ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ| ಪಕ್ಷಾಂತರಿಗಳ ಮರು ಆಯ್ಕೆ – ಮತದಾರರು ಚಿಂತಿಸಬೇಕು: ತ್ರಿಲೋಚನ್‌ ಶಾಸ್ತ್ರಿ

Last Updated 8 ಜುಲೈ 2022, 19:30 IST
ಅಕ್ಷರ ಗಾತ್ರ

ಶಾಸಕರು ಗುಂಪು ಗುಂಪಾಗಿ ಪಕ್ಷಾಂತರ ಮಾಡಿದರೂ ಅದು ಮತದಾರರ ಮೇಲೆ ಬೀರುವ ಪ್ರಭಾವ ನಗಣ್ಯ ಏಕೆ?

***

ಶಾಸಕರು ಪಕ್ಷ ಬದಲಾಯಿಸುವುದು ಮತ್ತು ಸರ್ಕಾರಗಳನ್ನು ಉರುಳಿಸುವುದು ಮತ್ತೆ ತೀವ್ರಗೊಂಡಿದೆ. ಮಹಾರಾಷ್ಟ್ರ, ಕರ್ನಾಟಕ, ಗೋವಾ ಮತ್ತು ಇತರ ರಾಜ್ಯಗಳಲ್ಲಿ ಇದು ಆಗಿದೆ. ಇದು ಕೆಲವು ಮೂಲ ಪ್ರಶ್ನೆಗಳನ್ನು ಹುಟ್ಟು ಹಾಕಿದೆ– ಮತದಾರರು ಯಾರನ್ನು ಆಯ್ಕೆ ಮಾಡುತ್ತಿದ್ದಾರೆ– ಶಾಸಕರನ್ನೋ ಪಕ್ಷವನ್ನೋ ಅಥವಾ ಈ ಎರಡರ ಸಂಯೋಜನೆಯನ್ನೋ? ಪಕ್ಷಾಂತರ ಮಾಡುವ ಶಾಸಕರು ಯಾಕಾಗಿ ಪಕ್ಷಾಂತರ ಮಾಡಿದ್ದೇವೆ ಎಂಬುದನ್ನು ಮತದಾರರಿಗೆ ಎಂದೂ ವಿವರಿಸುವುದಿಲ್ಲ.

ಪಕ್ಷಾಂತರದ ಸಮಸ್ಯೆಗೆ ಪರಿಹಾರವಾಗಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು 1985ರಲ್ಲಿ ಅಂಗೀಕರಿಸಲಾಯಿತು ಮತ್ತು 2003ರಲ್ಲಿ ಅದಕ್ಕೆ ತಿದ್ದುಪಡಿ ತರಲಾಯಿತು. ಶಾಸಕನೊಬ್ಬ ಬೇರೆ ಪಕ್ಷಕ್ಕೆ ಸೇರಬೇಕಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಸಾಮಾನ್ಯವಾಗಿ, ರಾಜೀನಾಮೆಯ ಬಳಿಕ ಉಪಚುನಾವಣೆ ನಡೆಯುತ್ತದೆ ಮತ್ತು ಅದೇ ಶಾಸಕ ತಾನು ಹೊಸದಾಗಿ ಸೇರಿದ ಪಕ್ಷದಿಂದ ಸ್ಪರ್ಧಿಸಿ ಗೆಲ್ಲುತ್ತಾನೆ. ಉಪಚುನಾವಣೆ ನಡೆಸಲು ತೆರಿಗೆದಾರರ ಹಣವನ್ನು ವೆಚ್ಚ ಮಾಡಲಾಗುತ್ತದೆ. ಯಾವುದೇ ಪಕ್ಷದ ಮೂರನೇ ಒಂದರಷ್ಟು ಶಾಸಕರು ಪಕ್ಷ ಬಿಟ್ಟರೆ ಅದನ್ನು ಪಕ್ಷ ವಿಭಜನೆ ಎಂದು 2003ರವರೆಗೆ ಪರಿಗಣಿಸಲಾಗುತ್ತಿತ್ತು. ಈ ರೀತಿಯಲ್ಲಿಯೂ ಹಲವು ಬಾರಿ ನಡೆದಿದೆ. ಹಾಗಾಗಿ, ಈ ಅವಕಾಶವನ್ನು ರದ್ದುಪಡಿಸಲಾಯಿತು. ಈಗ, ಯಾವುದೇ ಪಕ್ಷದ ಕನಿಷ್ಠ ಮೂರನೇ ಎರಡರಷ್ಟು ಶಾಸಕರು ಬೇರೊಂದು ಪಕ್ಷಕ್ಕೆ ಸೇರಿದರೆ ಅದನ್ನು ಆ ಪಕ್ಷದ ಜೊತೆಗೆ ವಿಲೀನ ಎಂದು ಪರಿಗಣಿಸಲು ಅವಕಾಶ ಇದೆ.

ಇನ್ನೊಂದು ಕಳವಳಕಾರಿ ವಿಚಾರವೂ ಇದೆ. ಕಾಯ್ದೆ ಇದ್ದರೂ ಸುಪ್ರೀಂ ಕೋರ್ಟ್‌ ಹಲವು ಬಾರಿ ಆದೇಶಗಳನ್ನು ನೀಡಿದ್ದರೂ ಪಕ್ಷಾಂತರ ಮಾಡಿದ ಶಾಸಕರನ್ನು ಅನರ್ಹಗೊಳಿಸದ ಸ್ಪೀಕರ್‌ಗಳು ಇದ್ದಾರೆ; ಅಥವಾ ಅವರು ತಮ್ಮ ಮೂಲ ಪಕ್ಷಕ್ಕೆ ಅನುಕೂಲವಾಗುವ ನಿರ್ಧಾರ ಕೈಗೊಂಡಿದ್ದಾರೆ. ನ್ಯಾಯಾಲಯದಲ್ಲಿ ಇವೆಲ್ಲ ಇತ್ಯರ್ಥವಾಗುವ ಹೊತ್ತಿಗೆ ಶಾಸನ ಸಭೆಯ ಅವಧಿಯೇ ಮುಗಿದಿರುತ್ತದೆ.

ಯಾವ ರೀತಿಯ ಕಾಯ್ದೆ ನಮ್ಮಲ್ಲಿ ಇರಬೇಕು ಎಂಬುದರಲ್ಲಿ ಇಂತಹ ಪ್ರಶ್ನೆಗಳಿಗೆ ಉತ್ತರ ಇದೆ. ಆದರೆ, ಯಾವುದೇ ರೀತಿಯಲ್ಲಿಯಾದರೂ ಸರಿ ಅಧಿಕಾರಕ್ಕೆ ಏರಬೇಕು ಎಂಬುದಷ್ಟೇ ಇದ್ದಾಗ ಕಾನೂನಿನ ಕುಣಿಕೆಯನ್ನು ತಪ್ಪಿಸಿಕೊಳ್ಳುವುದಕ್ಕೆ ದಾರಿ ಇರುತ್ತದೆ. ಮತ್ತೊಂದು ಅಂಶವೆಂದರೆ, ಪಕ್ಷಾಂತರಗಳನ್ನು ಯೋಜಿಸುವ ಅದೇ ರಾಜಕೀಯ ವರ್ಗವೇ ಕಾಯ್ದೆಯನ್ನೂ ರೂಪಿಸುತ್ತದೆ. ಕಾನೂನಿನ ಮೂಲಕ ಮಾತ್ರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಪಕ್ಷಾಂತರ ಕಾಯ್ದೆ ಅಂಗೀಕಾರವಾದ 1985 ಮತ್ತು ಅದಕ್ಕೆ ತಿದ್ದುಪಡಿಯಾದ 2003ರ ಬಳಿಕ ನಡೆದ ಘಟನೆಗಳು ದೃಢ‍ಪಡಿಸಿವೆ. ಪಕ್ಷಾಂತರ ಮಾಡಿದವರು ಎರಡು ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಲ್ಲ ಎಂಬ ಕಾನೂನು ರೂಪಿಸಿದರೆ ಶಾಸಕರ ಪಕ್ಷಾಂತರಕ್ಕೆ ಸ್ವಲ್ಪ ಮಟ್ಟಿಗೆ ತಡೆ ಒಡ್ಡಬಹುದು.

