ನವದೆಹಲಿ, ಆ. 9– ವಿರೋಧಿಗಳು ಮತ್ತು ಶ್ರೀಮಂತರು ಏನೇ ಹೇಳಲಿ ಬಡವರಿಗೆ ಅನುಕೂಲವಾಗುವ ಮಾರ್ಗವನ್ನು ತಾವು ಅನುಸರಿಸುವುದಾಗಿ ಪ್ರಧಾನಿ ಇಂದಿರಾ ಗಾಂಧಿಯವರು ಇಲ್ಲಿ ಇಂದು ಹೇಳಿದರು.
ತಾವು ಉತ್ಪ್ರೇಕ್ಷಿಸಿ ಮಾತನಾಡುತ್ತಿಲ್ಲವೆಂದು ನುಡಿದ ಅವರು ಆತ್ಮಸಾಕ್ಷಿಯಾಗಿ ಸರಿ ಎಂದು ತೋಚಿದ್ದನ್ನು ತಾವು ಹೇಳುತ್ತಿರುವುದಾಗಿ ತಿಳಿಸಿದರು.
ಬ್ಯಾಂಕ್ ರಾಷ್ಟ್ರೀಕರಣಕ್ಕೆ ಬೆಂಬಲ ಸೂಚಿಸಿ ನಿವಾಸಕ್ಕೆ ಮೆರವಣಿಗೆಯಲ್ಲಿ ಬಂದ ನೂರಾರು ಚಾಲಕರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.
ಬ್ಯಾಂಕ್ ರಾಷ್ಟ್ರೀಕರಣ ಮಸೂದೆಗೆ ಹಂಗಾಮಿ ರಾಷ್ಟ್ರಪತಿ ಅಂಗೀಕಾರ
ನವದೆಹಲಿ, ಆ. 9– ಹಂಗಾಮಿ ರಾಷ್ಟ್ರಪತಿ ಶ್ರೀ ಎಂ. ಹಿದಾಯತ್ ಉಲ್ಲಾ ಅವರು ಬ್ಯಾಂಕಿಂಗ್ ಕಂಪನಿಗಳ (ಸ್ವಾಧೀನತೆ ಮತ್ತು ವರ್ಗಾವಣೆ) ಮಸೂದೆಗೆ ಇಂದು ತಮ್ಮ ಅಂಗೀಕಾರ ಮುದ್ರೆ ಒತ್ತಿದರು.
ಅವರು ಇಂದು ಬೆಳಿಗ್ಗೆ ಸಹಿ ಹಾಕಿದ ಈ ಶಾಸನ ಬದ್ಧವಾದ ಮಸೂದೆಯು ಲೋಕಸಭೆಯಲ್ಲಿ ಐದು ದಿನಗಳಲ್ಲಿ ಮತ್ತು ರಾಜ್ಯ ಸಭೆಯಲ್ಲಿ ಮೂರು ದಿನಗಳಲ್ಲಿ ಅಂಗೀಕೃತವಾಯಿತು. ಜನಸಂಘ ಮತ್ತು ಸ್ವತಂತ್ರ ಪಕ್ಷದವರ ವಿರೋಧವಿದ್ದರೂ ತ್ವರಿತವಾಗಿ ಅಂಗೀಕೃತವಾದ ಈ ಮಸೂದೆ ಶಾಸನಬದ್ಧವಾದಾಗ ಈ ಪಕ್ಷಗಳ ಸದಸ್ಯರು ಸಭೆಯಲ್ಲಿ ಹಾಜರಿರಲಿಲ್ಲ.
ಭಾರತ–ಪಾಕ್ ಮಧ್ಯೆ ಪತ್ರಿಕೆ, ಪುಸ್ತಕಗಳ ರವಾನೆ ಬಂದ್
ನವದೆಹಲಿ, ಆ. 9– ಭಾರತ–ಪಾಕಿಸ್ತಾನಗಳ ನಡುವೆ ವಾರ್ತಾ ಪತ್ರಿಕೆ, ಪುಸ್ತಕಗಳ ರವಾನೆಯನ್ನು ಪಾಕಿಸ್ತಾನ ಸರ್ಕಾರವು ನಿಷೇಧಿಸಿದೆ.
ಈ ಬಗ್ಗೆ ತಮಗೆ ಆದೇಶ ನೀಡಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಇತ್ತೀಚೆಗೆ ಸ್ಥಿರಪಡಿಸಿದರು. ಪಾಕಿಸ್ತಾನದಿಂದ ಭಾರತಕ್ಕೆ ರವಾನಿಸಲಾದ ಪುಸ್ತಕ, ಪತ್ರಿಕೆಗಳನ್ನು ಕಳುಹಿಸಿದವರಿಗೇ ಕಸ್ಟಮ್ಸ್ ಅಧಿಕಾರಿಗಳು ಹಿಂದಿರುಗಿಸುತ್ತಿದ್ದಾರೆ.