ಜಾತೀಯತೆ, ಹಣದ ಆಮಿಷದ ವಿರುದ್ಧ ವ್ಯಾಪಕ ಹೋರಾಟ ಅತ್ಯವಶ್ಯ: ಚುನಾವಣಾ ಆಯೋಗದ ಎಚ್ಚರಿಕೆ
ನವದೆಹಲಿ, ಏ. 12– ಕೆಲವರು ನಿರ್ದಿಷ್ಟ ಉಮೇದುವಾರರಿಗೆ ಬೆಂಬಲ ಕೊಡುವಂತೆ ದೀನದಲಿತರು ಮತ್ತು ಕೆಳ ಜಾತಿಗಳ ಮತದಾರರನ್ನು ಪ್ರಬಲರಾದ ಮೇಲು ಜಾತಿಯವರು ಬೆದರಿಸುವುದರಿಂದ ಚುನಾವಣೆಗಳಲ್ಲಿ ಜಾತೀಯತೆಯ ದುಷ್ಪರಿಣಾಮಗಳ ಪಾತ್ರ ಕರಾಳವಾಗಿರುತ್ತದೆ.
1968– 69ರ ಮಧ್ಯಂತರ ಚುನಾವಣೆಗಳ ಬಗೆಗೆ ಚುನಾವಣಾ ಆಯೋಗವು ಸಮೀಕ್ಷೆ ನಡೆಸಿ ವರದಿ ನೀಡಿದೆ. ಮತದಾರರಿಗೆ ಲಂಚ ಕೊಡುವುದೂ ಸೇರಿ ಭ್ರಷ್ಟಾಚಾರಗಳಲ್ಲಿ ತೊಡಗಲು ಕೆಲವರು ಅಭ್ಯರ್ಥಿಗಳು ‘ದೊಡ್ಡ ಹಣವಂತರನ್ನು’ ಬಳಸಿಕೊಳ್ಳುವುದು ಎದುರಿಸಬೇಕಾಗಿರುವ ಇನ್ನೊಂದು ಪಿಡುಗು ಎಂದು ಹೇಳಿದೆ.
ಚಂದ್ರನಿಂದ ಅರ್ಧದಷ್ಟು ದೂರದಲ್ಲಿ ಅಪೊಲೊ– 13 ಯಾತ್ರಿಗಳಿಗೆ ವಿರಾಮ
ಹ್ಯೂಸ್ಟನ್, ಏ. 12– ಶನಿವಾರ ರಾತ್ರಿ ಹಾರಿಸಲಾದ ಅಪೊಲೊ– 13 ಬಾಹ್ಯಾಂತರಿಕ್ಷ ನೌಕೆ ಈಗ ಭೂಮಿಯಿಂದ ಅರವತ್ತೆರಡು ಸಾವಿರ ಮೈಲಿ ದೂರದಲ್ಲಿದ್ದು ಸೆಕೆಂಡಿಗೆ 2,100 ಮೀಟರ್ ವೇಗದಲ್ಲಿ ಚಂದ್ರಗ್ರಹದತ್ತ ಯಾನ ಮಾಡುತ್ತಿದೆ.
ಮೂವರು ಗಗನಯಾತ್ರಿಗಳು ಇಂದು ಹತ್ತು ಗಂಟೆ ಕಾಲ ವಿಶ್ರಾಂತಿ ಪಡೆದರು.