ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯ ಬಿತ್ತನೆಗೆ ಕಥನದ ಕ್ರಮ

ರಾಷ್ಟ್ರೀಯ ಶಿಕ್ಷಣ ನೀತಿ ಪ್ರತಿಪಾದಿಸುವ ಮೌಲ್ಯಗಳನ್ನು ತತ್ವದ ರೂಪದಲ್ಲಿ ಅಲ್ಲದೆ ಕಥನದ ರೂಪದಲ್ಲಿ ನಿರೂಪಿಸಬೇಕಾದ ಅಗತ್ಯವಿದೆ
Last Updated 11 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ದೇಶದ ಮುಂದಿನ ಯುವಪೀಳಿಗೆಯನ್ನು ಬೌದ್ಧಿಕ ನೆಲೆಯಲ್ಲಿ ಉನ್ನತವಾಗಿ, ನೈತಿಕ ನೆಲೆಯಲ್ಲಿ ಸ್ವಚ್ಛವಾಗಿ ಹಾಗೂ ಸಾಂಸ್ಕೃತಿಕ ನೆಲೆಯಲ್ಲಿ ಶ್ರೀಮಂತವಾಗಿ ರೂಪಿಸಿ ಸರ್ವಸಮಗ್ರ ವಿದ್ಯಾರ್ಥಿಗಳನ್ನು ಕಟ್ಟಿಕೊಡುವ ಆಶಯವನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಹೊಂದಿದೆ. ಅದನ್ನು ಜಾರಿಗೊಳಿಸುವ ಸಂಬಂಧ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ರಾಜ್ಯ ಪಾಲರು ಹಾಗೂ ಉನ್ನತ ಶಿಕ್ಷಣ ಸಚಿವರುಸಭೆ ನಡೆಸಿರುವುದು ಸಂತೋಷದ ವಿಷಯ.

ನೂತನ ನೀತಿಯು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲವು ಸ್ಪಷ್ಟ ಅಭಿಪ್ರಾಯಗಳನ್ನು ಮಂಡಿಸಿದ್ದು ಅವು ಈ ಕೆಳಗಿನಂತಿವೆ:

l ಸಾಂವಿಧಾನಿಕ ಮೌಲ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸಮಗ್ರವಾದ ಬಹುಶಿಸ್ತಿನ ಮಾನ್ಯತೆ ಹೊಂದಿರುವ ಉದಾರ ಶಿಕ್ಷಣವು ಉನ್ನತ ಶಿಕ್ಷಣದ ಆಧಾರವಾಗಿದೆ.

l ಕಲೆ, ವಿಜ್ಞಾನ, ಮಾನವಿಕ ಮತ್ತು ವೃತ್ತಿಪರ
ಕ್ಷೇತ್ರಗಳನ್ನು ಒಟ್ಟಾಗಿ ಬೆಸೆದು ಉದಾರವಾದಿಯಾದ ಪದವಿ ಶಿಕ್ಷಣವನ್ನು ಜಾರಿಗೊಳಿಸಲಾಗುವುದು.

lಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಲಿಬರಲ್ ಆರ್ಟ್ಸ್ ಎಂಬ ಹೊಸ ಸಂಸ್ಥೆಯನ್ನು ಈ ದಿಸೆಯಲ್ಲಿ ಸ್ಥಾಪಿಸಲಾಗುವುದು.

l ಎಲ್ಲ ಭಾರತೀಯ ಭಾಷೆಗಳಿಗೆ ಉತ್ತೇಜನ ಕೊಡುವುದಕ್ಕಾಗಿ ಅವುಗಳ ಬೆಳವಣಿಗೆ ಮತ್ತು ಜೀವಂತಿಕೆಯನ್ನು ಕಾಪಾಡಲಾಗುವುದು.

ಈ ಅಂಶಗಳನ್ನು ಗಮನದಲ್ಲಿಟ್ಟು ಇಲಾಖೆಯು ಉನ್ನತ ಶಿಕ್ಷಣವನ್ನು ಪುನರ್‌ರಚಿಸುವಾಗ, ಈಗಾಗಲೇ ಇರುವ ಕೆಲವು ಹಳೆಯ ನಿಯಮಗಳ ಚೌಕಟ್ಟುಗಳನ್ನು ಮುರಿಯಬೇಕಾಗುತ್ತದೆ, ಮುರಿಯಬೇಕು ಕೂಡ.

ರಾಷ್ಟ್ರೀಯ ಶಿಕ್ಷಣ ನೀತಿ ಪ್ರತಿಪಾದಿಸುವ ಯಾವುದೇ ಮೌಲ್ಯಗಳನ್ನು ತತ್ವದ ರೂಪದಲ್ಲಿ ಕೊಟ್ಟಲ್ಲಿ ಅದು ವಿದ್ಯಾರ್ಥಿಗಳನ್ನು ಸೆಳೆಯಲಾರದು ಅಥವಾ ಆ ವಯಸ್ಸಿನಲ್ಲಿ ಅವರು ಅದನ್ನು ನಿರ್ಲಕ್ಷಿಸಬಹುದು. ಆದರೆ ಮೌಲ್ಯಾದರ್ಶಗಳನ್ನು, ನೈತಿಕಾನೈತಿಕತೆಯ ಪ್ರಶ್ನೆಗಳನ್ನು ಕಥನದ ರೂಪದಲ್ಲಿ ನಿರೂಪಿಸಿದರೆ ಸತ್ಪರಿಣಾಮವನ್ನು ಬೀರಬಲ್ಲದು. ಕಥನದ ಮೂಲಕವಲ್ಲದೆ ಬೇರಾವ ರೂಪದಿಂದಲೂ ಆ ವಯಸ್ಸಿನಲ್ಲಿ ಅವರಿಗೆ ಅದನ್ನು ಊಡಿಸಲು ಸಾಧ್ಯವಿಲ್ಲ.

ಸಂವಿಧಾನ ಹೇಳುವ ಮೌಲ್ಯಗಳು, ನಮ್ಮ ಅಭಿಜಾತ ಮತ್ತು ಜನಪದೀಯ ಪರಂಪರೆಗಳು ಚಿಂತನೆ ನಡೆಸುವ ನೈತಿಕತೆಯ ಅಂಶಗಳು ಎಲ್ಲವೂ ಭಾರತೀಯ ಮತ್ತು ಕನ್ನಡ ಸಾಹಿತ್ಯದಲ್ಲಿ ಲಾಗಾಯ್ತಿನಿಂದಲೇ ಇವೆ. ಹಾಗಾಗಿ ಹೊಸ ನೀತಿಯ ಸಂಕಲ್ಪದಲ್ಲಿರುವ ಈ ಅಂಶಗಳನ್ನು ಕಥನಗಳ ಮೂಲಕ ಜಾರಿಗೊಳಿಸುವ ಬಗ್ಗೆ ಇಲಾಖೆ ಚಿಂತನೆ ನಡೆಸಬೇಕಾಗಿದೆ. ಸಾಂಪ್ರದಾಯಿಕ ಪದವಿಗಳಿಂದ ವೃತ್ತಿಪರ ಶಿಕ್ಷಣವನ್ನು ಪಡೆಯುವವರೆಗಿನ ಪದವಿಗಳ ಎಲ್ಲ ಸೆಮಿಸ್ಟರ್‌ಗಳಲ್ಲಿ ಮತ್ತು ಸ್ನಾತಕ ಪದವಿಗಳ ಎಲ್ಲ ಸೆಮಿಸ್ಟರ್‌ಗಳಲ್ಲಿ ಕಥನಗಳ ಮೂಲಕ ಮಾನವೀಯ ಮೌಲ್ಯಗಳನ್ನು ಮನಗಾಣಿಸಿಕೊಡಬೇಕಾದ ಜರೂರಿದೆ.

ಉನ್ನತ ಶಿಕ್ಷಣದ ಈಗಿನ ಪಠ್ಯಕ್ರಮವು ವಸ್ತು ವಿವರಣೆಯನ್ನು ಕೊಡುವಲ್ಲಿ ವಿರಮಿಸುತ್ತದೆಯೇ ವಿನಾ ಶೋಧನೆಯ ಆಸಕ್ತಿಯನ್ನು ಹುಟ್ಟಿಸುವುದಿಲ್ಲ. ಇಂತಹ ಅಡೆತಡೆಗಳಿಂದ ಸ್ವತಂತ್ರ ಚಿಂತನೆಯಾಗಲೀ ಬೌದ್ಧಿಕ ಸಾಹಸವಾಗಲೀ ಸಾಧ್ಯವಿಲ್ಲ. ಅಂತಹ ತೊಡಕುಗಳನ್ನು ನಿವಾರಿಸುವ ಭಾಗವಾಗಿ, ಆಳವಾದ ಆಲೋಚನೆಯನ್ನು ಉದ್ದೀಪಿಸುವ, ಲೋಕಹಿತವನ್ನು ಬಯಸುವ ದಾರ್ಶನಿಕ ಚಿಂತನೆಗಳನ್ನು ತಮ್ಮ ಕಾಣ್ಕೆಯ ಬಲದಿಂದ ಸ್ವತಃ ಕಾಣುವ ಶಕ್ತಿಯುಳ್ಳ ವಿದ್ಯಾರ್ಥಿಗಳನ್ನು ರೂಪಿಸುವ ಕೆಲಸವನ್ನು ಮಾಡಬೇಕಾಗಿದೆ.

ಉನ್ನತ ಶಿಕ್ಷಣ ಸಂಸ್ಥೆಯ ಕೆಲಸವು ಪಾಠಪ್ರವಚನ ಮಾಡುವುದಷ್ಟೇ ಅಲ್ಲ. ಜಿಜ್ಞಾಸುಗಳಿಗೆ ಅನ್ವೇಷಣೆಯ ದಾರಿಯನ್ನು ಹುಡುಕುವುದಕ್ಕೆ ಅಥವಾ ದಾರಿಯನ್ನು ರೂಪಿಸುವುದಕ್ಕೆ ಬೇಕಾದ ಅನುಕೂಲಗಳನ್ನು ಮಾಡಿಕೊಡುವುದೂ ಆಗಿದೆ. ‘ಶೈಕ್ಷಣಿಕ ಸ್ವಾಯತ್ತತೆ’ಯನ್ನು ಅರ್ಥಪೂರ್ಣವಾಗಿ ಉಪಯೋಗಿಸಿಕೊಂಡು ಶೈಕ್ಷಣಿಕ ಸಂಸ್ಕೃತಿಯನ್ನು ಬೆಳೆಸುವ ಲೋಕವಾಗಿ ಅದು ರೂಪುಗೊಳ್ಳಬೇಕು. ಈ ಪ್ರಕ್ರಿಯೆಗೆ ಸಾಹಿತ್ಯದ ಮೂಲಕ ನಡೆಸಲಾದ ಚಿಂತನೆಗಳ ಮತ್ತು ಸಾಹಿತ್ಯಕ ಚಿಂತನೆಗಳ ಮಾರ್ಗದರ್ಶನ ಬೇಕಾಗಿದೆ.

ಈ ಕಾರಣದಿಂದ ಸ್ನಾತಕಪೂರ್ವ (ಯುಜಿ) ಮತ್ತು ಸ್ನಾತಕ ಪದವಿಯ (ಗ್ರ್ಯಾಜುವೇಶನ್) ಎಲ್ಲ ನಿಕಾಯಗಳಲ್ಲಿ ಮತ್ತು ಎಲ್ಲ ಸೆಮಿಸ್ಟರ್‌ಗಳಲ್ಲಿ ಸಾಹಿತ್ಯದ ಕಥನಗಳನ್ನು ವಿದ್ಯಾರ್ಥಿಗಳು ವಾರಕ್ಕೆ ನಾಲ್ಕು ಗಂಟೆಗಳಂತೆ ಕಡ್ಡಾಯವಾಗಿ ಓದುವಂತೆ ಮತ್ತು ಅದರ ಗುಣಾಂಶಗಳನ್ನು ನಿಗದಿಗೊಳಿಸುವಂತೆ ನಮ್ಮ ಕೋರ್ಸುಗಳನ್ನು ನಾವು ಹೊಸದಾಗಿ ರೂಪಿಸಬೇಕಿದೆ. ಈ ಹಂತಗಳಲ್ಲಿ ಕನ್ನಡದ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನೂ ಕನ್ನಡೇತರ ವಿದ್ಯಾರ್ಥಿಗಳು ಇಂಗ್ಲಿಷ್ ಸಾಹಿತ್ಯವನ್ನೂ ಓದುವುದು ಹೆಚ್ಚು ಉಪಯುಕ್ತವಾಗಬಲ್ಲದು. ಸಾಹಿತ್ಯ ಅಧ್ಯಯನದ ಮೂಲಕ ಭಾಷೆಯನ್ನು ಕಲಿಯುವುದು ಮತ್ತು ವಿವೇಕವನ್ನು ರೂಢಿಸಿಕೊಳ್ಳುವುದು ಎಂಬ ಎರಡೂ ಕೆಲಸಗಳು ಈ ಒಂದು ನಿರ್ಧಾರದಿಂದ ಕೈಗೂಡುತ್ತವೆ.

ಸಾಹಿತ್ಯದ ಓದು ಮತ್ತು ಅಧ್ಯಯನವು ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಲಿಬರಲ್ ಆರ್ಟ್ಸ್’ ಎಂಬ ಸಂಸ್ಥೆಯನ್ನು ಸ್ಥಾಪಿಸುವ ಶಿಕ್ಷಣ ನೀತಿಯ ಹೊಸ ಕನಸಿಗೂ ಇಂಬು ಕೊಡಬಲ್ಲದು. ಹಾಗೆಯೇ ‘ಎಲ್ಲ ಭಾರತೀಯ ಭಾಷೆಗಳಿಗೆ ಉತ್ತೇಜನ ಕೊಡುವುದಕ್ಕಾಗಿ ಅವುಗಳ ಬೆಳವಣಿಗೆ ಮತ್ತು ಜೀವಂತಿಕೆಯನ್ನು ಕಾಪಾಡುವುದನ್ನು ರಾಷ್ಟ್ರೀಯ ಶಿಕ್ಷಣ ನೀತಿಯು ಖಾತರಿ ಪಡಿಸುತ್ತದೆ’ ಎಂಬ ನೀತಿ-ನಿರೂಪಕರ ಮಾತನ್ನೂ ಸಮರ್ಥಿಸಿದಂತಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT