ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ಸೇನೆಗೆ ಯೌವನ ತುಂಬಲು ಅಗ್ನಿಪಥ

ಸೇನೆಯಲ್ಲಿ ನಾಲ್ಕು ವರ್ಷಗಳ ಅಲ್ಪಾವಧಿ ಕರ್ತವ್ಯದ ಅಗ್ನಿಪಥ ಯೋಜನೆ ಕಾರ್ಯಸಾಧುವೇ?
Last Updated 17 ಜೂನ್ 2022, 20:30 IST
ಅಕ್ಷರ ಗಾತ್ರ

ಯಾವುದಾದರೂ ಒಂದು ಪ್ರಯೋಗ ಬರುವುದಕ್ಕೂ ಮೊದಲೇ, ಅದರ ಬಗ್ಗೆ ಆರೋಪ ಹೊರಿಸುವುದು ಪೂರ್ವಗ್ರಹಪೀಡಿತ ಮನಸ್ಥಿತಿ. ಪ್ರಯೋಗಶೀಲತೆಯೇ ಇರಬಾರದು ಎಂಬುದೂ ಪೂರ್ವಗ್ರಹಪೀಡಿತ ಮನಸ್ಥಿತಿ. ಸೇನೆಗೆ ಸೇರುವುದು ಒಂದು ಉದ್ಯೋಗವಲ್ಲ, ಅದು ರಾಷ್ಟ್ರಭಕ್ತಿಯನ್ನು ಒಳಗೊಂಡ ಸೇವೆ. ಅದನ್ನು ಉದ್ಯೋಗ ಅನ್ನುವ ರೀತಿಯಲ್ಲಿ ನೋಡುವುದು ಅಪಾಯಕಾರಿ ಬೆಳವಣಿಗೆ. ಉದ್ಯೋಗ ಎಂದು ನೋಡಿದ ಕೂಡಲೇ, ಅದರ ಮೌಲ್ಯವೇ ಕಡಿಮೆಯಾಗಿಬಿಡುತ್ತದೆ. ನಮ್ಮಲ್ಲಿ ಸಾಮಾಜಿಕವಾಗಿ ಸೈನಿಕರಿಗೆ ಹೆಚ್ಚು ಗೌರವವಿದೆ

ಅಗ್ನಿಪಥವು ಸೇನೆಗೆ ಯುವಜನರನ್ನು ಭರ್ತಿ ಮಾಡಲು ಜಾರಿಗೆ ತಂದ ಯೋಜನೆ. ಹಲವು ದೇಶಗಳಲ್ಲಿ ಇಂತಹ ವ್ಯವಸ್ಥೆ ಈಗಾಗಲೇ ಇದ್ದು, ಯಶಸ್ವಿಯಾಗಿದೆ. ಸೇನೆಯ ಮೂರೂ ಪಡೆಗಳ ದಂಡನಾಯಕರು ಒಟ್ಟಾಗಿ ಕುಳಿತು ಇದರ ಸಾಧಕ ಬಾಧಕಗಳನ್ನು ಪರಿಶೀಲಿಸಿ ಈ ಯೋಜನೆಯನ್ನು ರೂಪಿಸಿದ್ದಾರೆ.

ಈ ಯೋಜನೆಯಿಂದ ಸೈನ್ಯ ದುರ್ಬಲವಾಗುತ್ತದೆ ಎಂಬ ಆರೋಪವಿದೆ. ಆದರೆ ಪರಿಸ್ಥಿತಿ ಹಾಗೆ ಇಲ್ಲ. ಅಮೆರಿಕ, ಸ್ವಿಡ್ಜರ್ಲೆಂಡ್‌, ಚೀನಾ, ರಷ್ಯಾ ಹೀಗೆ ಹಲವಾರು ದೇಶಗಳಲ್ಲಿ ಯುವಕರನ್ನು ಸೇನೆಗೆ ನೇಮಿಸುವ ವ್ಯವಸ್ಥೆ ಇದೆ. ಸೇನೆ ಯುವಕರಿಂದಲೇ ತುಂಬಿರಬೇಕು ಎಂಬುದು ಇದರ ಮುಖ್ಯ ಉದ್ದೇಶ.

