ಕೇಂದ್ರ ಸಂಪುಟದ ಸಲಹೆ ಒಪ್ಪಿದರೆ ರಾಷ್ಟ್ರಪತಿ ದೋಷಾರೋಪಣೆಯೇ?
ಬೆಂಗಳೂರು, ಅ. 12– ಸುಮಾರು 22 ವರ್ಷಗಳ ಹಿಂದೆ, ಭಾರತದ ಸಂವಿಧಾನ ರೂಪಿಸುತ್ತಿದ್ದ ಸಭೆಯಲ್ಲಿ, ರಾಷ್ಟ್ರಪತಿಯ ಮೇಲೆ ದೋಷಾರೋಪಣೆ ಹೊರಿಸುವುದಕ್ಕೆ ಸಂಬಂಧಿಸಿದ ವಿಧಿಯ ಮೇಲೆ ಚರ್ಚೆ ನಡೆಯುತ್ತಿತ್ತು.
ಈಗ ಪಿ.ಎಸ್.ಪಿ.ಯಲ್ಲಿರುವ ಶ್ರೀ ಎಚ್.ವಿ.ಕಾಮತ್ ಅವರು, ರಾಷ್ಟ್ರಪತಿ ಅವರು ‘ಕೇಂದ್ರ ಮಂತ್ರಿಮಂಡಲದ ಸಲಹೆಯನ್ನು ಒಪ್ಪಲು ನಿರಾಕರಿಸಿದರೆ, ದೋಷಾರೋಪಣೆಗೆ ಬಾಧ್ಯರಾಗುವರೇ?’ ಎಂದು ಕೇಳಿದರು.
ಸಂವಿಧಾನ ಶಿಲ್ಪಿ ದಿವಂಗತ ಡಾ. ಬಿ.ಆರ್.ಅಂಬೇಡ್ಕರ್ ಅವರು, ‘ಈ ಬಗ್ಗೆ ಸ್ವಲ್ಪವೂ ಸಂಶಯವಿಲ್ಲ’ ಎಂದು ಉತ್ತರ ನೀಡಿದರು.
ಆಗ ಸಂವಿಧಾನ ಸಭೆಯಲ್ಲಿ ನಡೆದ ಈ ಚರ್ಚೆಯನ್ನು ಇಂದು ವರದಿಗಾರರಲ್ಲಿ ಪ್ರಸ್ತಾಪಿಸಿದ ಪಿ.ಎಸ್.ಪಿ. ಪ್ರಧಾನ ಕಾರ್ಯದರ್ಶಿ ಶ್ರೀ ಪ್ರೇಮ್ ಭಾಸಿನ್ ಅವರು, ‘ಇದು ಸಂವಿಧಾನದ ಸೃಷ್ಟಿಕರ್ತರ ಉದ್ದೇಶವಾಗಿತ್ತು. ಈಗ ರಾಷ್ಟ್ರಪತಿಗಳು ಮಂತ್ರಿಮಂಡಲದ ಶಿಫಾರಸನ್ನು ಒಪ್ಪಿಕೊಂಡದ್ದಕ್ಕೆ ದೋಷಾರೋಪಣೆಗೆ ಬಾಧ್ಯರಾಗುವರೇ ಎಂಬುದನ್ನು ಪರಿಶೀಲಿಸಬೇಕಾಗಿದೆ’ ಎಂದು ನಗುತ್ತ ಹೇಳಿದರು.
ಸಾಧ್ಯವಾದಷ್ಟು ಬೇಗ ನಗರ ಆಸ್ತಿ ಮಿತಿ ನಿಗದಿ
ಪಟ್ನಾ, ಅ. 12– ನಗರಗಳಲ್ಲಿ ಆಸ್ತಿ ಮೇಲೆ ಮಿತಿ ಹೇರಲು ಸಾಧ್ಯವಾದಷ್ಟು ಶೀಘ್ರವಾಗಿ ಶಾಸನ ರಚಿಸುವಂತೆ ರಾಜ್ಯ ಸರ್ಕಾರಗಳಿಗೆ ಕರೆ ನೀಡಬೇಕೆಂದು ಎಐಸಿಸಿಗೆ ಶಿಫಾರಸು ಮಾಡಲು ಆಡಳಿತ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಇಂದು ರಾತ್ರಿ ನಿರ್ಧರಿಸಿತು.