ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುನಾಮಕರಣದ ರಾಜಕಾರಣ ಬಹುತ್ವ ಅಳಿಸುವಂತಹ ನಡೆ

Last Updated 9 ನವೆಂಬರ್ 2018, 2:14 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ದೇಶದ ಕೋಮುವಾದಿ ಕಾರ್ಖಾನೆಗಳಿಗೆ ರಭಸ ದೊರೆತಿದೆ. ಕೋಮು ಧ್ರುವೀಕರಣವೇ ಅವುಗಳ ಅಂತಿಮ ಉತ್ಪನ್ನ. ಈ ದಿಸೆಯಲ್ಲಿ ಅವು ಹಲವು ರಂಗು- ರೂಪು- ರೂಹು ಧರಿಸಿ ಬಿಡುವಿಲ್ಲದೆ ದುಡಿಯತೊಡಗಿವೆ. ನಗರಗಳು, ಪಟ್ಟಣಗಳು, ರೈಲ್ವೆ ನಿಲ್ದಾಣಗಳ ಹೆಸರುಗಳನ್ನು ಅಳಿಸಿ ಹೊಸ ಹೆಸರುಗಳನ್ನು ಇಡುವುದು ಈ ರಂಗು ರೂಪದ ಒಂದು ಅಂಗ. ಇತಿಹಾಸವನ್ನು ಭಗವಾ ಬಣ್ಣದಲ್ಲಿ ತಿದ್ದಿ ಬರೆಯುವ ಬೃಹತ್ ಯೋಜನೆಯ ಭಾಗ.

ಉತ್ತರಪ್ರದೇಶದ ಮೊಘಲ್ ಸರಾಯ್ ರೈಲ್ವೆ ನಿಲ್ದಾಣವು ಪಂಡಿತ ದೀನದಯಾಳ ಉಪಾಧ್ಯಾಯ ರೈಲ್ವೆ ನಿಲ್ದಾಣ ಆಯಿತು. ಫೈಜಾಬಾದ್ ಇನ್ನು ಅಯೋಧ್ಯೆ ಆಗಲಿದೆ. ಯೋಗಿ ಆದಿತ್ಯನಾಥರು ಸಂಸದರಾಗಿದ್ದಾಗ ತಮ್ಮ ಕ್ಷೇತ್ರ ಗೋರಖಪುರ ಪಟ್ಟಣದ ಮಿಯಾ ಬಜಾರ್ (ಮಾಯಾಬಜಾರ್), ಉರ್ದು ಬಜಾರ್ (ಹಿಂದಿ ಬಜಾರ್), ಅಲಿ ನಗರ್ (ಆರ್ಯನಗರ್), ಇಸ್ಲಾಂಪುರ್ (ಈಶ್ವರಪುರ್), ಲಹಲಾದಪುರ್ (ಅಲಹಲಾದಪುರ್), ಹುಮಾಯೂನ್ ನಗರ್ (ಹನುಮಾನ್ ನಗರ್) ಹೆಸರುಗಳ ಧರ್ಮವನ್ನು ಬದಲಾಯಿಸಿದ್ದರು.

ಸಂವಿಧಾನದಲ್ಲಿನ ಇಂಡಿಯಾ ಪದವನ್ನು ಹಿಂದುಸ್ತಾನ ಎಂದು ಬದಲಾಯಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಆಗ್ರಹಿಸಿದ್ದಾರೆ. ತಾಜಮಹಲ್ ಅನ್ನು ರಾಮಮಹಲ್ ಎಂದು ಬದಲಾಯಿಸಲು ಹಿಂಜರಿಯುವುದಿಲ್ಲ ಎಂದು ಸಾರಿದ್ದಾರೆ. ಯುನೆಸ್ಕೊ ವಿಶ್ವಪರಂಪರೆಯ ಪಟ್ಟಿಯಲ್ಲಿರುವ ತಾಜಮಹಲ್, ದೇಶದ ಮೇಲೆ ದಂಡೆತ್ತಿ ಬಂದ ದಾಳಿಕೋರರು ನಿರ್ಮಿಸಿದ ಕಳಂಕವೆಂದು ಕರೆದ ಯೋಗಿ ನೇತೃತ್ವದ ಸರ್ಕಾರ ಅದನ್ನು ಉತ್ತರಪ್ರದೇಶದ ಆಕರ್ಷಕ ಪ್ರವಾಸಿ ತಾಣಗಳ ಪಟ್ಟಿಯಿಂದ ಕೈ ಬಿಟ್ಟಿದ್ದುಂಟು. ಹರಿಯಾಣದ ಗುಡಗಾಂವ್ (ಬೆಲ್ಲದಹಳ್ಳಿ ಅಥವಾ ಬೆಲ್ಲದ ಬಜಾರು) ಮಹಾಭಾರತದ ಗುರು ದ್ರೋಣಾಚಾರ್ಯರ ಹೆಸರು ಧರಿಸಿ ಗುರುಗ್ರಾಮ ಆಗಿದೆ.

ಅಹಮದಾಬಾದ್, ಹೈದರಾಬಾದ್, ಔರಂಗಾಬಾದ್ ಹೆಸರುಗಳನ್ನು ಕರ್ಣಾವತಿ, ಭಾಗ್ಯನಗರ ಹಾಗೂ ಸಂಭಾಜಿನಗರವಾಗಿ ಬದಲಾಗಬೇಕೆಂಬುದು ಬಿಜೆಪಿಯ ತಾಯಿಬೇರು ಆರ್‌ಎಸ್‌ಎಸ್‌ನ ಬಹುಕಾಲದ ಪ್ರಬಲ ಇರಾದೆ. ಗುಜರಾತ್ ಮತ್ತು ಮಹಾರಾಷ್ಟ್ರ ಬಿಜೆಪಿ ಸರ್ಕಾರಗಳು ಈ ಬದಲಾವಣೆಗೆ ತುದಿಗಾಲಲ್ಲಿ ನಿಂತಿವೆ. ಹೈದರಾಬಾದ್ ಭಾಗ್ಯನಗರ ಆಗಬೇಕಿದ್ದರೆ ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ರಚಿಸಬೇಕಿದೆ.

ಊರುಗಳು, ನಗರಗಳು, ರೈಲ್ವೆ ನಿಲ್ದಾಣಗಳ ಹೆಸರುಗಳನ್ನು ಬದಲಾಯಿಸಿದ ನಂತರ ಈ ರಾಜಕೀಯ ವಿಕೃತಿ ಮುಂಬರುವ ದಿನಗಳಲ್ಲಿ ಯಾವ ರೂಪ ಧರಿಸಲಿದೆ? ಮುಸಲ್ಮಾನರು, ಕ್ರೈಸ್ತರು, ಪಾರಸಿ ನಾಗರಿಕರ ಹೆಸರುಗಳನ್ನು ಸರ್ಕಾರಗಳೇ ರದ್ದು ಮಾಡಿ ಹೊಸ ಹೆಸರುಗಳನ್ನು ಮತ್ತು ಅಡ್ಡಹೆಸರುಗಳನ್ನು ಇಡಲಾಗುವುದೇ? ಜನಮಾನಸದಲ್ಲಿ ಕೋಮುವಾದದ ವಿಷಬೀಜಗಳನ್ನು ಬಿತ್ತಿ ರಾಜಕೀಯ ಫಸಲು ತೆಗೆಯುವ ಒಕ್ಕಲುತನದಲ್ಲಿ ಬಿಜೆಪಿ ಇತ್ತೀಚಿನ ದಶಕಗಳಲ್ಲಿ ಯಶಸ್ಸು ಕಂಡಿದೆ. ದಶಕಗಳ ಅಧಿಕಾರದ ಹಸಿವನ್ನು ಇಂಗಿಸಿಕೊಳ್ಳುವ ಈ ಪರಿ ಹುಲಿಸವಾರಿಯಷ್ಟೇ ಅಪಾಯಕಾರಿ.

ಬಹುತ್ವದ ಧಿಕ್ಕಾರ ಬಿಜೆಪಿಯ ಮೂಲ ಕಾರ್ಯಸೂಚಿ. ಭಾರತದ ಬಹುತ್ವದ ಇತಿಹಾಸ- ಅಸ್ಮಿತೆಯನ್ನು ಅಳಿಸಿಹಾಕುವ ನಡೆ ಖಂಡನೀಯ. ವಸಾಹತುಶಾಹಿಯ ಸಂಕೇತಗಳನ್ನು ಅಳಿಸುವುದು ಬೇರೆ. ಒಂದೇ ಸಮಾಜದ ಭಾಗವಾಗಿ ಬದುಕಿದ ಸಮುದಾಯಗಳನ್ನು ಮೂಲನಿವಾಸಿಗಳು- ಹೊರಗಿನವರು- ದಾಳಿಕೋರರು ಎಂದು ಜನಾಂಗೀಯ ಶ್ರೇಷ್ಠತೆ ಸಾರಲು ಬಳಸಿಕೊಳ್ಳುವುದು ಸರಿಯಲ್ಲ. ಎಲ್ಲರೂ ಸಮ ಆದರೆ ಕೆಲವರು ಹೆಚ್ಚು ಸಮ ಎಂದು ಸಾಧಿಸಿ, ಸಾಮಾಜಿಕ- ರಾಜಕೀಯ- ಐತಿಹಾಸಿಕವಾಗಿ ಒಡೆದು ಆಳಲು ಒಂದು ಧರ್ಮದ- ಜನಾಂಗಕ್ಕೆ ಸಂಬಂಧಿಸಿದ ಹೆಸರುಗಳನ್ನು ಬದಲಾಯಿಸಿ ಜನಸಮೂಹಗಳ ನಡುವೆ ಕಂದಕಗಳನ್ನು ತೋಡುವುದು ತರವಲ್ಲ. ಭಾರತದಂತಹ ಬಹುತ್ವದ ರಾಷ್ಟ್ರದಲ್ಲಿ ಕೋಮು ಆಧಾರಿತ ಮರುನಾಮಕರಣದ ರಾಜಕಾರಣ ಬೇರೆಯದೇ ಆಯಾಮ ತಳೆಯುತ್ತದೆ.

ಇಂಡೊನೇಷ್ಯಾ ಮುಸ್ಲಿಂಬಾಹುಳ್ಯ ಇರುವದೇಶ. ಅಲ್ಲಿನ ಇಸ್ಲಾಂ ಮತಾನುಯಾಯಿಗಳ ಪ್ರಮಾಣ ಶೇ 87.18. ಹಿಂದೂಗಳ ಪ್ರಮಾಣ ಶೇ 1.69. ರಾಜಧಾನಿ ಜಕಾರ್ತದ ನಟ್ಟ ನಡುವೆ ಕೃಷ್ಣಾರ್ಜುನ ವಿಜಯ ರಥದ ಬೃಹತ್ ಸುಂದರ ಶಿಲ್ಪವಿದೆ. ಆ ದೇಶದ ಸೇನೆಯ ಶುಭಚಿಹ್ನೆ ಹನುಮಂತ. 20 ಸಾವಿರ ರೂಪಾಯಿ ನೋಟಿನಲ್ಲಿ ಈಗಲೂ ಗಣೇಶ ಇದ್ದಾನೆ. ಆ ದೇಶದ ಏರ್‌ಲೈನ್ಸ್ ಹೆಸರು ಗರುಡ ಏರ್‌ವೇಸ್. ಇಸ್ಲಾಂ ಅಪ್ಪಿಕೊಂಡೆವೆಂದು ಹಿಂದೂ ಇತಿಹಾಸವನ್ನು ಆ ದೇಶ ಅಳಿಸಿ ಹಾಕಿಲ್ಲ, ಈಗಲೂ ಅಪ್ಪಿಕೊಂಡಿದೆ. ಭಾರತದ ಆದರ್ಶ ಇಂಡೊನೇಷ್ಯಾ ಆಗಬೇಕೇ ವಿನಾ ಬಾನೆತ್ತರದ ಬಾಮಿಯಾ ಬುದ್ಧ ಪ್ರತಿಮೆಗಳನ್ನು ಸಿಡಿಸಿದ ಅಫ್ಗಾನಿಸ್ತಾನದ ಬರ್ಬರ ತಾಲಿಬಾನಿಗಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT