ಮಂಗಳೂರು, ಏ.27– ಪಾಜಕ ಕ್ಷೇತ್ರದಲ್ಲಿ ಗಣಿಗಾರಿಕೆಯನ್ನು ನಿಲ್ಲಿಸಿ, ಗಣಿಗಾರಿಕೆ ಪ್ರದೇಶದಲ್ಲಿ ರಕ್ಷಣಾ ಇಲಾಖೆ ಸೆಕ್ಷನ್ 144 ಅನ್ನು ವಿಧಿಸಿರುವ ಹಿನ್ನೆಲೆಯಲ್ಲಿ ಪೇಜಾವರ ಪೀಠಾಧೀಶರಾದ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಮೊದಲೇ ಉದ್ದೇಶಿಸಿದ್ದ ನಿರಶನವನ್ನು ಕೈ ಬಿಡಲು ನಿರ್ಧರಿಸಿದ್ದಾರೆ.
ಪಾಜಕ ಕ್ಷೇತ್ರದಲ್ಲಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಇಡೀ ಪ್ರದೇಶವನ್ನು ರಕ್ಷಿತ ಪ್ರದೇಶವೆಂದು ಘೋಷಿಸುವುದಾಗಿ ಮುಖ್ಯಮಂತ್ರಿ ಜಿ.ಎಚ್. ಪಟೇಲರು ಘೋಷಿಸಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ವನ್ನು ಕೈಗೊಂಡಿರುವುದಾಗಿ ತಿಳಿಸಿದರು.
ದೇವನಹಳ್ಳಿ ವಿಮಾನ ನಿಲ್ದಾಣ ಹೊಸ ಟೆಂಡರ್ ಸಂಭವ
ನವದೆಹಲಿ, ಏ.27 (ಪಿಟಿಐ)– ಬೆಂಗಳೂರು ಬಳಿಯ ದೇವನಹಳ್ಳಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹೊಸದಾಗಿ ಜಾಗತಿಕ ಟೆಂಡರ್ ಕರೆಯುವ ಉದ್ದೇಶವಿದ್ದು, ದೇಶದ ಪ್ರಪ್ರಥಮ ಖಾಸಗಿ ಒಡೆತನದ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.
ಸುಮಾರು 2,600 ಕೋಟಿ ರೂಪಾಯಿ ಯೋಜನಾ ವೆಚ್ಚದ ಈ ವಿಮಾನ ನಿಲ್ದಾಣದ ಒಡೆತನದ ಬಗ್ಗೆ ವಿವಾದ ಎದ್ದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.