದಿರಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT