ಆಗಸ್ಟ್ ಹೊತ್ತಿಗೆ ಗಡಿ ಪ್ರಶ್ನೆ ಇತ್ಯರ್ಥ: ನಾಯಕ್ ನಿರೀಕ್ಷೆ
ಮುಂಬಯಿ, ಜೂನ್ 17– ಮಹಾರಾಷ್ಟ್ರ ವಿಧಾನಸಭೆ ಅಧಿವೇಶನ ಸೇರಲಿರುವ ಆಗಸ್ಟ್ ಮೂರನೇ ತಾರೀಖಿಗೆ ಮೊದಲು ಮೈಸೂರು– ಮಹಾರಾಷ್ಟ್ರ ಗಡಿ ವಿವಾದ ಕುರಿತು ಕೇಂದ್ರ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಬಹುದೆಂದು ತಾವು ಭಾವಿಸಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ವಿ.ಪಿ.ನಾಯಕ್ ಇಂದು ತಿಳಿಸಿದರು.
ಇತ್ತೀಚೆಗೆ ತಾವು ದೆಹಲಿಗೆ ಭೇಟಿ ನೀಡಿದ್ದಾಗ ಗಡಿ ಸಮಸ್ಯೆ ಕುರಿತು ಪ್ರಧಾನಿ ಮತ್ತು ಆಂತರಿಕ ವ್ಯವಹಾರ ಸಮಿತಿಯ ಇತರ ಸದಸ್ಯರೊಡನೆ ಚರ್ಚೆ ನಡೆಸಿದುದಾಗಿ ನಾಯಕ್ ಹೇಳಿದರು.
ಬೆಳಗಾವಿ ಮಹಾರಾಷ್ಟ್ರಕ್ಕೆ; ಕಾರವಾರ, ಹಳಿಯಾಳ ಹಾಗೂ ಸೂಪ ಮೈಸೂರಿನಲ್ಲೇ?
ನವದೆಹಲಿ, ಜೂನ್ 17– ಮೈಸೂರಿಗೆ ಹೊಂದಿಕೊಂಡಂತಿದ್ದು ಕನ್ನಡಿಗರು ಬಹುಸಂಖ್ಯೆಯಲ್ಲಿರುವ ಒಂದು ವಾರ್ಡ್ ಅನ್ನು ಬಿಟ್ಟು ಉಳಿದ ಬೆಳಗಾವಿ ನಗರವನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸುವ ಹೊಸ ಗಡಿ ಪರಿಹಾರ ಸೂತ್ರವೊಂದನ್ನು ಕೇಂದ್ರ ರೂಪಿಸಿದೆಯೆಂದು ಮುಂಬೈನ ಆಂಗ್ಲ ದೈನಿಕವೊಂದು ವರದಿ ಮಾಡಿದೆ.
ಪ್ರಧಾನ ಮಂತ್ರಿಯು ರೂಪಿಸಿರುವ ಈ ಸೂತ್ರವು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಗೂ ಒಪ್ಪಿಗೆಯಾಗುವ ಸಂಭವವಿದೆಯಂತೆ.