ನಿಜವಾದ ಸಮಸ್ಯೆ ಬೇರೆಡೆಯೇ ಇದೆ. ಹಲವು ಪ‍್ರಕರಣಗಳಲ್ಲಿ, ದೊಡ್ಡ ಸಂಖ್ಯೆಯ ಶಾಸಕರನ್ನು ದೂರದ ರಾಜ್ಯಕ್ಕೆ ಕರೆದೊಯ್ದು, ದುಬಾರಿ ರೆಸಾರ್ಟ್‌ಗಳನ್ನು ಪೂರ್ಣವಾಗಿ ಅವರಿಗಾಗಿ ಕಾಯ್ದಿರಿಸಿ, ಅವರನ್ನು ಅಲ್ಲಿ ಉಳಿಸಲಾಗುತ್ತದೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ, ಈ ಪ್ರವಾಸಕ್ಕೆ ಹಣ ವೆಚ್ಚ ಮಾಡುವವರು ಯಾರು ಎಂಬುದು ನಮಗೆ ತಿಳಿಯುವುದೇ ಇಲ್ಲ. ಇಂತಹ ಪ್ರಯಾಣ ಮತ್ತು ವಾಸ್ತವ್ಯಕ್ಕೆ ಮಾಡುವ ಖರ್ಚು ನ್ಯಾಯಬದ್ಧವೇ ಎಂಬುದೂ ನಮಗೆ ಗೊತ್ತಿಲ್ಲ. ಪಕ್ಷಾಂತರ ಮಾಡುವ ಶಾಸಕರಿಗೆ ವಿವಿಧ ಭರವಸೆಗಳನ್ನು ನೀಡಲಾಗುತ್ತದೆ ಮತ್ತು ಬೆದರಿಕೆಯನ್ನೂ ಒಡ್ಡಲಾಗುತ್ತದೆ ಎಂದೂ ಜನರು ಭಾವಿಸಿದ್ದಾರೆ. ಹಣ ನೀಡುವುದು, ಸಚಿವ ಸ್ಥಾನ ಮುಂತಾದವು ಭರವಸೆ ಅಥವಾ ಆಮಿಷಗಳಲ್ಲಿ ಸೇರಿವೆ. ಹಾಗೆಯೇ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಅಥವಾ ಸಿಬಿಐಯಂತಹ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಕ್ರಮ ಕೈಗೊಳ್ಳುವುದು ಬೆದರಿಕೆಯಲ್ಲಿ ಸೇರಿವೆ. ಆದರೆ, ರಿಸಾರ್ಟ್‌ ರಾಜಕಾರಣದ ಬಗ್ಗೆ ಆದಾಯ ತೆರಿಗೆ ಅಥವಾ ಪೊಲೀಸರು ತನಿಖೆ ನಡೆಸಿದ ನಿದರ್ಶನ ಇಲ್ಲವೇ ಇಲ್ಲ.

ಈ ರೀತಿಯ ಸಮಸ್ಯೆಗಳನ್ನು ಬೇರೆ ದೇಶಗಳು ಹೇಗೆ ನಿರ್ವಹಿಸಿವೆ? ಹಳೆಯ ಮತ್ತು ಹೆಚ್ಚು ಪ್ರಬುದ್ಧವಾದ ಪ್ರಜಾತಂತ್ರ ವ್ಯವಸ್ಥೆಗಳಲ್ಲಿ, ಒಂದು ಅಥವಾ ಎರಡು ಹಗರಣಗಳು ಒಬ್ಬ ರಾಜಕಾರಣಿಯ ವೃತ್ತಿಜೀವನವನ್ನೇ ಮುಗಿಸಲು ಸಾಕು. ಅಂತಹ ರಾಜಕಾರಣಿಯ ಮೇಲಿನ ವಿಶ್ವಾಸವನ್ನು ಮತದಾರರು ಕಳೆದುಕೊಳ್ಳುತ್ತಾರೆ. ಭಾರತವು ಅಂತಹ ಮಟ್ಟಕ್ಕೆ ಇನ್ನೂ ತಲುಪಿಲ್ಲ. ಅಂತಹ ಪ್ರಬುದ್ಧತೆ ಇಲ್ಲದಿರುವ ಕಾರಣ ನಾವು ಕಾನೂನು ಮತ್ತು ನ್ಯಾಯಾಲಯಗಳಲ್ಲಿ ಪರಿಹಾರ ಕಂಡುಕೊಳ್ಳುತ್ತೇವೆ. ನಾವು ಬ್ರಿಟಿಷರಿಂದ ಪಡೆದುಕೊಂಡಿರುವ ಮೂಲ ವ್ಯವಸ್ಥೆಯನ್ನು ಮರುಪರಿಶೀಲನೆಗೆ ಒಳಪಡಿಸಬೇಕಾದ ಸಮಯ ಬಹುಶಃ ಬಂದಿದೆ ಅನಿಸುತ್ತದೆ. ಚುನಾವಣೆಯಲ್ಲಿ ಗರಿಷ್ಠ ಮತಗಳನ್ನು ಪಡೆದ ಅಭ್ಯರ್ಥಿಯನ್ನು ವಿಜೇತ ಎಂದು ಪರಿಗಣಿಸುವ ವ್ಯವಸ್ಥೆ ನಮ್ಮದು. ಮುಖ್ಯಮಂತ್ರಿಯು ನೇರವಾಗಿ ಜನರಿಂದ ಆಯ್ಕೆ ಆಗುವುದಿಲ್ಲ; ಬದಲಿಗೆ, ಬಹುಮತ ಪಡೆದ ಪಕ್ಷದ ಶಾಸಕರು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಬೇರೆ ದೇಶಗಳಲ್ಲಿ ಮೂರು ರೀತಿಯ ವ್ಯವಸ್ಥೆಗಳನ್ನು ಕಾಣಬಹುದು. ಮತದಾರರು ನೇರವಾಗಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಒಂದು ವ್ಯವಸ್ಥೆ– ಅಮೆರಿಕದಲ್ಲಿ ರಾಜ್ಯದ ಗವರ್ನರ್‌ಗಳನ್ನು ಮತದಾರರು ನೇರವಾಗಿ ಆಯ್ಕೆ ಮಾಡುತ್ತಾರೆ. ಪ್ರಮಾಣಕ್ಕೆ ಅನುಗುಣವಾದ ಪ್ರಾತಿನಿಧ್ಯ ವ್ಯವಸ್ಥೆ ಇರುವ ದೇಶಗಳೂ ಇವೆ. ಅಂದರೆ, ಪಕ್ಷಗಳು ಪಡೆಯುವ ಮತದ ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚುವರಿ ಸ್ಥಾನಗಳನ್ನು ಪಕ್ಷಗಳಿಗೆ ನೀಡಲಾಗುತ್ತದೆ. ಫ್ರಾನ್ಸ್‌ನಲ್ಲಿ ಬೇರೊಂದು ರೀತಿಯ ವ್ಯವಸ್ಥೆ ಇದೆ. ಅಲ್ಲಿ ಗರಿಷ್ಠ ಮತಗಳನ್ನು ಪಡೆದ ಇಬ್ಬರು ಅಭ್ಯರ್ಥಿಗಳ ನಡುವೆ ಎರಡನೇ ಸುತ್ತಿನ ಸ್ಪರ್ಧೆ ನಡೆಯುತ್ತದೆ. ವಿಜೇತ ಅಭ್ಯರ್ಥಿಗೆ ಶೇ 50ಕ್ಕಿಂತ ಹೆಚ್ಚು ಮತದಾರರ ಬೆಂಬಲವನ್ನು ಖಾತರಿಪಡಿಸಿಕೊಳ್ಳುವುದಕ್ಕಾಗಿ ಈ ಮಾದರಿಯನ್ನು ಅನುಸರಿಸಲಾಗುತ್ತಿದೆ. ಬಹುಪ್ರತಿನಿಧಿ ಕ್ಷೇತ್ರಗಳ ವ್ಯವಸ್ಥೆ ಜಪಾನ್‌ನಲ್ಲಿ ಇದೆ. ಇಲ್ಲಿ, ಒಂದು ಕ್ಷೇತ್ರಕ್ಕೆ ಇಬ್ಬರು ಪ್ರತಿನಿಧಿಗಳು. ಯಾವ ರೀತಿಯ ವ್ಯವಸ್ಥೆಯು ಭಾರತಕ್ಕೆ ಉತ್ತಮ ಎಂಬ ಬಗ್ಗೆ ನಾವು ಚರ್ಚೆ ನಡೆಸಬೇಕಾದ ಅಗತ್ಯ ಇದೆ. ಹಲವು ಆಯೋಗಗಳು ಈ ವಿಚಾರಗಳ ಬಗ್ಗೆ ವಿವಿಧ ರೀತಿಯ ಶಿಫಾರಸುಗಳನ್ನು ನೀಡಿವೆ.

ಒಟ್ಟಿನಲ್ಲಿ, ಮೂಲ ವಿಷಯ ಏನು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಹಣ ಮತ್ತು ಅಧಿಕಾರ ಬಲವನ್ನು ಬಳಸಿಯೇ ದೊಡ್ಡ ಮಟ್ಟದ ಪಕ್ಷಾಂತರಗಳನ್ನು ನಡೆಸಲಾಗುತ್ತಿದೆ. ಪ್ರತಿಫಲದ ಆಸೆ ಅಥವಾ ಬೆದರಿಕೆಯ ಕಾರಣದಿಂದ ಪಕ್ಷಾಂತರ ಮಾಡಿ, ಸರ್ಕಾರ ರಚಿಸುವ ಶಾಸಕರು ದೀರ್ಘಾವಧಿಯಲ್ಲಿ ಉತ್ತಮ ಆಳ್ವಿಕೆ ನೀಡಲು ಸಾಧ್ಯವಿಲ್ಲ. ಕೊನೆಯದಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಮಾನವೇ ಅಂತಿಮ. ಪಕ್ಷಾಂತರಿಗಳನ್ನು ಮರು ಆಯ್ಕೆ ಮಾಡುವ ಕುರಿತು ಮತದಾರರು ಚಿಂತಿಸುವ ಅಗತ್ಯ ಇದೆ.

(ಲೇಖಕ: ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ನ ಅಧ್ಯಕ್ಷ, ಐಐಎಂ ಬೆಂಗಳೂರಿನಲ್ಲಿ ಪ್ರಾಧ್ಯಾಪಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT