ಶ್ರೀಹರಿಕೋಟಾ, ಸೆಪ್ಟೆಂಬರ್ 29 (ಪಿಟಿಐ, ಯುಎನ್ಐ)– ಭಾರತದ ಪ್ರಥಮ ಧ್ರುವಗಾಮಿ ಉಪಗ್ರಹವಾಹಕ ಪಿಎಸ್ಎಲ್ವಿ–ಸಿ1 ಇಂದು ಯಶಸ್ವಿಯಾಗಿ ದೂರಸಂವೇದಿ ಉಪಗ್ರಹ ಐಆರ್ಎಸ್–1ಡಿಯನ್ನು ನಿಗದಿತ ಕಕ್ಷೆಗೆ ಸೇರಿಸಿದ್ದು, ದೇಶದ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ.
ಅತ್ಯಂತ ಭಾರದ ಈ ಉಪಗ್ರಹವನ್ನು ದೇಶದಲ್ಲೇ ತಯಾರಾದ ರಾಕೆಟ್ ಮೂಲಕ ಉಡಾವಣೆ ಮಾಡಿರುವುದು ಭಾರತ ಉಪಗ್ರಹ ಉಡಾವಣೆಯಲ್ಲಿ ಸ್ವಸಾಮರ್ಥ್ಯ ಸಾಧಿಸಿರುವುದರ ಕುರುಹು ಎನ್ನಲಾಗಿದೆ.
l ಸುವರ್ಣ ಸ್ವಾತಂತ್ರ್ಯದ ಕೊಡುಗೆ: ಗುಜ್ರಾಲ್
ಶ್ರೀಹರಿಕೋಟಾ, ಸೆಪ್ಟೆಂಬರ್ 29– ಇಂದು ಇಲ್ಲಿ ಯಶಸ್ವಿಯಾಗಿ ಪಿಎಸ್ಎಲ್ವಿ–ಸಿ1 ಮತ್ತು ದೂರಸಂವೇದಿ ಉಪಗ್ರಹ ಐಆರ್ಎಸ್–1ಡಿ ಉಡಾವಣೆಯನ್ನು ಖುದ್ದು ವೀಕ್ಷಿಸಿದ ಪ್ರಧಾನಿ ಐ.ಕೆ. ಗುಜ್ರಾಲ್ ಅವರು ಭಾರತೀಯ ವಿಜ್ಞಾನಿಗಳನ್ನು ಹಾರ್ದಿಕವಾಗಿ ಅಭಿನಂದಿಸಿದ್ದಾರೆ. ‘ಭಾರತದ ಸ್ವರ್ಣ ಸ್ವಾತಂತ್ರ್ಯದ ಸಂದರ್ಭದಲ್ಲಿ ಐಆರ್ಎಸ್ನ 1–ಡಿಯ ಯಶಸ್ವಿ ಉಡ್ಡಯನ ದೊಡ್ಡ ಗೌರವಾರ್ಪಣೆ’ ಎಂದು ಅವರು ಹೇಳಿದ್ದಾರೆ.