ನವದೆಹಲಿ, ಜೂನ್ 15– ಕೇಂದ್ರ ಸಂಪುಟದ ಪುನರ್ರಚನೆ ಬಗೆಗೆ ಪ್ರಧಾನಿ ಇಂದಿರಾ ಗಾಂಧಿಯವರು ಇನ್ನು ನಾಲ್ಕೈದು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆಂದು ತಿಳಿದುಬಂದಿದೆ.
ಈ ಬಾರಿಯ ಪುನರ್ರಚನೆಯಲ್ಲಿ ದಕ್ಷಿಣ ಭಾರತಕ್ಕೆ, ಅದರಲ್ಲೂ ಮೈಸೂರಿಗೆ ಸೂಕ್ತ ಪ್ರಾತಿನಿಧ್ಯ ನೀಡುವ ಅಪೇಕ್ಷೆ ಪ್ರಧಾನಿಗಿದೆಯೆಂದು ತಿಳಿದುಬಂದಿದೆ.
ಮೈಸೂರಿನ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಜೊತೆಗೆ ಲೋಕಸಭೆ ಸದಸ್ಯ ಶ್ರೀ ಎಂ.ವಿ. ಕೃಷ್ಣಪ್ಪನವರನ್ನೂ ಸ್ಟೇಟ್ ಸಚಿವರಾಗಿ ನೇಮಕ ಮಾಡುವ ಸೂಚನೆಗಳಿವೆ.
ನೇಮಕವಾಗಲಿದ್ದಾರೆಂದು ಕೇಳಿ ಬರುತ್ತಿರುವ ಅನೇಕ ಉಪಸಚಿವರುಗಳ ಹೆಸರಿನಲ್ಲಿ ‘ಯಂಗ್ ಟರ್ಕ್’ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಚಂದ್ರಜಿತ್ ಯಾದವ್ರವರ ಹೆಸರೂ ಸೇರಿದೆ.
ಚೀನಾದೊಡನೆ ಸದ್ಯಕ್ಕೆ ಬಾಂಧವ್ಯ ಸುಧಾರಣೆ ಲಕ್ಷಣಗಳಿಲ್ಲ: ಸ್ವರಣ್
ನವದೆಹಲಿ, ಜೂನ್ 15– ರಾಷ್ಟ್ರದ ಪರಮಾಧಿಕಾರ ಮತ್ತು ಸಮಗ್ರತೆಯನ್ನು ಕಾಪಾಡುವ ಮೂಲಭೂತ ತತ್ವಗಳ ಚೌಕಟ್ಟಿನಲ್ಲಿ ಚೀನಾದೊಡನೆ ಶಾಂತಿ ಸಂಬಂಧ ಸಾಧ್ಯವಿದ್ದರೆ ಭಾರತ ಅದಕ್ಕೆ ಪ್ರಯತ್ನಿಸದಿರದೆಂದು ರಕ್ಷಣಾ ಸಚಿವ ಶ್ರೀ ಸ್ವರಣ್ ಸಿಂಗ್ ಇಂದು ಘೋಷಿಸಿದರು.
ಎಐಸಿಸಿ (ಆಡಳಿತ) ಅಧಿವೇಶನದಲ್ಲಿ ವಿದೇಶಾಂಗ ನೀತಿ ನಿರ್ಣಯ ಮಂಡಿಸಿ ಮಾತನಾಡಿದ ಶ್ರೀ ಸ್ವರಣ್ ಸಿಂಗ್ ಅವರು, ಆದರೆ ಉಭಯ ದೇಶಗಳ ನಡುವಣ ಬಾಂಧವ್ಯ ಸುಧಾರಿಸತೊಡಗುವ ಲಕ್ಷಣಗಳಿನ್ನೂ ಕಂಡುಬಂದಿಲ್ಲವೆಂದರು.