ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಮಾನವ ಸಂಪನ್ಮೂಲ: ಅಸಮಾನ ಹಂಚಿಕೆ

ಯಾವ ಕ್ಷೇತ್ರದಲ್ಲಿ ಎಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂಬ ಕುರಿತು ಸರ್ಕಾರ ಅಂಕಿಅಂಶ ಒದಗಿಸಿ ವಿದ್ಯಾರ್ಥಿಗಳ ಹಿತ ಕಾಯಬೇಕಿದೆ
Last Updated 5 ಮೇ 2022, 19:31 IST
ಅಕ್ಷರ ಗಾತ್ರ

ಮುಂದೇನು ಓದುವುದು? ಯಾವ ಪದವಿ ಅಥವಾ ಕೋರ್ಸು ಮುಗಿಸಿದರೆ ಕೆಲಸ ಸಿಗಲಿದೆ? ಯಾವ ಕ್ಷೇತ್ರದಲ್ಲಿ ಗುಣಮಟ್ಟದ ಉದ್ಯೋಗಾವಕಾಶಗಳಿವೆ? ಈ ಪ್ರಶ್ನೆಗಳು ಹಿಂದಿನಿಂದಲೂ ಕಾಲೇಜು ಹಂತದ ವಿದ್ಯಾರ್ಥಿಗಳನ್ನು ಕಾಡುತ್ತಲೇ ಬಂದಿವೆ. ನಿರುದ್ಯೋಗ ಸಮಸ್ಯೆ ಮತ್ತು ಗುಣಮಟ್ಟದ ಉದ್ಯೋಗಗಳ ಅಲಭ್ಯತೆ ಹೆಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ವಿದ್ಯಾರ್ಥಿಗಳ ಎದುರು ಇರುವ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನೆರವಾಗಬಹುದಾದ ಅಂಕಿ-ಅಂಶಗಳನ್ನು ಒದಗಿಸಲು ಸರ್ಕಾರ ಮುಂದಾಗಬೇಕಿದೆ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವ ಕಾರ್ಯಸೂಚಿಯ ಭಾಗವಾಗಿ ಪದವಿ ಹಂತದ ಶಿಕ್ಷಣದಲ್ಲಿ ತರಲು ಹೊರಟಿರುವ ಬದಲಾವಣೆಗಳು ವಿದ್ಯಾರ್ಥಿಗಳಲ್ಲಿ ಗೊಂದಲಗಳನ್ನು ಹುಟ್ಟುಹಾಕುತ್ತಿವೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್, ರೊಬಾಟಿಕ್ಸ್, ಆಟೊಮೇಷನ್ ಮುಂತಾದ ವಿಷಯಗಳಲ್ಲಿ ಪದವಿ ಪೂರೈಸಿದರೆ ಮುಂದೆ ಉದ್ಯೋಗಾವಕಾಶಗಳು ದೊರೆಯಲಿವೆಯೇ? ಉದ್ಯೋಗ ದಾತರು ತಮ್ಮನ್ನು ಸ್ವೀಕರಿಸಲಿದ್ದಾರೆಯೇ? ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಯಾವ ಅಡೆತಡೆಯೂ ಇರುವುದಿಲ್ಲವೇ? ಹೀಗೆ ಹಲವು ಗೊಂದಲಗಳು ವಿದ್ಯಾರ್ಥಿ ಸಮೂಹವನ್ನು ಬಾಧಿಸತೊಡಗಿವೆ.

ಉದ್ಯಮ ವಲಯದೊಂದಿಗೆ ಸಮಾಲೋಚಿಸಿ, ಮುಂಬರುವ ದಿನಗಳಲ್ಲಿ ಯಾವ ಕ್ಷೇತ್ರದಲ್ಲಿ ಎಷ್ಟು ಉದ್ಯೋಗಾವಕಾಶಗಳು ಲಭ್ಯವಾಗಬಹುದು ಮತ್ತು ಉದ್ದಿಮೆಗಳಿಗೆ ಬೇಕಿರುವ ಕೌಶಲಗಳು ಏನೇನು ಎಂಬುದನ್ನು ತಿಳಿಸುವ ಪ್ರಯತ್ನವನ್ನು ಸರ್ಕಾರ ಮಾಡಿದರೆ, ಗೊಂದಲಗಳನ್ನು ತಕ್ಕಮಟ್ಟಿಗೆ ನಿವಾರಿಸಬಹುದು.

ಎಂಜಿನಿಯರಿಂಗ್ ಶಿಕ್ಷಣ ಕ್ಷೇತ್ರದಲ್ಲಿನ ಇತ್ತೀಚೆಗಿನ ಬೆಳವಣಿಗೆಗಳನ್ನು ಗಮನಿಸಿದರೂ ಸಾಕು, ಈ ರೀತಿಯ ಅಂಕಿ-ಅಂಶದ ಅಗತ್ಯ ಮನದಟ್ಟಾಗಲಿದೆ. ಕೆಲ ವರ್ಷಗಳಿಂದೀಚೆಗೆ ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್‌ಗೆ ಸಂಬಂಧಿಸಿದ ಎಂಜಿನಿಯರಿಂಗ್ ಪದವಿಗೆ ಪ್ರವೇಶ ಪಡೆಯಲು ಮುಗಿಬೀಳುತ್ತಿದ್ದಾರೆ. ಕಂಪ್ಯೂಟರ್ ಸೈನ್ಸ್‌ಗೆ ಬೇಡಿಕೆ ಹೆಚ್ಚಿರುವುದನ್ನು ಮನಗಂಡಿರುವ ಕಾಲೇಜುಗಳು ಸೀಟುಗಳನ್ನು ಗಣನೀಯವಾಗಿ ಹೆಚ್ಚಳ ಮಾಡಿವೆ. ಇದೇ ವೇಳೆ, ಉಳಿದ ಎಂಜಿನಿಯರಿಂಗ್ ವಿಭಾಗಗಳಾದ ಮೆಕ್ಯಾನಿಕಲ್, ಸಿವಿಲ್ ಮತ್ತು ಎಲೆಕ್ಟ್ರಿಕಲ್ ವಿಭಾಗಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯುವುದು ತೀವ್ರಗತಿಯಲ್ಲಿ ಕುಸಿದಿದೆ. ಎಷ್ಟೋ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ದಾಖಲಾಗದ ಕಾರಣಕ್ಕೆ ಮೆಕ್ಯಾನಿಕಲ್ ಮತ್ತು ಸಿವಿಲ್ ಎಂಜಿನಿಯರಿಂಗ್ ವಿಭಾಗಗಳನ್ನೇ ಮುಚ್ಚಲಾಗಿದೆ. ಇನ್ನು ಕೆಲವೆಡೆ ಮುಚ್ಚುವ ಹಂತದಲ್ಲಿವೆ. ಡಿಪ್ಲೊಮಾ ಕಾಲೇಜುಗಳಲ್ಲೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ.

ಓದು ಮುಗಿಸಿದ ಕೂಡಲೇ ಉದ್ಯೋಗ ಅರಸಲು ಬರುವ ಅನನುಭವಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಇದುವರೆಗೂ ಪಾಲಿಸುತ್ತಿದ್ದ ಮಾನದಂಡಗಳನ್ನು ಬದಿಗಿರಿಸಬೇಕಾದ ಅನಿವಾರ್ಯ, ಗುಣಮಟ್ಟದ ವಾಹನ ತಯಾರಿಕೆಗೆ ಹೆಸರುವಾಸಿಯಾದ ಬಹುರಾಷ್ಟ್ರೀಯ ಸಂಸ್ಥೆಯೊಂದರ ಮಾನವ ಸಂಪನ್ಮೂಲ ವಿಭಾಗಕ್ಕೆ ಇತ್ತೀಚೆಗೆ ಎದುರಾಯಿತು. ‘ಎಲ್ಲ ವಿಷಯಗಳನ್ನೂ ಮೊದಲ ಪ್ರಯತ್ನದಲ್ಲೇ ಪಾಸು ಮಾಡಿರಬೇಕು’ ಎಂಬ ಮಾನದಂಡ ಆಧರಿಸಿ ಮೊದಲ ಹಂತದಲ್ಲಿ ಅಭ್ಯರ್ಥಿಗಳನ್ನು ಸೋಸುತ್ತಿದ್ದ ಸಂಸ್ಥೆಗೆ, ಇದೇ ನಿಯಮ ಮುಂದಿಟ್ಟುಕೊಂಡು ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿದರೆ ಅಗತ್ಯವಿರುವಷ್ಟು ಅಭ್ಯರ್ಥಿಗಳೇ ಸಿಗದಿರುವ ಸನ್ನಿವೇಶ ಈ ಬಾರಿ ನಿರ್ಮಾಣವಾಯಿತು.

ತಮ್ಮ ನಿರೀಕ್ಷೆಗೆ ತಕ್ಕ ಉದ್ಯೋಗಾಕಾಂಕ್ಷಿಗಳು ಕೆಲಸ ಅರಸಿ ಬಾರದಿರುವ ಕಾರಣಕ್ಕೆ, ಬರುವವರಲ್ಲೇ ಪರವಾಗಿಲ್ಲ ಎನಿಸುವವರನ್ನು ಆರಿಸಿಕೊಳ್ಳುವ ಅನಿವಾರ್ಯ ಇದೆ ಎಂದು ಬೆಂಗಳೂರಿನಲ್ಲೂ ತಯಾರಿಕಾ ಘಟಕಗಳನ್ನು ಹೊಂದಿರುವ ಆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಚಿತರೊಬ್ಬರು ಅಲವತ್ತುಕೊಂಡರು.

ಬೇಡಿಕೆ ಇದೆ ಎನ್ನುವ ಕಾರಣಕ್ಕೆ ಬಹುಪಾಲು ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್‌ಗೆ ಸಂಬಂಧಿಸಿದ ವಿಷಯಗಳಿಗೆ ಪ್ರವೇಶ ಪಡೆದರೆ, ಮಾಹಿತಿ ತಂತ್ರಜ್ಞಾನ (ಐ.ಟಿ) ಕ್ಷೇತ್ರಕ್ಕೆ ಅಗತ್ಯಕ್ಕಿಂತಲೂ ಹೆಚ್ಚು ಮಾನವ ಸಂಪನ್ಮೂಲ ಲಭ್ಯವಾಗಲಿದೆ. ಇದೇ ವೇಳೆ ತಯಾರಿಕಾ ವಲಯವು ಗುಣಮಟ್ಟದ ಮಾನವ ಸಂಪನ್ಮೂಲದ ಅಭಾವ ಎದುರಿಸಬೇಕಾದ ಸಂದರ್ಭ ಎದುರಾಗಲೂಬಹುದು. ನೋಟು ರದ್ದತಿ, ಜಿಎಸ್‍ಟಿ ಜಾರಿ, ಲಾಕ್‍ಡೌನ್, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಆರ್ಥಿಕ ಕುಸಿತ ಹೀಗೆ ಹಲವು ಹೊಡೆತಗಳನ್ನು ತಿಂದಿರುವ ತಯಾರಿಕಾ ಕ್ಷೇತ್ರದ ಬೆಳವಣಿಗೆ ಮಂದಗತಿಯಲ್ಲಿರುವುದು ಕಣ್ಣೆದುರಿನ ವಾಸ್ತವ. ಹಾಗಂತ ಈ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳೇ ಸೃಷ್ಟಿಯಾಗುತ್ತಿಲ್ಲ ಎನ್ನುವ ಪರಿಸ್ಥಿತಿಯೂ ಇಲ್ಲ. ವಿದ್ಯಾರ್ಥಿಗಳು ತಯಾರಿಕಾ ಕ್ಷೇತ್ರಕ್ಕೆ ಮಾನವ ಸಂಪನ್ಮೂಲ ಒದಗಿಸುವ ಎಂಜಿನಿಯರಿಂಗ್, ಡಿಪ್ಲೊಮಾ ಕೋರ್ಸುಗಳಿಗೆ ದಾಖಲಾಗಲು ಹಿಂಜರಿಯುತ್ತಿರುವುದರಿಂದ ಈ ಕ್ಷೇತ್ರದಲ್ಲಿ ಸೃಷ್ಟಿಯಾಗಲಿರುವ ಉದ್ಯೋಗಗಳಿಗೆ ಅರ್ಹ ಅಭ್ಯರ್ಥಿಗಳು ದೊರಕದೇ ಹೋಗಬಹುದು.

ಅರ್ಹ ಉದ್ಯೋಗಾಕಾಂಕ್ಷಿಗಳ ಅಭಾವವನ್ನು ತಯಾರಿಕಾ ವಲಯದ ಕಾರ್ಖಾನೆಗಳು ನಿಜಕ್ಕೂ ಅನುಭವಿಸುತ್ತಿವೆಯೇ ಎಂಬುದನ್ನು ಅರಿಯಲು ಸರ್ಕಾರ ಮುಂದಾಗಬೇಕಿದೆ. ವಿವಿಧ ಉದ್ಯಮ ಕ್ಷೇತ್ರದ ಪರಿಣತರೊಂದಿಗೆ ಸಮಾಲೋಚಿಸಿ, ಮುಂಬರುವ ದಿನಗಳಲ್ಲಿ ಯಾವ ಕ್ಷೇತ್ರದಲ್ಲಿ ಎಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂಬ ಕುರಿತು ಅಂಕಿ-ಅಂಶ ಒದಗಿಸಿದರೆ ಏಕಕಾಲಕ್ಕೆ ವಿದ್ಯಾರ್ಥಿ ಸಮೂಹ ಹಾಗೂ ಉದ್ಯಮ ವಲಯದ ಹಿತ ಕಾಯ್ದಂತೆ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT