ಪ್ರಧಾನಿ ವಿರುದ್ಧ ಶಿಸ್ತಿನ ಕ್ರಮ ಸಂಭವ ನವದೆಹಲಿ, ನ. 7– ಕಾಂಗ್ರೆಸ್ ಅಧ್ಯಕ್ಷ ಎಸ್. ನಿಜಲಿಂಗಪ್ಪನವರು ತಮ್ಮ ಸಹೋದ್ಯೋಗಿಗಳೊಡನೆ ಸಮಾಲೋಚನೆ ಮಾಡಿದ ನಂತರ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬಹುದೆಂದು ಪ್ರಧಾನಿ ಬೆಂಬಲಿಗರು ನಿರೀಕ್ಷೆ ಮಾಡಿದ್ದಾರೆ.
ಇಡೀ ಪರಿಸ್ಥಿತಿಯನ್ನು ಅವಲೋಕಿಸಲು ನಿಜಲಿಂಗಪ್ಪನವರ ಬೆಂಬಲಿಗರು ಸಂಜೆ ಸಭೆ ಸೇರಿದ್ದರು. ಚರ್ಚೆ ನಂತರ ಸಂಸ್ಥೆಗೆ ಬೆಂಬಲವಾಗಿ ನಿಲ್ಲುವಂತೆ ಪಕ್ಷದ ಸದಸ್ಯರಿಗೆ ಮನವಿ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಅಧ್ಯಕ್ಷ– ಪ್ರಧಾನಿ ನಡುವಣ ಮಾತುಕತೆ ವಿಫಲವಾಗಲು ಇಂದಿರಾ ಅವರೇ ಹೊಣೆ ಎಂಬ ಆಪಾದನೆ ಹೊರಿಸಲಾಯಿತು.
ಪ್ರಧಾನಿ–ಎಸ್ಸೆನ್ ಮಾತುಕತೆ ವಿಫಲ ನವದೆಹಲಿ, ನ. 7– ಕಾಂಗ್ರೆಸ್ ಪಕ್ಷದಲ್ಲಿ ಐಕಮತ್ಯಕ್ಕಾಗಿ ಮೈಸೂರು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಮತ್ತು ಕಾರ್ಯಸಮಿತಿ ಸದಸ್ಯ ಶ್ರೀ ಕೆ.ಸಿ. ಅಬ್ರಹಾಂ ಅವರ ಪ್ರಯತ್ನದಿಂದ ಏರ್ಪಟ್ಟಿದ್ದ ಮಾತುಕತೆ ವಿಫಲವಾಗಿದೆ.
ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪ ಅವರ ಭೋಜನ ಕಾಲದ 70 ನಿಮಿಷಗಳ ಇಂದಿನ ಮಾತುಕತೆಗಳಿಂದ ಕೊನೆಗೆ ರಾಜಿ ಫಲಿಸಬಹುದೆಂಬ ನಿರೀಕ್ಷೆ ಅಂಕುರಿಸಿತಾದರೂ ಪಕ್ಷದ ಚುನಾವಣೆಗಳ ಬಗೆಗೆ ಇದ್ದ ಅಸಮಂಜಸ ಭಿನ್ನಾಭಿಪ್ರಾಯಗಳ ಕಾರಣ ಈ ಏಕತಾ ಪ್ರಯತ್ನ ಮುರಿದುಬಿತ್ತು ಮತ್ತು ಉಭಯ ನಾಯಕರ ನಡುವಣ ಮಾತುಕತೆ ಕೊನೆಗೊಂಡಿತು.
ಮಾತುಕತೆ ಮುಂದುವರಿಸಲು ತಮಗೆ ಸಾಧ್ಯ ಇಲ್ಲವೆಂದು ಶ್ರೀ ನಿಜಲಿಂಗಪ್ಪ ಅವರಿಗೆ ಫೋನಿನಲ್ಲಿ ರಾತ್ರಿ 8.10ರಲ್ಲಿ ಶ್ರೀಮತಿ ಗಾಂಧಿ ತಿಳಿಸಿದಾಗ ಸಂಧಾನ ಹಠಾತ್ತಾಗಿ ಕೊನೆಗೊಂಡಿತು.