ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಚರ್ಚೆ: ಒಂದು ಧರ್ಮದ ಕಡೆಗಣನೆ, ಮತ್ತೊಂದರ ಶ್ರೇಷ್ಠತೆಯ ಪ್ರತಿಪಾದನೆ

ಸಿನಿಮಾಗಳನ್ನು ಬಹಿಷ್ಕರಿಸಿ ಎಂಬ ಅಭಿಯಾನಗಳು ಸರಿಯಾದ ನಡೆಯೇ?
Last Updated 26 ಆಗಸ್ಟ್ 2022, 19:45 IST
ಅಕ್ಷರ ಗಾತ್ರ

ಅಮೀರ್ ಖಾನ್ ಸಿನಿಮಾದಲ್ಲಿ ಏನು ಹೇಳುತ್ತಾರೆ, ಮಾಧ್ಯಮಗಳಲ್ಲಿ ಅವರು ಕೊಡುವ ಹೇಳಿಕೆಗಳೇನು ಎನ್ನುವುದು ಇಂಥಾ ಅಭಿಯಾನಗಳಿಗೆ ಮುಖ್ಯವಲ್ಲ. ಇದು ಅಮೀರ್, ಭಾರತದಲ್ಲಿ ಬದುಕುತ್ತಿರುವ ಒಬ್ಬ ಮುಸ್ಲಿಂ ಎನ್ನುವ ಮನಸ್ಥಿತಿಯ ನವೀಕರಣಗೊಂಡ ಮುಸ್ಲಿಂ ದ್ವೇಷ ಮತ್ತು ಆ ಧರ್ಮದವರ ಕಡೆಗಣನೆ ಅಲ್ಲದೇ ಬೇರೇನಲ್ಲ

ಸಿದ್ದರಾಮಯ್ಯನವರು ‘ನೀನ್ಯಾವನಯ್ಯಾ ಕೇಳಕ್ಕೆ?’ ಎಂದು ಸಾರ್ವಜನಿಕವಾಗಿ ಕೇಳಬಹುದು. ಆದರೆ ಹುಟ್ಟಿನ ಕಾರಣದಿಂದಾಗಿ ಮುಸ್ಲಿಂ ಆದವನೊಬ್ಬ ಹಾಗೆ ಕೇಳಿದ್ದರೆ ಹಿಂದುತ್ವವಾದಿಗಳ, ಹುಸಿ ರಾಷ್ಟ್ರೀಯತಾವಾದಿಗಳ ಪ್ರತಿಕ್ರಿಯೆ ಹೇಗಿದ್ದಿರಬಹುದು, ಊಹಿಸಿ. ತನ್ನ ನಿಯಂತ್ರಣದಲ್ಲಿಲ್ಲದ ಹುಟ್ಟಿನ ಕಾರಣದಿಂದಾಗಿ ಮುಸ್ಲಿಂ ಆದವನೊಬ್ಬ ತಾನು ಅಪ್ಪಟ ಭಾರತೀಯ, ಭಾರತ ದೇಶದ ಬಗ್ಗೆ ತನಗೆ ಪ್ರೀತಿಯಿದೆ ಎಂದು ಎಷ್ಟು ರೀತಿಯಲ್ಲಿ ಸಾಬೀತುಪಡಿಸಿದರೂ ಆತನನ್ನು ಅನುಮಾನದಿಂದಲೇ ನೋಡುವ ಪರಿಸ್ಥಿತಿ ಇಂದು ದೇಶದಲ್ಲಿದೆ.ಇದು ಈ ವಿಷಮ ಕಾಲದಲ್ಲಿ ಎಂತಹ ಅನಾಹುತಕಾರಿ ಮನಸ್ಥಿತಿಯನ್ನು ಸಮಾಜದಲ್ಲಿ ತಂದಿದೆಯೆಂದರೆ ಹುಟ್ಟಿನಿಂದಷ್ಟೇ ಉಚ್ಚ ಜಾತಿಯವನೊಬ್ಬ ಪ್ರಗತಿಪರತೆಯ ತಪ್ಪುನಡೆಗಳನ್ನು ಒಮ್ಮೆ ನಿಕಶಕ್ಕೊಡ್ಡಿದರೆ, ಆತ ತಾನೆಷ್ಟು ರೀತಿಯಲ್ಲಿ ಸಂವಿಧಾನಬದ್ಧ ಭಾರತೀಯನೆಂದು ಸಾಬೀತು ಪಡಿಸಿದರೂ ಆತನನ್ನೂ ಅನುಮಾನದಿಂದಲೇ ನೋಡುವ ಅತಿರೇಕದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಪರ್ಯಾಸವೆಂದರೆ, ಹುಸಿ ರಾಷ್ಟ್ರೀಯತಾವಾದಿಗಳ ಮತ್ತು ಸಂವಿಧಾನಬದ್ಧ ಭಾರತೀಯರ ಅನುಮಾನಗಳು, ಪ್ರತಿಕ್ರಿಯೆಗಳು ಮತ್ತು ಪ್ರತಿರೋಧಗಳು ತದ್ವಿರುದ್ಧ ನೆಲೆಗಳಲ್ಲಿ ಇದ್ದರೂ ಅವೆರಡೂ ಕೊನೆಯಲ್ಲಿ ಒಂದೇ ರೀತಿಯ ಮಾನವ ವಿರೋಧೀ ಪರಿಣಾಮಗಳನ್ನು ಉಂಟುಮಾಡುತ್ತಿರುತ್ತವೆ. ಈ ಪ್ರಕ್ರಿಯೆಯಲ್ಲಿ ದೇಶವೊಂದು ಬೌದ್ಧಿಕ ಮತ್ತು ಸಾಮುದಾಯಿಕ ಅವನತಿಯತ್ತಲೇ ಚಲಿಸುತ್ತಿರುತ್ತದೆ. ಅಲ್ಲದೇ ಆ ದೇಶಕ್ಕೆ ಇದು ಎಲ್ಲ ರೀತಿಯಿಂದಲೂ ಕೇಡು ಉಂಟುಮಾಡುವಂಥದ್ದು.

ಭಾರತೀಯತೆ ಎಂದರೇನು ಹಾಗಾದರೆ? ಸಹಬಾಳ್ವೆಯ ಸಮಸಮಾಜವನ್ನು ನಿರ್ಮಿಸುವ ದಿಕ್ಕಿನಲ್ಲಿ ಸತ್ಯ ಮತ್ತು ವೈಜ್ಞಾನಿಕ ತಳಹದಿಯಲ್ಲಿ ನಮ್ಮ ಕಾಲದ, ನಮ್ಮ ಸಮಾಜದ ಎಲ್ಲ ಆಯಾಮಗಳನ್ನೂ ಪ್ರಶ್ನಿಸುವುದು ಮತ್ತು ಆ ಮೂಲಕ ನಮ್ಮನ್ನು ನಾವು ತಿದ್ದಿಕೊಳ್ಳುವುದೇ ನಿಜವಾದ ಭಾರತೀಯತೆ ಎನ್ನುವುದು ನನ್ನ ನಂಬಿಕೆ. ಜಾತಿವ್ಯವಸ್ಥೆ, ಆರ್ಥಿಕ ಮತ್ತು ಸಾಮಾಜಿಕ ಅಸಮತೋಲನ, ಲಿಂಗ, ಪರಿಸರ ಮತ್ತು ಸಂಪನ್ಮೂಲ ಅಸಮಾನತೆ, ಬಹು ಧರ್ಮ, ಬಹುಸಂಸ್ಕೃತಿ ಮತ್ತು ಒಟ್ಟಾರೆ ಬಹುತ್ವದಲ್ಲಿರುವ ಗೊಂದಲಗಳು ಮತ್ತು ಬಹುತ್ವಕ್ಕಿರುವ ಅಪಾಯಗಳು, ನಮ್ಮ ಪ್ರಜಾಪ್ರಭುತ್ವ ಅಳವಡಿಸಿಕೊಂಡಿರುವ ತ್ರಿವ್ಯವಸ್ಥೆ, ಅಷ್ಟೇಕೆ ನಮ್ಮ ಸಂವಿಧಾನದ ಓರೆಕೋರೆಗಳೂ ನಾಗರಿಕನ ಪ್ರಶ್ನಿಸುವ ಹಕ್ಕಿಗೆ ಹೊರತಲ್ಲ. ಅದನ್ನೇ ನಮ್ಮ ಸಂವಿಧಾನ ನಮಗೆ ನೀಡಿರುವುದು. ಮಾತ್ರವಲ್ಲ, ಈ ಹಕ್ಕು ಯಾವ ರೀತಿಯಿಂದ ಮೊಟಕಾದರೂ ಅದು ದೇಶದ ಪ್ರೌಢಿಮೆಗೆ ತಟ್ಟುವ ಕೇಡು. ಈ ಕೇಡಿಗೆ ಅವಕಾಶವಿದ್ದಲ್ಲಿ ಆರೋಗ್ಯವಂತ ಭಾರತ ಮತ್ತು ಆರೋಗ್ಯವಂತ ಭಾರತೀಯ ಎರಡೂ ಸಾಧ್ಯವಿಲ್ಲ.

