ದಾಳಿಕೋರರ ನಡುವೆ ಭಾರತದ ಧ್ವಜವೂ ಕಾಣಿಸಿದ್ದರಿಂದ ನಮೋಗುರುಗಳು ಮೊದಲೇ ಗರಂ ಆಗಿದ್ದರು. ‘ಬಾಯಿಗೆ ಬಂದದ್ದ ವದರೂದು ಬಿಡಂತ ಅವತ್ತೇ ಹೇಳ್ದೆ. ನುಡಿದರೆ ಮುತ್ತಿನ ಹಾರದಂತೆ, ಮನದ ಮಾತಿನಂತಿರಬೇಕು. ಮೆತ್ತಗೆ ಮಾತಾಡಿ, ಆಪರೇಶನ್ ರಿಪಬ್ಲಿಕ್ ಮಾಡಪಾ. ಕರುನಾಡಿನೊಳಗ ಆಪರೇಶನ್ ಕಮಲ ಮಾಡಿದ ಪರಿಣತರು ಅದಾರ, ಬೇಕಿದ್ರ ಕಳಿಸ್ತೀನಿ ಅಂದಿದ್ದೆ, ನೀ ಕೇಳಲಿಲ್ಲ. ನಮ್ಮನ್ನು ನೋಡು ಪ್ರತಿಭಟಿಸೋರನ್ನ ಹೆಂಗ ಇಟ್ಟೀವಂತ. ಇವನೆ ನೋಡು ಅನ್ನದಾತ, ದೆಹಲಿ ಹೊರಗೆ ಕೂತಿಹನು, ಮಳೆಯ ಗುಡುಗು ಚಳಿಯ ನಡುಗು ಮಾರುಕಟ್ಟೆ ಬೇಗೆ ಸಹಿಸುತ... ಹಾವೂ ಸತ್ತರೂ ನಮ್ಮ ಕೋಲು ಮುರಿಯದಿರೆಂದು ಆಗೀಗ ಜಾಣಮೌನ ತಾಳುವೆವು... ನನ್ನಂತೆ ಶಬ್ದ ಗಾರುಡಿಗನಾಗಿದ್ದರೆ ಎಲ್ಲೆಡೆ ವಿಜಯ ನಿಶ್ಚಯವು’ ಗೆಳೆಯನ ಸಾಧನೆಯ ಭಾಷಣ ಕೇಳುತ್ತ, ಟ್ರಂಪಣ್ಣನಿಗೆ ಕೋಪ ನೆತ್ತಿಗೇರಿ, ಟಪಾರನೆ ಫೋನು ಕುಕ್ಕಿದ!