ಅಗ್ನಿವೀರರ ಭವಿಷ್ಯ ಅಭದ್ರವಾಗಲಿದೆ ಎಂಬುದು ಯೋಜನೆಯ ಮೇಲಿನ ಬಹುದೊಡ್ಡ ಆರೋಪ. ಆದರೆ, ವಾಸ್ತವಿಕವಾಗಿ ಅಗ್ನಿವೀರರ ಭವಿಷ್ಯ ಅಭದ್ರವಾಗುವುದಿಲ್ಲ. ಈ ಯೋಜನೆ ಅಡಿ ತರಬೇತಿ ಪಡೆಯುವವರಲ್ಲಿ ಶೇ 25ರಷ್ಟು ಮಂದಿ ಕಾಯಂ ಆಗಿ ಸೇನೆಯಲ್ಲೇ ಉಳಿದುಕೊಳ್ಳಲಿದ್ದಾರೆ. ಉಳಿದವರು ಅಗ್ನಿವೀರರಾಗಿ ಸಮಾಜಕ್ಕೆ ವಾಪಸಾಗಲಿದ್ದಾರೆ.ನಾಲ್ಕು ವರ್ಷ ಸೇನೆಯಲ್ಲಿ ಕೆಲಸ ಮಾಡಿದಾಗ ಸಂಬಳ ನೀಡಲಾಗುತ್ತದೆ. ಜತೆಗೆ ಆ ಅವಧಿ ಮುಗಿದಾಗ₹11 ಲಕ್ಷದಷ್ಟು ಬೃಹತ್ ಮೊತ್ತದ ಪ್ಯಾಕೇಜ್‌ ನೀಡಲಾಗುತ್ತದೆ. ಅಲ್ಲದೇ, ಕೌಶಲಾಧರಿತ ಉದ್ಯೋಗ, ಸ್ವಯಂ ಉದ್ಯೋಗ ಅಥವಾ ಉದ್ದಿಮೆ ಸ್ಥಾಪಿಸಲು ಸಾಲಸೌಲಭ್ಯವನ್ನು ಕೊಡಿಸಿ ಅವರಿಗೆ ಬದುಕಿನ ದಾರಿಯನ್ನೂ ಕಲ್ಪಿಸುವುದು ಈ ಯೋಜನೆಯ ಸದಾಶಯಗಳಲ್ಲೊಂದು.

ಇದಲ್ಲದೆ ಅಗ್ನಿವೀರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೇಮಕಾತಿಗಳಲ್ಲಿ ಆದ್ಯತೆ ನೀಡಲಾಗುತ್ತದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಅವರಿಗೆ ಹೆಚ್ಚುವರಿ ಅಂಕಗಳು ದೊರೆಯುತ್ತವೆ.ನಾಲ್ಕು ವರ್ಷಗಳ ಅಗ್ನಿಪಥವನ್ನು ಪೂರ್ಣಗೊಳಿಸುವ ಅಗ್ನಿವೀರರಿಗೆ, ಪಿಯುಸಿಗೆ ಸಮಾನವಾದ ಶೈಕ್ಷಣಿಕ ಕೋರ್ಸ್‌ನ ಪ್ರಮಾಣಪತ್ರ ನೀಡಲಾಗುತ್ತದೆ. ನಾಲ್ಕು ವರ್ಷಗಳ ಅವಧಿಯಲ್ಲಿ ಅವರಿಗೆ ಕೌಶಲ ಅಭಿವೃದ್ಧಿ ತರಬೇತಿಯನ್ನೂ ನೀಡಲಾಗಿರುತ್ತದೆ.ನಾಲ್ಕು ವರ್ಷ ಸೈನ್ಯದಲ್ಲಿ ಕೆಲಸ ಮಾಡಿ, ಉತ್ತಮ ತರಬೇತಿ ಪಡೆದು ತಮ್ಮ ಕಾರ್ಯಕ್ಷಮತೆ ಮತ್ತು ದಕ್ಷತೆ ತೋರಿದರೆ ಸೇನೆಯಲ್ಲಿ ಕಾಯಂ ಉದ್ಯೋಗವೂ ಸಿಗಲಿದೆ. ಆಗ ತರಬೇತಿ ಅವಧಿಯನ್ನು ಪೂರೈಸುವ ಅವಶ್ಯವೂ ಇರುವುದಿಲ್ಲ. ಇದೊಂದು ಆದರ್ಶ ಯೋಜನೆ.

ತರಬೇತಿ ಪಡೆದು ಹೊರಗೆ ಬರುವ ಶೇ 75ರಷ್ಟು ಜನರು ಪೊಲೀಸ್‌ ಇಲಾಖೆಗೆ, ಬ್ಯಾಂಕ್‌ಗಳಿಗೆ, ರೈಲ್ವೆಗೆ ಹೋಗಬಹುದು. ಜತೆಗೆ ಬೇರೆ ಬೇರೆ ಇಲಾಖೆಗಳಿಗೆ ಹೋಗುವಂತಹ ಸ್ವಾಭಾವಿಕವಾದ ಅವಕಾಶಗಳ ಹೆಬ್ಬಾಗಿಲನ್ನೇ ಈ ಯೋಜನೆ ತೆರೆಯುತ್ತದೆ. ಅವರಿಗೆ ಸಾಮಾನ್ಯ ಶಿಕ್ಷಣದ ಜತೆಗೆ, ಸೈನಿಕ ತರಬೇತಿ ದೊರೆಯುತ್ತದೆ.ಸೇನೆಗೆ ಮರುಸೇರ್ಪಡೆಗೆ ಅವಕಾಶ ಸಿಗದೇ ಇರುವವರು ಅಗ್ನಿವೀರರಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಕೊಡುಗೆ ನೀಡಲು ಸೇನೆಯ ಶಿಸ್ತು– ಅಲ್ಲಿನ ಆದರ್ಶಮಯ ಜೀವನವೂ ನೆರವಿಗೆ ಬರಲಿದೆ. ದೇಶದ ಕೆಲಸಕ್ಕೆ ತುರ್ತು ಕರೆ ಬಂದಾಗ ಅಗ್ನಿವೀರರ ಸೇವೆಯೂ ರಾಷ್ಟ್ರಕ್ಕೆ ಲಭ್ಯವಾಗಲಿದೆ.

ಅಗ್ನಿಪಥ ಯೋಜನೆಯಿಂದ ಸಶಸ್ತ್ರಪಡೆಗಳ ಬಲ ಕುಂದುತ್ತದೆ ಎಂದು ಆರೋಪ ಮಾಡಲಾಗುತ್ತಿದೆ. ಈ ಮಾದರಿ ಈಗಾಗಲೇ ಹಲವು ದೇಶಗಳಲ್ಲಿ ಇದೆ. ಈ ರೀತಿಯ ವ್ಯವಸ್ಥೆಯಿಂದ ಯುವಕರು ಮತ್ತು ತೀಕ್ಷ್ಣವಾಗಿ ಇರುವವರು ಸೇನೆಗೆ ಸೇರ್ಪಡೆಯಾಗುತ್ತಾರೆ ಎಂಬ ಅಭಿಪ್ರಾಯ ಆ ದೇಶಗಳಲ್ಲಿ ಇದೆ. ಹೀಗಾಗಿ ಇದರಿಂದ ಸೇನೆಯ ಬಲ ಕುಂದುವುದಿಲ್ಲ. ಇದರ ಜತೆಯಲ್ಲಿ, ಈ ಯೋಜನೆ ಆರಂಭಿಸುವ ಮುನ್ನ ಶಸಸ್ತ್ರ ಪಡೆಗಳ ಮಾಜಿ ಮತ್ತು ಹಾಲಿ ಅಧಿಕಾರಿಗಳ ಜತೆಗೆ ಸಮಾಲೋಚನೆ ನಡೆಸಿಲ್ಲ ಎಂದೂ ಆರೋಪಿಸಲಾಗುತ್ತಿದೆ. ಎರಡು ವರ್ಷಗಳಿಂದ ಸಶಸ್ತ್ರಪಡೆಗಳ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಮಾಲೋಚನೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ.

