ನವದೆಹಲಿ, ನ. 17- ಕಾಂಗ್ರೆಸ್ ಇಬ್ಭಾಗವಾದ ನಂತರ ಮೊದಲನೆಯ ಬಾರಿಗೆ ಇಂದು ಲೋಕಸಭೆಯಲ್ಲಿ ನಡೆದ ಬಲಾಬಲ ಪರೀಕ್ಷೆಯಲ್ಲಿ ಶ್ರೀಮತಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರ 163 ಮತಗಳ ನಿರಾತಂಕ ಬಹುಮತದಿಂದ ಭಾರಿ ವಿಜಯ ಗಳಿಸಿತು.
ರಬಾತ್ನಲ್ಲಿ ಭಾರತಕ್ಕೆ ಮುಖಭಂಗವಾದುದಕ್ಕೆ ಸರ್ಕಾರವನ್ನು ಖಂಡಿಸಬೇಕೆಂದು ಸ್ವತಂತ್ರ ಪಕ್ಷದ ಸದಸ್ಯ ಶ್ರೀ ಪಿಲೂ ಮೋದಿ ಅವರು ಮಂಡಿಸಿದ್ದ ನಿಲುವಳಿ ಸೂಚನೆಯನ್ನು ಐದೂವರೆ ಗಂಟೆಗಳ ಸುದೀರ್ಘ ಚರ್ಚೆಯ ನಂತರ ಮತಕ್ಕೆ ಹಾಕಿದಾಗ, ಅದರ ವಿರುದ್ಧ 306 ಮತಗಳೂ ಪರವಾಗಿ 143 ಮತಗಳೂ ಬಂದು ಅದು ತಿರಸ್ಕೃತವಾಯಿತು. ಇಬ್ಬರು ಮತ ನೀಡಲಿಲ್ಲ.
ರಾಷ್ಟ್ರ ಪ್ರತಿಷ್ಠೆ ನೆಲಸಮ– ಖಂಡನೆ
ನವದೆಹಲಿ, ನ. 17– ಕೇವಲ ಇಸ್ಲಾಂ ರಾಷ್ಟ್ರಗಳಿಗೇ ಸೀಮಿತವಾಗಿದ್ದ ರಬಾತ್ ಶೃಂಗಸಭೆಯಲ್ಲಿ ಭಾಗವಹಿಸಲು ಸರ್ಕಾರ ನಿರ್ಧರಿಸಿದುದು ಭಾರಿ ತಪ್ಪು. ರಬಾತ್ನಲ್ಲಿ ಭಾರತಕ್ಕಾದ ಮುಖಭಂಗದಿಂದ ರಾಷ್ಟ್ರದ ಪ್ರತಿಷ್ಠೆ ಮಣ್ಣುಪಾಲಾದಂತಾಯಿತು ಎಂದು ಆಚಾರ್ಯ ಜೆ.ಬಿ. ಕೃಪಲಾನಿಯವರು ಇಂದು ಸರ್ಕಾರವನ್ನು ಖಂಡಿಸಿದರು.
ಇಂದಿರಾ ಸರ್ಕಾರದ ಅರ್ಹತೆ: ನಿರ್ಧಾರ ಸ್ಪೀಕರ್ಗೆ ಸೇರಿದ್ದಲ್ಲ
ನವದೆಹಲಿ, ನ. 17– ಇಂದಿರಾ ನಾಯಕತ್ವದ ಸರ್ಕಾರ ಬಹುಮತ ಬೆಂಬಲ ಪಡೆದಿದೆಯೇ, ಅದು ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುತ್ತದೆಯೇ ಎಂಬ ಪ್ರಶ್ನೆಗಳನ್ನು ಇತ್ಯರ್ಥಗೊಳಿಸುವುದು ತಮ್ಮ ಅಧಿಕಾರ ವ್ಯಾಪ್ತಿಗೆ ಸೇರದ ವಿಷಯ ಎಂದು ಲೋಕಸಭೆ ಸ್ಪೀಕರ್ ಜಿ.ಎಸ್. ಧಿಲ್ಲಾನ್ ಇಂದು ರೂಲಿಂಗ್ ಇತ್ತರು.