ಅರಳೀಕಟ್ಟೆಯ ಮೇಲೆ ಇಸ್ಪೀಟ್ ಗ್ಯಾಂಗ್ ಎಲೆ ಕಲೆಸುತ್ತಾ ಕುಳಿತಿತ್ತು. ‘ಲೇಯ್, ನಮ್ ಅಣ್ಣಪ್ಪನೋರು ಫೋನ್ ಮಾಡಿದ್ರು. ಅವರಿಗೆ ಒಂದಿಷ್ಟು ಯುಗಾದಿ ಶುಭಾಶಯ ಬೇಕಂತೆ, ಹೇಳ್ರಲೇ’ ಎಂದ ಪರ್ಮೇಶಿ.
‘ರಾಜಕೀಯದೋರಿಗೆ ಅಧಿಕಾರ, ದುಡ್ಡು ಸಿಕ್ಕಿದಾಗೆಲ್ಲಾ ಯುಗಾದಿನೇ. ‘ಬರಲಿ ಬರಲಿ ಯುಗಾದಿ, ಪ್ರತೀ ಐದು ವರ್ಷಕ್ಕೊಮ್ಮೆ ನಮಗೇ ಸಿಗಲಿ ಗಾದಿ’ ಅಂತ ಹೇಳ್ಕೊಂಡ್ರೆ ಆಯ್ತು’ ಎಂದ ಕಲ್ಲೇಶಿ.
‘ಅದು ಪಾರ್ಟಿ ವಿಶ್ ಆಯ್ತು. ಪರ್ಸನಲ್ ವಿಶ್ ಮಾಡ್ಬೇಕು ಅಂದ್ರೆ ‘ಇದ್ದೇ ಇರುತ್ತೆ ಪಕ್ಷದಲ್ಲಿ ಬೇಗುದಿ, ಅದ್ರಲ್ಲಿ ನಂಗೂ ಸಿಗ್ತಾ ಇರ್ಲಿ ಒಂದು ಮಂತ್ರಿ ಗಾದಿ’.
‘ಇನ್ನು ಪಂಚರಾಜ್ಯಗಳನ್ನೂ ಕಳ್ಕೊಂಡು ಪಂಚಾಂಗದ ಮುಂದೆ ಕವಡೆ ಹಾಕ್ತಾ ಕುಳಿತಿರೋ ಕೈ ಪಾರ್ಟಿಯೋರಿಗೆ ಹೇಳ್ಬೇಕಂದ್ರೆ ‘ಮುಂದಿನ ಬಾರಿ ಗಾದಿ ಸಿಕ್ಕುದ್ರೆ ಯುಗಾದಿ, ಇಲ್ಲ ಅಂದ್ರೆ ಉತ್ತರದ ಥರ ಪಕ್ಷಕ್ಕೆ ದಕ್ಷಿಣದಲ್ಲೂ ನಿಲ್ಲದು ಬೇಗುದಿ’ ಅಂತ ಕಾಲೆಳೀಬಹುದು’ ಎಂದ ಕೊಟ್ರ.
‘ಇನ್ನು ನಮ್ ದೊಡ್ ಗೌಡ್ರು ಒಂಥರಾ ಫೀನಿಕ್ಸ್ ಇದ್ದಂಗೆ... ಮೋದಿ ಇರ್ಲಿ, ಬೂದಿ ಇರ್ಲಿ, ಅವರು ಮತ್ತೆ ಮತ್ತೆ ಎದ್ ಬರ್ತಾನೇ ಇರ್ತಾರೆ. ‘ಯುಗಾದಿ ಮಾಡಿದ್ರೇನು? ನಾವು ಮಾಡೇ ಮಾಡ್ತೀವಿ ಸಖತ್ತಾಗಿ ವರ್ಷ ತೊಡಕು, ಕೊಡ್ತಾನೇ ಇರ್ತೀವಿ, ನಿಮಗೆ ಕಾಲ್ತೊಡಕು!’ ಅಂತ ಹೇಳ್ಬಹುದು’.