ಯಾವುದಾದರೂ ಒಂದು ಪ್ರಯೋಗ ಬರುವುದಕ್ಕೂ ಮೊದಲೇ, ಅದರ ಬಗ್ಗೆ ಆರೋಪ ಹೊರಿಸುವುದು ಪೂರ್ವಗ್ರಹಪೀಡಿತ ಮನಸ್ಥಿತಿ. ಪ್ರಯೋಗಶೀಲತೆಯೇ ಇರಬಾರದು ಎಂಬುದೂ ಪೂರ್ವಗ್ರಹಪೀಡಿತ ಮನಸ್ಥಿತಿ. ಸೇನೆಗೆ ಸೇರುವುದು ಒಂದು ಉದ್ಯೋಗವಲ್ಲ, ಅದು ರಾಷ್ಟ್ರಭಕ್ತಿಯನ್ನು ಒಳಗೊಂಡ ಸೇವೆ. ಅದನ್ನು ಉದ್ಯೋಗ ಅನ್ನುವ ರೀತಿಯಲ್ಲಿ ನೋಡುವುದು ಅಪಾಯಕಾರಿ ಬೆಳವಣಿಗೆ. ಉದ್ಯೋಗ ಎಂದು ನೋಡಿದ ಕೂಡಲೇ, ಅದರ ಮೌಲ್ಯವೇ ಕಡಿಮೆಯಾಗಿಬಿಡುತ್ತದೆ. ನಮ್ಮಲ್ಲಿ ಸಾಮಾಜಿಕವಾಗಿ ಸೈನಿಕರಿಗೆ ಹೆಚ್ಚು ಗೌರವವಿದೆ. ಅವರು ದೇಶಸೇವೆ ಮಾಡುತ್ತಾರೆ ಎಂಬ ಕಾರಣದಿಂದಲೇ ಅವರಿಗೆ ಸಾಮಾಜಿಕ ಗೌರವ ಹೆಚ್ಚು ಇರುತ್ತದೆಯೇ ಹೊರತು, ಉದ್ಯೋಗ ಮಾಡುತ್ತಾರೆ ಎಂಬುದಕ್ಕಲ್ಲ.ದೇಶಭಕ್ತಿ ಹಾಗೂ ತ್ಯಾಗಮನೋಭಾವವನ್ನು ತಮ್ಮ ಹೃದಯಾಂತರಾಳದಲ್ಲಿ ನೆಟ್ಟುಕೊಂಡು, ದೇಶಕ್ಕೆ ದುಡಿಯುವ ಮನೋಸಂಕಲ್ಪ ಮಾಡಿಕೊಂಡವರು ಅವರು.

ಇದನ್ನು ಋಣಾತ್ಮಕವಾಗಿ ಬಿಂಬಿಸುತ್ತಿರುವುದು ತಿಳಿವಳಿಕೆಯ ಕೊರತೆಯಿಂದ, ಇಲ್ಲವೇ ದುರುದ್ದೇಶದಿಂದ ಎಂಬುದು ನನ್ನ ಅಭಿಪ್ರಾಯ. ಅಗ್ನಿಪಥ ಏನು ಎಂಬುದು ಅರ್ಥವಾಗುವುದರ ಮೊದಲೇ ಬೆಂಕಿ ಹಾಕಲಾಗುತ್ತಿದೆ. ದೇಶದ ರಕ್ಷಣೆಗೆ ತಯಾರಾಗುತ್ತಿರುವವರು, ದೇಶಕ್ಕೆ ಬೆಂಕಿ ಹಾಕುವ ಕೆಲಸ ಮಾಡುತ್ತಾರೆಯೇ? ಬೆಂಕಿ ಹಾಕದಂತೆ ನೋಡಿಕೊಳ್ಳಲು ಸೈನ್ಯಕ್ಕೆ ಸೇರಬೇಕಿದೆ. ಆದರೆ ಇವರೇ ಶತ್ರುಗಳ ರೀತಿ ವರ್ತಿಸಬೇಕಿಲ್ಲ.

ಈ ಯೋಜನೆಯಿಂದ ಸೇನೆಯಲ್ಲಿ ಹೊಸತನ ಇರುತ್ತದೆ. ಕೆಲವೇ ವರ್ಷಗಳಲ್ಲಿ ಅರ್ಧದಷ್ಟು ಸೇನೆ ನವಯುವಕರಿಂದ ತುಂಬಿರುತ್ತದೆ. ಸೇನೆಯಲ್ಲಿ ಉತ್ಸಾಹ ಪುಟಿದೇಳುತ್ತಿರುತ್ತದೆ. ತರಬೇತಿ ನೀಡದೆಯೇ ಯುವಕರನ್ನು ಯುದ್ಧಕ್ಕೆ ಬಿಡುತ್ತಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ ಅದು ನಿಜವಲ್ಲ. ಮೊದಲ ಬ್ಯಾಚ್‌ನಲ್ಲಿ, ಒಟ್ಟು ಸೇನೆಯಲ್ಲಿ ಅಗ್ನಿವೀರರ ಪ್ರಮಾಣ ಶೇ 3ರಷ್ಟು ಮಾತ್ರ. ಉಳಿದ ಶೇ 97ರಷ್ಟು ಜನರು ಅನುಭವಿಗಳೇ ಇರುತ್ತಾರೆ. ಸ್ವಿಡ್ಜರ್ಲೆಂಡ್‌ನಂತಹ ದೇಶದಲ್ಲಿ ನಾಗರಿಕರೇ ಸೈನಿಕರಾಗಿರುತ್ತಾರೆ. ತುರ್ತುಸ್ಥಿತಿಬಂದಾಗ ಅವರೆಲ್ಲಾ ಸೇನೆಗೆ ಬರುತ್ತಾರೆ.ಬೇರೆ ದೇಶಗಳಲ್ಲಿ ಎಲ್ಲಾ ಯುವಕರಿಗೆ ತರಬೇತಿ ನೀಡುತ್ತಾರೆ. ನಮ್ಮದು ದೊಡ್ಡ ದೇಶ, 138–140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಎಲ್ಲರಿಗೂ ತರಬೇತಿ ಕೊಡಲು ಸಾಧ್ಯವಿಲ್ಲ. ಆದರೆ, ಅಗ್ನಿಪಥದಿಂದ ತರಬೇತಿ ಪಡೆಯುವವರ ಪ್ರಮಾಣ ಹೆಚ್ಚಾಗುತ್ತದೆ.

ಈ ಯೋಜನೆಯು ವಿರೋಧಿಗಳು ಹಳಿಯುತ್ತಿರುವಂತೆ ರಾಜಕೀಯ ನೀತಿಯಲ್ಲ. ಇದು ಸೇನಾ ನೀತಿಯ ಭಾಗ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಅಂಗೀಕಾರದ ಮುದ್ರೆಯೊತ್ತಿದೆಯಷ್ಟೆ.

ಇಷ್ಟೆಲ್ಲ ಉತ್ತಮ ಆಶಯಗಳನ್ನು ಹೊಂದಿದ ಯೋಜನೆ ವಿರೋಧಿಸುವವರದ್ದು ಒಳಿತನ್ನು ಸದಾ ಟೀಕಿಸುವ ಮನೋಭಾವ. ಅವರಿಗೆ ದೇಶದ ಹಿತವಾಗಲಿ, ಜನರ ಹಿತವಾಗಲಿ ಮುಖ್ಯವಾಗಿಲ್ಲ; ತಮ್ಮ ರಾಜಕೀಯ ಹಿತಾಸಕ್ತಿಗೆ ತಕ್ಕನಾಗಿ ಮಾತನಾಡಿ, ಜನರನ್ನು ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಲೇ ಇರುತ್ತಾರೆ. ಈ ಬಾರಿಯೂ ಇದು ನಡೆದಿದೆ. ಇಲ್ಲದಿದ್ದರೆ ದೇಶದ ಆಸ್ತಿ ರಕ್ಷಣೆಗೆ ಸಮರ್ಪಣಾ ಮನೋಭಾವದಿಂದ ಸೈನಿಕರಾಗಲು ಬಯಸುವವರು ಹಲವು ರಾಜ್ಯಗಳಲ್ಲಿ ಪ್ರತಿಭಟನೆಗೆ ಇಳಿದು ಆಸ್ತಿಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದರೇ?

ಲೇಖಕ: ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT