ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ರಾಜಕಾರಣಕ್ಕೆ ಆಗಲಿ ನೀತಿಯ ದೀಕ್ಷೆ

ರಾಜಕಾರಣದ ನೈತಿಕ ಅಧಃಪತನವು ಜನಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ
ರಾಜಕುಮಾರ ಕುಲಕರ್ಣಿ
Published 17 ಮೇ 2024, 20:42 IST
Last Updated 17 ಮೇ 2024, 20:42 IST
ಅಕ್ಷರ ಗಾತ್ರ

ರಾಜಕಾರಣಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವ ನೈತಿಕ ಅಧಃಪತನ ಸಮಾಜದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ದಿನಬೆಳಗಾದರೆ ಪತ್ರಿಕೆಗಳು
ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ರಾಜಕಾರಣಿಗಳ ಕಳಂಕಿತ ಚಾರಿತ್ರ್ಯದಸುದ್ದಿಗಳು ಸಾರ್ವಜನಿಕರಲ್ಲಿ ಜುಗುಪ್ಸೆ ಮೂಡಿಸಿವೆ. ರಾಜಕಾರಣಿಗಳ ನಡೆ ಮತ್ತು ನುಡಿ ಬಹು ಚರ್ಚಿತ ಸಂಗತಿಗಳಾಗಿವೆ. ಕಳಂಕಿತ ರಾಜಕಾರಣಿಗಳನ್ನು ನಮ್ಮ ಶಾಸಕರು ಮತ್ತು ಸಂಸದರು ಎಂದು ಹೇಳಿಕೊಳ್ಳಲು ಮುಜುಗರಕ್ಕೆ ಒಳಗಾಗುವ ಅಸಹಾಯಕ ಸ್ಥಿತಿಯಲ್ಲಿ ಶ್ರೀಸಾಮಾನ್ಯ ಇದ್ದಾನೆ.

ರಾಜಕಾರಣಿಗಳ ಅಧಿಕಾರಲಾಲಸೆ, ಕುಟುಂಬ ಪ್ರೇಮ, ಅಡ್ಡಾದಿಡ್ಡಿ ಮಾತು, ಲೈಂಗಿಕ ಹಗರಣಗಳು ಜನರಲ್ಲಿ ರೇಜಿಗೆ ಹುಟ್ಟಿಸಿವೆ. ರಾಜಕಾರಣದಲ್ಲಿ ನಿರ್ಲಜ್ಜ ವ್ಯವಸ್ಥೆಯೊಂದು ರೂಪುಗೊಳ್ಳುತ್ತಿದೆ ಎಂಬ ಅಭಿಪ್ರಾಯ
ವನ್ನು ಬಹುಶಃ ಎಲ್ಲರೂ ಒಪ್ಪುತ್ತಾರೆ.

ರಾಜಕಾರಣವು ಸಮಾಜಸೇವೆ ಎನ್ನುವುದಕ್ಕಿಂತಅದು ಹಣ ಗಳಿಕೆಯ ಮೂಲ ಎನ್ನುವ ಭಾವನೆ ಬಲವಾಗುತ್ತಿದೆ. ಈ ಮಾತಿಗೆ ಪುಷ್ಟಿ ನೀಡುವಂತೆ, ಚುನಾವಣೆ
ಯಿಂದ ಚುನಾವಣೆಗೆ ರಾಜಕಾರಣಿಗಳ ಸಂಪತ್ತಿನಲ್ಲಿ ಗಮನಾರ್ಹವಾದ ಹೆಚ್ಚಳ ಕಂಡುಬರುತ್ತಿದೆ. ಕಾನೂನಿನಕಣ್ಣಿಗೆ ಮಣ್ಣೆರಚಿ ಅಕ್ರಮವಾಗಿ ಹಣ ಗಳಿಸುತ್ತಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಚುನಾವಣೆಯಲ್ಲಿ ಅಭ್ಯರ್ಥಿಗಳಿಂದ ಹಣದ ಹೊಳೆ ಹರಿಯುತ್ತದೆ. ರಾಜಕಾರಣವು ಬಂಡವಾಳ ಹೂಡಿ ಲಾಭ ಗಳಿಸುವ ಕ್ಷೇತ್ರ
ವಾಗಿದೆ. ಲಾಭ ಮತ್ತು ನಷ್ಟದ ಸಂಗತಿಗಳು ಪರಿಗಣನೆಗೆ ಬಂದಾಗ ಸಮಾಜಸೇವೆ ಹಿಂದೆ ಸರಿಯುತ್ತದೆ.

ರಾಜಕಾರಣದ ಮೇಲಿರುವ ಇನ್ನೊಂದು ಗುರುತರವಾದ ಆರೋಪವೆಂದರೆ ಅದು ಅವರ ಕುಟುಂಬಪ್ರೇಮ. ಇಂದಿನ ಕುಟುಂಬ ರಾಜಕಾರಣವನ್ನು ನೋಡಿದರೆ, ಆಳರಸರ ರಾಜಪ್ರಭುತ್ವದ ವ್ಯವಸ್ಥೆ ಮರುಕಳಿಸುತ್ತಿರುವಂತೆ ಭಾಸವಾಗುತ್ತಿದೆ. ರಾಜಕಾರಣಿಗಳು ತಮ್ಮ ಮಕ್ಕಳನ್ನು ಭವಿಷ್ಯದ ನೇತಾರರನ್ನಾಗಿ ತಯಾರು ಮಾಡುತ್ತಿದ್ದಾರೆ. ಮತಕ್ಷೇತ್ರಗಳು ಅಪ್ಪನಿಂದ ಮಕ್ಕಳಿಗೆ ಸಲೀಸಾಗಿ ಉಡುಗೊರೆಯ ರೂಪದಲ್ಲಿ ಬಳುವಳಿಯಾಗಿ ದೊರೆಯುತ್ತಿವೆ. ಯಾವುದೇ ರಾಜಕೀಯ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ದೊರೆಯುವುದು ಬಹಳ ವಿರಳ. ಒಂದರ್ಥದಲ್ಲಿ ರಾಜಕಾರಣ ಎನ್ನುವುದು ಕುಟುಂಬದ ಪಿತ್ರಾರ್ಜಿತ
ಆಸ್ತಿಯಂತಾಗಿದೆ. ಪಕ್ಷದ ಏಳ್ಗೆಗಾಗಿ ಒಂದು ಹನಿ ಬೆವರನ್ನೂ ಹರಿಸದ ರಾಜಕಾರಣಿಗಳ ಸಂತಾನ ಅಧಿಕಾರದ ಗದ್ದುಗೆ ಏರುತ್ತಿದೆ.

ಅಧಿಕಾರಪ್ರಾಪ್ತಿಯು ರಾಜಕಾರಣದ ಮೂಲ ಧ್ಯೇಯವಾಗಿದೆ. ಅಧಿಕಾರಕ್ಕಾಗಿ ಚುನಾವಣೆಯ ಸಂದರ್ಭದಲ್ಲಿ ರಾಜಕಾರಣಿಗಳು ಪಕ್ಷದಿಂದ ಪಕ್ಷಕ್ಕೆ ವಲಸೆ ಹೋಗುತ್ತಾರೆ. ಬೇರೆ ಬೇರೆ ಪಕ್ಷಗಳಲ್ಲಿದ್ದು ಒಬ್ಬರನ್ನೊಬ್ಬರು ವಾಚಾಮಗೋಚರವಾಗಿ ಬೈದುಕೊಂಡವರು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಒಂದೇ ಪಕ್ಷದವರಾಗಿ ಆತ್ಮೀಯರಾಗುತ್ತಾರೆ. ಯಾರನ್ನು ನಂಬುವುದೆಂದು ಮತದಾರ ಗೊಂದಲಕ್ಕೆ ಒಳಗಾಗುತ್ತಾನೆ. ಈ ಮೂಲಕ ರಾಜಕಾರಣಿಗಳು ಮತದಾರರ ಮತಗಳನ್ನು ಅಪಮೌಲ್ಯಗೊಳಿಸುತ್ತಿದ್ದಾರೆ. ಮೌಲ್ಯ ಮತ್ತು ಸಿದ್ಧಾಂತ ಹಿನ್ನೆಲೆಗೆ ಸರಿದು ಅಧಿಕಾರ, ಹಣ ಮುನ್ನೆಲೆಗೆ ಬರುತ್ತಿವೆ. ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ನ್ಯಾಯ
ಸಮ್ಮತ ಎನ್ನುವುದು ರಾಜಕಾರಣಕ್ಕೂ ಅನ್ವಯಿಸುತ್ತಿದೆ.

ಇಂಥ ಕೆಟ್ಟ ಸ್ಥಿತಿಯಲ್ಲೂ ರಾಜಕಾರಣಿಗಳ ಸಂಪರ್ಕಕ್ಕೆ ಹಾತೊರೆಯುವ ಪ್ರವೃತ್ತಿ ಕಡಿಮೆಯಾಗದಿರುವುದು ಚಿಂತೆಗೀಡು ಮಾಡುವಂಥ ಸಂಗತಿ. 

ಯೇಟ್ಸ್ ಹೇಳಿದ ಮಾತು ಹೀಗಿದೆ- ‘ಬೇರೆಯವರ ಜೊತೆ ಜಗಳವಾಡುವವನು ರಾಜಕಾರಣಿ ಆಗುತ್ತಾನೆ. ತನ್ನ ಜೊತೆಗೇ ಜಗಳ ಮಾಡಿಕೊಳ್ಳುವವನು ಕವಿ
ಆಗುತ್ತಾನೆ’. ತನ್ನೊಂದಿಗೇ ಜಗಳ ಮಾಡುವುದೆಂದರೆಆತ್ಮವಿಶ್ಲೇಷಣೆಗೆ, ಆತ್ಮವಿಮರ್ಶೆಗೆ ಒಳಗಾಗುವುದು ಎಂದರ್ಥ. ಯೇಟ್ಸ್ ಪ್ರಕಾರ, ರಾಜಕಾರಣಿ ಎಂದಿಗೂ
ಆತ್ಮವಿಮರ್ಶೆಗೆ ಇಳಿಯಲಾರ. ಸದಾಕಾಲ ಲೋಕಾಂತವನ್ನೇ ನೆಚ್ಚಿಕೊಂಡವರಿಗೆ ಏಕಾಂತವನ್ನು ಪ್ರವೇಶಿಸುವ ಎದೆಗಾರಿಕೆ ಇರುವುದಾದರೂ ಹೇಗೆ ಸಾಧ್ಯ? ಆತ್ಮ
ವಿಮರ್ಶೆ ಮಾಡಿಕೊಳ್ಳದ ರಾಜಕಾರಣಿಗೆ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸದ ಅರಿವಾಗಲಾರದು. ಆಗ ನೈತಿಕತೆ ಮೂಲೆಗುಂಪಾಗಿ ಅನೈತಿಕತೆ ವಿಜೃಂಭಿಸುತ್ತದೆ.

ರಾಜಕಾರಣದಲ್ಲಿ ನೈತಿಕತೆಯನ್ನು ವ್ರತದಂತೆ ಪಾಲಿಸಿಕೊಂಡು ಬಂದ ಅನೇಕರು ಇದ್ದಾರೆ. ಲಾಲ್‍ಬಹದ್ದೂರ್ ಶಾಸ್ತ್ರಿ, ಜಯಪ್ರಕಾಶ ನಾರಾಯಣ, ಲೋಹಿಯಾ, ಬಿ.ಸಿ.ರಾಯ್, ಜಾರ್ಜ್ ಫರ್ನಾಂಡಿಸ್, ಕರ್ಪೂರಿ ಠಾಕೂರ್‌, ವಾಜಪೇಯಿ, ಎಸ್.ನಿಜಲಿಂಗಪ್ಪ, ಶಾಂತವೇರಿ ಗೋಪಾಲಗೌಡರಂತಹವರು ರಾಜಕಾರಣಕ್ಕೆ ಒಂದು
ಘನತೆ ತಂದುಕೊಟ್ಟರು. ಕುಟುಂಬವರ್ಗವನ್ನು ರಾಜಕಾರಣದಿಂದ ದೂರವೇ ಇಟ್ಟಿದ್ದ ಈ ಮಹನೀಯರು ಸದಾಕಾಲ ಪ್ರಾತಃಸ್ಮರಣೀಯರಾಗಿ ಸಾರ್ವಜನಿಕರ ಸ್ಮರಣೆ
ಯಲ್ಲಿ ಉಳಿದಿದ್ದಾರೆ. ಆದರೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಇಂಥ ರಾಜಕಾರಣಿಗಳ ಸಂಖ್ಯೆ ಸಾರ್ವಜನಿಕರು ಆತಂಕಪಡುವಷ್ಟು ಮಟ್ಟದಲ್ಲಿ ಕ್ಷೀಣಿಸಿದೆ.

‘ಪ್ರಕೃತಿ ಸೃಷ್ಟಿಸಿದ ಜೀವಿಗಳಲ್ಲೆಲ್ಲಾ ಅತ್ಯಂತ ನೀಚನೆಂದರೆ ಮನುಷ್ಯ. ಮನುಷ್ಯನಾಗಿಯೇ ಈ ಮಾತು ಹೇಳಬೇಕಾಗಿ ಬಂದಿರುವುದು ಇನ್ನೂ ದೊಡ್ಡ ನೀಚತನ ಅನ್ನಿಸುತ್ತಿದೆ’ ಎಂದು ದಾಸ್ತೋವಸ್ಕಿ ಅಂದಿರುವ ಮಾತು ಇಂದಿನ ರಾಜಕಾರಣವನ್ನು ಕುರಿತೇ ಹೇಳಿದಂತಿದೆ. ನೀತಿ ಇಲ್ಲದ ರಾಜಕಾರಣವನ್ನು ಗಾಂಧೀಜಿ ಸಾಮಾಜಿಕ ಪಾಪ ಎಂದಿದ್ದಾರೆ.

ರಾಜಕಾರಣದ ಕುರಿತು ಸಾರ್ವಜನಿಕರಲ್ಲಿ ಮನೆಮಾಡಿರುವ ಭ್ರಮನಿರಸನ ಮತ್ತು ಅಸಹ್ಯ ಭಾವನೆಯನ್ನು ತೊಡೆದುಹಾಕಲು ರಾಜಕಾರಣಕ್ಕೆ ನೀತಿಯ ದೀಕ್ಷೆ ನೀಡುವುದು ಸದ್ಯದ ತುರ್ತು ಅಗತ್ಯವಾಗಿದೆ. ಆದರೆ ಸಮಸ್ಯೆ ಇರುವುದು ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎನ್ನುವುದರಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT