ಗೋದಾವರಿ ದಂಡೆ ಐವತ್ತು ಗ್ರಾಮಗಳ ಮೇಲೆ ಉಗ್ರಗಾಮಿ ಕಮ್ಯುನಿಸ್ಟ್ ಹತೋಟಿ
ಖಮ್ಮಮ್, ಮಾ. 1– ಮೂವತ್ತು ಮಂದಿ ಉಗ್ರಗಾಮಿ ಕಮ್ಯುನಿಸ್ಟರ ತಂಡವೊಂದು ಶಸ್ತ್ರ ಸಜ್ಜಿತರಾಗಿ ವಾರಾಂಗಲ್ನಿಂದ ಖಮ್ಮಮ್ಗೆ ಪ್ರವೇಶಿಸಿ ಮೂಗೂರು ಮತ್ತು ವೆಂಕಟಪುರಂ ಫಿರ್ಕಾಗಳ ‘ಕೋಯಾ’ (ಗಿರಿಜನರ ತಾಂಡಾ)ಗಳನ್ನು ಬೆಂಬಲಿಸಿದರೆಂದು ವರದಿಯಾಗಿದೆ.
ಶ್ರೀಕಾಕುಳಂನ ಬಸ್ತಾರ್ ಮತ್ತು ಪಾರ್ವತಿಪುರಂ ನಕ್ಸಲೀಯರ ಜತೆ ಈ ಕಮ್ಯುನಿಸ್ಟರು ಸಂಬಂಧ ಹೊಂದಿದವರೆಂದು ಹೇಳಲಾಗಿದೆ.
ಕರೀಂನಗರ ಜಿಲ್ಲೆಯ ಮಹದೇವಪುರಂ ಅರಣ್ಯ ಪ್ರದೇಶದ ಗೋದಾವರಿ ದಂಡೆಯ ಮೇಲಿನ ಸುಮಾರು 50 ಗ್ರಾಮಗಳ ಮೇಲೆ ಈ ಕಮ್ಯುನಿಸ್ಟರು ಹತೋಟಿ ಸ್ಥಾಪಿಸಿದ್ದಾರೆಂದು ವರದಿಯಾಗಿದೆ.
ಕಮ್ಯುನಿಸ್ಟ್ ಪಿಡುಗನ್ನು ತಡೆಯಲು ಮಡೆಗು ಮತ್ತು ಪೆರೂರು ಗ್ರಾಮಗಳಲ್ಲಿ ಪೊಲೀಸ್ ಶಿಬಿರ ತೆರೆಯಲು ವೆಂಕಟಪುರಂ ವಾಸಿಗಳು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಪ್ರತ್ಯೇಕ ತೆಲಂಗಾಣ ರಚನೆಗೆ 8 ಮಂದಿ ಸಚಿವರ ವಿರೋಧ
ಹೈದರಾಬಾದ್, ಮಾ. 1– ಪ್ರತ್ಯೇಕ ತೆಲಂಗಾಣ ರಾಜ್ಯ ಬೇಕೆಂಬ ಬೇಡಿಕೆಯನ್ನು ಎಂಟು ಮಂದಿ ತೆಲಂಗಾಣ ಸಚಿವರು ಇಂದು ವಿರೋಧಿಸಿದರು.
ಪ್ರತ್ಯೇಕ ತೆಲಂಗಾಣ ಅಥವಾ ಪ್ರತ್ಯೇಕ ಆಂಧ್ರ ರಾಜ್ಯ ಬದುಕಲಾರದು. ಒಂದು ಪಕ್ಷ ಹಾಗೆ ಪ್ರತ್ಯೇಕ ರಾಜ್ಯವಾಗಿ ಬದುಕಿದರೂ ಅವು ಯಾವುದೂ ಪ್ರಕೃತಿ ದತ್ತವಾಗಿರುವ ಸಂಪನ್ಮೂಲವನ್ನು ಬಳಸಿಕೊಳ್ಳುವುದಕ್ಕೆ ಸಮರ್ಥವಾಗುವುದಿಲ್ಲ ಎಂದೂ ಅವರು ತಿಳಿಸಿದರು.
ಮುಖ್ಯಮಂತ್ರಿ ಶ್ರೀ ಕೆ. ಬ್ರಹ್ಮಾನಂದ ರೆಡ್ಡಿ ಅವರ ಜೊತೆ ಚರ್ಚೆ ನಡೆಸಿದನಂತರ ಅವರು ಸಂಯುಕ್ತ ಹೇಳಿಕೆ ನೀಡಿದ್ದಾರೆ.