‘ಬೆಂಗ್ಳೂರಲ್ಲಿ ಮತ್ತೆ ಕೆಲವೆಡೆ ಸೀಲ್ಡೌನ್!’ ಎಂದ ಸ್ನೇಹಿತ ಸೀನಪ್ಪ.
‘ಎಲ್ಲಾ ನಿನ್ನಂಥ ಬೇಜವಾಬ್ದಾರಿ ಜನ್ರಿಂದ. ಸೀನಿಯರ್ ಸಿಟಿಜನ್ಸ್ಗೆ ಕೊರೊನಾ ಲಸಿಕೆ ಶುರು ಮಾಡಿ ಒಂದು ವಾರವಾದ್ರೂ ನೀನು ತಗೊಂಡಿದೀಯಾ? ಎಷ್ಟು ಕರೆದ್ರೂ ಬರ್ಲಿಲ್ಲ’.
‘ಅದಕ್ಕೆ ಕಾರಣ ಎರಡು’.
‘ಯಾವಪ್ಪಾ ಆ ಘನಂದಾರಿ ಕಾರಣಗಳು?’
‘ಒಂದು, ನಂಗೆ ಯಯಾತಿಯಂತೆ ದೀರ್ಘಾಯುಷಿಯಾಗೋ ಬಯಕೆಯಿಲ್ಲ. ಎಷ್ಟೋ ಜನ ಹಿರಿಯ ರಾಜಕಾರಣಿಗಳು ನಮ್ಗೆ ಲಸಿಕೆ ಬೇಡಾಂದಿಲ್ವೇ? ನಮ್ಮ ಖರ್ಗೆ ಸಾಹೇಬ್ರೇ ಹಾಗೆ ಹೇಳಿದಾರೆ!
‘ಹಾಗೇನಿಲ್ಲ, ಅದ್ರ ಪ್ರಾಮುಖ್ಯತೆ ಅರಿತ ಕರುನಾಡ ಕೃಷಿ ಸಚಿವರು, ಕಾನೂನು ಗೊತ್ತಿರ್ಲಿಲ್ಲಾಂತ, ಡಾಕ್ಟರನ್ನ ಮನೆಗೇ ಕರೆಸ್ಕೊಂಡು ತಗೊಳ್ಲಿಲ್ವೇ? ಉದಾಸೀನ ಮಾಡಿದ್ದಕ್ಕೆ ಎಷ್ಟೋ ಸೆಲೆಬ್ರಿಟಿಗಳು ಬೆಲೆ ತೆರಬೇಕಾಯಿತಲ್ಲ... ನಿನ್ನ ಎರಡನೇ ಕಾರಣ ಏನಯ್ಯಾ?’
‘ಏನಿಲ್ಲ ಬಿಡಪ್ಪಾ’.
‘ಹೇಳೋ, ಪರ್ವಾಯಿಲ್ಲ’.
‘ಫಸ್ಟ್ ಡೋಸ್ ತಗೊಂಡ್ಮೇಲೆ ಸೆಕೆಂಡ್ ಡೋಸ್ವರೆಗೆ ಒಂದ್ ತಿಂಗ್ಳು ಎಣ್ಣೆ ಮುಟ್ಟೋಹಾಗಿಲ್ವಂತೆ?!’
‘ಏ ಗುಲ್ಡೂ, ಅದೆಲ್ಲಾ ಸುಳ್ಳು. ಯಾರೋ ಹಾಗೆ ಹೇಳಿದ್ದು?’
‘ಬ್ರಾಂಡಿಶಾಪ್ ಬಾಬಣ್ಣ’.
‘ರೋಗಿ ಬಯಸಿದ್ದೂ ಅದೇ ಡಾಕ್ಟರ್ ಹೇಳಿದ್ದೂ ಅದೇ ಅನ್ನೋ ಹಾಗಿದೆ ನಿಂಗೆ. ಹೋಗೋಣ ಬಾ, ಕೇಳ್ತೀನಿ ಅವ್ನಿಗೆ ಯಾವ ಸೈಂಟಿಸ್ಟ್ ಹಾಗೆ ಹೇಳಿದಾರೇಂತ. ಅವ್ನು ಯಾಕೆ ಹಾಗೆ ಹೇಳಿದಾನೆ ಅನ್ನೋ ಅರಿವಿಲ್ದ ಅವಿವೇಕಿ ನೀನು’.