ಪ್ರಭುತ್ವಗಳು ಕೆಲವೊಮ್ಮೆ ಸಾಹಿತ್ಯ, ಕಲೆ, ನಾಟಕ ಮತ್ತು ಸಿನಿಮಾ ಕೃತಿಗಳನ್ನು ನಿಷೇಧಿಸಿವೆ. ತುರ್ತು ಪರಿಸ್ಥಿತಿಯ ಕಾಲದಲ್ಲಿ ಪ್ರಭುತ್ವದ ಶಕ್ತಿಗಳು ‘ಕಿಸ್ಸಾ ಕುರ್ಸೀ ಕಾ’ ಚಿತ್ರದ ನೆಗೆಟಿವ್‌ಗಳನ್ನೇ ಸುಟ್ಟುಹಾಕಿದವು. ರಾಜೀವ್ ಗಾಂಧಿ ಸರ್ಕಾರವು ಸಲ್ಮಾನ್ ರಶ್ದಿಯವರ ‘ಸಟಾನಿಕ್ ವರ್ಸಸ್’ ಕಾದಂಬರಿಯನ್ನು ನಿಷೇಧಿಸಿತ್ತು. ಇತ್ತೀಚೆಗಷ್ಟೇ ಮುನವ್ವರ್ ಫಾರೂಕಿಯ ಕಾಮಿಡಿ ಶೋಗಳನ್ನು ನಿಲ್ಲಿಸಲಾಯಿತು. ಇಂಥ ನಿಷೇಧಗಳಿಗೆ ಪ್ರಭುತ್ವಗಳು ನೀಡಿದ ಕಾರಣಗಳು ಅಸಮರ್ಥನೀಯವಾಗಿಯೇ ಉಳಿದಿವೆ. ಕೆಲವೊಮ್ಮೆ ದೇಶದ ವಿವಿಧ ವರ್ಗದ ಜನರು ತಮ್ಮ ತಮ್ಮ ಮೂಲಭೂತ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದಕ್ಕಾಗಿ ಕೆಲವು ಕೃತಿಗಳ ಕುರಿತು ವಿವಾದ ಹುಟ್ಟುಹಾಕಿದ್ದಾರೆ. ಎಂ.ಎಫ್. ಹುಸೇನರ ಕೆಲವು ಅತ್ಯಮೂಲ್ಯ ಕಲಾಕೃತಿಗಳನ್ನು ವಿವಾದಿತವಾಗಿಸಿ ನಾಶಪಡಿಸಲಾಯಿತು. ಎಚ್.ಎಸ್. ಶಿವಪ್ರಕಾಶರ ‘ಮಹಾಚೈತ್ರ’ ನಾಟಕವನ್ನು ನಿಷೇಧಿಸಬೇಕೆಂದು ಮಾತೆ ಮಹಾದೇವಿ 1995ರಲ್ಲಿ ಸರ್ಕಾರದ ಮೇಲೆ ಒತ್ತಡ ತಂದಿದ್ದರು. ವಿವಾದವು ಕೋರ್ಟು ಮೆಟ್ಟಿಲೇರಿ ಕೊನೆಗೆ ಗುಲ್ಬರ್ಗಾ ವಿಶ್ವವಿದ್ಯಾಲಯವು ಆ ನಾಟಕವನ್ನು ತನ್ನ ಪಠ್ಯಕ್ರಮದಿಂದ ಹಿಂಪಡೆದಿತ್ತು. 2007ರಲ್ಲಿ ಬಂಜಗೆರೆ ಜಯಪ್ರಕಾಶರು ತಮ್ಮ ‘ಆನುದೇವಾ ಹೊರಗಣವನು’ ಕೃತಿಯು ವಿವಾದಕ್ಕೆ ಆಸ್ಪದ ನೀಡಿದ ಕಾರಣಕ್ಕೆ ಅದನ್ನು ಹಿಂಪಡೆದಿದ್ದರು. ಇಲ್ಲಿಯೂ ವಿವಾದ, ವಿರೋಧಗಳಿಗೆ ನೀಡಿದ ಕಾರಣಗಳು ಸಮರ್ಥನೀಯವಾಗಿರಲಿಲ್ಲ ಎಂದೇ ಬಹುಸಂಖ್ಯಾತ ನಾಗರಿಕರ ನಂಬಿಕೆ. ಆದರೂ ಸತ್ಯವು ಸತ್ಯವಾಗಿಯೇ ಉಳಿದಿದೆ ಮತ್ತು ಸೃಜನಶೀಲತೆಗೆ ಇರುವ ಮಹತ್ವವೂ ಕಡಿಮೆಯಾಗಲಿಲ್ಲ.

ಮೇಲಿನ ಎರಡೂ ರೀತಿಯ ವಿದ್ಯಮಾನಗಳಿಗೂ ಇತ್ತೀಚಿಗೆ ಅಮೀರ್ ಖಾನ್ ಅವರ ‘ಲಾಲ್ ಸಿಂಗ್‌ ಚಡ್ಡಾ’ ಸಿನಿಮಾವನ್ನು ಪ್ರೇಕ್ಷಕರು ಬಹಿಷ್ಕರಿಸಬೇಕೆಂದು ಒಂದು ವರ್ಗ ನಡೆಸುತ್ತಿರುವ ಅಭಿಯಾನಕ್ಕೂ ಮೂಲದಲ್ಲಿಯೇ ವ್ಯತ್ಯಾಸವಿದೆ. ಅಮೀರ್ ಖಾನ್ ತಮ್ಮ ಹಿಂದಿನ ಚಿತ್ರ ‘ಪಿ.ಕೆ.’ನಲ್ಲಿ ಹಿಂದೂ ದೇವರುಗಳನ್ನು ಅವಮಾನಿಸಿದ್ದಾರೆ, ಹಾಗಾಗಿ ಅವರ ‘ಚಡ್ಡಾ’ವನ್ನು ಬಹಿಷ್ಕರಿಸಿ ಎಂದು ಕರೆ ನೀಡಿತು ಒಂದು ಅಭಿಯಾನ. ‘ಪಿ.ಕೆ.’ ಚಿತ್ರದ ನಿರ್ಮಾಪಕರು, ನಿರ್ದೇಶಕರು ಮತ್ತು ಲೇಖಕರು ಹಿಂದೂಗಳಾಗಿದ್ದರು, ಅಮೀರ್ ಅಲ್ಲಿ ಒಬ್ಬ ಪಾತ್ರಧಾರಿಯಷ್ಟೇ ಎಂದಾಗ ಆ ಅಭಿಯಾನ ಅಮೀರ್ ಹಿಂದೆ ತೋಡಿಕೊಂಡಿದ್ದ ಆತಂಕದ ಹೇಳಿಕೆಗಳನ್ನು ಮುಂದುಮಾಡಿ, ಇಂಥ ಹೇಳಿಕೆಗಳು ಅವರಲ್ಲಿ ನಿಜಕ್ಕೂ ರಾಷ್ಟ್ರಪ್ರೇಮವಿದೆಯೇ ಎನ್ನುವ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ, ಹಾಗಾಗಿ ಅವರ ‘ಚಡ್ಡಾ’ ಸಿನಿಮಾವನ್ನು ಬಹಿಷ್ಕರಿಸಬೇಕು ಎಂದು ಹೇಳಿತು. ಈ ಕುಂಟುನೆಪಗಳು ಸ್ಪಷ್ಟವಾಗಿ ಹೇಳುತ್ತಿರುವುದೇನೆಂದರೆ ಅಮೀರ್ ಖಾನ್ ಸಿನಿಮಾದಲ್ಲಿ ಏನು ಹೇಳುತ್ತಾರೆ, ಮಾಧ್ಯಮಗಳಲ್ಲಿ ಅವರು ಕೊಡುವ ಹೇಳಿಕೆಗಳೇನು ಎನ್ನುವುದು ಇಂಥಾ ಅಭಿಯಾನಗಳಿಗೆ ಮುಖ್ಯವಲ್ಲ. ಇದು ಅಮೀರ್, ಭಾರತದಲ್ಲಿ ಬದುಕುತ್ತಿರುವ ಒಬ್ಬ ಮುಸ್ಲಿಂ ಎನ್ನುವ ಮನಸ್ಥಿತಿಯ ನವೀಕರಣಗೊಂಡ ಮುಸ್ಲಿಂ ದ್ವೇಷ ಮತ್ತು ಆ ಧರ್ಮದವರ ಕಡೆಗಣನೆ ಅಲ್ಲದೇ ಬೇರೇನಲ್ಲ. ಈಗ ನಡೆಯುತ್ತಿರುವುದು ಒಬ್ಬ ಕಲಾವಿದನ ವಾಕ್ ಸ್ವಾತಂತ್ರ್ಯವನ್ನು ಮೊಟಕು ಮಾಡುವ ಅಭಿಯಾನವಲ್ಲ. ಆ ಧರ್ಮದ ಒಬ್ಬ ಪ್ರಮುಖ ವ್ಯಕ್ತಿಯನ್ನು ಗುರಿಯಾಗಿಸಿ ಆತನ ಧರ್ಮದವರನ್ನು ಎಲ್ಲ ಕ್ಷೇತ್ರಗಳಲ್ಲೂ ನಿಷ್ಕ್ರಿಯಗೊಳಿಸಿ ಹಿಂದುತ್ವ ಪಾರಮ್ಯವನ್ನು ಸೃಷ್ಟಿಸುವುದೇ ಆಗಿದೆ. ಇದು ಸಿನಿಮಾಕ್ಷೇತ್ರಕ್ಕೆ ಇಂದು ಸೀಮಿತವಾಗಿಲ್ಲ ಎನ್ನುವುದನ್ನೂ ಗಮನಿಸಬೇಕು.

ಇದು ಪ್ರಭುತ್ವ ಪ್ರೇರಿತವಲ್ಲದೇ ಮತ್ತೇನಲ್ಲ. ಇದೇ ರೀತಿಯ ಅಭಿಯಾನಗಳನ್ನು ಇತ್ತೀಚೆಗೆ ನಮ್ಮಲ್ಲಿ ಸಾಕಷ್ಟು ಬಾರಿ, ಸಾಕಷ್ಟು ರೀತಿಯಲ್ಲಿ ಹಮ್ಮಿಕೊಳ್ಳಲಾಗಿದೆ. ‘ಕಾಶ್ಮೀರ್ ಫೈಲ್ಸ್’ ಎನ್ನುವ ಹುಸಿಚರಿತ್ರೆಯ ಅಂಶಗಳನ್ನು ಬಿಂಬಿಸುವ ಸಿನಿಮಾವನ್ನು ಭಾರತೀಯರೆಲ್ಲರೂ ನೋಡುವುದೇ ದೇಶಪ್ರೇಮ, ಅದೇ ಒಂದು ಜನಾಂದೋಲನ ಎನ್ನುವಂತೆ ಮಾಡುವ ಪ್ರಯತ್ನದಲ್ಲಿ ಪ್ರಭುತ್ವದ ಪ್ರಯತ್ನ ದೊಡ್ಡದಾಗಿಯೇ ಇತ್ತು. ಹಾಗೆಯೇ, ಜಾತಿಪ್ರೇರಿತ ಸತ್ವವಿಲ್ಲದ ಕೇಸುಗಳ ಮೂಲಕ ‘ಜೈ ಭೀಮ್’ ಚಿತ್ರವನ್ನೂ ವಿವಾದಕ್ಕೆ ಗುರಿಯಾಗಿಸಲು ಪ್ರಯತ್ನಿಸಲಾಯಿತು. ಆನವಟ್ಟಿಯಲ್ಲಿ ‘ಜತೆಗಿರುವನು ಚಂದಿರ’ ನಾಟಕದ ಪ್ರದರ್ಶನವನ್ನು ನಿಲ್ಲಿಸಲಾಯಿತು. ತಾನೇ ನೇರವಾಗಿ ಸೃಜನಶೀಲ ಅಭಿವ್ಯಕ್ತಿಗಳ ಮೇಲೆ ಪ್ರಹಾರ ಮಾಡುವ, ನಿಯಂತ್ರಿಸುವ ಕೆಲಸವನ್ನು ಮಾಡಿದರೆ ಅದು ‘ಅಸಾಂವಿಧಾನಿಕ’ ಎನಿಸಿಕೊಳ್ಳುತ್ತದೆ ಎನ್ನುವುದು ಪ್ರಭುತ್ವದ ಆಲೋಚನೆ. ಅದನ್ನು ತಾನು ‘ಜನಾಭಿಪ್ರಾಯ, ಜನಪ್ರತಿರೋಧ’ ಎನ್ನುವ ಹೆಸರಿನಲ್ಲಿ ತನ್ನ ಪಡೆಗಳಿಂದ ಮಾಡಿಸುವ ದಾರಿಯನ್ನು ಕಂಡುಕೊಂಡಿದೆ. ಎಲ್ಲ ಫ್ಯಾಸಿಸ್ಟ್ ಶಕ್ತಿಗಳೂ ಇದೇ ತಂತ್ರವನ್ನು ಅನುಸರಿಸುತ್ತವೆ, ನಮ್ಮಲ್ಲಿಯೂ ಆಗುತ್ತಿದೆ.

ಇಂಡಿಯನ್ ಮುಸ್ಲಿಮ್ಸ್ ಫಾರ್ ಸೆಕ್ಯುಲರ್ ಡೆಮಾಕ್ರಸಿ (ಐ.ಎಂ.ಎಸ್.ಡಿ.) ಎನ್ನುವ ಒಂದು ಭಾರತೀಯ ಪ್ರಜಾಪ್ರಭುತ್ವವಾದಿ ಸಂಘಟನೆ ಇತ್ತೀಚೆಗೆ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿತು. ತೀಸ್ತಾ ಸೆಟಲ್ವಾಡ್ ಅವರ ಪತಿ, ಜಾವೇದ್ ಆನಂದ್ ಅವರೂ ಕೂಡ ಐ.ಎಂ.ಎಸ್.ಡಿ. ಸಂಘಟನೆಯ ಹಲವು ಪ್ರಾಜ್ಞ ರೂವಾರಿಗಳಲ್ಲಿ ಒಬ್ಬರು. ಆ ಹೇಳಿಕೆಯ ತಾತ್ಪರ್ಯವಿಷ್ಟೆ: ‘ರಶ್ದಿಯವರ ಮೇಲಿನ ದಾಳಿಯನ್ನು ಖಂಡಿಸಿ ಬಹುತೇಕ ಭಾರತೀಯ ಮುಸ್ಲಿಂ ಸಂಘಟನೆಗಳು ಯಾವುದೇ ಹೇಳಿಕೆ ನೀಡಲಿಲ್ಲ. ಈ ಮೌನವು ಭಾರತೀಯ ಮುಸ್ಲಿಮರನ್ನು ಮುಖ್ಯವಾಹಿನಿಯಿಂದ ಇನ್ನಷ್ಟು ದೂರಕ್ಕೆ ತಳ್ಳುತ್ತದೆ. ಹಾಗೆಯೇ, ಕನ್ಹಯ್ಯ ಲಾಲ್ ಅವರ ಹತ್ಯೆಯನ್ನು ಬಹಳಷ್ಟು ಭಾರತೀಯ ಮುಸ್ಲಿಂ ಸಂಘಟನೆಗಳು ಖಂಡಿಸಿದವಾದರೂ ಅವು ಆ ಕಗ್ಗೊಲೆಯನ್ನು ದ್ವೇಷಪ್ರೇರಿತ ಎಂದು ಹೇಳಿದವೇ ಹೊರತು, ಧರ್ಮಕ್ಕೆ ಮಾಡಿದ ಅಪಚಾರಕ್ಕಾಗಿ ನಡೆದ ಕೊಲೆ ಎನ್ನಲಿಲ್ಲ. ಈ ಆಷಾಢಭೂತಿತನವೂ ಭಾರತೀಯ ಮುಸ್ಲಿಮರನ್ನು ಮುಖ್ಯವಾಹಿನಿಯಿಂದ ಇನ್ನಷ್ಟು ದೂರಕ್ಕೆ ತಳ್ಳುತ್ತದೆ.’

ಈ ಹೇಳಿಕೆ ಭಾರತದ ಕೆಲವು ಅಲ್ಪಸಂಖ್ಯಾತರ ಆಷಾಢಭೂತಿತನವನ್ನಷ್ಟೇ ಹೇಳುತ್ತಿಲ್ಲ. ಇದು ಹುಸಿ ದೇಶಪ್ರೇಮದ ಹಿಂದುತ್ವವಾದಿಗಳ ಆಷಾಢಭೂತಿತನವನ್ನೂ ಹೇಳುತ್ತಿದೆ.

ಲೇಖಕ: ಸಿನಿಮಾ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT