ತೆಲಂಗಾಣ: ಕೇಂದ್ರದ ಧೋರಣೆಯಲ್ಲಿ ಬದಲಾವಣೆ ಇಲ್ಲವೆಂದುಬ್ರಹ್ಮಾನಂದರೆಡ್ಡಿ
ನವದೆಹಲಿ, ಜೂನ್ 18– ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ಕೆ. ಬ್ರಹ್ಮಾನಂದರೆಡ್ಡಿ ಅವರು ಕೇಂದ್ರ ನಾಯಕರ ಜೊತೆ ಇಂದು ಮಾತುಕತೆಗಳನ್ನು ನಡೆಸಿದರು.
‘ತೆಲಂಗಾಣ ಚಳವಳಿ ಬಗ್ಗೆ ಕೇಂದ್ರದ ಧೋರಣೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ’ ಎಂದು ಪತ್ರಕರ್ತರಿಗೆ ತಿಳಿಸಿದರು.
ಶ್ರೀ ಬ್ರಹ್ಮಾನಂದರೆಡ್ಡಿ ಅವರು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ, ಕೇಂದ್ರ ಗೃಹಮಂತ್ರಿ ಶ್ರೀ ವೈ.ಬಿ. ಚವಾಣ್, ಉಪಪ್ರಧಾನಿ ಶ್ರೀ ಮುರಾರಜಿ ದೇಸಾಯಿ ಮತ್ತು ಕೇಂದ್ರ ಆಹಾರ ಮಂತ್ರಿ ಜಗಜೀವನರಾಂ ಅವರ ಜೊತೆ ತೆಲಂಗಾಣ ಸಮಸ್ಯೆ ಬಗ್ಗೆ ಮಾತುಕತೆ ನಡೆಸಿದರು.
ಇಂದಿರಾ ಬಲಪರೀಕ್ಷೆ ಸನ್ನಾಹ
ನವದೆಹಲಿ, ಜೂನ್ 18– ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನು ಹೆಸರಿಸುವ ಪ್ರಶ್ನೆ ಕಾಂಗ್ರೆಸ್ ಪಕ್ಷದಲ್ಲಿ ಇಂದಿರಾ ಗಾಂಧಿ ಮತ್ತು ಅವರ ವಿರೋಧಿಗಳ ನಡುವೆ ಬಲಾಬಲಗಳ ಪರೀಕ್ಷೆಯಾಗುವ ಸಂಭವವಿದೆ. ಉಪ ರಾಷ್ಟ್ರಪತಿ ಸ್ಥಾನಕ್ಕೆ ಸರ್ದಾರ್ ಸ್ವರ್ಣಸಿಂಗರ ಹೆಸರು ಬಲವಾಗಿ ಕೇಳಿಬರುತ್ತಿದೆ.
ನಿಜಲಿಂಗಪ್ಪನವರ ಹೆಸರು ರಾಷ್ಟ್ರಪತಿ ಸ್ಥಾನಕ್ಕೆ ಸೂಚಿತವಾದರೆ ಇದು ರಾಜೀ ಸೂತ್ರವಾಗುವ ಸಾಧ್ಯತೆ ಇದೆ.