ಬೆಂಗಳೂರು, ಏ. 8– ರಾಜ್ಯದ ಆಡಳಿತದಲ್ಲಿ ಪ್ರಾದೇಶಿಕ ಅಸಮತೆ ಮತ್ತು ಜಾತೀಯತೆಯ ಆಪಾದನೆಯನ್ನು ಇಂದು ವಿಧಾನ ಮಂಡಲದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮಾಡಲಾಯಿತೆಂದು ತಿಳಿದುಬಂದಿದೆ.
ಶಿವಮೊಗ್ಗೆಯ ಶ್ರೀ ಎ.ಆರ್. ಬದರೀನಾರಾಯಣ್ ಅವರು ಮುಖ್ಯಮಂತ್ರಿಯವರಿಗೆ ಬರೆದ ಒಂದು ಪತ್ರ ಚರ್ಚೆಗೆ ಬಂದಾಗ ಈ ಆಪಾದನೆಗಳನ್ನು ಮಾಡಲಾಯಿತೆಂದು ವರದಿಯಾಗಿದೆ.
ರಾಯಚೂರು ಬಳಿ ನಮ್ಮ ಪ್ರದೇಶದೊಳಗೆ ಆಂಧ್ರ ಗಡಿಕಂಬ ನೆಟ್ಟಿಲ್ಲ– ಪಾಟೀಲ್
ಬೆಂಗಳೂರು, ಏ. 8– ರಾಯಚೂರು ತಾಲ್ಲೂಕಿನ ಸಿಂಗನುಡಿ ಗ್ರಾಮದಲ್ಲಿ ಗಡಿಕಂಬಗಳನ್ನು ನೆಟ್ಟು, ಆಂಧ್ರಪ್ರದೇಶ ಸರ್ಕಾರ, ಮೈಸೂರಿನ ಮೂರು ಮೈಲಿಗಳುದ್ದದ ಪ್ರದೇಶವನ್ನು ಅತಿಕ್ರಮಿಸಿದೆ ಎಂಬ ವರದಿಯನ್ನು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ವಿಧಾನ ಸಭೆಯಲ್ಲಿ ನಿರಾಕರಿಸಿದರು.
ಜಿಲ್ಲಾಧಿಕಾರಿಗಳು ಇಂದು ಬೆಳಿಗ್ಗೆ ಗ್ರಾಮಕ್ಕೆ ಭೇಟಿ ನೀಡಿ ನಡೆಸಿದ ಪರಿಶೀಲನೆಯ ಪ್ರಕಾರ ಅಂಥ ಯಾವುದೇ ಅತಿಕ್ರಮಣ ನಡೆದುದು ಕಂಡುಬಂದಿಲ್ಲ ಎಂದು ಅವರು ಪ್ರಶ್ನೋತ್ತರ ಕಾಲದ ನಂತರ ಹಲವಾರು ಸದಸ್ಯರು ಎತ್ತಿದ ಸೂಚನೆಗಳಿಗೆ ಉತ್ತರವಾಗಿ ಹೇಳಿದರು.
ಹಿಟ್ಲರ್ ಆಸೆ
ನ್ಯೂಯಾರ್ಕ್, ಏ. 8– ತಮ್ಮ ಜರ್ಮನ್ ಸಾಮ್ರಾಜ್ಯಕ್ಕೆ ಅಟಾಟೋಪದ ರಾಜಧಾನಿಯೊಂದು ಅಗತ್ಯವೆಂದೂ, ಅದಕ್ಕಾಗಿ ಬರ್ಲಿನ್ ನಗರವನ್ನು ಪುನರ್ ನಿರ್ಮಿಸಲು ಯೋಜನೆ ಸಿದ್ಧಪಡಿಸಬೇಕೆಂದೂ ಅಡಾಲ್ಫ್ ಹಿಟ್ಲರ್ 1936ರ ಬೇಸಿಗೆಯಲ್ಲಿ ಆಜ್ಞೆ ಮಾಡಿದ್ದರು.
ಈ ಯೋಜನೆಯನ್ನು ಕಾರ್ಯಗತಗೊಳಿಸಲು ಹಿಟ್ಲರ್ ಆಯ್ಕೆ ಮಾಡಿದ ವ್ಯಕ್ತಿ ಆಲ್ಬರ್ಟ್ ಸ್ಫೀರ್, ನಾಜಿ ಜರ್ಮನಿಯಲ್ಲಿ ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳ ಮಂತ್ರಿಯಾಗಿದ್ದಾಗ ಎಸಗಿದ ಯುದ್ಧಾಪರಾಧಗಳಿಗಾಗಿ 20 ವರ್ಷ ಶಿಕ್ಷೆ ಅನುಭವಿಸಿದ್ದನು.