ಎಸಿಬಿ ಇನ್ನೂ ಎಲ್ಲೆಲ್ಲಿ ದಾಳಿ ನಡೆಸಿ, ಯಾವ್ಯಾವ ಅಧಿಕಾರಿಗಳ ಅಕ್ರಮ ಆಸ್ತಿ ಜಪ್ತಿ ಮಾಡಿತು ಎಂಬುದನ್ನೆಲ್ಲ ಓದಿದ ಬೆಕ್ಕಣ್ಣ, ‘ಈ ಗುಳುಂಕೋರ ಅಧಿಕಾರಿಗಳನ್ನ, ಅವರ ಅಕ್ರಮ ಆಸ್ತಿಯನ್ನ ಏನು ಮಾಡತಾರ?’ ಎಂದು ಅಮಾಯಕನಂತೆ ಕೇಳಿತು.
‘ಮಾಡೂದೇನಲೇ... ಬ್ಯಾರೆ ಕಡಿಗೆ ವರ್ಗ ಮಾಡತಾರ. ಅವರೂ ರೊಕ್ಕ ಗುಳುಂ ಮಾಡಾಕೆ ಹೊಸ ದಾರಿ ಕಂಡುಹಿಡಿತಾರ. ಅಲ್ಲಿಗೆ ಚಾಪ್ಟರ್ ಕ್ಲೋಸ್’.
‘ಸರಿ ಬಿಡು... ಈ ಸುದ್ದಿ ಮುಗಿದ ಅಧ್ಯಾಯ’ ಎನ್ನುತ್ತ ಪೇಪರು ಬಿಸಾಕಿ ಗೇಟಿನ ಬಳಿ ಓಡಿತು. ಪಕ್ಕದ ಮನೆಯ ಚಿಂಟೂ ಸಿಂಗ್ ತನ್ನ ಪಗಡಿ ಸರಿಮಾಡಿಕೊಳ್ಳುತ್ತ ಸ್ಕೂಲಿನ ವ್ಯಾನಿಗೆ ಕಾಯುತ್ತಿದ್ದನ್ನು ನೋಡಿತು.
‘ಏ... ತೆಲಿಮ್ಯಾಗೆ ಏನೂ ಹಾಕಬಾರದಂತ ಆರ್ಡರು ಆಗ್ಯದಂತೆ’ ಎಂದು ಉಪದೇಶ ಶುರುಮಾಡಿತು.
‘ಹೋಗಲೇ... ಅದ್ ಹೆಣ್ಮಕ್ಕಳು ಹಾಕೂ ಹಿಜಾಬಿಗೆ... ನಮಗಲ್ಲ...’ ಎಂದು ಚಿಂಟೂ ಜೋರಾಗಿ ಬೆದರಿಸಿದ್ದೇ ಬೆಕ್ಕಣ್ಣ ಬಾಲ ಮುದುರಿ ಕೊಂಡು ‘ಈ ಸುದ್ದಿನೂ ಮುಗಿದ ಅಧ್ಯಾಯ’ ಎಂದು ಗೊಣಗುತ್ತ ಒಳಗೋಡಿ ಬಂದಿತು.