ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸಾಮಾನ್ಯ ಜ್ಞಾನಕ್ಕೆ ಕಾನೂನಿನ ಹಂಗೇಕೆ?

ನಮ್ಮ ನಡವಳಿಕೆಗಳಿಂದ ಬೇರೆಯವರಿಗೆ ತೊಂದರೆ ಆಗಬಾರದೆಂಬ ಅರಿವು ಪ್ರತಿಯೊಬ್ಬರಲ್ಲಿಯೂ ಇರಬೇಕು
Published 20 ಫೆಬ್ರುವರಿ 2024, 19:27 IST
Last Updated 20 ಫೆಬ್ರುವರಿ 2024, 19:27 IST
ಅಕ್ಷರ ಗಾತ್ರ

ಪೆಟ್ರೋಲ್‌ ಬಂಕ್‌ ಬಳಿ ನಿಂತಿದ್ದೆ. ಇಂಧನ ಪೂರಣಕ್ಕೆ ಬಂದು ನಿಂತ ಕಾರಿನಿಂದ ಅದರ ಒಡೆಯನ ಸಿರಿವಂತಿಕೆಗೆ ಒಪ್ಪುವ ನಾಯಿಯೂ ಕೆಳಗಿಳಿಯಿತು. ಪೆಟ್ರೋಲ್‌ ಬಂಕಿನ ಆವರಣದಲ್ಲೇ ಶೌಚ ಮುಗಿಸಿ ಮತ್ತೆ ಕಾರಿನ ಒಳಗೆ ಹೋಯಿತು. ಕಾರು ಅಲ್ಲಿಂದ ಹೊರಟುಹೋದ ಬಳಿಕ ಇದು ಬಂಕಿನ ಕೆಲಸಗಾರರ ಗಮನಕ್ಕೆ ಬಂತು. ಕಾರಿನ ಒಡೆಯ ಮರಳಿ ಬರುವಂತೆ ಮಾಡಿ ಆತನಿಂದಲೇ ಸ್ವಚ್ಛಗೊಳಿಸಬೇಕು ಎಂಬ ಯೋಚನೆ ಅವರಿಗೆ ಬಂತು. ಆದರೆ ಆ ವ್ಯಕ್ತಿಯನ್ನು ಪತ್ತೆ ಮಾಡಲು ಯಾವ ಆಧಾರವೂ ಅವರ ಬಳಿ ಇರಲಿಲ್ಲ. ಅಷ್ಟರಲ್ಲಿ ಇನ್ನೊಂದು ಐಷಾರಾಮಿ ಕಾರು ಬಂದು ಶೌಚದ ಮೇಲೆಯೇ ಸಾಗಿ, ಆ ಪ್ರದೇಶವಿಡೀ ಅದನ್ನು ಹರಡಿಬಿಟ್ಟಿತು.

ನಾಯಿಯನ್ನು ಜೊತೆಗೇ ಕರೆದೊಯ್ಯುವುದು ಅವರ ವೈಯಕ್ತಿಕ ವಿಷಯವಾಗಿದ್ದರೂ ಬೇರೆಯವರಿಗೆ ಅದರಿಂದ ಆಗುವ ತೊಂದರೆ, ಮುಜುಗರ ಎಷ್ಟು ಎಂಬ ಬಗ್ಗೆ ಯೋಚಿಸಬೇಡವೆ? ಬೆಂಗಳೂರಿನಂತಹ ಮಹಾನಗರಗಳಲ್ಲಿ ಬೆಳಗಿನ ಜಾವ ಜಾಗಿಂಗ್‌ ಹೆಸರಿನಲ್ಲಿ ಬರುವ ಅನೇಕರ ಜೊತೆಗೆ ಅವರು ಸಾಕಿದ ನಾಯಿಗಳೂ ಇರುತ್ತವೆ. ರಸ್ತೆಯ ಇಕ್ಕೆಲಗಳಲ್ಲೂ ದೇಹಬಾಧೆ ತೀರಿಸಿಕೊಳ್ಳುವ ಈ ನಾಯಿಗಳು ಬೆಳಗಾಗುವ ಮೊದಲು ತಮ್ಮ ಮನೆಯನ್ನು ಸೇರಿಕೊಳ್ಳುತ್ತವೆ. ಇವುಗಳಿಂದ ರಸ್ತೆಯ ನೈರ್ಮಲ್ಯ ಕೆಡುತ್ತಿರುವುದನ್ನು ನಾಯಿಯ ಒಡೆಯರು ಗಮನಕ್ಕೆ ತಂದುಕೊಳ್ಳದಿರುವುದೇ ವಿಪರ್ಯಾಸ.

ಸಾರ್ವಜನಿಕ ಶೌಚಾಲಯಗಳಂತೂ ಸಾಮಾನ್ಯ ಜ್ಞಾನದ ಕೊರತೆಗೆ ಅತ್ಯುತ್ತಮ ನಿದರ್ಶನ. ಒಳಗೆ ಹೋದ ವ್ಯಕ್ತಿ ಅಲ್ಲಿ ಸರಿಯಾಗಿ ನೀರು ಹಾಕಿ ಬಂದಿರುವುದಿಲ್ಲ. ಮುಂದಿನ ವ್ಯಕ್ತಿಗೆ ಒಳಗೆ ಕಾಲಿಡಲೂ ಸಾಧ್ಯವಾಗದಷ್ಟು ದುರ್ಗಂಧ. ನಾವು ವ್ಯವಸ್ಥೆಯನ್ನು ಬಳಸಿಕೊಳ್ಳಬೇಕು, ಇನ್ನೊಬ್ಬರಿಗೂ ಅದು ಬಳಕೆಗೆ ಅರ್ಹವಾಗಿರಬೇಕು ಎಂಬುದು ಮಾನವೀಯ ಪ್ರಜ್ಞೆಯಿರುವ ಯಾರಿಗೇ ಆಗಲಿ ತಿಳಿದಿರಬೇಕು ತಾನೆ?

ಪ್ರವಾಸಿ ತಾಣಗಳಿಗೆ ತೆರಳುವವರು ಹೊಣೆಗಾರಿಕೆಯನ್ನು ಮೂಲೆಗುಂಪು ಮಾಡುತ್ತಾರೆ. ನೀರಿನ ಬಾಟಲು, ತಿಂಡಿಗಳ ಪ್ಯಾಕೆಟ್‌ಗಳನ್ನು ಅಲ್ಲಿಗೆ ಕೊಡುಗೆಯಾಗಿ ನೀಡುತ್ತಾರೆ. ಪರಿಸರದ ಸೌಂದರ್ಯವನ್ನು ಹೆಚ್ಚಿಸುವ ಅವಕಾಶ ಎಲ್ಲರಿಗೂ ಇದೆ. ಆದರೆ ಸಂದರ್ಶಿಸುವ ತಾಣವನ್ನು ಹದಗೆಡಿಸುವ ಮೂಲಕ, ಮುಂದೆ ಅಲ್ಲಿಗೆ ಬರುವವರಿಗೆ ಅಸಹನೀಯ ವಾತಾವರಣ ಸೃಷ್ಟಿಸುವುದರ ಜೊತೆಗೆ ಅವರು ಕೂಡ ಇದೇ ರೀತಿ ಮಾಡಿ ಹೋಗುವುದಕ್ಕೆ ಮಾದರಿಯಾಗುವುದು ಸರಿಯಾದ ನಡೆಯಲ್ಲ.

ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪತ್ರಿಕೆಗಳನ್ನು ಓದುವವರು ನಂತರ ಅದನ್ನು ಅಚ್ಚುಕಟ್ಟಾಗಿ ಜೋಡಿಸಿಡುವುದಿಲ್ಲ. ಅಡ್ಡಾದಿಡ್ಡಿಯಾಗಿ ಎಸೆಯುತ್ತಾರೆ. ದೈನಿಕಗಳ ಜೊತೆಗಿರುವ ಪುರವಣಿಗಳು ಎಲ್ಲೆಲ್ಲೋ ಇರುತ್ತವೆ. ಸಿನಿಮಾ ಪತ್ರಿಕೆಗಳ ಪುಟಗಳನ್ನು ಹರಿದು ತೆಗೆದುಕೊಂಡು ಹೋಗುತ್ತಾರೆ. ನಿಯತಕಾಲಿಕಗಳ ಒಳಗೆ ಮನಬಂದಂತೆ ಬರೆಯುತ್ತಾರೆ. ನಮ್ಮ ನಂತರ ಬರುವವರಿಗಾಗಿ ವ್ಯವಸ್ಥೆಯನ್ನು ಉಳಿಸದೆ ಹಾಳು ಮಾಡಿ ಹೋಗುವುದು ಪ್ರಜ್ಞಾವಂತಿಕೆಯ ಲಕ್ಷಣವಲ್ಲ ಎಂಬುದನ್ನು ತಿಳಿಯುವುದಿಲ್ಲ.

ಬಾಳೆಹಣ್ಣು ತಿಂದು ಸಿಪ್ಪೆಯನ್ನು ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ಎಸೆಯುವುದು ಪಾದಚಾರಿಗಳ ಪಾಲಿಗೆ ಮಾರಕವೇ ಆಗಬಹುದು. ಪ್ಲಾಸ್ಟಿಕ್‌ ಎಂಬುದು ಪರಿಸರಕ್ಕೆ ಮಾರಕ ಎಂಬುದನ್ನು ಒಂದಿಷ್ಟು ಜನರಾದರೂ ತಿಳಿದುಕೊಂಡಿದ್ದರೆ, ರಸ್ತೆಯ ಇಬ್ಬದಿಗಳಲ್ಲೂ ಅಷ್ಟೊಂದು ಪ್ಲಾಸ್ಟಿಕ್‌ ಪರಿಕರಗಳು ಬೀಳುವುದು ಸಾಧ್ಯವೇ ಇರಲಿಲ್ಲ. ಅಮೆರಿಕದಲ್ಲಿ ಪುಟ್ಟ ಮಗುವಿಗೆ ಚಾಕೊಲೇಟ್‌ ಕೊಟ್ಟರೆ ಮೊದಲು ಅದರ ರಕ್ಷಾಕವಚವನ್ನು ತೆಗೆದುಕೊಂಡು ಹೋಗಿ ಕಸದ ಬುಟ್ಟಿಗೆ ಎಸೆದು ಬರುತ್ತದೆ ಎಂಬ ಪ್ರವಾಸಿ ಅನುಭವವನ್ನು ರೋಚಕವಾಗಿ ಹೇಳುವವರು, ಭಾರತದ ಹಿರಿಯರಿಗೆ ಇದನ್ನೊಂದು ಪಾಠವಾಗಿ ಬೋಧಿಸುವುದು ವಿಹಿತ ಎನಿಸುತ್ತದೆ.

ಸರ್ಕಾರಿ ಬಸ್ಸುಗಳಲ್ಲಿ ಮೊಬೈಲಿನ ಶಬ್ದ ಇತರರಿಗೆ ಕೇಳಿಸಬಾರದೆಂಬ ನಿಯಮವಿರುವ ಫಲಕ ತೂಗಾಡುತ್ತದೆ. ಆದರೆ ಓದು, ಬರಹ ಬಲ್ಲಂಥವರೇ ಈ ಫಲಕದ ಬಗೆಗೆ ಏನೂ ತಲೆಕೆಡಿಸಿ
ಕೊಳ್ಳದೆ ಮೊಬೈಲ್‌ನಲ್ಲಿ ತಮಗೆ ಬೇಕಾದ ಕಾರ್ಯಕ್ರಮವನ್ನು ಜೋರಾಗಿ ಕೇಳಿಸಿಕೊಳ್ಳುತ್ತಾ 
ಆತ್ಮಾನಂದವನ್ನು ಅನುಭವಿಸುತ್ತಾರೆ. ವಾಹನ ಚಾಲಕರು ಮೊಬೈಲನ್ನು ಕಿವಿಗಾನಿಸಿಕೊಂಡು ವಾಹನ ಚಾಲನೆ ಮಾಡಬಾರದು ಎಂಬಂತಹ ನಿಯಮಗಳನ್ನು ತಿಳಿದುಕೊಳ್ಳುವ ಗೋಜಿಗೆ ಹೋಗಿದ್ದರೆ ಅದೆಷ್ಟೋ ಅಪಘಾತಗಳನ್ನು ತಪ್ಪಿಸಬಹುದಿತ್ತು.

ನಿಯಮಗಳು ಇರುವುದು ಉಲ್ಲಂಘಿಸುವುದಕ್ಕಾಗಿ ಅಲ್ಲ. ನಾವೂ ಬದುಕಿ, ಬೇರೆಯವರಿಗೂ ಬದುಕಲು ಇರುವ ಅವಕಾಶವನ್ನು ಕಳೆಯಬಾರದು ಎಂದು ಭಾವಿಸುವ ಸಾಮಾನ್ಯ ಜ್ಞಾನ ಪ್ರತಿಯೊಬ್ಬರಲ್ಲೂ
ಇದ್ದರೆ ಎಷ್ಟು ಚೆನ್ನ ಅಲ್ಲವೆ? ಕಾನೂನಿನ ಕಡ್ಡಾಯ ಜಾರಿಯಿಂದ ಮಾತ್ರ ನಾವು ಪ್ರಜ್ಞಾವಂತರಾಗಬೇಕು ಎಂಬ ವಾತಾವರಣ ನಮ್ಮಲ್ಲಿ ಸೃಷ್ಟಿಯಾಗಿದೆ.

ಒಂದೆರಡು ದಶಕಗಳ ಹಿಂದಿನ ಮಾತು. ಸಾರ್ವಜನಿಕ ಸ್ಥಳವಿರಲಿ, ಬಸ್ಸಿನೊಳಗೆ ಪ್ರಯಾಣಿಸುತ್ತಿರಲಿ, ಧೂಮಪಾನ ಮಾಡುವ ಅಭ್ಯಾಸ ಸಾರ್ವತ್ರಿಕವಾಗಿತ್ತು. ಬಸ್‌ ಚಾಲಕನೂ ಇದಕ್ಕೆ ಹೊರತಾಗಿರಲಿಲ್ಲ. ಆದರೆ ಈಗ ಇದೊಂದು ಹವ್ಯಾಸವು ಕಾನೂನಿನ ಕಠಿಣ ಕ್ರಮ ಮತ್ತು ದಂಡ ವಿಧಿಯಿಂದಾಗಿ ಮುಕ್ತವಾಗಿದೆ.

ನಾವು ಓದಿದವರಾಗಿಯೂ ಇಂತಹ ತಪ್ಪುಗಳನ್ನು ಮಾಡಿ ಬೇರೆಯವರಿಗೆ ತೊಂದರೆ ಕೊಡಬಾರದೆಂಬ ಪ್ರಜ್ಞೆ ಕಾನೂನಿಗಿಂತಲೂ ನಮ್ಮೊಳಗೇ ಒಡಮೂಡು ವುದು ಒಳ್ಳೆಯದಲ್ಲವೇ?!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT